Turkey earthquake: ಕೆಲಸದ ನಿಮಿತ್ತ ಪ್ರವಾಸ ತೆರಳಿದ್ದ ಬೆಂಗಳೂರಿನ ವ್ಯಕ್ತಿ ಎರಡು ದಿನದಿಂದ ನಾಪತ್ತೆ
ಟರ್ಕಿಗೆ ವ್ಯಾಪಾರ ಪ್ರವಾಸದಲ್ಲಿದ್ದ ಬೆಂಗಳೂರಿನ ವ್ಯಕ್ತಿ ಕಳೆದೆರಡು ದಿನಗಳಿಂದ ಕಾಣೆಯಾಗಿದ್ದಾರೆ.
ಬೆಂಗಳೂರು, ಫೆಬ್ರವರಿ. 09: ಪ್ರಬಲ ಭೂಕಂಪಕ್ಕೆ ತುತ್ತಾಗಿರುವ ಟರ್ಕಿಯಲ್ಲಿ ಬೆಂಗಳೂರಿನ ಕಂಪನಿಯಿಂದ ಪ್ರವಾಸ ತೆರಳಿದ್ದ ವ್ಯಕ್ತಿ ಕಾಣೆಯಾಗಿದ್ದಾರೆ ಎಂದು ವರದಿಯಾಗಿದೆ.
ಟರ್ಕಿಗೆ ವ್ಯಾಪಾರ ಪ್ರವಾಸದಲ್ಲಿದ್ದ ಬೆಂಗಳೂರಿನ ವ್ಯಕ್ತಿ ಕಾಣೆಯಾಗಿದ್ದಾರೆ. ಇತರ 10 ಭಾರತೀಯರು ಭೂಕಂಪ ಪೀಡಿತ ಪ್ರದೇಶದ ದೂರದ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ ಸುರಕ್ಷಿತವಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Turkey earthquake: ಭೂಕಂಪ ಪೀಡಿತ ಟರ್ಕಿಯಲ್ಲಿ ಸಿಲುಕಿರುವ ಕನ್ನಡಿಗರಿಗಾಗಿ ಸಹಾಯವಾಣಿ ಆರಂಭ
ಟರ್ಕಿಯಲ್ಲಿ 7.8 ತೀವ್ರತೆಯ ಭೂಕಂಪ ಸಂಭವಿಸಿದಾಗಿನಿಂದ ದೇಶದ ಕೆಲವು ಭಾಗಗಳಲ್ಲಿ ಮೂಲಸೌಕರ್ಯ ಹಾಳಾಗಿದ್ದು, ಕಳೆದ ಎರಡು ದಿನಗಳಿಂದ ವ್ಯಕ್ತಿ ಪತ್ತೆಯಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ (ಪಶ್ಚಿಮ) ಸಂಜಯ್ ವರ್ಮಾ ಹೇಳಿದ್ದಾರೆ.
ಆಪರೇಷನ್ ದೋಸ್ತ್ ಅಡಿಯಲ್ಲಿ, ಭೂಕಂಪ ಪೀಡಿತ ಪ್ರದೇಶಗಳಿಗೆ ಹೆಚ್ಚಿನ ರಕ್ಷಣಾ ತಂಡಗಳು ಮತ್ತು ಪರಿಹಾರ ಸಾಮಗ್ರಿಗಳನ್ನು ಕಳುಹಿಸಲು ಭಾರತ ಸಿದ್ಧವಾಗಿದೆ. ಇಲ್ಲಿಯವರೆಗೆ, ಭಾರತವು 101 ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿ, 99 ವ್ಯಕ್ತಿಗಳ ವೈದ್ಯಕೀಯ ತಂಡ ಮತ್ತು 130 ಟನ್ ಉಪಕರಣಗಳು ಮತ್ತು ನಾಲ್ಕು ಸಿ-17 ಹೆವಿ-ಲಿಫ್ಟ್ ವಿಮಾನಗಳ ಮೂಲಕ ಟರ್ಕಿಗೆ ಸಹಾಯ ಹಸ್ತ ಚಾಚಿದೆ. .
ಇನ್ನೂ ಅವಶೇಷಗಳಡಿ ಸಿಲುಕಿರುವವವರ ರಕ್ಷಣಾ ಕಾರ್ಯಾಚರಣೆಗಳ ಮೇಲೆ ತಂಡಗಳು ಹೆಚ್ಚಾಗಿ ಗಮನಹರಿಸುತ್ತಿದ್ದು, 51 ಎನ್ಡಿಆರ್ಎಫ್ ಸಿಬ್ಬಂದಿ, ವೈದ್ಯಕೀಯ ಸಾಮಗ್ರಿಗಳು ಮತ್ತು ಉಪಕರಣಗಳನ್ನು ಸಹ ಸಿರಿಯಾಕ್ಕೆ ಕಳುಹಿಸಲಾಗಿದೆ.
ನಾಪತ್ತೆಯಾಗಿರುವ ಭಾರತೀಯನ ಕುರಿತು ಮಾತನಾಡಿರುವ ಸಂಜಯ್ ವರ್ಮಾ, "ನಮ್ಮಲ್ಲಿ ಒಬ್ಬ ಭಾರತೀಯ ಪ್ರಜೆ ನಾಪತ್ತೆಯಾಗಿದ್ದಾರೆ, ಅವರು ವ್ಯಾಪಾರ ನಿಮಿತ್ತ ಮಾಲತ್ಯ ಎಂಬ ಸ್ಥಳಕ್ಕೆ ಹೋಗಿದ್ದರು. ಕಳೆದ ಎರಡು ದಿನಗಳಿಂದ ಅವರು ಪತ್ತೆಯಾಗಿಲ್ಲ. ನಾವು ಅವರ ಕುಟುಂಬ ಮತ್ತು ಬೆಂಗಳೂರಿನಲ್ಲಿರುವ ಅವರ ಕಂಪನಿಯೊಂದಿಗೆ ಸಂಪರ್ಕದಲ್ಲಿದ್ದೇವೆ" ಎಂದಿದ್ದಾರೆ.
"10 ಭಾರತೀಯರು ಪೀಡಿತ ಪ್ರದೇಶಗಳ ಕೆಲವು ದೂರದ ಭಾಗಗಳಲ್ಲಿ ಸಿಲುಕಿಕೊಂಡಿದ್ದಾರೆ. ಆದರೆ, ಅವರೆಲ್ಲರೂ ಸುರಕ್ಷಿತವಾಗಿದ್ದಾರೆ. ಸಮಯದಲ್ಲಿ ನಾವು ಇದಕ್ಕಿಂತ ಹೆಚ್ಚಿನ ವರದಿಗಳನ್ನು ಹೊಂದಿಲ್ಲ" ಎಂದು ಹೇಳಿದ್ದಾರೆ.
ಇಲ್ಲಿಯವರೆಗೂ ಅಂಕಾರಾದಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ 75 ಭಾರತೀಯರಿಂದ ಕರೆಗಳು ಬಂದಿದ್ದು, ಮೂವರು ಭಾರತೀಯ ಪ್ರಜೆಗಳನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ.
ರಾಜ್ಯದಿಂದಲೂ ಭೂಕಂಪ ಪೀಎಇತ ಪ್ರದೇಶದಲ್ಲಿ ಇರುವ ಕರ್ನಾಟಕದ ಜನರಿಗಾಗಿ ಸಹಾಯವಾಣಿ ಆರಂಭಿಸಲಾಗಿದೆ. ರಾಜ್ಯ ತುರ್ತು ಕಾರ್ಯಾಚರಣೆಯ ಸಹಾಯವಾಣಿ ಸಂಖ್ಯೆಗಳು 080-1070, 080-22340676 ಆಗಿದ್ದು, ಕಂದಾಯ ಇಲಾಖೆ-ವಿಪತ್ತು ನಿರ್ವಹಣೆ ಇದನ್ನು ನಿರ್ವಹಿಸಲಿವೆ. ಟರ್ಕಿಯಲ್ಲಿ ಇರುವ ರಾಜ್ಯದ ಜನರಿಗೆ ಮಾಹಿತಿ ಮತ್ತು ಸಹಾಯವನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಮೂಲಕ ನೀಡುವುದಾಗಿ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ ತಿಳಿಸಿದೆ.