ತಾಂಜಾನಿಯಾ ದೋಣಿ ದುರಂತದಲ್ಲಿ 136 ಸಾವು, ಇನ್ನೂ ಹೆಚ್ಚಾಗುವ ಆತಂಕ
ನೈರೋಬಿ, ಸೆಪ್ಟೆಂಬರ್ 22: ತಾಂಜಾನಿಯಾದಲ್ಲಿ ಶುಕ್ರವಾರ ನಡೆದ ಭಾರಿ ದೋಣಿ ದುರಂತದಲ್ಲಿ ಈವರೆಗೆ 136 ಮಂದಿ ಮೃತಪಟ್ಟಿದ್ದಾರೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚಾಗುವ ಆತಂಕವಿದೆ.
ತಾಂಜಾನಿಯಾದ ವಿಕ್ಟೋರಿಯಾ ಸರೋವರದಲ್ಲಿ ಈ ಭಾರಿ ದೋಣಿ ದುರಂತ ನಡೆದಿದೆ. ಫೆರ್ರಿ ಮಾದರಿಯ ನೌಕೆಯಲ್ಲಿ ಹಲವು ಜನ ಪ್ರಯಾಣಿಸುತ್ತಿದ್ದರು. ಫೆರ್ರಿಯಲ್ಲಿ ಕೃಷಿ ಫಸಲು, ಸಿಮೆಂಟ್ ಚೀಲಗಳು, ವಾಹನಗಳು ಹೀಗೆ ಸಾಕಷ್ಟು ವಸ್ತುಗಳನ್ನು ತುಂಬಲಾಗಿತ್ತು.
ಅತಿಯಾದ ತೂಕದಿಂದಲೇ ಬೃಹತ್ ದೋಣಿ ಮುಳುಗಿದೆ ಎಂದು ಹೇಳಲಾಗುತ್ತಿದೆ. ಈವರೆಗೆ 136 ಶವಗಳನ್ನು ರಕ್ಷಣಾ ತಂಡ ಹೊರಗೆ ತೆಗೆದಿದ್ದು, ಇನ್ನೂ ಕನಿಷ್ಟ ನೂರು ಮಂದಿ ನಾಪತ್ತೆಯಾಗಿದ್ದಾರೆ. ಹಾಗಾಗಿ ಇನ್ನೂ ಭಾರಿ ಸಂಖ್ಯೆಯಲ್ಲಿ ಸಾವಿನ ಸಂಖ್ಯೆ ಹೆಚ್ಚಾಗುವ ಭೀತಿ ಇದೆ.

ದೋಣಿಯಲ್ಲಿ ಎಷ್ಟು ಜನರಿದ್ದರೆಂದು ನಿರ್ದಿಷ್ಟವಾದ ಮಾಹಿತಿ ಇಲ್ಲ, ಟಿಕೆಟ್ ನೀಡಿದ್ದ ವ್ಯಕ್ತಿ, ಟಿಕೆಟ್ನ ದಾಖಲೆಗಳೊಂದಿಗೆ ದೋಣಿಯಲ್ಲೇ ಇದ್ದ. ಆದರೆ ಅವಘಡದಲ್ಲಿ ಪಾರಾದವರು ಹೇಳುವ ಪ್ರಕಾರ ಕನಿಷ್ಟ 300 ಮಂದಿ ದೋಣಿಯಲ್ಲಿ ಪ್ರಯಾಣಿಸುತ್ತಿದ್ದರೆಂದು ಹೇಳಲಾಗಿದೆ. ರಾಯಿಟರ್ಸ್ ಸುದ್ದಿ ಸಂಸ್ಥೆ ಸಹ ಹೀಗೆಯೇ ವರದಿ ಮಾಡಿದೆ.
ತಾಂಜಾನಿಯಾದ ಉಕಾರಾ ಮತ್ತು ಉಕರವೇ ದ್ವೀಪಗಳ ನಡುವೆ ಈ ಬೃಹತ್ ದೋಣಿ (ಫೇರ್ರಿ) ಸಂಚರಿಸುತ್ತಿತ್ತು. ಈ ದೋಣಿಯ ಗರಿಷ್ಟ ಸಾಮರ್ಥ್ಯ ಕೇವಲ 100 ಪ್ರಯಾಣಿಕರು, ಆದರೆ ಸಾಮರ್ಥ್ಯಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚು ತೂಕ ಹಾಕಿದ ಕಾರಣ ದೋಣಿ ಮುಳುಗಿ ನೂರಾರು ಜೀವಗಳು ಬಲಿಯಾಗಿವೆ.

ಅವಘಡ ಸಂಭವಿಸಿದ ಕಾರಣ ತಾಂಜಾನಿಯ ಅಧ್ಯಕ್ಷ ಜಾನ್ ಮುಗುಫಿಲಿ ಅವರು ಶನಿವಾರದಿಂದ ಮೂರು ದಿನಗಳ ಕಾಲ ಶೋಕಾಚರಣೆ ಘೋಷಿಸಿದ್ದಾರೆ. ಅಲ್ಲದೆ ಅವಘಡದಲ್ಲಿ ಮೃಪಟ್ಟವರ ಶವಸಂಸ್ಕಾರವು ರಾಷ್ಟ್ರೀಯ ಕಾರ್ಯಕ್ರಮದಂತೆ ಮಾಡಲಾಗುತ್ತದೆ. ಇದರಲ್ಲಿ ಎಲ್ಲ ರಾಜಕೀಯ ನಾಯಕರು, ಮುಖಂಡರು ಪಾಲ್ಗೊಳ್ಳಬೇಕು ಎಂದು ಆದೇಶ ಹೊರಡಿಸಿದ್ದಾರೆ.












Click it and Unblock the Notifications