ರಾಜಸ್ಥಾನದಲ್ಲಿ ಗೆಹ್ಲೋಟ್ ಬೆನ್ನಿಗೆ ನಿಂತ ವಸುಂಧರಾ ರಾಜೇ: ಬಿಜೆಪಿ ಸರಕಾರ ರಚನೆಯ ಮಹತ್ವಾಕಾಂಕ್ಷೆಗೆ ತಣ್ಣೀರು?
ಜೈಪುರ, ಜುಲೈ 17: ರಾಜಸ್ಥಾನದ ಬಂಡಾಯ ನಾಯಕ ಸಚಿನ್ ಪೈಲಟ್ ಸರಕಾರದ ಮೇಲೆ, ತನ್ನ ಹಿಡಿತವನ್ನು ಬಿಗಿಗೊಳಿಸಲು ವಿಫಲರಾಗುತ್ತಿದ್ದಾರೆ. ಇದೇ ವೇಳೆ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಬೆಂಬಲಿಗ ಶಾಸಕರ ಸಂಖ್ಯೆ ವೃದ್ದಿಗೊಳ್ಳುತ್ತಲೇ ಇದೆ.
Recommended Video
"ಸಚಿನ್ ಪೈಲಟ್ ತಮಗೆ ಮೂವತ್ತು ಶಾಸಕರ ಬೆಂಬಲವಿದೆ ಎಂದು ಹೇಳುತ್ತಿದ್ದರು. ಈಗ ಅದರಲ್ಲಿ ಅರ್ಧದಷ್ಟು ಶಾಸಕರು ನಮ್ಮ ಕ್ಯಾಂಪ್ ನಲ್ಲಿದ್ದಾರೆ" ಎಂದು ಸಿಎಂ ಗೆಹ್ಲೋಟ್ ಪರವಾಗಿರುವ ಸಚಿವರೊಬ್ಬರು ಹೇಳಿದ್ದಾರೆ.
ಸಚಿನ್ ಪೈಲಟ್ ಮತ್ತು ಗೆಹ್ಲೋಟ್ ನಡುವಿನ ಭಿನ್ನಾಭಿಪ್ರಾಯ ಇಂದು ನಿನ್ನೆಯದಲ್ಲ. ಸರಿಯಾದ ಪೂರ್ವ ತಯಾರಿ ನಡೆಸಿಕೊಂಡೇ ಸರಕಾರದ ವಿರುದ್ದ ಬಂಡಾಯ ಎದ್ದಿದ್ದ ಸಚಿನ್ ಪೈಲಟ್ ಗೆ, ದಡ ಸೇರಲು ಸಾಧ್ಯವಾಗದೇ ಇದ್ದದ್ದಕ್ಕೆ ಕಾರಣ, ಬಿಜೆಪಿಯ ಹಿರಿಯ ನಾಯಕಿಯೊಬ್ಬರು!
ಬಿಜೆಪಿಯ ಮಿತ್ರಪಕ್ಷದ ಸದಸ್ಯರೊಬ್ಬರು, ರಾಜಸ್ಥಾನದ ಮಾಜಿ ಮುಖ್ಯಮಂತ್ರಿ, ಬಿಜೆಪಿಯ ಹಿರಿಯ ನಾಯಕಿ ವಸುಂಧರಾ ರಾಜೇ ವಿರುದ್ದ ಗುರುತರ ಆರೋಪವೊಂದನ್ನು ಮಾಡಿದ್ದಾರೆ. ಅವರ ಪ್ರಕಾರ, ಸದ್ಯದ ಮಟ್ಟಿಗೆ ಗೆಹ್ಲೋಟ್ ಸರಕಾರ ಬಚಾವ್ ಆಗಲು ಕಾರಣ ವಸುಂಧರಾ.

ಅಶೋಕ್ ಗೆಹ್ಲೋಟ್ ಗೆ ಪ್ರಮುಖ ಎದುರಾಳಿಯಾಗಿರುವ ವಸುಂಧರಾ ರಾಜೇ
ಸುಮಾರು ಎರಡು ದಶಕಗಳಿಂದ ರಾಜಸ್ಥಾನದ ರಾಜಕೀಯದಲ್ಲಿ, ಅಶೋಕ್ ಗೆಹ್ಲೋಟ್ ಗೆ ಪ್ರಮುಖ ಎದುರಾಳಿಯಾಗಿರುವ ವಸುಂಧರಾ ರಾಜೇ, ತಮ್ಮ ರಾಜ್ಯದಲ್ಲಿ ಸದ್ಯ ನಡೆಯುತ್ತಿರುವ ವಿದ್ಯಮಾನದ ಬಗ್ಗೆ ಯಾವುದೇ ಹೇಳಿಕೆಯನ್ನು ನೀಡದೇ ಮೌನವಾಗಿದ್ದಾರೆ. ಇಷ್ಟೆಲ್ಲಾ ರಾಜಕೀಯ ಮೇಲಾಟ ನಡೆಯುತ್ತಿದ್ದರೂ ವಸುಂಧಾರ, ರಾಜಧಾನಿಯಿಂದ ಹೊರಗಿನ ಧೋಲ್ಪುರ ಹೌಸ್ ನಲ್ಲಿದ್ದಾರೆಂದು ವರದಿಯಾಗಿದೆ.

ರಾಜಸ್ಥಾನದಲ್ಲಿ ಸಚಿನ್ ಪೈಲಟ್
ರಾಜಸ್ಥಾನದಲ್ಲಿ ಸಚಿನ್ ಪೈಲಟ್ ಅವರಿಗೆ ಬಿಜೆಪಿ ಗಾಳ ಹಾಕುತ್ತಿರುವುದು ಗೊತ್ತಿರುವ ವಿಚಾರ. ಒಂದು ವೇಳೆ, ಈಗಿನ ಬಂಡಾಯ ಯಶಸ್ಸನ್ನು ಪಡೆದರೆ, ಸಚಿನ್ ಪೈಲಟ್, ಪಕ್ಷದಲ್ಲಿ ತಮಗೆ ಪ್ರಬಲ ಪ್ರತಿಸ್ಪರ್ಧಿಯಾಗಬಲ್ಲ ಎನ್ನುವ ಮುಂದಾಲೋಚನೆಯೇ ವಸುಂಧರಾ ಮೌನಕ್ಕೆ ಕಾರಣ ಎಂದು ವ್ಯಾಖ್ಯಾನಿಸಲಾಗುತ್ತಿದೆ.

ಲೋಕತಾಂತ್ರಿಕ ಪಕ್ಷದ ಸಂಸದ ಹನುಮಾನ್ ಬೇನಿವಾಲ್
ಬಿಜೆಪಿಯ ಮಿತ್ರಪಕ್ಷ ಲೋಕತಾಂತ್ರಿಕ ಪಕ್ಷದ ಸಂಸದ ಹನುಮಾನ್ ಬೇನಿವಾಲ್ ಮಾಡಿರುವ ಆರೋಪದ ಪ್ರಕಾರ, "ರಾಜಸ್ಥಾನದ ಕಾಂಗ್ರೆಸ್ಸಿನ ಜಾಟ್ ಸಮದಾಯದ ಪ್ರತೀ ಶಾಸಕರ ಬಳಿ ಮಾತನಾಡಿ, ಗೆಹ್ಲೋಟ್ ಅವರನ್ನು ಬೆಂಬಲಿಸುವಂತೆ ವಸುಂಧರಾ ರಾಜೇ ಮನವಿ ಮಾಡಿದ್ದಾರೆ". ಈ ಬಗ್ಗೆ ಬೇನಿವಾಲ್ ಟ್ವೀಟ್ ಕೂಡಾ ಮಾಡಿದ್ದಾರೆ.

ಬಿಜೆಪಿ ಸರಕಾರ ರಚನೆಯ ಮಹತ್ವಾಕಾಂಕ್ಷೆಗೆ ತಣ್ಣೀರು ಎರಚಿದ ವಸುಂಧರಾ ರಾಜೇ?
ಮುಂದಿನ ಚುನಾವಣೆಯಲ್ಲಿ ಬಿಜೆಪಿ ಗೆದ್ದರೆ ಮತ್ತೆ ಸಿಎಂ ಆಗುವ ಇರಾದೆಯನ್ನು ವಸುಂಧರಾ ರಾಜೇ ಹೊಂದಿದ್ದಾರೆ. ಆ ಕಾರಣಕ್ಕಾಗಿ, ತಮಗೆ ಪ್ರತಿಸ್ಪರ್ಧಿಯಾಗಬಲ್ಲ ಸಚಿನ್ ಪೈಲಟ್, ಬಿಜೆಪಿಗೆ ಸೇರ್ಪಡೆಯಾಗುವುದು ಅವರಿಗೆ ಇಷ್ಟವಿಲ್ಲ. ಆ ಕಾರಣಕ್ಕಾಗಿಯೇ, ಸದ್ಯ ಪೈಲಟ್ ಗೆ ಮುನ್ನಡೆಯಾಗಬಾರದು ಎನ್ನುವ ಕಾರಣಕ್ಕಾಗಿ ಅಶೋಕ್ ಗೆಹ್ಲೋಟ್ ಅವರ ಬೆನ್ನಿಗೆ ವಸುಂಧರಾ ನಿಂತಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ.












Click it and Unblock the Notifications