ವಿಶ್ವಸಂಸ್ಥೆಯಲ್ಲಿ ತಾಲಿಬಾನ್ ಮಾನ್ಯತೆ ನಿರ್ಣಯದಿಂದ ರಷ್ಯಾ, ಚೀನಾ ಅಂತರ
ಕಾಬೂಲ್, ಸಪ್ಟೆಂಬರ್ 1: ಅಫ್ಘಾನಿಸ್ತಾನದಿಂದ ಯುನೈಟೆಡ್ ಸ್ಟೇಟ್ಸ್ ತನ್ನ ಸೇನೆಯನ್ನು ವಾಪಸ್ ಕರೆಸಿಕೊಂಡ ಬೆನ್ನಲ್ಲೇ ತಾಲಿಬಾನ್ ಸಂಘಟನೆಗೆ ವಾಸ್ತವಿಕ ಮಾನ್ಯತೆ ಸಿಕ್ಕಿದೆ. ಭಾರತದ ಅಧ್ಯಕ್ಷತೆಯಲ್ಲಿ ನಡೆದ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಸಭೆಯಲ್ಲಿ ತಾಲಿಬಾನ್ ಸಂಘಟನೆಗೆ ಮಾನ್ಯತೆ ನೀಡುವ ನಿರ್ಣಯವನ್ನು ಅಂಗೀಕರಿಸಲಾಯಿತು.
ತಾಲಿಬಾನ್ ಸಂಘಟನೆಗೆ ಮಾನ್ಯತೆ ನೀಡುವ ನಿರ್ಣಯಕ್ಕೆ ಫ್ರಾನ್ಸ್, ಯುನೈಟೆಡ್ ಕಿಂಗ್ ಡಮ್, ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತ ಸೇರಿದಂತೆ 13 ರಾಷ್ಟ್ರಗಳು ಪರವಾಗಿ ಮತ ಚಲಾಯಿಸಿದವು. ಆದರೆ ಶಾಶ್ವತ ವೀಟಾ ಅಧಿಕಾರವನ್ನು ಹೊಂದಿರುವ ರಷ್ಯಾ ಮತ್ತು ಚೀನಾ ರಾಷ್ಟ್ರಗಳು ಸಭೆಗೆ ಗೈರು ಹಾಜರಾಗಿದ್ದವು.
ತಾಲಿಬಾನ್ ನಾಯಕರ ಜತೆ ಭಾರತ ರಾಯಭಾರಿ ಮಾತುಕತೆ
ಕಳೆದ ಆಗಸ್ಟ್ 15ರಂದು ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನೆಲವನ್ನು ವಶಕ್ಕೆ ಪಡೆದುಕೊಂಡ ತಾಲಿಬಾನ್ ಸಂಘಟನೆಯು ತನ್ನ ಮಾತಿಗೆ ಬದ್ಧವಾಗಿ ನಡೆದುಕೊಳ್ಳಬೇಕು. ಅಫ್ಘಾನ್ ನೆಲದಲ್ಲಿ ನಿಂತುಕೊಂಡು ಬೇರೆ ಯಾವುದೇ ರಾಷ್ಟ್ರಕ್ಕೆ ಬೆದರಿಕೆಯೊಡ್ಡುವಂತಿಲ್ಲ ಅಥವಾ ಭಯೋತ್ಪಾದನಾ ಚಟುವಟಿಕೆ ನಡೆಸುವಂತಿಲ್ಲ, ಉಗ್ರವಾದಕ್ಕೆ ಕುಮ್ಮಕ್ಕು ನೀಡುವಂತಿಲ್ಲ. ಜಾಗತಿಕ ಸಮುದಾಯವು ತಾಲಿಬಾನ್ ತಾನು ಮೊದಲು ಆಡಿರುವ ಮಾತುಗಳಿಗೆ ಬದ್ಧವಾಗಿ ನಡೆದುಕೊಳ್ಳಬೇಕು ಎಂಬುದನ್ನು ನಿರೀಕ್ಷಿಸುತ್ತದೆ. ಅಫ್ಘಾನಿಸ್ತಾನದಲ್ಲಿ ಇರುವ ವಿದೇಶಿಯರ ಸ್ಥಳಾಂತರ ಮತ್ತು ದೇಶ ತೊರೆಯಲು ಇಚ್ಛಿಸುವವರ ಸುರಕ್ಷಿತ ಸ್ಥಳಾಂತರಕ್ಕೆ ಅವಕಾಶ ನೀಡಬೇಕು ಎಂಬ ಷರತ್ತು ವಿಧಿಸಲಾಗಿದೆ.
ಉಗ್ರವಾದ ಬೆಂಬಲಿಸದಂತೆ ಕಠಿಣ ಸಂದೇಶ
ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶಿಂಗ್ಲಾ ನೇತೃತ್ವದಲ್ಲಿ ನಿರ್ಣಯ ಅಂಗೀಕರಿಸಲಾಗಿದ್ದು, ತಾಲಿಬಾನ್ ಸಂಘಟನೆಗೆ ಕಠಿಣ ಸಂದೇಶಗಳನ್ನು ರವಾನಿಸಲಾಗಿದೆ. ಮಾನ್ಯತೆ ನೀಡುವ ನಿರ್ಣಯದ ಬಗ್ಗೆ ಎಲ್ಲವೂ ಸ್ಪಷ್ಟವಾಗಿದೆ. ಅಫ್ಘಾನಿಸ್ತಾನದಲ್ಲಿ ನಿಂತುಕೊಂಡು ಯಾವುದೇ ದೇಶಕ್ಕೆ ಬೆದರಿಕೆಯೊಡ್ಡುವಂತಿಲ್ಲ ಅಥವಾ ದಾಳಿ ನಡೆಸುವಂತಿಲ್ಲ. ಉಗ್ರರಿಗೆ ನೆಲೆ ಅಥವಾ ಆಶ್ರಯ ನೀಡುವಂತಿಲ್ಲ ಹಾಗೂ ಭಾರತ ವಿರೋಧಿ ಚಟುವಟಿಕೆಗಳಿಗೆ ಅವಕಾಶ ನೀಡುವಂತಿಲ್ಲ ಎಂದು ತಾಲಿಬಾನ್ ಸಂಘಟನೆಗೆ ಕಠಿಣ ಸಂದೇಶವನ್ನು ನೀಡಲಾಗಿದೆ.
ಕೊಟ್ಟ ಮಾತಿಗೆ ಬದ್ಧವಾಗಿರಲು ಸೂಚನೆ
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿರ್ಣಯವು ತಾಲಿಬಾನ್ ಸಂಘಟನೆ ಬಗ್ಗೆ ಯಾವುದೇ ರೀತಿ ಖಂಡಿಸಲಿಲ್ಲ. ಅದರ ಬದಲಿಗೆ ಅಫ್ಘಾನಿಸ್ತಾನದಲ್ಲಿರುವ ವಿದೇಶಿಗರು ಮತ್ತು ವಿದೇಶಕ್ಕೆ ಪ್ರಯಾಣಿಸಲು ಬಯಸುವ ಅಫ್ಘನ್ನರಿಗೆ ಅನುಮತಿ ನೀಡುವುದು. ಇದರ ಜೊತೆಗೆ ಅಫ್ಘನ್ನರ ರಕ್ಷಣೆ, ಸುರಕ್ಷತೆಯ ಮಾತಿನ ಬಗ್ಗೆ ಬದ್ಧವಾಗಿರುವಂತೆ ಸೂಚಿಸಿತು. ಮಾನವೀಯ ಪ್ರವೇಶ ಕಾಪಾಡಿಕೊಳ್ಳುವುದು, ಮಾನವ ಹಕ್ಕುಗಳನ್ನು ಎತ್ತಿಹಿಡಿಯುವುದು, ಅಂತರ್ಗತ ರಾಜಕೀಯ ಇತ್ಯರ್ಥವನ್ನು ತಲುಪುವುದು ಮತ್ತು ಭಯೋತ್ಪಾದನೆಯನ್ನು ಎದುರಿಸುವ ಮಹತ್ವವನ್ನು ನಿರ್ಣಯವು ಒತ್ತಿಹೇಳಿತು. ಆದರೆ ಅಂತಹ ನಿರ್ಗಮನಗಳನ್ನು ಅನುಮತಿಸಲು ಅಥವಾ ಬದ್ಧತೆಗಳನ್ನು ಅನುಸರಿಸದಿದ್ದರೆ ತಾಲಿಬಾನ್ಗಳನ್ನು ಶಿಕ್ಷಿಸುವ ಬಗ್ಗೆ ಯಾವುದೇ ರೀತಿ ಉಲ್ಲೇಖಿಸಿಲ್ಲ.
ರಷ್ಯಾ ಅಂತರ ಕಾಯ್ದುಕೊಳ್ಳುವುದಕ್ಕೆ ಕಾರಣವೇನು?
ತಾಲಿಬಾನ್ ಸಂಘಟನೆಗೆ ಮಾನ್ಯತೆ ನೀಡುವ ನಿರ್ಣಯವು ಭಯೋತ್ಪಾದನಾ ಬೆದರಿಕೆಗಳ ಬಗ್ಗೆ ಸ್ಪಷ್ಟವಾಗಿಲ್ಲ ಎಂದು ವಿಶ್ವಸಂಸ್ಥೆಯ ರಷ್ಯಾದ ರಾಯಭಾರಿ ವಾಸಿಲಿ ನೆಬೆಂಜಿಯಾ ಹೇಳಿದ್ದಾರೆ. ಅಫ್ಘಾನಿಸ್ತಾನ ಸ್ಥಳಾಂತರಿಸುವ "ಬ್ರೈನ್ ಡ್ರೈನ್" ಪರಿಣಾಮದ ಬಗ್ಗೆ ಮಾತನಾಡಲಿಲ್ಲ. ತಾಲಿಬಾನ್ ಅಧಿಕಾರ ತೆಗೆದುಕೊಂಡ ನಂತರದಲ್ಲಿ ಸ್ಥಗಿತಗೊಂಡ ಆರ್ಥಿಕ ಮತ್ತು ಮಾನವೀಯ ಪರಿಣಾಮಗಳನ್ನು ಬಗೆಹರಿಸುವ ಬಗ್ಗೆ ಯಾವುದೇ ಉಲ್ಲೇಖವಿಲ್ಲ ಎಂದಿದ್ದಾರೆ. ಈ ನಿರ್ಣಯದ ಕರಡು ಲೇಖಕರು ನಮ್ಮ ತತ್ವ ಚಿಂತನೆಗಳನ್ನು ನಿರ್ಲಕ್ಷಿಸಿದ್ದಾರೆ. ಆದ್ದರಿಂದಲೇ ಅಫ್ಘಾನಿಸ್ತಾನದ ಮೇಲಿನ ನಿರ್ಣಯದ ಮೇಲೆ ಮತದಾನದ ಸಮಯದಲ್ಲಿ ಮಾಸ್ಕೋ ಉದ್ದೇಶಪೂರ್ವಕವಾಗಿ ಅಂತರ ಕಾಯ್ದುಕೊಂಡಿತು ಎಂದರು.
ಚೀನಾದಿಂದಲೂ ರಷ್ಯಾ ರೀತಿ ವಾದ ಮಂಡನೆ
ಚೀನಾವು ರಷ್ಯಾದ ವಾದವನ್ನು ಚೀನಾ ಸಹ ಒಪ್ಪಿಕೊಂಡಿದ್ದು ಅಮೆರಿಕಾ ವಿರುದ್ಧ ಟೀಕಿಸಿದೆ. ಇಸ್ಲಾಮಿಕ್ ಸ್ಟೇಟ್ಸ್ ಸಂಘಟನೆಯ ಆತ್ಮಾಹುತಿ ಬಾಂಬರ್ಗಳನ್ನು ಹೊತ್ತ ವಾಹನಗಳ ಮೇಲೆ ಯುಎಸ್ ದಾಳಿ ನಡೆಸಿತು. ಈ ಡ್ರೋನ್ ದಾಳಿಯಲ್ಲಿ ನಾಗರಿಕರ ಸಾವು-ನೋವಿನ ಬಗ್ಗೆ ಚೀನಾ ಟೀಕಿಸಿದೆ. ಯಾವುದೇ ಶಿಸ್ತಿಲ್ಲದೇ ತೆಗೆದುಕೊಂಡ ವಾಪಸ್ಸಾತಿಯಿಂದ ಸೃಷ್ಟಿಯಾಗಿರುವ ಅಸ್ತವ್ಯಸ್ತತೆಯು ಪಾಶ್ಚಿಮಾತ್ಯ ರಾಷ್ಟ್ರಗಳ ನೇರ ಪರಿಣಾಮವಾಗಿದೆ ಎಂದು ಬೀಜಿಂಗ್ ಹೇಳಿದೆ.
ಕಳೆದ ಶುಕ್ರವಾರ ಚೀನಾದ ರಾಯಭಾರಿ ಗೆಂಗ್ ಶುವಾಂಗ್ ಕರಡು ನಿರ್ಣಯವನ್ನು ಪ್ರಸಾರ ಮಾಡಿದ್ದು, ಸಂಬಂಧಿತ ರಾಷ್ಟ್ರಗಳು "ಕ್ರಮ ಕೈಗೊಳ್ಳುವಂತೆ" ಒತ್ತಾಯಿಸಿದರು. "ಅಫ್ಘಾನಿಸ್ತಾನದಲ್ಲಿನ ದೇಶೀಯ ಪರಿಸ್ಥಿತಿಯಲ್ಲಿನ ಮೂಲಭೂತ ಬದಲಾವಣೆಗಳ ಹಿನ್ನೆಲೆ ಅಂತಾರಾಷ್ಟ್ರೀಯ ಸಮುದಾಯವು ತಾಲಿಬಾನ್ನೊಂದಿಗೆ ತೊಡಗಿಸಿಕೊಳ್ಳುವುದು ಅಗತ್ಯವಾಗಿದೆ. ಅವರಿಗೆ ಸಕ್ರಿಯವಾಗಿ ಮಾರ್ಗದರ್ಶನ ನೀಡಬೇಕಿದೆ", ಎಂದರು.