ಯುದ್ಧ ನಿಲ್ಲಿಸದ ಅರ್ಮೇನಿಯ-ಅಜೆರ್ಬೈಜಾನ್ಗೆ ಶಾಕ್..?
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಡುವೆ ನಡೆಯುತ್ತಿರುವ ಭೀಕರ ಕಾಳಗಕ್ಕೆ ಬ್ರೇಕ್ ಹಾಕಲು ವಿಶ್ವ ಸಮುದಾಯ ಒಗ್ಗಟ್ಟಾಗಿದೆ. ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಡುವೆ ಯುದ್ಧ ಆರಂಭವಾಗಿ ಸರಿಸುಮಾರು 2 ತಿಂಗಳು ಕಳೆಯುತ್ತಾ ಬಂದರೂ ಹಿಂಸೆಗೆ ಬ್ರೇಕ್ ಬಿದ್ದಿಲ್ಲ.
ಎರಡೂ ದೇಶಗಳ ಮಧ್ಯೆ ಹಲವು ಬಾರಿ ಕದನವಿರಾಮ ಒಪ್ಪಂದ ನಡೆದರೂ, ಪದೇಪದೆ ಕದನವಿರಾಮ ಉಲ್ಲಂಘನೆಯಾಗುತ್ತಿದೆ. ಈಗಾಗಲೇ ಎರಡೂ ದೇಶಗಳ ಸಾವಿರಾರು ಜನ ಯುದ್ಧಕ್ಕೆ ಬಲಿಯಾಗಿದ್ದು, ಪರಿಸ್ಥಿತಿ ಹೀಗೆ ಮುಂದುವರಿದರೆ ಸಾವಿನ ಸಂಖ್ಯೆಯಲ್ಲಿ ಮತ್ತಷ್ಟು ಏರಿಕೆಯಾಗುವ ಸಾಧ್ಯತೆಯಿದೆ. ಅರ್ಮೇನಿಯ ದಾಳಿಗೆ ಅಜೆರ್ಬೈಜಾನ್, ಹಾಗೇ ಅಜೆರ್ಬೈಜಾನ್ ಅಟ್ಯಾಕ್ಗೆ ಅರ್ಮೇನಿಯ ಕೌಂಟರ್ ಅಟ್ಯಾಕ್ ಕೊಡುತ್ತಲೇ ಇವೆ. ಹೀಗೆ ಒಬ್ಬರ ಮೇಲೆ ಮತ್ತೊಬ್ಬರ ಎರಗುತ್ತಾ, ಅಮಾಯಕರ ಜೀವಕ್ಕೆ ಎರವಾಗುತ್ತಿದ್ದಾರೆ. ಶೆಲ್ ದಾಳಿಯಲ್ಲಿ ಸಾವಿರಾರು ಮನೆಗಳು ಧ್ವಂಸವಾಗಿದ್ದು, ಲಕ್ಷಾಂತರ ಜನರು ಸೂರು ಕಳೆದುಕೊಂಡು ಬೀದಿಗೆ ಬಿದ್ದಿದ್ದಾರೆ. ತುತ್ತು ಅನ್ನಕ್ಕೂ ಹಾಹಾಕಾರ ಎದ್ದಿದ್ದು, ಎರಡೂ ದೇಶಗಳ ನಾಗರಿಕರು ತಮ್ಮ ನಾಯಕರಿಗೆ ಹಿಡಿಶಾಪ ಹಾಕುತ್ತಿದ್ದಾರೆ.
ಕಿರಾತಕರ ಕ್ಷಿಪಣಿ ದಾಳಿಗೆ ಕಂದಮ್ಮಗಳು ಸೇರಿ 12 ಮಂದಿ ಬಲಿ
ಅಮೆರಿಕ ಮಧ್ಯಪ್ರವೇಶ ಮಾಡುತ್ತಾ..?
ಈಗ ರಷ್ಯಾಗೆ ಕಾಡುತ್ತಿರುವ ಆತಂಕವೇ ಇದು. ಇಬ್ಬರ ಜಗಳದಲ್ಲಿ ಅಮೆರಿಕ ಮೂಗು ತೂರಿಸಿದರೆ ತಮಗೆ ನಷ್ಟ ಎಂದು. ಏಕೆಂದರೆ ಒಂದಾನೊಂದು ಕಾಲದಲ್ಲಿ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಸೋವಿಯತ್ ರಷ್ಯಾ ಭಾಗವಾಗಿದ್ದವು. ಆದರೆ ಸೋವಿಯತ್ ರಷ್ಯಾ ವಿಭಜನೆ ಬಳಿ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬೇರೆ ಬೇರೆ ದೇಶಗಳಾಗಿ ಹಂಚಿ ಹೋದವು. ಹೀಗೆ ಒಂದು ಕಾಲದಲ್ಲಿ ತಮ್ಮದೇ ದೇಶದ ಭಾಗವಾಗಿದ್ದ ಈ ಎರಡೂ ದೇಶಗಳು ಸಂಧಾನಕ್ಕಾಗಿ ದೂರದ ಅಮೆರಿಕ ಬಳಿ ಹೋಗುವುದು ಪುಟಿನ್ಗೆ ಬಿಲ್ಕುಲ್ ಇಷ್ಟವಿಲ್ಲ. ಹೀಗಾಗಿ ರಷ್ಯಾ ಎರಡೂ ದೇಶಗಳನ್ನ ಕೂರಿಸಿ ಹಲವು ಸುತ್ತಿನ ಮಾತುಕತೆ ನಡೆಸಿದ್ದರೂ ಉಪಯೋಗವಾಗಿಲ್ಲ.
ಡಿಸೆಂಬರ್ ವೇಳೆಗೆ ಅಸಹನೀಯ ಚಳಿ
ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಉತ್ತರ ಧ್ರುವ ಪ್ರದೇಶಕ್ಕೆ ಹತ್ತಿರದಲ್ಲೇ ಇರುವ ಕಾರಣ ಡಿಸೆಂಬರ್ ವೇಳೆಗೆಲ್ಲಾ ಅಲ್ಲಿ ಅಸಹನೀಯ ಚಳಿ ತಾಗಲಿದೆ. ಕೆಲವು ಸಂದರ್ಭದಲ್ಲಿ ಉಷ್ಣಾಂಶ ಮೈನಸ್ ಡಿಗ್ರಿ ಮುಟ್ಟಲಿದೆ. ಕೆಲವೆಡೆ -40 ಡಿಗ್ರಿಗೆ ಉಷ್ಣಾಂಶ ಕುಸಿದರೆ, ಮತ್ತೆ ಕೆಲವು ಕಡೆ ಉಷ್ಣಾಂಶ (+) ಚಿಹ್ನೆ ಮುಟ್ಟುವುದೇ ಇಲ್ಲ.
ಹೀಗೆ ಕೊರೆಯುವ ಚಳಿಯಲ್ಲಿ ಅಲ್ಲಿನ ಜನ ಬೆಚ್ಚನೆಯ ಮನೆಯಿದ್ದರೂ ನಡುಗುತ್ತಲೇ ಬದುಕುತ್ತಾರೆ. ಆದರೆ ಈಗ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಯುದ್ಧದ ಪರಿಣಾಮ ಸಾವಿರಾರು ಮನೆಗಳು ನಾಶವಾಗಿಬಿಟ್ಟಿವೆ. ಲಕ್ಷಾಂತರ ನಿರಾಶ್ರಿತರಿಗೆ ಚಳಿಯದ್ದೇ ಚಿಂತೆಯಾಗಿ ಹೋಗಿದೆ. ಮಕ್ಕಳು, ಸಂಸಾರ ಕರೆದುಕೊಂಡು ಎಲ್ಲಿಗೆ ಹೋಗೋದು ಅಂತಾ ಕಣ್ಣೀರು ಹಾಕುತ್ತಿದ್ದಾರೆ, ಜೊತೆಗೆ ಸಂತ್ರಸ್ತರ ಉಸಿರಲ್ಲಿ ಹಿಡಿ ಶಾಪವೂ ಇದೆ.
ಯುದ್ಧದಿಂದ ಬೀದಿಪಾಲಾದ ಸಾವಿರಾರು ಸಂತ್ರಸ್ತರಿಗೆ ಚಳಿಯ ಚಿಂತೆ
ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿವೆ.
ಆದರೆ ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. ಈಗ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿದೆ. ಎರಡೂ ದೇಶಗಳ ನಾಯಕರ ದುರಾಸೆಗೆ ನೂರಾರು ಅಮಾಯಕ ಜೀವಗಳು ಬಲಿಯಾಗುತ್ತಿವೆ. ಸದ್ಯದ ವರದಿಗಳ ಪ್ರಕಾರ ಈಗಾಗಲೇ 100ಕ್ಕೂ ಹೆಚ್ಚು ನಾಗರಿಕರು ಯುದ್ಧದ ಕೆನ್ನಾಲಿಗೆಗೆ ಬಲಿಯಾಗಿ ಹೋಗಿದ್ದಾರೆ.
ಜಾಗತಿಕ ತೈಲ ಮಾರುಕಟ್ಟೆಗೂ ಕಂಟಕ
ಈಗಾಗಲೇ ಕೊರೊನಾ ಕಾಟಕ್ಕೆ ಬೇಸತ್ತಿರುವ ತೈಲ ಮಾರುಕಟ್ಟೆಗೆ ಮತ್ತೊಂದು ಸವಾಲು ಎದುರಾಗಿದೆ. ಈಗ ನಗೊರ್ನೊ ಹಾಗೂ ಕರಬಾಖ್ ವಿಚಾರವಾಗಿ ಭುಗಿಲೆದ್ದಿರುವ ಯುದ್ಧ ದಕ್ಷಿಣ ಕಾಕಸಸ್ ಪ್ರದೇಶದಲ್ಲಿ ಅಸ್ಥಿರತೆ ಮೂಡುವಂತೆ ಮಾಡಿದೆ. ದಕ್ಷಿಣ ಕಾಕಸಸ್ ಜಾಗತಿಕ ತೈಲ ಮಾರುಕಟ್ಟೆಗೆ ತೈಲ ಮತ್ತು ಅನಿಲ ಸಾಗಿಸೋದಕ್ಕೆ ಕಾರಿಡಾರ್ ಆಗಿದೆ. ದಕ್ಷಿಣ ಕಾಕಸಸ್ ಸುತ್ತಮುತ್ತಲ ಪ್ರದೇಶದಲ್ಲಿ ಯುದ್ಧ ನಡೆಯುತ್ತಿರುವಾಗ ಇಲ್ಲಿ ಸ್ಥಿರತೆ ನೆಲೆಸುವುದು, ಶಾಂತಿಯುತ ವ್ಯಾಪಾರ ನಡೆಯುವುದು ಕಷ್ಟಕರ. ಇದು ಜಾಗತಿಕ ತೈಲ ಮಾರುಕಟ್ಟೆಗೆ ಮತ್ತೆ ಕಂಟಕ ಎದುರಾಗುವ ಮುನ್ಸೂಚನೆ ನೀಡಿದೆ.
Recommended Video
ಮುನ್ನುಗ್ಗಿ ಬರಲಿದೆಯಾ ರಷ್ಯಾ ಮಿಲಿಟರಿ..?
ರಷ್ಯಾ ನಡೆಸಿರುವ ಸಂಧಾನಕ್ಕೆ ಎರಡೂ ದೇಶಗಳು ಬೆಲೆ ನೀಡಿಲ್ಲ. ಹೀಗಾಗಿ ರಷ್ಯಾ ಅಧ್ಯಕ್ಷ ಪುಟಿನ್ ಮಿಲಿಟರಿ ಕಾರ್ಯಾಚರಣೆ ನಡೆಸಲಿದ್ದಾರಾ ಎಂಬ ಕುತೂಹಲ ಇಡೀ ಜಗತ್ತನ್ನು ಕಾಡುತ್ತಿದೆ. ದಂಡಂ ದಶಗುಣಂ ಎನ್ನುವ ಹಾಗೆ, ಮಾತಿಗೆ ಬಗ್ಗದ ಅರ್ಮೇನಿಯ ಹಾಗೂ ಅಜೆರ್ಬೈಜಾನ್ಗೆ ಬಂದೂಕಿನ ಮೂಲಕ ಉತ್ತರ ನೀಡುತ್ತಾರಾ ಎಂಬುದು ತೀವ್ರ ಕುತೂಹಲ ಕೆರಳಿಸಿದೆ.
ಪುಟಿನ್ ಸೇನೆ ಅಖಾಡ ಪ್ರವೇಶಕ್ಕೆ ಇದೀಗ ಸನ್ನಿವೇಶ ಸಿದ್ಧವಾಗಿದ್ದು, ರಷ್ಯಾ ಅಧ್ಯಕ್ಷ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಆದರೆ ಒಂದಂತೂ ಸತ್ಯ, ಅಕಸ್ಮಾತ್ ರಷ್ಯಾ ಸೇನೆ ಅಖಾಡಕ್ಕೆ ಇಳಿದರೆ ಅರ್ಮೇನಿಯ ಮತ್ತು ಅಜೆರ್ಬೈಜಾನ್ ನಕ್ಷೆಯಿಂದಲೇ ಅಳಿಸಿ ಹೋಗುವುದು ಪಕ್ಕಾ.