ಶ್ರೀಲಂಕಾ ಸರ್ವಪಕ್ಷ ಸಭೆಯಲ್ಲಿ ಆಗಿದ್ದೇನು; 10 ಅಂಶಗಳನ್ನು ಓದಿ ತಿಳಿಯಿರಿ
ಸಿಂಗಾಪುರ್, ಜುಲೈ 14: ದ್ವೀಪರಾಷ್ಟ್ರದಲ್ಲಿ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟು ಮತ್ತು ಸರ್ಕಾರ ಪತನದ ಬೆನ್ನಲ್ಲೇ ಬುಧವಾರ ನಡೆಸಿದ ಸರ್ವಪಕ್ಷಗಳ ಸಭೆಯಲ್ಲಿ ಹಲವು ಮಹತ್ವದ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ.
ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ನಿವಾಸಕ್ಕೆ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ ನಂತರದಲ್ಲಿ ಅಚ್ಚರಿಯ ರಾಜಕೀಯ ಬೆಳವಣಿಗೆಗಳು ನಡೆಯುತ್ತಿದೆ. ಇದರ ಹಿನ್ನೆಲೆ ಭವಿಷ್ಯದ ಆಡಳಿತ ದೃಷ್ಟಿಯಿಂದ ಸರ್ವ ಪಕ್ಷಗಳ ಸಭೆಯನ್ನು ಕರೆಯಲಾಗಿತ್ತು.
ಶ್ರೀಲಂಕಾ ಬಿಕ್ಕಟ್ಟಿನ ಮಧ್ಯೆ ಮಾಲ್ಡೀವ್ಸ್ನಿಂದ ಸಿಂಗಾಪುರಕ್ಕೆ ಹೊರಟ ಗೋಟಬಯ ರಾಜಪಕ್ಸೆ
ದ್ವೀಪರಾಷ್ಟ್ರದಲ್ಲಿ ಎಲ್ಲಾ ಪಕ್ಷಗಳು ಸೇರಿಕೊಂಡು ಒಬ್ಬ ಅಧ್ಯಕ್ಷನನ್ನು ಆಯ್ಕೆ ಮಾಡುವ ಪ್ರಕ್ರಿಯೆ ಕುರಿತು ಸಭೆಯಲ್ಲಿ ಚರ್ಚಿಸಿದ್ದಾರೆ. ಶ್ರೀಲಂಕಾದ ಆಡಳಿತದ ಚುಕ್ಕಾಣಿಯನ್ನು ಯಾರ ಕೈಗೆ ನೀಡಬೇಕು. ವಾಸ್ತವದ ಪರಿಸ್ಥಿತಿಯನ್ನು ಯಾವ ರೀತಿ ನಿಭಾಯಿಸಬೇಕು ಎಂಬುದರ ಕುರಿತು ನಡೆದ ಚರ್ಚೆ ಮತ್ತು ಬೆಳವಣಿಗೆಳನ್ನು ಮುಂದೆ ಓದಿ ತಿಳಿಯಿರಿ.
ಶ್ರೀಲಂಕಾದಲ್ಲಿ ಸರ್ವಪಕ್ಷ ಸಭೆ ಮತ್ತು ರಾಜಕೀಯ ಬೆಳವಣಿಗೆ:
* ನಾಗರಿಕರ ಪ್ರತಿಭಟನೆಗೆ ಬೆದರಿದ ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ತಮ್ಮನ್ನು ಸಿಂಗಾಪುರಕ್ಕೆ ಕಳುಹಿಸಲು ಖಾಸಗಿ ಜೆಟ್ ವ್ಯವಸ್ಥೆಗಾಗಿ ಮಾಲ್ಡೀವ್ಸ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ ಎಂದು ಮಾಲ್ಡೀವ್ಸ್ನ ಸರ್ಕಾರಿ ಮೂಲಗಳು ತಿಳಿಸಿವೆ. ಬುಧವಾರವಷ್ಟೇ ರಾಜೀನಾಮೆ ಸಲ್ಲಿಸಿದ್ದ ರಾಜಪಕ್ಸೆ ಸಂಜೆ ಮಾಲ್ಡೀವ್ಸ್ಗೆ ಪಲಾಯನ ಮಾಡಿದ್ದರು.
* ಬುಧವಾರ ಲಂಕಾ ರಾಜಕೀಯ ನಾಯಕರು ಸರ್ವಪಕ್ಷ ಸಭೆಯನ್ನು ನಡೆಸಿದ್ದು, ಸಂಸತ್ತಿನ ಸ್ಪೀಕರ್ ಅನ್ನು ಹಂಗಾಮಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ನಿರ್ಧರಿಸಲಾಯಿತು. ಅಲ್ಲದೇ ರಾನಿಲ್ ವಿಕ್ರಮಸಿಂಘೆ ಕೂಡ ಅಧಿಕಾರದಿಂದ ಕೆಳಗಿಳಿಯಬೇಕು ಹಾಗೂ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳು ಕೂಡಿಕೊಂಡು ಸರ್ವಪಕ್ಷಗಳ ಸರ್ಕಾರವನ್ನು ರಚಿಸಬೇಕು ಎಂದು ಹೇಳಲಾಗಿದೆ.
* ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಸರ್ಕಾರ ಮತ್ತು ಪ್ರತಿಪಕ್ಷ ಎರಡಕ್ಕೂ ಒಪ್ಪಿಗೆಯಾಗುವ ಪ್ರಧಾನಿಯನ್ನು ನಾಮನಿರ್ದೇಶನ ಮಾಡುವಂತೆ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನಗೆ ಸೂಚನೆ ನೀಡಲಾಗಿದೆ.
* ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮಾಲ್ಡೀವ್ಸ್ಗೆ ಹಾರಿದ ನಂತರ ಕೊಲಂಬೊದಲ್ಲಿ ಭಾರಿ ಪ್ರತಿಭಟನೆಗಳು ನಡೆದಿದ್ದು, ಶ್ರೀಲಂಕಾದಲ್ಲಿ ಗುರುವಾರ ಬೆಳಗ್ಗೆವರೆಗೂ ತುರ್ತು ಪರಿಸ್ಥಿತಿ ಘೋಷಿಸಲಾಗಿತ್ತು. ಇದರ ಮಧ್ಯೆ ಹೆಚ್ಚುತ್ತಿರುವ ಪ್ರತಿಭಟನೆಯನ್ನು ನಿಯಂತ್ರಿಸಲು ಕೊಲಂಬೊ ಸೇರಿದಂತೆ ಪಶ್ಚಿಮ ಪ್ರಾಂತ್ಯದಾದ್ಯಂತ ಅನಿರ್ದಿಷ್ಟ ಕರ್ಫ್ಯೂ ವಿಧಿಸಲಾಗಿದೆ.
* ಸಾವಿರಾರು ಜನರು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಅವರ ಕಚೇರಿಗೆ ನುಗ್ಗಿ, ಅವರ ನಿವಾಸವನ್ನು ವಶಪಡಿಸಿಕೊಂಡಾಗ ಮತ್ತು ಲಂಕಾ ಸಂಸತ್ತಿನ ಗೇಟ್ಗಳನ್ನು ಮುರಿಯುವುದಕ್ಕೆ ಯತ್ನಿಸಿದ ಸಂದರ್ಭದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸುವುದಕ್ಕಾಗಿ ಅಶ್ರುವಾಯು ಶೆಲ್ಗಳನ್ನು ಸಿಡಿಸಲಾಯಿತು.
* ಅಧ್ಯಕ್ಷ ಗೋಟಬಯ ರಾಜಪಕ್ಸೆ ಭರವಸೆ ನೀಡಿದಂತೆ ರಾಜೀನಾಮೆ ಕಳುಹಿಸಲಿದ್ದಾರೆ ಎಂದು ಸಂಸತ್ತಿನ ಸ್ಪೀಕರ್ ಮಹಿಂದ ಯಾಪಾ ಅಬೇವರ್ಧನ ಹೇಳಿದ್ದಾರೆ. ಪ್ರಧಾನಿ ವಿಕ್ರಮಸಿಂಘೆ ಅನ್ನು ದೇಶದ ಹಂಗಾಮಿ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ ಎಂದೂ ಅವರು ತಿಳಿಸಿದ್ದಾರೆ.
* ಶ್ರೀಲಂಕಾದ ಸರ್ಕಾರಿ ಟಿವಿ ನೆಟ್ವರ್ಕ್, ರೂಪವಾಹಿನಿ ಕಾರ್ಪೊರೇಷನ್, ಪ್ರತಿಭಟನಾಕಾರರು ಟಿವಿ ಸ್ಟೇಷನ್ಗೆ ನುಗ್ಗಿದ ಹಿನ್ನೆಲೆ ಪ್ರಸಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಯಿತು. ಆದರೆ ಚಾನೆಲ್ ನಂತರ ಪ್ರಸಾರವನ್ನು ಪುನರಾರಂಭಿಸಿತು.
* ಕಳೆದ ರಾತ್ರಿ ಗೋಟಬಯ ರಾಜಪಕ್ಸೆ ಖಾಸಗಿ ವಿಮಾನಕ್ಕಾಗಿ ವಿನಂತಿಸಿದ್ದಾರೆ ಎಂದು ದ್ವೀಪ ರಾಷ್ಟ್ರದ ರಕ್ಷಣಾ ಅಧಿಕಾರಿಗಳು ತಿಳಿಸಿದ್ದರು. ಅಧ್ಯಕ್ಷರಾಗಿದ್ದ ರಾಜಪಕ್ಸೆ ರಕ್ಷಣಾ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿ ಮುಂದುವರಿದಿದ್ದಾರೆ.
* ಮಾಲ್ಡೀವ್ಸ್ಗೆ ಆಗಮಿಸಿದ ನಂತರ, ಅಧ್ಯಕ್ಷ ರಾಜಪಕ್ಸೆ, ಅವರ ಪತ್ನಿ ಮತ್ತು ಅಂಗರಕ್ಷಕರನ್ನು ಪೊಲೀಸ್ ಬೆಂಗಾವಲು ಅಡಿಯಲ್ಲಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಯಿತು ಎಂದು ಮಾಲೆಯ ವಿಮಾನ ನಿಲ್ದಾಣದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇನ್ನು ಅಧ್ಯಕ್ಷರ ಕಿರಿಯ ಸಹೋದರ ಮತ್ತು ಮಾಜಿ ಹಣಕಾಸು ಸಚಿವ ಬಸಿಲ್ ರಾಜಪಕ್ಸೆ ಕೂಡ ದೇಶವನ್ನು ತೊರೆದಿದ್ದಾರೆ ಎಂದು ಹೇಳಲಾಗುತ್ತಿದೆ.
* ಅಧ್ಯಕ್ಷ ರಾಜಪಕ್ಸೆ ಮತ್ತು ಅವರ ಸಹೋದರ ಬೆಸಿಲ್ ಪಲಾಯನ ಮಾಡಲು ಭಾರತ ಸಹಾಯ ಮಾಡಿದೆ ಎಂಬ ವರದಿಗಳನ್ನು ಶ್ರೀಲಂಕಾದಲ್ಲಿರುವ ಭಾರತೀಯ ಹೈಕಮಿಷನ್ ತಳ್ಳಿಹಾಕಿದೆ.
Recommended Video