ಶ್ರೀಲಂಕಾ ಅಧ್ಯಕ್ಷ, ಪ್ರಧಾನಿ ಮನೆಯಲ್ಲಿ ಕೂತ ಜನರು; ರಾಜೀನಾಮೆ ನೀಡುವವರೆಗೂ ಕದಲರು
ಕೊಲಂಬೋ, ಜುಲೈ 10: ಶ್ರೀಲಂಕಾ ಅಧ್ಯಕ್ಷ ಗೋಟಬಯ ರಾಜಪಕ್ಸೆ ಮತ್ತು ಪ್ರಧಾನಿ ರಾನಿಲ್ ವಿಕ್ರಮಸಿಂಘೆ ಮನೆಗೆ ಮುತ್ತಿಗೆ ಹಾಕಿರುವ ಜನಸಾಮಾನ್ಯರು ಅಲ್ಲಿಯೇ ವಾಸ್ತವ್ಯ ಹೂಡಿದ್ದಾರೆ. ಅಧ್ಯಕ್ಷ ಮತ್ತು ಪ್ರಧಾನಿ ಇಬ್ಬರೂ ರಾಜೀನಾಮೆ ನೀಡುವವರೆಗೂ ಆ ಮನೆಗಳನ್ನು ಬಿಟ್ಟು ನಾವು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಎಚ್ಚರಿಕೆ ನೀಡಿದ್ದಾರೆ.
ಗೋಟಬಯ ರಾಜಪಕ್ಸ ಮತ್ತು ರಾನಿಲ್ ವಿಕ್ರಮಸಿಂಘೆ ಇಬ್ಬರೂ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರೂ ಜನರು ತಮ್ಮ ಪ್ರತಿಭಟನೆ ನಿಲ್ಲಿಸಿಲ್ಲ. ಅವರ ರಾಜೀನಾಮೆ ನಿರ್ಧಾರದ ಬಳಿಕ ಜನರ ಹಿಂಸಾಚಾರ ಮತ್ತು ಪ್ರತಿಭಟನೆಯ ತೀವ್ರತೆ ಕಡಿಮೆ ಆಯಿತಾದರೂ ಅವರು ಆಕ್ರಮಿಸಿಕೊಂಡಿರುವ ಅಧ್ಯಕ್ಷ ಮತ್ತು ಪ್ರಧಾನಿಗಳ ಮನೆಗಳಿಂದ ಬಿಟ್ಟು ಹೋಗಲು ನಿರಾಕರಿಸಿದ್ದಾರೆ.
ಮಾತಿನ ಮೇಲೆ ನಂಬಿಕೆ ಇಲ್ಲ
ಅವರಿಬ್ಬರ ಮಾತುಗಳ ಮೇಲೆ ನಂಬಿಕೆ ಇಲ್ಲ. ಅವರು ರಾಜೀನಾಮೆ ಕೊಡುವವರೆಗೂ ಸ್ಥಳದಿಂದ ಹೊರಹೋಗುವ ಪ್ರಶ್ನೆಯೇ ಇಲ್ಲ ಎಂದು ಜನರು ಹೇಳಿದ್ದಾರೆ ಎಂದು ಎಎನ್ಐ ಸುದ್ದಿ ಸಂಸ್ಥೆ ವರದಿ ಮಾಡಿದೆ.

"ಅಧ್ಯಕ್ಷರ ಮೇಲೆ ನಮಗೆ ನಂಬಿಕೆ ಇಲ್ಲ. ನಮ್ಮ ದೇಶವನ್ನು ಈಗಾಗಲೇ ಮಾರಿಬಿಟ್ಟಿದ್ದಾರೆ. ನಾವು ಇಲ್ಲಿಗೆ ಮುತ್ತಿಗೆ ಹಾಕುವ ಮೂಲಕ ರಾಜಕಾರಣಿಗಳಿಗಿಂತ ಜನರಿಗೆ ಹೆಚ್ಚು ಅಧಿಕಾರ ಇದೆ ಎಂದು ತೋರಿಸಿಕೊಟ್ಟಿದ್ದೇವೆ. ಜುಲೈ 13ರವರೆಗೂ ನಾವು ಇಲ್ಲಿಯೇ ಇರುತ್ತೇವೆ" ಎಂದು ಅಕುಶ್ಲಾ ಫರ್ನಾಂಡೋ ಎಂಬಾಕೆ ಹೇಳಿದ್ದಾರೆ.
ಗಾಲೆಯಲ್ಲಿ ಪ್ರತಿಭಟನೆ ಮುಂದುವರಿಕೆ
ಇದೇ ವೇಳೆ, ಗಾಲೆ ನಗರದಲ್ಲಿ ನಿರಂತರ ಪ್ರತಿಭಟನೆ ಮುಂದುವರಿದಿದೆ. ಈಗ ಅಧ್ಯಕ್ಷರು ಮತ್ತು ಪ್ರಧಾನಿ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದರೂ ಇಲ್ಲಿ ಪ್ರತಿಭಟನೆ ನಿಲ್ಲಿಸದಿರಲು ನಿರ್ಧರಿಸಲಾಗಿದೆ. ಜುಲೈ 13ರವರೆಗೂ ಪ್ರತಿಭಟನಾಕಾರರು ಈ ಸ್ಥಳದಿಂದ ಹೋಗುವುದಿಲ್ಲ. ಆ ಬಳಿಕ ಮತ್ತೊಂದು ಗುಂಪಿನ ಜನರು ಪ್ರತಿಭಟನಾ ಸ್ಥಳಕ್ಕೆ ಬಂದು ಹೋರಾಟ ಮುಂದವರಿಸುತ್ತಾರೆ ಎಂದು ಇಲ್ಲಿಯ ಪ್ರತಿಭಟನಾಕಾರರೊಬ್ಬರು ಹೇಳಿದ್ಧಾರೆ.
ಇಲ್ಲಿರುವ ಜನರೂ ಕೂಡ ಗೋಟಬಯ ರಾಜಪಕ್ಸೆಯ ಮಾತುಗಳ ಮೇಲೆ ಅವಿಶ್ವಾಸ ವ್ಯಕ್ತಪಡಿಸಿದ್ದಾರೆ. "ಅಧ್ಯಕ್ಷರು ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದಾರೆಯೇ ವಿನಃ ಲಿಖಿತವಾಗಿ ರಾಜೀನಾಮೆ ಕೊಟ್ಟಿಲ್ಲ. ಅವರ ಮಾತಿನ ಮೇಲೆ ನಮಗೆ ನಂಬಿಕೆ ಇಲ್ಲ. ನಾವು ಪ್ರತಿಭಟನೆ ಕೈಬಿಡುವ ಪ್ರಶ್ನೆಯೇ ಇಲ್ಲ" ಎಂದು ಮತ್ತೊಬ್ಬ ಪ್ರತಿಭಟನಾಕಾರ ತಿಳಿಸಿದ್ದಾರೆ.
ಅಧ್ಯಕ್ಷರ ಮನೆ ಆಕ್ರಮಿಸಿಕೊಂಡ ಜನರು
ನಿನ್ನೆ ಶನಿವಾರ ಸಂಜೆ ಪ್ರತಿಭಟನಾಕಾರರು ಶ್ರೀಲಂಕಾ ಅಧ್ಯಕ್ಷರ ಅಧಿಕೃತ ನಿವಾಸ ಮತ್ತು ಕಚೇರಿ ಇರುವ ಭವನಕ್ಕೆ ಮುತ್ತಿಗೆ ಹಾಕಿ ವಶಕ್ಕೆ ತೆಗೆದುಕೊಂಡಿದ್ದಾರೆ. ಕಟ್ಟಡಕ್ಕೆ ಯಾವುದೇ ಹಾನಿ ಮಾಡದ ಜನರು ಒಳಗೆ ಎಲ್ಲಾ ಸ್ಥಳವನ್ನೂ ಜಾಲಾಡಿದ್ದಾರೆ. ಅಲ್ಲಿ ಸಿಕ್ಕಿದ ಕೋಟಿಗಟ್ಟಲೆ ಹಣವನ್ನು ಭದ್ರತಾ ಸಿಬ್ಬಂದಿಗೆ ಹಸ್ತಾಂತರಿಸಿದ ಬಳಿಕ ಜನರು ಮನೆಯ ಒಳಗೆ ವಾಸ್ತವ್ಯ ಹೂಡಿದ್ದಾರೆ.

ಅಲ್ಲಿರುವ ಈಜುಕೊಳದಲ್ಲಿ ಜನರು ಈಜುತ್ತಿರುವುದು, ಅಡುಗೆಕೋಣೆಯಲ್ಲಿ ತಿಂಡಿ ತಿನ್ನುತ್ತಿರುವುದು, ವಿವಿಧ ರೂಮುಗಳಲ್ಲಿ ವಿಶ್ರಾಂತಿ ಪಡೆದುಕೊಳ್ಳುತ್ತಿರುವುದು, ಕಟ್ಟಡದ ಎಲ್ಲೆಡೆ ಅಡ್ಡಾಡುತ್ತಿರುವುದು ಇವೆಲ್ಲಾ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಧ್ಯಕ್ಷರ ಮನೆ ಈಗ ಪ್ರವಾಸಿ ತಾಣವಾಗಿ ಬದಲಾಗಿದೆ.
ನಿನ್ನೆ ಪ್ರಧಾನಿ ರನಿಲ್ ವಿಕ್ರಮಸಿಂಘೆ ಮನೆಗೂ ಪ್ರತಿಭಟನಾಕಾರರು ಮುತ್ತಿಗೆ ಹಾಕಿದ್ದಾರೆ. ಅಲ್ಲಿದ್ದ ಅನೇಕ ವಸ್ತುಗಳಿಗೆ ಹಾನಿ ಮಾಡಿದ್ಧಾರೆ.
(ಒನ್ಇಂಡಿಯಾ ಸುದ್ದಿ)












Click it and Unblock the Notifications