ಕೃಷ್ಣಮೃಗ ಹತ್ಯೆ ಪ್ರಕರಣ: ಸಲ್ಮಾನ್ ಖಾನ್ ಗೆ ಮತ್ತೆ ನೆಮ್ಮದಿ ಸುದ್ದಿ
ಜೋಧ್ ಪುರ್ (ರಾಜಸ್ಥಾನ), ಜೂನ್ 17: ಬಾಲಿವುಡ್ಡಿನ ಸ್ಟಾರ್ ನಟ, ನಟಿಯರನ್ನು 1998ರ ಕೃಷ್ಣಮೃಗ ಬೇಟೆ ಪ್ರಕರಣ ಇನ್ನಿಲ್ಲದ್ದಂತೆ ಕಾಡುತ್ತಿದೆ. ಸಲ್ಮಾನ್ ಖಾನ್ ಅವರು ಪ್ರಮುಖ ಆರೋಪಿಯಾಗಿರುವ ಈ ಪ್ರಕರಣದ ಸಹ ಆರೋಪಿಗಳಿಗೆ ರಾಜಸ್ಥಾನದ ಹೈಕೋರ್ಟಿನಿಂದ ಸೋಮವಾರ(ಮೇ 20)ದಂದು ಹೊಸದಾಗಿ ನೋಟಿಸ್ ಜಾರಿ ಮಾಡಲಾಗಿದೆ.
ಈಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಕಲಿ ಅಫಿಡವಿಟ್ ಸಲ್ಲಿಸಿದ್ದ ಆರೋಪ ಹೊತ್ತಿದ್ದ ಸಲ್ಮಾನ್ ಖಾನ್ ಗೆ ಜೋಧ್ ಪುರ ಕೋರ್ಟಿನಿಂದ ರಿಲೀಫ್ ಸಿಕ್ಕಿದೆ. ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಸಲ್ಮಾನ್ ಬಳಿ ಇದ್ದ ಗನ್ ಗೆ ಲೈಸನ್ಸ್ ನವೀಕರಣವಾಗಿಲ್ಲ ಎಂದು ಆರೋಪಿಸಲಾಗಿತ್ತು. ಆದರೆ, ಲೈಸನ್ಸ್ ದಾಖಲೆ ಕಳೆದು ಹೋಗಿದೆ. ನವೀಕರಣಕ್ಕಾಗಿ ಹೊಸದಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ಸಲ್ಮಾನ್ ಪರ ವಕೀಲರು ಸೂಕ್ತ ಸಾಕ್ಷ್ಯ ನೀಡಿದ್ದಾರೆ. ನಕಲಿ ದಾಖಲೆ ಸಲ್ಲಿಸುವುದು ನಮ್ಮ ಉದ್ದೇಶವಾಗಿರಲಿಲ್ಲ ಎಂದಿದ್ದಾರೆ.
ತಬು, ಸೈಫ್, ನೀಲಂ, ಸೋನಾಲಿಗೆ ಕೋರ್ಟಿನಿಂದ ನೋಟಿಸ್
ಮುಖ್ಯ ಆರೋಪಿಯ ಜತೆ ಘಟನಾ ಸ್ಥಳದಲ್ಲಿದ್ದ ಕಾರಣಕ್ಕೆ ಆರೋಪ ಹೊತ್ತಿದ್ದ ಹಮ್ ಸಾಥ್ ಸಾಥ್ ಹೈ ಚಿತ್ರ ತಂಡದ ಸೋನಾಲಿ ಬೇಂದ್ರೆ, ನೀಲಂ ಕೊಥಾರಿ, ತಬು, ಸೈಫ್ ಅಲಿ ಖಾನ್ ಹಾಗೂ ದುಷ್ಯಂತ್ ಕುಮಾರ್ ಅವರು ಸಹ ಆರೋಪಿಗಳಾಗಿದ್ದರು. ಆದರೆ, ಐದು ತಿಂಗಳ ಹಿಂದೆ ಇವರೆಲ್ಲರ ವಿರುದ್ಧ ಸರಿಯಾದ ಸಾಕ್ಷಿ ಸಿಗದ ಕಾರಣ, ಪ್ರಕರಣದಿಂದ ಖುಲಾಸೆಗೊಂಡಿದ್ದರು. ನಟ, ನಟಿಯರನ್ನು ಕೇಸಿನಿಂದ ಖುಲಾಸೆಗೊಳಿಸಿರುವುದನ್ನು ಪ್ರಶ್ನಿಸಿ, ರಾಜಸ್ಥಾನ ಸರ್ಕಾರವು ಹೈಕೋರ್ಟಿಗೆ ಮೇಲ್ಮನವಿ ಸಲ್ಲಿಸಿತ್ತು.
ಮೇಲ್ಮನವಿ ಪುರಸ್ಕರಿಸಿದ ನ್ಯಾಯಾಲಯವು, ಆರೋಪಿಗಳಿಗೆ ಮಾರ್ಚ್ 11, 2019ರಂದು ನೋಟಿಸ್ ಜಾರಿ ಮಾಡಿತ್ತು. ಸೋಮವಾರದಂದು ನಡೆದ ವಿಚಾರಣೆಯಲ್ಲಿ ನೀಲಂ ಕೊಥಾರಿ ಹೊರತುಪಡಿಸಿ, ಮಿಕ್ಕವರಿಗೆ ನೋಟಿಸ್ ತಲುಪಿಲ್ಲ ಎಂದು ಆರೋಪಿಗಳ ಪರ ವಕೀಲರು ವಾದಿಸಿದ್ದರು. ಜಸ್ಟೀಸ್ ಮನೋಜ್ ಗರ್ಗ್ ಅವರು ಹೊಸದಾಗಿ ನೋಟಿಸ್ ಜಾರಿಗೊಳಿಸಿದ್ದಾರೆ.