ನಮ್ಮ ಹೋರಾಟ ಕಾಶ್ಮೀರಕ್ಕಾಗಿ, ಕಾಶ್ಮೀರಿಗಳ ವಿರುದ್ಧವಲ್ಲ : ಮೋದಿ
ಟೊಂಕ್ (ರಾಜಸ್ಥಾನ), ಫೆಬ್ರವರಿ 23 : "ನಮ್ಮ ಹೋರಾಟ ಏನಿದ್ದರೂ ಕಾಶ್ಮೀರಕ್ಕಾಗಿ, ಮಾನವೀಯತೆಯ ಶತ್ರುಗಳ ವಿರುದ್ಧ, ಭಯೋತ್ಪಾದನೆಯ ವಿರುದ್ಧ. ಕಾಶ್ಮೀರದ ಪ್ರಜೆಗಳು ನಮ್ಮ ಗುರಿಯಾಗಬೇಕಿಲ್ಲ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ರಾಜಸ್ಥಾನದಲ್ಲಿ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಶನಿವಾರ ಮಾತನಾಡುತ್ತಿದ್ದ ಅವರು, ಪುಲ್ವಾಮಾದಲ್ಲಿ ನಡೆದ ಭಯೋತ್ಪಾದಕ ದಾಳಿಯ ಹಿನ್ನೆಲೆಯಲ್ಲಿ, ಕಾಶ್ಮೀರದ ಪ್ರಜೆಗಳನ್ನು ಗುರಿಯಾಗಿಟ್ಟುಕೊಂಡು ಅವರ ಮೇಲೆ ದೌರ್ಜನ್ಯ ನಡೆಸಿದರೆ ಸುಮ್ಮನೆ ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.
ಕಾಶ್ಮೀರದ ಜನರು ಭಯೋತ್ಪಾದನೆಯಿಂದ ಸಾಕಷ್ಟು ನೊಂದಿದ್ದಾರೆ. ಇಡೀ ದೇಶ ಅವರ ಬೆಂಬಲಕ್ಕೆ ನಿಲ್ಲಬೇಕು. ಆದರೆ, ಕೆಲ ದಿನಗಳಿಂದೀಚೆಗೆ ಕಾಶ್ಮೀರಿ ವಿದ್ಯಾರ್ಥಿಗಳ ವಿರುದ್ಧ ಏನಾಗುತ್ತಿದೆ? ಆ ಘಟನೆ ಸಣ್ಣದೇ ಇರಲಿ, ದೊಡ್ಡದೇ ಇರಲಿ, ಅದು ಈ ದೇಶದಲ್ಲಿ ಎಂದೂ ಆಗಬಾರದು ಎಂದು ಮೋದಿಯವರು ಕಟುವಾಗಿ ಹೇಳಿದರು.

ಇಂಥ ಘಟನೆಗಳಿಂದ, ಹಿಂದೂಸ್ತಾನ ಟುಕಡೆ ಆಗಬೇಕು ಎಂದು ಅರಚುವವರಿಗೆ ಆಶೀರ್ವಾದ, ಶಕ್ತಿ ನೀಡಿದಂತಾಗುತ್ತದೆ. ಭಾರತವನ್ನು ತುಂಡರಿಸುತ್ತೇನೆ ಇನ್ಶಾ ಅಲ್ಲಾ, ಇನ್ಶಾ ಅಲ್ಲಾ ಅನ್ನುವವರಿಗೆ ಆಶೀರ್ವಾದ ನೀಡುವಂಥ ಕೆಲಸವನ್ನು ಯಾವ ಭಾರತೀಯನೂ ಮಾಡಬಾರದು. ಹಿಂದೂಸ್ತಾನ ಯಾವುದೇ ಮೂಲೆಯಲ್ಲಿರಲಿ, ಕಾಶ್ಮೀರವನ್ನು ಕಾಪಾಡುವುದು ಪ್ರತಿಯೊಬ್ಬನ ಕರ್ತವ್ಯ. ಈ ಜವಾಬ್ದಾರಿಯನ್ನು ನೀವು ನಿಭಾಯಿಸುತ್ತೀರಾ? ಎಂದು ಅವರು ನೆರೆದಿದ್ದ ಲಕ್ಷಾಂತರ ಜನರಿಗೆ ಪ್ರಶ್ನಿಸಿದರು.
ಫೆಬ್ರವರಿ 14ರಂದು ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ 40ಕ್ಕೂ ಹೆಚ್ಚು ಜವಾನರು ಅಸುನೀಗಿದ್ದರು. ಇದಾದ ನಂತರ, ಭಾರತದ ಹಲವಾರು ಕಡೆಗಳಲ್ಲಿ ಕಾಶ್ಮೀರದ ಪ್ರಜೆಗಳ ಮೇಲೆ ಹಲ್ಲೆ ನಡೆದಿವೆ. ಸರ್ವೋಚ್ಚ ನ್ಯಾಯಾಲಯ ಕೂಡ ಕಾಶ್ಮೀರದ ಪ್ರಜೆಗಳಿಗೆ ರಕ್ಷಣೆ ನೀಡಬೇಕೆಂದು 10 ರಾಜ್ಯಗಳಿಗೆ ಆದೇಶ ನೀಡಿತ್ತು.
ಪಾಕಿಸ್ತಾನಕ್ಕೆ ಹೊಸ ಪ್ರಧಾನಿ ಸಿಕ್ಕಾಗ, ಇಮ್ರಾನ್ ಖಾನ್ ಅವರನ್ನು ನಾನು ಅಭಿನಂದಿಸಿದ್ದೆ. ನಾವಿಬ್ಬರೂ ಜೊತೆಗೂಡಿ ಭಯೋತ್ಪಾದನೆಯ ವಿರುದ್ಧ, ಬಡತನದ ವಿರುದ್ಧ, ಅನಕ್ಷರತೆಯ ವಿರುದ್ಧ ಹೋರಾಡೋಣ ಎಂದಿದ್ದೆ. ಆಗ ಅವರು ನನ್ನ ಮಾತಿಗೆ ಸಮ್ಮತಿ ಸೂಚಿಸಿದ್ದರು. ನಾನು ಪಠಾಣ, ನನ್ನ ಮಾತಿಗೆ ಬದ್ಧವಾಗಿರುತ್ತೇನೆ ಎಂದಿದ್ದರು. ಆದರೆ, ಈಗ ಅವರು ಮಾತಿಗೆ ಬದ್ಧರಾಗಿರುತ್ತಾರಾ? ಅವರನ್ನು ಪರೀಕ್ಷಿಸುವ ಸಮಯ ಬಂದಿದೆ ಎಂದು ಮೋದಿಯವರು ನುಡಿದರು.












Click it and Unblock the Notifications