ಪುಲ್ವಾಮಾ ದಾಳಿ ಹುತಾತ್ಮರಿಗೆ ಹಮೀದ್ ಕೊಟ್ಟ ಕೊಡುಗೆ ಮರೆಯುವಂತಿಲ್ಲ
ಜೈಪುರ, ಮಾರ್ಚ್ 04: ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಆವಂತಿಪೋರ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ 44 ಯೋಧರು ಹುತಾತ್ಮರಾದ ಸುದ್ದಿ ಕೇಳಿದ ಬಳಿಕ ಇಡೀ ದೇಶವೇ ಮಮ್ಮಲ ಮರುಗಿದೆ. ಬಡವ ಬಲ್ಲಿದರೆನ್ನದೆ ತಮ್ಮ ಕೈಲಾದ ಮಟ್ಟಿನ ನೆರವನ್ನು ನೀಡುತ್ತಿದ್ದಾರೆ. ಈ ಸಂದರ್ಭದಲ್ಲಿ ರಾಜಸ್ಥಾನದ ಅಂಧ ಹಮೀದ್ ನೀಡಿದ ಕೊಡುಗೆಯನ್ನು ಮರೆಯುವಂತಿಲ್ಲ.
ಸಿನಿಮಾ ರಂಗ, ಕ್ರಿಕೆಟ್, ರಾಜಕಾರಣಿಗಳು, ಸಣ್ಣ ಉದ್ಯಮಿಗಳು ಎಲ್ಲಾ ಸ್ತರದ ಜನರು, ಪಾಕ್ ಬೆಂಬಲಿತ ಜೈಷ್ ಎ ಮೊಹಮ್ಮದ್ ಉಗ್ರ ಸಂಘಟನೆಯ ಕೃತ್ಯವನ್ನು ಬಲವಾಗಿ ಖಂಡಿಸಿದರು.
ಇದಾದ ಬಳಿಕ, ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಬಾಲಕೋಟ್ ನಲ್ಲಿದ್ದ ಉಗ್ರರ ನೆಲೆ, ಮುಜಾಫರ್ ಬಾರ್, ಚಕೋತಿಯಲ್ಲಿ ಕ್ಯಾಂಪ್ ಗಳನ್ನು ಭಾರತೀಯ ವಾಯುಸೇನೆ ಧ್ವಂಸಗೊಳಿಸಿತು.

ಸಾಮಾಜಿಕ ಜಾಲ ತಾಣಗಳಲ್ಲಿ ಕೂಡಾ ವಾಯುಸೇನೆ, ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪರ ಘೋಷಣೆ ಕೇಳಿ ಬಂದವು, ಜೊತೆಗೆ ದೇಣಿಗೆಗಳು ಹರಿದು ಬರುತ್ತಿವೆ. ಆದರೆ, ರಾಜಸ್ಥಾನದ ಕೋಟಾದ ಮುರ್ತಜಾ ಎ. ಹಮೀದ್ ಅವರು ಅಪಾರ ಪ್ರಮಾಣದ ಕೊಡುಗೆ ನೀಡಿದ್ದಾರೆ.
44ವರ್ಷ ವಯಸ್ಸಿನ ಹಮೀದ್ ಅವರು ಬರೋಬ್ಬರಿ 110 ಕೋಟಿ ರು ತೆರಿಗೆಯೋಗ್ಯ ಮೊತ್ತವನ್ನು ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಗೆ ನೀಡಿದ್ದು, ಹುತಾತ್ಮ ಸಿಆರ್ ಪಿಎಫ್ ಯೋಧರ ಕುಟುಂಬಕ್ಕೆ ತಲುಪಿಸುವಂತೆ ಕೋರಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಕೋಟಾದ ಸರ್ಕಾರಿ ವಾಣಿಜ್ಯ ಕಾಲೇಜಿನಿಂದ ಪದವಿ ಪಡೆದಿರುವ ಹಮೀದ್ ಅವರು ಜನ್ಮತಃ ಅಂಧರಾಗಿದ್ದಾರೆ. ಸದ್ಯ ಮುಂಬೈನಲ್ಲಿ ಸಂಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಇತ್ತೀಚಿಗೆ ದೇಣಿಗೆ ಕುರಿತಂತೆ ಪ್ರಧಾನಿ ಸಚಿವಾಲಯಕ್ಕೆ ಇಮೇಲೆ ಮಾಡಿ, ಪ್ರಧಾನಿ ಅವರನ್ನು ಭೇಟಿಯಾಗಲು ಅವಕಾಶ ಕೋರಿದ್ದರು. ಜೊತೆಗೆ 110 ಕೋಟಿ ಪಿಎಂ ರಾಷ್ಟ್ರೀಯ ಪರಿಹಾರ ನಿಧಿಗೆ ಅರ್ಪಿಸುತ್ತಿರುವುದಾಗಿ ಬರೆದಿದ್ದರು.
Fuel Burn ವಿಕಿರಣ ತಂತ್ರಜ್ಞಾನದ ಮೇಲೆ ಸಂಶೋಧನೆ ಮಾಡುತ್ತಿರುವ ಹಮೀದ್ ಅವರು ಜಿಪಿಎಸ್ ಹಾಗೂ ಕೆಮೆರಾ ನೆರವಿಲ್ಲದೆ ವಾಹನಗಳನ್ನು ಟ್ರ್ಯಾಕ್ ಮಾಡಬಹುದು. ಈ ಸಂಶೋಧನೆಯ ಬಳಸಿ ಪುಲ್ವಾಮಾದಂಥ ಘಟನೆಯನ್ನು ತಡೆಗಟ್ಟಬಹುದು ಎಂದಿದ್ದಾರೆ.












Click it and Unblock the Notifications