ಹಿಂಸಾಚಾರಕ್ಕೆ ತಿರುಗಿದ ಗುಜ್ಜರ್ ಸಮುದಾಯದ ಪ್ರತಿಭಟನೆ, ಪೊಲೀಸರಿಗೆ ಕಲ್ಲು
ಸರಕಾರಿ ಕೆಲಸ ಹಾಗೂ ಶಿಕ್ಷಣದಲ್ಲಿ ಗುಜ್ಜರ್ ಸಮುದಾಯಕ್ಕೆ ಐದು ಪರ್ಸೆಂಟ್ ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿ ನಡೆಸುತ್ತಿರುವ ಪ್ರತಿಭಟನೆ ರಾಜಸ್ತಾನದಲ್ಲಿ ಭಾನುವಾರ ಹಿಂಸಾರೂಪ ತಳೆದಿದೆ. ಪ್ರತಿಭಟನಾನಿರತರು ಗುಂಡು ಹಾರಿಸಿದ್ದು, ವಾಹನಗಳಿಗೆ ಬೆಂಕಿ ಹೊತ್ತಿಸಿದ್ದಾರೆ. ರಾಜಸ್ತಾನದ ರಾಜಧಾನಿ ಜೈಪುರ್ ಗೆ ಇನ್ನೂರಾ ಎಂಬತ್ತು ಕಿ.ಮೀ. ದೂರದಲ್ಲಿರುವ ಧೋಲ್ ಪುರ್ ನಲ್ಲಿ ಪೊಲೀಸರ ಮೇಲೆ ಕಲ್ಲು ತೂರಲಾಗಿದೆ.
ಕಲ್ಲು ತೂರಾಟದ ಘಟನೆಯಲ್ಲಿ ಆರು ಪೊಲೀಸರಿಗೆ ಗಾಯಗಳಾಗಿವೆ. ಎಸ್ ಪಿ ಅಜಯ್ ಸಿಂಗ್ ಮಾತನಾಡಿ, ಗುಜ್ಜರ್ ಸಮುದಾಯದ ಪ್ರತಿಭಟನಾನಿರತರು ಆಗ್ರಾ- ಮೊರೆನಾ ಹೆದ್ದಾರಿಯನ್ನು ತಡೆದರು. ಆ ಸ್ಥಳದಿಂದ ಕೆಲವು ಮೀಟರ್ ದೂರದಲ್ಲಿ ಪೊಲೀಸರು ಇದ್ದರು. ಪ್ರತಿಭಟನಾನಿರತರು ಪೊಲೀಸರತ್ತ ಕಲ್ಲು ತೂರಿದರು. ಪೊಲೀಸರ ಮೂರು ವಾಹನಗಳು ಸುಟ್ಟುಹಾಕಿದರು. ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಸಿಡಿಸಿದರು ಎಂದಿದ್ದಾರೆ.
ಹೆದ್ದಾರಿಯ ಬದಿಯಲ್ಲಿರುವ ಮನೆಗಳ ಮೇಲೆ ಪ್ರತಿಭಟನಾನಿರತರು ಹತ್ತಿದರು. ನಾಡ ಪಿಸ್ತೂಲುಗಳಿಂದ ಗುಂಡು ಹಾರಿಸಿದರು. ಸದ್ಯಕ್ಕೆ ಸನ್ನಿವೇಶ ಹತೋಟಿಯಲ್ಲಿದೆ. ಆದರೆ ನಾಲ್ಕರಿಂದ ಆರು ಮಂದಿ ಪೊಲೀಸರು ಗಾಯಗೊಂಡಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.

ಈ ಮಧ್ಯೆ ಸಮಾಜದ ಹೋರಾಟಗಾರರು ಗುಜ್ಜರ್ ಆರಕ್ಷಣ್ ಸಂಘರ್ಷ್ ಸಮಿತಿ ಅಡಿಯಲ್ಲಿ ರೈಲು ತಡೆ ನಡೆಸಿದ್ದಾರೆ. ಎರಡು ರೈಲು ರದ್ದುಪಡಿಸಲಾಗಿದೆ. ಏಳು ರೈಲುಗಳು ಮಾರ್ಗ ಬದಲಾವಣೆ ಮಾಡಲಾಗಿದೆ. ಎರಡು ರೈಲು ಭಾಗಶಃ ರದ್ದಾಗಿದೆ ಎಂದು ರೈಲ್ವೆ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.
ರೈಲು ಹಳಿಗಳ ಮೇಲೆ ನಾವು ಧರಣಿ ಮುಂದುವರಿಸುತ್ತೇವೆ. ಸರಕಾರದ ನಿಯೋಗದ ಜತೆ ಯಾವುದೇ ಸಂಧಾನ ಆಗಿಲ್ಲ. ಐದು ಪರ್ಸೆಂಟ್ ಮೀಸಲಾತಿಯ ಆದೇಶ ಆಗಬೇಕು ಎಂದು ಗುಜ್ಜರ್ ಸಮುದಾಯದ ಮುಖಂಡರು ಹೇಳಿದ್ದಾರೆ.












Click it and Unblock the Notifications