ಪೈಲಟ್ ಅಭಿನಂದನ್ ಬಿಡುಗಡೆಗೆ ಪಾಕ್ ರೆಡಿ, ಆದರೆ....
ಇಸ್ಲಾಮಾಬಾದ್, ಫೆಬ್ರವರಿ 28: ಪಾಕಿಸ್ತಾನ ಸೇನೆಗೆ ಸೆರೆ ಸಿಕ್ಕ ಭಾರತೀಯ ಪೈಲಟ್ ಅಭಿನಂದನ್ ವರ್ಧಮಾನ್ ಅವರ ಬಿಡುಗಡೆಗೆ ನಾವು ಸಿದ್ಧ ಎಂದು ಪಾಕಿಸ್ತಾನ ಶರತ್ತುಬದ್ಧ ಒಪ್ಪಿಗೆ ನೀಡಿದೆ.
ಭಾರತವು ಗಡಿಯಿಂದ ಸೇನೆಯನ್ನು ವಾಪಸ್ ಕರೆಸಿಕೊಂಡರೆ ನಾವು ಅಭಿನಂದನ್ ಅವ್ರನ್ನು ಬಿಡುಗಡೆ ಮಾಡುತ್ತೇವೆ ಎಂದು ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೆಹ್ಮೂದ್ ಖುರೇಷಿ ಹೇಳಿದ್ದಾರೆ.
ಪಾಕಿಸ್ತಾನದ ಈ ವರಸೆಗೆ ಪ್ರತಿಕ್ರಿಯೆ ನೀಡಿದ ಭಾರತ, 'ನಾವು ಪಾಕಿಸ್ತಾನದ ಸೇನೆಯನ್ನಾಗಲೀ, ಜನರನ್ನಾಗಲೀ ಗುರಿಯಾಗಿಸಿ ದಾಳಿ ಮಾಡುತ್ತಿಲ್ಲ. ನಮ್ಮ ದಾಳಿ ಏನಿದ್ದರೂ ಉಗ್ರರ ಮೇಲೆ. ಈ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ' ಎಂದಿದೆ.
'ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಪಾಕಿಸ್ತಾನ ಮಾನವೀಯ ದೃಷ್ಟಿಯಿಂದ ಮತ್ತು ಘನತೆಯಿಂದ ನಡೆಸಿಕೊಳ್ಳಬೇಕು. ಅವರನ್ನು ಯಾವುದೇ ಶರತ್ತುಗಳಿಲ್ಲದೆ ಶೀಘ್ರವೇ ಬಿಡುಗಡೆ ಮಾಡಬೇಕು. ಇಲ್ಲವೆಂದರೆ ಸುಮ್ಮನಿರುವುದಿಲ್ಲ' ಎಂದು ಭಾರತ ಎಚ್ಚರಿಕೆ ಸಹ ನೀಡಿದೆ.

ಪಾಕಿಸ್ತಾನದ ಶರತ್ತು ಏನು?
ನಾವು ಅಭಿನಂದನ್ ಅವರನ್ನು ಬಿಡುಗಡೆ ಮಾಡುತ್ತೇವೆ. ಆದರೆ ಭಾರತ ಗಡಿಯಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳಬೇಕು. ಮತ್ತು ಭಾರತ-ಪಾಕಿಸ್ತಾನದ ನಡುವೆ ಈಗ ಎದ್ದಿರುವ ಪ್ರಕ್ಷುಬ್ಧ ವಾತಾವರಣ ತಿಳಿಯಾಗುವಂತೆ ಮಾಡಬೇಕು. ಯುದ್ಧ ಬೇಡ, ಶಾಂತಿಯಿಂದ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ಪಾಕಿಸ್ತಾನ ಹೇಳಿದೆ.

ಭಾರತಕ್ಕೂ ಯುದ್ಧ ಬೇಕಿರಲಿಲ್ಲ!
ಭಾರತಕ್ಕೂ ಯುದ್ಧ ಬೇಕಿಲ್ಲ, ನಾವೂ ಸೇನೆಯ ಮೂಲಕ ಉತ್ತರ ನೀಡುವ ಯೋಚನೆಯನ್ನು ಮಾಡಿರಲಿಲ್ಲ. ಆದರೆ ಪುಲ್ವಾಮಾ ದಾಳಿಯಾಗಿ 13 ದಿನವಾದರೂ ಆ ದಾಳಿಯಲ್ಲಿ ಜೈಷ್ ಇ ಮೊಹಮ್ಮದ್ ಉಗ್ರ ಸಂಘಟನೆಯ ಕೈವಾಡವಿದೆ ಎಂದು ಒಪ್ಪಿಕೊಳ್ಳಲು ಪಾಕಿಸ್ತಾನ ಸಿದ್ಧವಿಲ್ಲ. ಇಷ್ಟಾದರೂ ಉಗ್ರರ ಮೇಲೆ ಕ್ರಮ ಕೈಗೊಳ್ಳದ ಪಾಕಿಸ್ತಾನದ ನಡೆಯನ್ನು ನಾವು ಖಂಡಿಸುತ್ತೇವೆ ಎಂದು ಭಾರತ ಹೇಳಿದೆ.

ರಾಜಿಗೆ ನಾವು ಸಿದ್ಧರಿಲ್ಲ
ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಭಾರತಕ್ಕೆ ತಕ್ಷಣವೇ ವಾಪಸ್ ಕಳಿಸಬೇಕು. ಯಾವುದೇ ರಾಜಿಗೆ ನಾವು ಸಿದ್ಧವಿಲ್ಲ. ಈ ನೆಪವನ್ನಿಟ್ಟುಕೊಂಡು ಪಾಕಿಸ್ತಾನ ತಾನು ಮಾಡಿದ ತಪ್ಪನ್ನು ಮುಚ್ಚಿಹಾಕಬಹುದು ಎಂದುಕೊಂಡಿದ್ದರೆ ಅದಕ್ಕೆ ನಾವು ಅವಕಾಶ ನೀಡುವುದಿಲ್ಲ. ಯಾವ ಶರತ್ತೂ ಇಲ್ಲದೆ ಅಭಿನಂದನ್ ಅವರನ್ನು ವಾಪಸ್ ಕಳಿಸಿ ಎಂದು ಭಾರತ ಹೇಳಿದೆ.

ಕಂದಹಾರ್ ಸ್ಥಿತಿ ನಿರ್ಮಿಸಲು ಪಾಕ್ ಯತ್ನ
ಪಾಕಿಸ್ತಾನ ಕಂದಹಾರ್ ವಿಮಾನ ಅಪಹರಣದ ರೀತಿಯ ಒತ್ತಡವನ್ನು ಭಾರತದ ಮೇಲೆ ಹೇರುತ್ತಿದೆ. ಆದರೆ ಭಾರತ ಅದಕ್ಕೆ ಬಗ್ಗುತ್ತಿಲ್ಲ ಎಂದು ಮೂಲಗಳು ತಿಳಿಸಿವೆ. ಬುಧವಾರ ಬೆಳಿಗ್ಗೆ ಪಾಕಿಸ್ತಾನದ ಯುದ್ಧ ವಿಮಾನಗಳನ್ನು ಹಿಮ್ಮೆಟ್ಟಿಸುವ ಸಮಯದಲ್ಲಿ ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಎಂಬುವವರು ಪಾಕ್ ಸೇನೆಗೆ ಸಿಕ್ಕಿಹಾಕಿಕೊಂಡಿದ್ದರು..












Click it and Unblock the Notifications