Breaking; ರಾಜ್ಯಸಭೆ ಚುನಾವಣೆ ಅನಗತ್ಯ; ಅಶೋಕ್ ಗೆಹ್ಲೋಟ್
ಜೈಪುರ, ಜೂನ್ 10; " ರಾಜ್ಯಸಭೆ ಚುನಾವಣೆ ಅನಗತ್ಯವಾಗಿತ್ತು. ಬಲವಂತವಾಗಿ ಚುನಾವಣೆ ನಡೆಸಲಾಗುತ್ತಿದೆ" ಎಂದು ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು. ರಾಜ್ಯಸಭೆ ಚುನಾವಣೆಗೆ ಅವರು ಶುಕ್ರವಾರ ಮತದಾನ ಮಾಡಿದರು.
ಶುಕ್ರವಾರ ಬೆಳಗ್ಗೆ ರಾಜಸ್ಥಾನ ವಿಧಾನಸಭೆಯಲ್ಲಿ ಮತದಾನ ಮಾಡಿದ ಬಳಿಕ ಅಶೋಕ್ ಗೆಹ್ಲೋಟ್ ವಿಕ್ಟರಿ ಸಿಂಬಲ್ ತೋರಿಸುವ ಮೂಲಕ ಪಕ್ಷದ ಗೆಲುವಿನ ಸೂಚನೆ ನೀಡಿದರು. ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದ್ದು, 5 ಗಂಟೆಗೆ ಮತ ಎಣಿಕೆ ಆರಂಭವಾಗಲಿದೆ.
ರಾಜಸ್ಥಾನದ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ರಾಜ್ಯ ವಿಧಾನಸಭೆಯಲ್ಲಿ 108 ಶಾಸಕರ ಬಲ ಹೊಂದಿರುವ ಕಾಂಗ್ರೆಸ್ 2 ಸ್ಥಾನಗಳಲ್ಲಿ ಜಯಗಳಿಸಲಿದೆ. ಪ್ರತಿಪಕ್ಷ ಬಿಜೆಪಿ ಒಂದು ಸ್ಥಾನ ಪಡೆಯಲು ಸಾಧ್ಯವಿದೆ.

ಸುಭಾಷ್ ಚಂದ್ರ ಸ್ಪರ್ಧೆ; ಮಾಧ್ಯಮ ಕಂಪನಿಗಳ ಮಾಲೀಕ ಸುಭಾಷ್ ಚಂದ್ರ ಸ್ಪರ್ಧೆ ರಾಜಸ್ಥಾನದ ರಾಜ್ಯಸಭೆ ಚುನಾವಣೆಯ ಕಾವು ಹೆಚ್ಚಿಸಿದೆ. ಸ್ವತಂತ್ರ ಅಭ್ಯರ್ಥಿಗೆ ಬಿಜೆಪಿ ಬೆಂಬಲ ಸಹ ಸಿಕ್ಕಿದೆ.

ಕಾಂಗ್ರೆಸ್ ಶಾಸಕರ ಅಡ್ಡ ಮತದಾನದ ಮೂಲಕ ಸುಭಾಷ್ ಚಂದ್ರ ಗೆಲುವು ಸಾಧಿಸಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ನಾಲ್ಕು ಶಾಸಕರು ಸುಭಾಷ್ ಚಂದ್ರಗೆ ಬೆಂಬಲ ಎಂದು ಹೇಳಿದ್ದಾರೆ. 8 ಶಾಸಕರು ಬೆಂಬಲಿಸಬಹುದು ಎಂದು ಅಂದಾಜಿಸಲಾಗಿದೆ.
ಸುಭಾಷ್ ಚಂದ್ರ ಜೈಪುರದಲ್ಲಿ ಮಾತನಾಡಿ, "ಶಾಸಕರು ನನ್ನ ಜೊತೆ ರಹಸ್ಯವಾಗಿ ಸಂಪರ್ಕದಲ್ಲಿದ್ದಾರೆ. ನಾನು ಚುನಾವಣೆಯಲ್ಲಿ ಗೆದ್ದೇ ಗೆಲ್ಲುತ್ತೇನೆ" ಎಂದು ಹೇಳಿದ್ದಾರೆ. ಈ ಹೇಳಿಕೆ ರಾಜ್ಯಸಭೆ ಚುನಾವಣೆಯ ಲೆಕ್ಕಾಚಾರವನ್ನೇ ಬದಲಾವಣೆ ಮಾಡಿದೆ.
ಕಾಂಗ್ರೆಸ್ ತಮ್ಮ ಬಳಿ 123 ಶಾಸಕರ ಬಲವಿದೆ ಎಂದು ಹೇಳಿಕೊಂಡಿದೆ. 12 ಪಕ್ಷೇತರರು, ಇಬ್ಬರು ಸಿಪಿಎಂ ಶಾಸಕರು ಸಹ ಕಾಂಗ್ರೆಸ್ ಬೆಂಬಲಿಸಲಿದ್ದಾರೆ ಎಂಬುದು ಲೆಕ್ಕಾಚಾರ.
ಸುಭಾಷ್ ಚಂದ್ರ ಕಾಂಗ್ರೆಸ್ ನಾಯಕ ಸಚಿನ್ ಪೈಲೆಟ್ ಬೆಂಬಲಿಗರ ಮತಗಳನ್ನು ಪಡೆಯುವ ಮೂಲಕ ರಾಜ್ಯಸಭೆ ಚುನಾವಣೆ ಗೆಲ್ಲಲಿದ್ದಾರೆ ಎಂಬ ಸುದ್ದಿಗಳು ಹಬ್ಬಿವೆ. ಅಶೋಕ್ ಗೆಹ್ಲೋಟ್ ವಿರುದ್ಧ ಅಸಮಾಧಾನಗೊಂಡಿರುವ ಸಚಿನ್ ಪೈಲೆಟ್ ತಮ್ಮ ಬೆಂಬಲಿಗರಿಗೆ ಯಾವ ಸಂದೇಶ ಕೊಟ್ಟಿದ್ದಾರೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications