just in: ರಾಜಸ್ಥಾನದಲ್ಲಿ 6 ಸೈನಿಕರ ವಿರುದ್ಧ ಪ್ರಕರಣ
ಜೈಪುರ, ಆ.02: ರಾಜಸ್ಥಾನದಲ್ಲಿ ಸೈನಿಕರಿಂದಾಗಿ ತೀವ್ರವಾಗಿ ಗಾಯಗೊಂಡಿದ್ದ ವ್ಯಕ್ತಿಯೊಬ್ಬರು ಸ್ಥಳೀಯ ಆಸ್ಪತ್ರೆಯಲ್ಲಿ ಮೃತಪಟ್ಟ ನಂತರ ಆರು ಸೇನಾ ಜವಾನರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮೃತ ಸಲ್ಮಾನ್ (24) ತನ್ನ ಸ್ನೇಹಿತನೊಂದಿಗೆ ಸೋಮವಾರ ಬೈಕ್ನಲ್ಲಿ ಪೋಖ್ರಾನ್ (Pokhran) ಫೈರಿಂಗ್ ರೇಂಜ್ಗೆ ಹೋಗಿದ್ದರು. ಇದು ನಿಷೇಧಿತ ಪ್ರದೇಶವಾಗಿರುವುದರಿಂದ ಸೇನೆಯ ಗಸ್ತು ವಾಹನವನ್ನು ಕಂಡು ತಪ್ಪಿಸಿಕೊಳ್ಳಲು ಮರಳು ದಿಬ್ಬದ ಕಡೆಗೆ ಬೈಕ್ ತಿರುಗಿಸಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾರೆ ಎಂದರು.
"ಆದರೆ, ಸಲ್ಮಾನ್ ದನಗಳನ್ನು ಹುಡುಕಲು ಫೈರಿಂಗ್ ರೇಂಜ್ಗೆ ಹೋಗಿದ್ದರು ಎಂದು ಸಂತ್ರಸ್ತನ ಕುಟುಂಬದವರು ಹೇಳಿದ್ದಾರೆ. ಸಲ್ಮಾನ್ ಅವರ ಸ್ನೇಹಿತ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಸಿಕ್ಕಿಬಿದ್ದ ಸಲ್ಮಾನ್ ಅವರನ್ನು ಜವಾನರು ತೀವ್ರವಾಗಿ ಥಳಿಸಿ ನಂತರ ಆಸ್ಪತ್ರೆಗೆ ಕರೆದೊಯ್ದರು ಎಂದು ಕುಟುಂಬದವರು ಆರೋಪಿಸಿದ್ದಾರೆ ಎಂದು ಅಶೋಕ್ ಲಾಠಿ ಪೊಲೀಸ್ ಠಾಣೆಯ ಎಸ್ಎಚ್ಒ ಕುಮಾರ್ ತಿಳಿಸಿದರು.

ಇತ್ತ, ಸೇನಾ ಅಧಿಕಾರಿಗಳು ಈ ಆರೋಪಗಳನ್ನು ನಿರಾಕರಿಸಿದ್ದಾರೆ. ಗಾಯಗೊಂಡು ಬಿದ್ದಿದ್ದ ಸಲ್ಮಾನ್ ಅವರನ್ನು ಜವಾನರು ಗಮನಿಸಿ, ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ಹೇಳಿದರು.
ಇದೇ ವೇಳೆ ನೊಂದ ಕುಟುಂಬಸ್ಥರು ಪೋಖ್ರಾನ್ ಎಸ್ಡಿಎಂ ಕಚೇರಿ ಎದುರು ಮೃತದೇಹವಿಟ್ಟು ಧರಣಿ ನಡೆಸಿ ಆರೋಪಿ ಯೋಧರನ್ನು ಬಂಧಿಸಬೇಕು ಎಂದು ಆಕ್ರೋಶ ಹೊರಹಾಕಿದ್ದಾರೆ. ಜೊತೆಗೆ ಮೃತರ ಕುಟುಂಬ ಸದಸ್ಯರಿಗೆ 50 ಲಕ್ಷ ಪರಿಹಾರ ಹಾಗೂ ಕುಟುಂಬದ ಸದಸ್ಯರಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಒತ್ತಾಯಿಸಿದರು.
ಜೈಸಲ್ಮೇರ್ ಜಿಲ್ಲಾಧಿಕಾರಿ ಟೀನಾ ದಾಬಿ ಮಾತನಾಡಿ, "ಪ್ರತಿಭಟನಾ ನಿರತ ಕುಟುಂಬ ಸದಸ್ಯರಿಗೆ ಮನವರಿಕೆ ಮಾಡಿಕೊಡಲು ಪ್ರಯತ್ನಿಸಲಾಗುತ್ತಿದೆ. ಸದ್ಯದಲ್ಲಿಯೇ ಸಮಸ್ಯೆ ಬಗೆಹರಿಯಲಿದೆ," ಎಂದು ಹೇಳಿದರು.
ಸದ್ಯ ಸಲ್ಮಾನ್ ಅವರ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ಯೋಧರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಸ್ಟೇಷನ್ ಹೌಸ್ ಆಫೀಸರ್ (ಎಸ್ಎಚ್ಒ) ತಿಳಿಸಿದರು
ಘಟನೆಯ ಕುರಿತು ಮಾತನಾಡಿದ ರಕ್ಷಣಾ ವಕ್ತಾರ ಲೆಫ್ಟಿನೆಂಟ್ ಕರ್ನಲ್ ಅಮಿತಾಭ್ ಶರ್ಮಾ, "ವ್ಯಕ್ತಿ ಗಾಯಗೊಂಡು ಬಿದ್ದಿರುವುದು ಕಂಡು ಬಂದಿದ್ದು, ಗಸ್ತು ತಿರುಗುತ್ತಿದ್ದವರು ತಕ್ಷಣ ಅವರನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದ್ದಾರೆ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಅವರು ಸಾವನ್ನಪ್ಪಿದ್ದಾರೆ," ಎಂದರು.
ಜೊತೆಗೆ ಸೇನೆ ಮತ್ತು ಪೊಲೀಸರು ಜಂಟಿಯಾಗಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ ಎಂದರು.












Click it and Unblock the Notifications