ರಾಜಸ್ಥಾನ: ಕಾಂಗ್ರೆಸ್ ಪ್ರಾಥಮಿಕ ಸದಸ್ಯತ್ವದಿಂದ ಸಚಿನ್ ಪೈಲಟ್ ಉಚ್ಚಾಟನೆ?
ಜೈಪುರ, ಜುಲೈ 14: ರಾಜಸ್ಥಾನದಲ್ಲಿನ ಅಶೋಕ್ ಗೆಹ್ಲೋಟ್ ನೇತೃತ್ವದ ಸರಕಾರದ ಆಂತರಿಕ ಬೇಗುದಿ ಕಮ್ಮಿಯಾಗುವ ಯಾವ ಲಕ್ಷಣಗಳೂ ಕಾಣಿಸುತ್ತಿಲ್ಲ. ರಾಜ್ಯದ ಉಪಮುಖ್ಯಮಂತ್ರಿ ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರು, ಸಿಎಲ್ಪಿ ಸಭೆಗೆ ಮತ್ತೆ ಗೈರಾಗಿದ್ದಾರೆ.
ಕಳೆದ ಎರಡು ದಿನಗಳಲ್ಲಿ, ಎರಡು ಬಾರಿ ಪಕ್ಷದ ಶಾಸಕರ ಸಭೆ ನಡೆದಿದೆ. ಇಂದು (ಜು 14) ನಡೆಯುತ್ತಿರುವ ಸಭೆಯಲ್ಲೂ ಸಚಿನ್ ಪೈಲಟ್ ಭಾಗವಹಿಸದೇ ತಮ್ಮ ಬಂಡಾಯದ ಬಾವುಟವನ್ನು ಮತ್ತೆ ಹಾರಿಸಿದ್ದಾರೆ.
ಇಂದು ನಡೆಯುತ್ತಿರುವ ಸಭೆಯು ಸಚಿನ್ ಪೈಲಟ್ ಗೆ, ಪಕ್ಷದ ತೀರ್ಮಾನಕ್ಕೆ ಬದ್ದರಾಗಲು ಎರಡನೇ ಅವಕಾಶ ಎಂದು ಹೇಳಲಾಗುತ್ತಿದೆ. ಆದರೂ, ಸಚಿನ್, ಸಭೆಯಲ್ಲಿ ಭಾಗವಹಿಸದೇ, ಹೈಕಮಾಂಡ್ ನಿರ್ಧಾರಕ್ಕೆ ಡೋಂಟ್ ಕೇರ್ ಎಂದಿದ್ದಾರೆ.
ರಾಜಸ್ಥಾನ ಕಾಂಗ್ರೆಸ್ ಘಟಕದ ಅಧ್ಯಕ್ಷರೂ ಆಗಿರುವ ಸಚಿನ್ ಪೈಲಟ್ ಮತ್ತು ಬೆಂಬಲಿಗರು, ಅಸೆಂಬ್ಲಿಯಲ್ಲಿ ಶಕ್ತಿ ಪ್ರದರ್ಶನ ತೋರಿಸಲು ಸಜ್ಜಾಗುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಇವೆಲ್ಲದರ ನಡುವೆ, ಸಚಿನ್ ಪೈಲಟ್ ಅವರನ್ನು ಉಚ್ಚಾಟಿಸುವ ಸುದ್ದಿಯೂ ಹರಿದಾಡುತ್ತಿದೆ.

ರಾಜಸ್ಥಾನ ಅಸೆಂಬ್ಲಿ ಚುನಾವಣೆ
ಕಳೆದ ರಾಜಸ್ಥಾನ ಅಸೆಂಬ್ಲಿ ಚುನಾವಣೆಯಲ್ಲಿ ಜಾತಿ ರಾಜಕಾರಣವನ್ನು ವ್ಯವಸ್ಥಿತವಾಗಿ ಪ್ರಯೋಗಿಸಿ ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕಾರಣರಾದ ಸಚಿನ್ ಪೈಲಟ್, ಬಿಜೆಪಿ ಸೇರುವ ವಿಚಾರವನ್ನು ಸದ್ಯಕ್ಕೆ ನಿರಾಕರಿಸುತ್ತಿದ್ದಾರೆ. ಇತ್ತ ಸಿಎಂ ಗೆಹ್ಲೋಟ್ ಗೆ ನೂರಕ್ಕೂ ಹೆಚ್ಚು ಶಾಸಕರು ಬೆಂಬಲ ಸೂಚಿಸಿದ್ದಾರೆ.

ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಘುವೀರ್ ಮೀನಾ
ಸಚಿನ್ ಪೈಲಟ್ ಮತ್ತು ಅವರ ಬೆಂಬಲಿಗರು ಸಿಎಲ್ಪಿ ಸಭೆಗೆ ಹಾಜರಾಗದಿದ್ದರೆ, ಅವರನ್ನೆಲ್ಲಾ ಪಕ್ಷದಿಂದ ಉಚ್ಚಾಟನೆಗೊಳಿಸಲಾಗುವುದು. ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಘುವೀರ್ ಮೀನಾರನ್ನು ನೇಮಕ ಮಾಡಲಾಗುವುದು ಎನ್ನುವ ಮಾಹಿತಿ ಕಾಂಗ್ರೆಸ್ ವಲಯದಿಂದ ಹೊರಬಿದ್ದಿತ್ತು.

ಸಚಿನ್ ಪೈಲಟ್ ಮೂರು ಬೇಡಿಕೆ
ಈ ಮಾಹಿತಿ ಹೊರಬಿದ್ದ ಬೆನ್ನಲ್ಲೇ, ಸಚಿನ್ ಪೈಲಟ್ ಮೂರು ಬೇಡಿಕೆಯನ್ನು ಹೈಕಮಾಂಡ್ ಮುಂದಿಟ್ಟಿದ್ದಾರೆಂದು ಹೇಳಲಾಗುತ್ತಿದೆ. ಅದರಲ್ಲಿ, ರಾಜ್ಯಾಧ್ಯಕ್ಷರನ್ನಾಗಿ ತನ್ನನ್ನೇ ಮುಂದುವರಿಸುವುದು, ತನ್ನ ಆಪ್ತರಿಗೆ ಗೃಹ ಮತ್ತು ಹಣಕಾಸು ಖಾತೆಯನ್ನು ನೀಡುವುದೂ ಬೇಡಿಕೆಯಲ್ಲಿ ಸೇರಿದೆ ಎಂದು ಹೇಳಲಾಗುತ್ತಿದೆ.

ಪ್ರಾಥಮಿಕ ಸದಸ್ಯತ್ವದಿಂದ ಸಚಿನ್ ಪೈಲಟ್ ಉಚ್ಚಾಟನೆ?
ಬಂಡಾಯ ನಾಯಕರ ವಿರುದ್ದ ಶಿಸ್ತುಕ್ರಮ ತೆಗೆದುಕೊಳ್ಳಲು ಶಾಸಕಾಂಗ ಪಕ್ಷದ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ತಮಗೆ ಮೂವತ್ತು ಶಾಸಕರ ಬೆಂಬಲವಿದೆ ಎಂದು ಸಚಿನ್ ಪೈಲಟ್ ಹೇಳಿದರೆ, ಆ ಸಂಖ್ಯೆ ಹದಿನಾರಕ್ಕೆ ಕುಸಿದಿದೆ ಎಂದು ಗೆಹ್ಲೋಟ್ ಬಣ ಹೇಳಿಕೊಂಡಿದೆ. ಇನ್ನೂರು ಸದಸ್ಯ ಬಲದ ಅಸೆಂಬ್ಲಿಯಲ್ಲಿ ಕಾಂಗ್ರೆಸ್ 100, ಬಿಜೆಪಿ 73, ಇತರರು/ಪಕ್ಷೇತರರು 27ಸ್ಥಾನವನ್ನು ಹೊಂದಿದ್ದಾರೆ.












Click it and Unblock the Notifications