ಕಾಶ್ಮೀರ ಫೈಲ್ಸ್ ಟಿಕೆಟ್ ನೀಡಿದಂತೆ ಇಂಧನಕ್ಕೆ ಕೂಪನ್ ನೀಡಿ: ಬಿಜೆಪಿಗೆ ರಾಜಸ್ಥಾನ ಸಚಿವ ಟಾಂಗ್
ಜೈಪುರ, ಮಾರ್ಚ್ 29: ಕಳೆದ ಒಂದು ವಾರದಿಂದ ಪೆಟ್ರೋಲ್ ಮತ್ತು ಡೀಸೆಲ್ ಎರಡರ ಬೆಲೆ ಲೀಟರ್ಗೆ ಸುಮಾರು 5 ರೂಪಾಯಿಗಳಷ್ಟು ಏರಿಕೆಯಾಗಿದೆ. ಈ ನಡುವೆ ಕಾಶ್ಮೀರ ಫೈಲ್ಸ್ ಟಿಕೆಟ್ ನೀಡಿದಂತೆ ಕೇಂದ್ರದ ಆಡಳಿತಾರೂಢ ಬಿಜೆಪಿಯು ಇಂಧನಕ್ಕಾಗಿ ಕೂಪನ್ಗಳನ್ನು ವಿತರಿಸಬೇಕು ಎಂದು ರಾಜಸ್ಥಾನದ ಸಚಿವ ಪ್ರತಾಪ್ ಖಚರಿಯಾವಾಸ್ ಸೋಮವಾರ ಹೇಳಿದ್ದಾರೆ.
"ಚುನಾವಣೆಯ ನಂತರ, ಬಿಜೆಪಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಹೆಚ್ಚಿಸಿದೆ. ಅವರು 'ರಾವಣ ಭಕ್ತರು' 'ರಾಮಭಕ್ತರು' ಅಲ್ಲ. ಬಿಜೆಪಿಯ ಮುಖ್ಯಮಂತ್ರಿ, ಮಂತ್ರಿಗಳು 'ದಿ ಕಾಶ್ಮೀರ ಫೈಲ್ಸ್' ಚಿತ್ರದ ಟಿಕೆಟ್ಗಳನ್ನು ವಿತರಿಸಿದಂತೆಯೇ ಪೆಟ್ರೋಲ್, ಡೀಸೆಲ್ಗೆ ಕೂಪನ್ಗಳನ್ನು ವಿತರಿಸಬೇಕು," ಎಂದು ಕಾಂಗ್ರೆಸ್ ನಾಯಕ ಪ್ರತಾಪ್ ಖಚರಿಯಾವಾಸ್ ಎಎನ್ಐ ಸುದ್ದಿ ಸಂಸ್ಥೆಗೆ ಪ್ರತಿಕ್ರಿಯೆ ನೀಡಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ಯುದ್ಧದ ಪರಿಣಾಮವಾಗಿ ಕಚ್ಚಾತೈಲ ಬೆಲೆ ದಶಕದ ಬಳಿಕ ಮೊದಲ ಬಾರಿಗೆ ಭಾರೀ ಏರಿಕೆ ಕಂಡು ಬಂದಿದೆ. ಈ ಬೆನ್ನಲ್ಲೇ ದೇಶದಲ್ಲಿ ಸುಮಾರು 137 ದಿನಗಳ ನಂತರ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ದೇಶದಲ್ಲಿ ಪಂಚ ರಾಜ್ಯಗಳ ಚುನಾವಣೆಯ ಸಂದರ್ಭದಲ್ಲಿ ಈ ಬೆಲೆ ಪರಿಷ್ಕರಣೆಕ್ಕೆ ಬ್ರೇಕ್ ಹಾಕಲಾಗಿದ್ದು, ಚುನಾವಣೆ ಮುಗಿದ ಕೂಡಲೇ ಬೆಲೆ ಏರಿಕೆ ಮಾಡಲಾಗಿದೆ.

ನಿರಂತರ ಏರುತ್ತಿರುವ ಪೆಟ್ರೋಲ್, ಡೀಸೆಲ್ ಬೆಲೆ
ಕಳೆದ ಎಂಟು ದಿನಗಳಲ್ಲಿ ಏಳು ದಿನಗಳು ದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ದರವನ್ನು ಏರಿಕೆ ಮಾಡಲಾಗಿದೆ. ಸರ್ಕಾರಿ ಸ್ವಾಮ್ಯದ ಮೂರು ಪ್ರಮುಖ ತೈಲ ಕಂಪನಿಗಳು ಮಾರ್ಚ್ 29ರಂದು ಪೆಟ್ರೋಲ್, ಡೀಸೆಲ್ ದರ ಪರಿಷ್ಕರಣೆ ಮಾಡಿದೆ. ಈ ಪರಿಷ್ಕರಣೆಯ ಪ್ರಕಾರ ಮಾರ್ಚ್ 29ರಂದು ಪೆಟ್ರೋಲ್ ಪ್ರತಿ ಲೀಟರ್ಗೆ 80 ಪೈಸೆ ಏರಿಕೆಯಾಗಿದ್ದು, ಡೀಸೆಲ್ಗೆ 70 ಪೈಸೆ ಏರಿಕೆಯಾಗಿದೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಈಗ ಈಗ ಪೆಟ್ರೋಲ್ ಬೆಲೆ ರೂ. 100.21 ಆಗಿದೆ. ಈ ಹಿಂದೆ ದೆಹಲಿಯಲ್ಲಿ ಪೆಟ್ರೋಲ್ ಬೆಲೆಯು ಲೀಟರ್ಗೆ 99.41 ರೂಪಾಯಿ ಆಗಿತ್ತು. ಇನ್ನು ಡಿಸೇಲ್ ಬೆಲೆಯು ಲೀಟರ್ಗೆ 91.47 ಗೆ ತಲುಪಿದೆ. ಕರ್ನಾಟಕ ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ಏರಿಕೆ ಕಂಡಿದ್ದು, 105.62 ರೂಪಾಯಿಗೆ ಹೆಚ್ಚಿದೆ. ನಿನ್ನೆ 104.78 ರೂಪಾಯಿ ಇದ್ದ ಪೆಟ್ರೋಲ್ ಬೆಲೆಯು ಇಂದು 0.84 ಪೈಸೆ ಹೆಚ್ಚಳವಾಗಿ 105.62 ರೂಪಾಯಿಗೆ ತಲುಪಿದೆ. ಇನ್ನು ಡೀಸೆಲ್ ಬೆಲೆಯು ಕೂಡಾ ಏರಿದೆ. 0.68 ಪೈಸೆ ಹೆಚ್ಚಳವಾಗಿ, ಡಿಸೇಲ್ ಬೆಲೆಯು 89.70 ಗೆ ತಲುಪಿದೆ.
ದಿ ಕಾಶ್ಮೀರಿ ಫೈಲ್ಸ್
ಬಿಜೆಪಿಯು ದಿ ಕಾಶ್ಮೀರಿ ಫೈಲ್ಸ್ ಸಿನಿಮಾ ಬಂದಾಗ ಅದಕ್ಕಾಗಿ ಉಚಿತ ಟಿಕೆಟ್ಗಳನ್ನು ನೀಡಿದ್ದವು. ಈ ವಿಚಾರದಲ್ಲಿ ಬಿಜೆಪಿ ಸರ್ಕಾರಗಳನ್ನು ಟೀಕೆ ಮಾಡಿದ ರಾಜಸ್ಥಾನದ ಸಚಿವ ಪ್ರತಾಪ್ ಖಚರಿಯಾವಾಸ್, "ಬಿಜೆಪಿ ಕಾಶ್ಮೀರ ಫೈಲ್ಸ್ ಚಿತ್ರದ ಟಿಕೆಟ್ಗಳನ್ನು ಹಸ್ತಾಂತರಿಸುವ ರೀತಿಯಲ್ಲಿ ಉಚಿತ ಇಂಧನಕ್ಕಾಗಿ ಕೂಪನ್ಗಳನ್ನು ನೀಡಬೇಕು," ಎಂದರು.
ಚಿತ್ರ ಬಿಡುಗಡೆಯಾದ ನಂತರ, ದೇಶದಾದ್ಯಂತ ಬಿಜೆಪಿ ನಾಯಕರು ಇಡೀ ಚಿತ್ರಮಂದಿರಗಳನ್ನು ಕಾಯ್ದಿರಿಸಿದರು. ಉಚಿತ ಟಿಕೆಟ್ಗಳನ್ನು ನೀಡಿದರು ಮತ್ತು ಚಲನಚಿತ್ರವನ್ನು ವೀಕ್ಷಿಸಲು ಜನರನ್ನು ಉತ್ತೇಜಿಸಲು ಉಚಿತ ಪ್ರದರ್ಶನಗಳನ್ನು ಆಯೋಜಿಸಿದರು. ನಿರ್ದೇಶಕ ವಿವೇಕ್ ಅಗ್ನಿಹೋತ್ರಿ ಹರಿಯಾಣದಲ್ಲಿ ಬಿಜೆಪಿ ನಾಯಕರ ಉಚಿತ ಸ್ಕ್ರೀನಿಂಗ್ ಬಗ್ಗೆ ಪ್ರತಿಕ್ರಿಯೆ ನೀಡಿ ಅದನ್ನು "ಕ್ರಿಮಿನಲ್ ಅಪರಾಧ" ಎಂದು ಕರೆದರು.
ಕಾಶ್ಮೀರ ಫೈಲ್ಸ್ 1990 ರ ದಶಕದ ಕಾಶ್ಮೀರಿ ಪಂಡಿತರು ಕಾಶ್ಮೀರವನ್ನು ತೊರೆದು ಹೋಗುವ ವಿಚಾರವನ್ನು ಆಧಾರಿಸಿದ ಸಿನಿಮಾವಾಗಿದೆ. ಬಾಕ್ಸ್ ಆಫೀಸ್ನಲ್ಲಿ ಅದ್ಭುತ ಪ್ರದರ್ಶನ ನೀಡುವುದರ ಜೊತೆಗೆ, ಈ ತಿಂಗಳ ಆರಂಭದಲ್ಲಿ ಬಿಡುಗಡೆಯಾದಾಗಿನಿಂದ ಚಲನಚಿತ್ರವು ಸಾರ್ವಜನಿಕ ಚರ್ಚೆಯ ಕೇಂದ್ರವಾಗಿದೆ.












Click it and Unblock the Notifications