ಮತ್ತೆ ಸುಪ್ರೀಂ ಅಂಗಳಕ್ಕೆ ರಾಜಸ್ಥಾನ ಕಾಂಗ್ರೆಸ್ ಬಿಕ್ಕಟ್ಟು!
ಜೈಪುರ, ಜುಲೈ 31 : ರಾಜಸ್ಥಾನದ ಕಾಂಗ್ರೆಸ್ ಬಿಕ್ಕಟ್ಟು ಮತ್ತೊಮ್ಮೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ಸೇರಿದಂತೆ 19 ಶಾಸಕರನ್ನು ಅನರ್ಹಗೊಳಿಸಲು ರಾಜಸ್ಥಾನ ಹೈಕೋರ್ಟ್ ನೀಡಿರುವ ತಡೆಯನ್ನು ಸುಪ್ರೀಂನಲ್ಲಿ ಪ್ರಶ್ನೆ ಮಾಡಲಾಗಿದೆ.
ರಾಜಸ್ಥಾನ ವಿಧಾನಸಭೆಯ ಕಾಂಗ್ರೆಸ್ ಮುಖ್ಯ ಸಚೇತಕ ಮಹೇಶ್ ಜೋಶಿ ಶುಕ್ರವಾರ ಸುಪ್ರೀಂಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಜುಲೈ 24ರಂದು ರಾಜಸ್ಥಾನ ಹೈಕೋರ್ಟ್ ನೀಡಿದ್ದ ಆದೇಶವನ್ನು ಪ್ರಶ್ನೆ ಮಾಡಿದ್ದಾರೆ. ರಾಜಸ್ಥಾನ ಸ್ಪೀಕರ್ ಸಹ ಇದೇ ವಿಚಾರದಲ್ಲಿ ಸುಪ್ರೀಂಗೆ ಅರ್ಜಿ ಸಲ್ಲಿಸಿ, ಬಳಿಕ ಅದನ್ನು ವಾಪಸ್ ಪಡೆದಿದ್ದರು.
ರಾಜಸ್ಥಾನ ಕಾಂಗ್ರೆಸ್ ಶಾಸಕರು ಜೈಸಲ್ಮೇರ್ಗೆ ಸ್ಥಳಾಂತರ!
ಆಗಸ್ಟ್ 14ರಿಂದ ರಾಜಸ್ಥಾನ ವಿಧಾಸನಭೆ ಅಧಿವೇಶನ ಆರಂಭವಾಗಲಿದೆ. ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಸದನದಲ್ಲಿ ವಿಶ್ವಾಸಮತಯಾಚನೆ ಮಾಡುವ ನಿರೀಕ್ಷೆ ಇದೆ. ಇದಕ್ಕೂ ಮೊದಲು ಮುಖ್ಯ ಸಚೇತಕರು ಸುಪ್ರೀಂಕೋರ್ಟ್ಗೆ ಅರ್ಜಿ ಹಾಕಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸಚಿನ್ ಪೈಲೆಟ್ ಅನರ್ಹತೆ ಪ್ರಕರಣ; ಹೈಕೋರ್ಟ್ ತೀರ್ಪು ಪ್ರಕಟ
ಸ್ಪೀಕರ್ ಸಿ. ಪಿ. ಜೋಶಿ ನೀಡಿದ್ದ ಅನರ್ಹತೆ ನೋಟಿಸ್ ಅನ್ನು ಸಚಿನ್ ಪೈಲೆಟ್ ಮತ್ತು ಇತರ 18 ಶಾಸಕರು ರಾಜಸ್ಥಾನ ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಾಲಯ ಯಥಾಸ್ಥಿತಿ ಕಾಪಾಡಿಕೊಳ್ಳುವಂತೆ ಆದೇಶ ನೀಡಿತ್ತು.
ರಾಜಸ್ಥಾನ ಬಿಕ್ಕಟ್ಟು; ಸಂವಿಧಾನ ಮತ್ತು ಪಕ್ಷಾಂತರ ನಿಷೇಧ ಕಾಯ್ದೆ
ಅನರ್ಹಗೊಳಿಸಲು ನೋಟಿಸ್
ಕಾಂಗ್ರೆಸ್ ಬಂಡಾಯ ನಾಯಕ ಸಚಿನ್ ಪೈಲೆಟ್ ಮತ್ತು ಅವರ 18 ಬೆಂಬಲಿತ ಶಾಸಕರನ್ನು ಅನರ್ಹಗೊಳಿಸಲು ವಿಧಾನಸಭೆ ಸ್ಪೀಕರ್ ಸಿ. ಪಿ. ಜೋಶಿ ನೋಟಿಸ್ ನೀಡಿದ್ದರು. ಶಾಸಕರು ಇದನ್ನು ಹೈಕೋರ್ಟ್ನಲ್ಲಿ ಪ್ರಶ್ನೆ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ ಹೈಕೋರ್ಟ್ ಸ್ಪೀಕರ್ ಅನರ್ಹತೆ ವಿಚಾರದಲ್ಲಿ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ತಡೆ ನೀಡಿದೆ.
ಸ್ಪೀಕರ್ ಸಹ ಪ್ರಶ್ನೆ ಮಾಡಿದ್ದರು
ರಾಜಸ್ಥಾನ ಹೈಕೋರ್ಟ್ ಮೊದಲು ಅರ್ಜಿಯ ವಿಚಾರಣೆ ಆರಂಭಿಸಿದಾಗ ಸ್ಪೀಕರ್ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು 5 ದಿನಗಳ ತಡೆ ನೀಡಿತ್ತು. ಆಗ ಸ್ಪೀಕರ್ ಸಿ. ಪಿ. ಜೋಶಿ ಹೈಕೋರ್ಟ್ ಆದೇಶವನ್ನು ಸುಪ್ರೀಂನಲ್ಲಿ ಪ್ರಶ್ನೆ ಮಾಡಿದ್ದರು. ಬಳಿಕ ಜುಲೈ 27ರಂದು ಅರ್ಜಿಯನ್ನು ವಾಪಸ್ ಪಡೆದಿದ್ದರು. ಕಪಿಲ್ ಸಿಬಲ್ ಸ್ಪೀಕರ್ ಪರವಾಗಿ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡನೆ ಮಾಡಿದ್ದರು.
ಕಾಂಗ್ರೆಸ್, ಸ್ಪೀಕರ್ ವಾದವೇನು?
ಪಕ್ಷದ ವಿರುದ್ಧ ಬಂಡಾಯ, ಸರ್ಕಾರವನ್ನು ಪತನಗೊಳಿಸಲು ಸಂಚು ರೂಪಿಸುವುದು ಪಕ್ಷ ವಿರೋಧಿ ಚಟುವಟಿಕೆಯಾಗುತ್ತದೆ. ಪಕ್ಷಾಂತರ ನಿಷೇಧ ಕಾಯ್ದೆ ಅನ್ವಯ ಸಚಿನ್ ಪೈಲೆಟ್ ಸೇರಿದಂತೆ 19 ಶಾಸಕರನ್ನು ಅನರ್ಹಗೊಳಿಸಬೇಕು ಎಂಬುದು ಸ್ಪೀಕರ್ ಮತ್ತು ಕಾಂಗ್ರೆಸ್ ಪಕ್ಷದ ವಾದವಾಗಿದೆ.
ಸಚಿನ್ ಪೈಲೆಟ್ ಬಣ ವಾದ
ಶಾಸಕ/ಶಾಸಕಿ ಸ್ವಯಂ ಪ್ರೇರಿತವಾಗಿ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದರೆ ಅಥವ ಸಂವಿಧಾನದ ಪರಿಚ್ಛೇಧ 10ರ ಪ್ಯಾರಾ 2 (1) (ಬಿ) ಅಡಿಯಲ್ಲಿ ಪಕ್ಷ ನೀಡಿದ ಸೂಚನೆಗೆ ವಿರುದ್ಧವಾಗಿ ವಿಧಾನಸಭೆಯಲ್ಲಿ ಮತ ಚಲಾವಣೆ ಮಾಡಿದರೆ ಅನರ್ಹಗೊಳಿಸಬಹುದು. ನಾವು ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡಿಲ್ಲ ಎಂದು ಸಚಿನ್ ಪೈಲೆಟ್ ಬಣ ವಾದ ಮಂಡಿಸುತ್ತಿದೆ.