ಭಾರತ-ಚೀನಾ ಗಡಿಯಲ್ಲಿ ಶಾಂತಿ ಸ್ಥಾಪನೆಗೆ 18ನೇ ಸುತ್ತಿನ ಸಭೆ
ನವದೆಹಲಿ, ಆಗಸ್ಟ್.20: ಭಾರತ-ಚೀನಾದ ಪೂರ್ವ ಗಡಿಭಾಗದ ಗಾಲ್ವಾನ್ ಪ್ರದೇಶದಲ್ಲಿ ಸೇನಾ ಪ್ರಮಾಣವನ್ನು ತಗ್ಗಿಸುವ ಸಂಬಂಧ ಉಭಯ ರಾಷ್ಟ್ರಗಳು ಗುರುವಾರ ಸಮನ್ವಯದ ಕಾರ್ಯವಿಧಾನಕ್ಕಾಗಿ ಸಮಾಲೋಚನೆ ನಡೆಸಲಿವೆ.
ಉಭಯ ರಾಷ್ಟ್ರಗಳ ಪೂರ್ವ ಗಡಿಭಾಗ ಲಡಾಖ್ ನಲ್ಲಿ ಸೇನೆಯನ್ನು ಹಿಂತೆಗೆದುಕೊಳ್ಳುವುದು ಮತ್ತು ಸೇನಾ ಕಾರ್ಯ ಚಟುವಟಿಕೆಗಳನ್ನು ನಿಷ್ಕ್ರಿಯಗೊಳಿಸುವ ಬಗ್ಗೆ ಉಭಯ ರಾಷ್ಟ್ರಗಳ ನಡುವೆ 18ನೇ ಹಂತದ ಮಾತುಕತೆ ನಡೆಯಲಿದೆ.
ಕಳೆದ ತಿಂಗಳು ಭಾರತ ಮತ್ತು ಚೀನಾ ಸೇನಾಧಿಕಾರಿಗಳ ನಡುವೆ 17ನೇ ಹಂತದ ಚರ್ಚೆ ನಡೆದಿತ್ತು. ಈ ವೇಳೆ ಎರಡು ರಾಷ್ಟ್ರಗಳ ವಾಸ್ತವಿಕ ಗಡಿ ರೇಖೆಯಲ್ಲಿ ಸೇನಾ ಕಾರ್ಯಾಚರಣೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದಕ್ಕೆ ಉಭಯ ರಾಷ್ಟ್ರಗಳು ಸಮ್ಮತಿ ಸೂಚಿಸಿದ್ದವು. ದ್ವಿಪಕ್ಷೀಯ ಸಂಬಂಧವನ್ನು ಅಭಿವೃದ್ಧಿಗೊಳಿಸುವುದು ಮತ್ತು ಎರಡು ರಾಷ್ಟ್ರಗಳ ನಡುವೆ ಶಾಂತಿ-ಸೌಹಾರ್ದತೆಯನ್ನು ಪುನರ್ ಸ್ಥಾಪಿಸುವ ನಿಟ್ಟಿನಲ್ಲಿ ಚರ್ಚೆ ನಡೆಸಲಾಗಿತ್ತು.

ಜಂಟಿ ಕಾರ್ಯದರ್ಶಿಗಳ ನಡುವೆ ಮಾತುಕತೆ:
ಭಾರತ ಮತ್ತು ಚೀನಾ ರಾಷ್ಟ್ರಗಳ ಜಂಟಿ ಕಾರ್ಯದರ್ಶಿ ಹಂತದ ಅಧಿಕಾರಿಗಳ ನಡುವೆ ಶಾಂತಿ ಮಾತುಕತೆಯು ನಡೆಯಲಿದೆ. ಮೂರು ತಿಂಗಳಿನಿಂದ ತುತ್ತ ತುದಿಯ ಪ್ರದೇಶದಲ್ಲಿ ಚೀನಾದ ಯೋಧರು ಶಿಬಿರಗಳನ್ನು ಹಾಕುತ್ತಿದ್ದು, ಬಂಕರ್ ಮತ್ತು ಸಾಂಗಾರ್ ಗಳ ನಿರ್ಮಾಣ ಮಾಡಿಕೊಳ್ಳುತ್ತಾ ತಮ್ಮ ನೆಲೆಗಳನ್ನು ಬಲಪಡಿಸುತ್ತಿದ್ದರು. ಇತ್ತೀಚಿಗೆ ನಡೆದ ಸೇನಾ ಮತ್ತು ರಾಜತಾಂತ್ರಿಕ ಚರ್ಚೆಯ ಬಳಿಕ ಚೀನಾ ಡೆಪ್ಸಾಂಗ್ ಬಯಲು ಮತ್ತು ಗೋಗ್ರಾದಲ್ಲಿ ಬೇರ್ಪಡಿಸಿಲ್ಲ ಎಂದು ತಿಳಿದು ಬಂದಿದೆ.
ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಯ ಸಂಪೂರ್ಣ ಪುನಃಸ್ಥಾಪನೆಯೊಂದಿಗೆ ಪೂರ್ವ ಲಡಾಖ್ ನ ಎಲ್ಎಸಿ ಉದ್ದಕ್ಕೂ ಸೇನೆಯನ್ನು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸುವುದಾಗಿ ಭಾರತವು ತಿಳಿಸಿತ್ತು. ಆ ಮೂಲಕ ಎರಡು ರಾಷ್ಟ್ರಗಳ ನಡುವೆ ಉಲ್ಬಣಗೊಂಡ ಸಮಸ್ಯೆಯನ್ನು ಪ್ರಾಮಾಣಿಕ ಬಗೆಹರಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡುತ್ತದೆ ಎಂದು ಭಾರತ ಹೇಳಿದೆ.












Click it and Unblock the Notifications