ಭಾರತ ಜತೆಗಿನ ಮಾತುಕತೆ ತಳ್ಳಿ ಹಾಕಿದ ಚೀನಾ
ಬೀಜಿಂಗ್, ಜುಲೈ 6: 'ವಾತಾವರಣ ಅನುಕೂಲಕರವಾಗಿಲ್ಲ' ಎಂಬ ಕಾರಣ ಮುಂದಿಟ್ಟು ಜಿ-20 ಸಮಾವೇಶದ ವೇಳೆ ಭಾರತದ ಜತೆಗಿನ ದ್ವಿಪಕ್ಷೀಯ ಮಾತುಕತೆಯನ್ನೇ ಚೀನಾ ತಳ್ಳಿ ಹಾಕಿದೆ.
ಇನ್ನೊಂದು ಕಡೆ ಅರ್ಜೆಂಟೀನಾ, ಕೆನಡಾ, ಇಟಲಿ, ಜಪಾನ್, ಮೆಕ್ಸಿಕೊ, ಬ್ರಿಟನ್, ವಿಯೆಟ್ನಾಂ, ದಕ್ಷಿಣ ಕೊರಿಯಾ ಜತೆಗೆ ಪ್ರಧಾನಿಗಳು ದ್ವಿಪಕ್ಷೀಯ ಮಾತುಕತೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಇದರ ಜತೆಗೆ ಬ್ರಿಕ್ಸ್ ನಾಯಕರ ಸಭೆಯಲ್ಲೂ ಪಾಲ್ಗೊಳ್ಳಲಿದ್ದು ಅವರ ವೇಳಾಪಟ್ಟಿಯಲ್ಲಿ ಯಾವುದೇ ಬದಲಾವಣೆಗಳಿಲ್ಲಎಂದು ಹೇಳಿದೆ. ಮಾತ್ರವಲ್ಲ ಚೀನಾ ಜತೆ ಭೇಟಿ ನಿರ್ಧಾರವಾಗಿಯೇ ಇರಲಿಲ್ಲ ಎಂದು ಸ್ಪಷ್ಟಪಡಿಸಿದೆ.

ಚೀನಾದ ಈ ಹೇಳಿಕೆಯೊಂದಿಗೆ ಸಿಕ್ಕಿಂನ ಚೀನಾ-ಭಾರತ ಗಡಿಯಲ್ಲಿನ ಪರಿಸ್ಥಿತಿ ಮತ್ತಷ್ಟು ಉಲ್ಭಣಿಸಿದೆ.
ಜರ್ಮನಿಯ ಹ್ಯಾಂಬರ್ಗ್ ನಲ್ಲಿ ಜಿ20 ಸಮಾವೇಶ ನಡೆಯಲಿದ್ದು ಇದಕ್ಕೂ ಮೊದಲು ಹೇಳಿಕೆ ನೀಡಿರುವ ಚೀನಾದ ವಿದೇಶಾಂಗ ವಕ್ತಾರ, "ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಮತ್ತು ಪ್ರಧಾನಿ ನರೇಂದ್ರ ಮೋದಿ ನಡುವಿನ ಭೇಟಿಗೆ ವಾತಾವರಣ ಅನುಕೂಲಕರವಾಗಿಲ್ಲ," ಎಂದು ಹೇಳಿದ್ದಾರೆ.
ಮಾತ್ರವಲ್ಲ ಯಾವುದೇ ಮಾತುಕತೆಗೂ ಮುನ್ನ ದೋಕ್ಲಾಂನಿಂದ ಸೇನೆಯನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಚೀನಾ ಬೇಡಿಕೆ ಮುಂದಿಟ್ಟಿದೆ. "ಭಾರತದ ಭಾಗದ ಗಡಿಯಿಂದ ಭಾರತ ಸೇನೆಯನ್ನು ಹಿಂತೆಗೆದುಕೊಳ್ಳುತ್ತದೆ ಎಂದು ನಾವು ಭಾವಿಸಿದ್ದೇವೆ," ಎಂದು ವಿದೇಶಾಂಗ ವಕ್ತಾರರು ಹೇಳಿದ್ದಾರೆ.
ಎರಡೂ ದೇಶಗಳ ನಾಯಕರು ಜಿ20 ಸಮಾವೇಶದಲ್ಲಿ ಮುಖಾಮುಖಿಯಾಗಲಿದ್ದಾರೆ. ಇಲ್ಲೇ ಮಾತುಕತೆಗಳು ನಡೆಯುವ ಸಾಧ್ಯತೆಗಳಿತ್ತು. ಆದರೆ ಸಾಂಭಾವ್ಯ ಮಾತುಕತೆಯನ್ನೂ ಚೀನಾ ತಳ್ಳಿ ಹಾಕಿದೆ.
ಕಳೆದ 19 ದಿನಗಳಿಂದ ದೋಕ್ಲಾಂನಲ್ಲಿ ಎರಡೂ ದೇಶಗಳ ಸೇನೆಗಳು ಜಮಾವಣೆಯಾಗಿದ್ದು ಚೀನಾ ಮತ್ತು ಭಾರತ ನಡುವಿನ ಪರಿಸ್ಥಿತಿ ದಿನದಿಂದ ದಿನಕ್ಕೆ ಉಲ್ಭಣಿಸುತ್ತಿದೆ.












Click it and Unblock the Notifications