ಪ್ರಧಾನಿ ಮೋದಿಗೆ ಉಗ್ರ ಹಫೀಜ್ ನೀಡಿದ ಮುಕ್ತ ಆಹ್ವಾನ
ಲಾಹೋರ್, ಜು 17: ಮುಂಬೈ ಸ್ಫೋಟದ ರೂವಾರಿ ಮತ್ತು ಜಮಾತ್-ಉದ್-ದವಾ ಸಂಘಟನೆಯ ಮುಖ್ಯಸ್ಥ ಹಫೀಜ್ ಮೊಹಮ್ಮದ್ ಸಯೀದ್ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ಮುಕ್ತ ಆಹ್ವಾನ ನೀಡಿದ್ದಾನೆ.
ಮೋದಿ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದೇ ಆದಲ್ಲಿ ನಾವು ಆ ವಿಚಾರದಲ್ಲಿ ಯಾವುದೇ ರಾಜಕೀಯ ಮಾಡುವುದಿಲ್ಲ ಮತ್ತು ನಮ್ಮ ಸಂಘಟನೆ ಯಾವುದೇ ಪ್ರತಿಭಟನೆಯನ್ನೂ ನಡೆಸುವುದಿಲ್ಲ ಎಂದು ಹಫೀಜ್ ಹೇಳಿದ್ದಾನೆ.
ರಾಷ್ಟ್ರ, ನಂಬಿಕೆ ಮತ್ತು ಧರ್ಮದ ವಿಚಾರದಲ್ಲಿ ಮುಕ್ತವಾಗಿ ಮಾತುಕತೆ ನಡೆಸಲು ನಾನು ಸಿದ್ದನಾಗಿದ್ದೇನೆ. ಪ್ರತಿಯೊಬ್ಬರನ್ನೂ ಸ್ವಚ್ಚ ಮನಸ್ಸಿನಿಂದ ಭೇಟಿ ಮಾಡಲು ಬಯಸುವವರು ನಾವು ಎಂದು ಹಫೀಜ್ ಟ್ವಿಟರ್ ನಲ್ಲಿ ಸಂದೇಶ ರವಾನಿಸಿದ್ದಾನೆ.
ಯೋಗಗುರು ಬಾಬಾ ರಾಂದೇವ್ ಆಪ್ತ ಮತ್ತು ಹವ್ಯಾಸಿ ಪತ್ರಕರ್ತ ಡಾ. ವೇದ್ ಪ್ರಕಾಶ್ ವೈದಿಕ್ ಇತ್ತೀಚೆಗೆ ಹಫೀಜ್ ಭೇಟಿ ಮಾಡಿದ ನಂತರ, ಹಫೀಜ್ ನೀಡಿದ ಈ ಹೇಳಿಕೆ ಭಾರೀ ಚರ್ಚೆಗೆ ಗ್ರಾಸವಾಗಿದೆ. (ವಿವಾದ ಸೃಷ್ಟಿಸಿರುವ ಪ್ರತಾಪ್, ಉಗ್ರ ಹಫೀಜ್ ಭೇಟಿ)
ಪ್ರಕಾಶ್ ವೈದಿಕ್ ಮುಕ್ತವಾಗಿ ನನ್ನ ಬಳಿ ಸಮಾಲೋಚನೆ ನಡೆಸಲು ಆಗಮಿಸಿದ್ದರು. ಇವರ ಭೇಟಿ ಹಿಂದೂಸ್ಥಾನದಲ್ಲಿ ಈ ಮಟ್ಟಿನ ಬಿರುಗಾಳಿ ಎಬ್ಬಿಸಿರುವುದು ಭಾರತೀಯರು ಸಂಕುಚಿತ ಮನೋಭಾವದವರೆಂದು ತೋರಿಸುತ್ತದೆ ಎಂದು ಹಫೀಜ್ ಟೀಕಿಸಿದ್ದಾನೆ.
|
ಇದರಲ್ಲಿ ತಪ್ಪೇನು ಎಂದ ಹಫೀಜ್
ಪತ್ರಕರ್ತರು ಜವಾಬ್ದಾರಿ ಸ್ಥಾನದಲ್ಲಿ ಇರುವವರು. ಪ್ರಕಾಶ್ ವೈದಿಕ್ ನನ್ನನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದಲ್ಲಿ ತಪ್ಪೇನು ಇಲ್ಲ. ಇದನ್ನೇ ದೊಡ್ಡ ಸುದ್ದಿ ಮಾಡುವ ಭಾರತದ ರಾಜಕಾರಣಿಗಳಿಗೆ ನಾಚಿಕೆಯಾಗಬೇಕು ಎಂದು ಹಫೀಜ್ ಜರಿದಿದ್ದಾನೆ.

ಟ್ವಿಟರ್ ನಲ್ಲಿ ತನ್ನ ಅಭಿಪ್ರಾಯ ತಿಳಿಸಿದ ಹಫೀಜ್
ಟ್ವಿಟರ್ ನಲ್ಲಿ ತನ್ನ ಅಭಿಪ್ರಾಯ ಪ್ರಕಟಿಸುತ್ತಾ ಹಫೀಜ್, 26/11 ದಾಳಿಯ ವಿಚಾರದಲ್ಲಿ ನಾವು ನೀಡಿದ ಯಾವುದೇ ಸಾಕ್ಷಿಗಳಿಗೆ ಭಾರತ ಬೆಲೆ ನೀಡಲಿಲ್ಲ. ಭಾರತಕ್ಕೆ ಪಾಕಿಸ್ತಾನದ ನ್ಯಾಯಾಲಯದ ಮೇಲೆ ಯಾಕೆ ನಂಬಿಕೆಯಿಲ್ಲ ಎಂದು ಪ್ರಶ್ನಿಸಿದ್ದಾನೆ.
|
ಮೋದಿ ಪಾಕಿಸ್ತಾನಕ್ಕೆ ಬರುವುದಕ್ಕೆ ನಮ್ಮ ಅಭ್ಯಂತರವಿಲ್ಲ
ಮುಕ್ತ ಮನಸ್ಸಿನಿಂದ ಭಾರತದ ಪ್ರಧಾನಿ ಮೋದಿ ಪಾಕಿಸ್ತಾನಕ್ಕೆ ಬಂದು ಮಾತುಕತೆ ನಡೆಸಿದರೆ ಅದಕ್ಕೆ ನಮ್ಮ ಸಂಘಟನೆಯ ವಿರೋಧವಿರುವುದಿಲ್ಲ ಎಂದು ವೈದಿಕ್ ನನ್ನನ್ನು ಭೇಟಿ ಯಾದ ಸಂದರ್ಭದಲ್ಲಿ ಕೇಳಿದ ಪ್ರಶ್ನೆಗೆ ನಾನು ಉತ್ತರಿಸಿದ್ದೇನೆಂದು ಹಫೀಜ್ ಹೇಳಿದ್ದಾನೆ.

ಹಫೀಜ್ ಭೇಟಿ ಸಮರ್ಥಿಸಿಕೊಂಡ ವೈದಿಕ್
ಹಫೀಜ್ ಸಯೀದ್ ಭೇಟಿಯನ್ನು ಸಮರ್ಥಿಸಿಕೊಂಡಿರುವ ಡಾ. ವೈದಿಕ್, ನಾನೊಬ್ಬ ಪತ್ರಕರ್ತನಾಗಿ ಅವರನ್ನು ಭೇಟಿಯಾಗಿದ್ದೆ. ಮುಂದಿನ ದಿನದಲ್ಲಿ ಪಾಕಿಸ್ತಾನದ ಮತ್ತಷ್ಟು ಉಗ್ರ ಸಂಘಟನೆಯ ಮುಖ್ಯಸ್ಥರನ್ನು ಭೇಟಿಯಾಗಲಿದ್ದೇನೆಂದು ವೈದಿಕ್ ಹೇಳಿದ್ದಾರೆ.

ನನ್ನ ದೇಶವನ್ನು ವಿರೋಧಿಸುವವರನ್ನು ಭೇಟಿಯಾಗುತ್ತೇನೆ
ನನ್ನ ದೇಶವನ್ನು ವಿರೋಧಿಸುವ ಎಲ್ಲಾ ಸಂಘಟನೆಗಳನ್ನು ನಾನು ಭೇಟಿಯಾಗುತ್ತೇನೆ. ಅದು ತಾಲಿಬಾನ್ ಆಗಿರಲಿ, ಲಷ್ಕರ್ ತೊಯ್ಬಾ ಆಗಿರಲಿ ಎಂದು ವೈದಿಕ್ ತನ್ನ ಮುಂದಿನ ನಡೆಯ ಸುಳಿವನ್ನು ನೀಡಿದ್ದಾರೆ.












Click it and Unblock the Notifications