Breaking: ಶ್ರೀಲಂಕಾ ಅಧ್ಯಕ್ಷ ಪಲಾಯನ: ತೀವ್ರಗೊಂಡ ಪ್ರತಿಭಟನೆ- ತುರ್ತು ಪರಿಸ್ಥಿತಿ ಘೋಷಣೆ
ತೀವ್ರ ಆರ್ಥಿಕ ಬಿಕ್ಕಟ್ಟು ಎದುರಿಸುತ್ತಿರುವ ಶ್ರೀಲಂಕಾದಲ್ಲಿ ಅಧ್ಯಕ್ಷರ ಪಲಾಯನದ ನಂತರ ಪರಿಸ್ಥಿತಿ ಕೈ ಮೀರಿ ಹೋಗಿದ್ದು ಸರ್ಕಾರ ತುರ್ತು ಪರಿಸ್ಥಿತಿ ಘೋಷಣೆ ಮಾಡಿದೆ. ಶ್ರೀಲಂಕಾ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಮಂಗಳವಾರ ತಡರಾತ್ರಿ ಮಾಲ್ಡೀವ್ಸ್ಗೆ ಪಲಾಯನ ಮಾಡಿದ ನಂತರ ಶ್ರೀಲಂಕಾ ಸರ್ಕಾರ ಬುಧವಾರ ತುರ್ತು ಪರಿಸ್ಥಿತಿಯನ್ನು ಘೋಷಿಸಿದೆ ಎಂದು ಪ್ರಧಾನಿ ರನಿಲ್ ವಿಕ್ರಮಸಿಂಘೆ ಅವರ ಕಚೇರಿಯ ಮೂಲಗಳನ್ನು ಉಲ್ಲೇಖಿಸಿ ಸುದ್ದಿ ಸಂಸ್ಥೆ ಎಎಫ್ಪಿ ತಿಳಿಸಿದೆ.
ಶ್ರೀಲಂಕಾದಲ್ಲಿ ಇಂದು ಪ್ರತಿಭಟನೆಗಳು ಭುಗಿಲೆದ್ದಿವೆ. ಕೋಪಗೊಂಡ ನೂರಾರು ನಾಗರಿಕರು ಕೊಲಂಬೊದಲ್ಲಿನ ಪ್ರಧಾನಿ ಕಚೇರಿಗೆ ಮೆರವಣಿಗೆ ನಡೆಸಿ ಅವರು ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪ್ರತಿಭಟನೆಯಲ್ಲಿ ನೂರಾರು ಜನ ಭಾಗಿಯಾಗಿದ್ದು ಪರಿಸ್ಥಿತಿ ಕೈ ಮೀರಿ ಹೋಗಿದೆ. ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ ದೇಶವನ್ನು ರಕ್ಷಿಸಲು ವಿಫಲವಾದ ನಂತರ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ರಾಜೀನಾಮೆ ನೀಡಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.
#WATCH Protesters face to face with military personnel deployed outside Sri Lankan prime minister's residence in Colombo
— ANI (@ANI) July 13, 2022
Ranil Wickremesinghe is a failed prime minister, says a protester. pic.twitter.com/6TtfT9wvky
"ನಮ್ಮ ಸಂವಿಧಾನದ ಪ್ರಕಾರ ಪ್ರಧಾನಿ ರಾಜೀನಾಮೆ ನೀಡಬೇಕೆಂದು ನಾವು ಬಯಸುತ್ತೇವೆ. ಏಕೆಂದರೆ ಅಧ್ಯಕ್ಷರು ರಾಜೀನಾಮೆ ನೀಡಿದರೆ ಪಿಎಂ ಹಂಗಾಮಿ ಅಧ್ಯಕ್ಷರಾಗುತ್ತಾರೆ. ಜನರು ಇಬ್ಬರೂ ತೊರೆಯಬೇಕೆಂದು ಬಯಸುತ್ತಾರೆ" ಎಂದು ಶ್ರೀಲಂಕಾ ಸರ್ಕಾರದ ಮಾಜಿ ಸಲಹೆಗಾರ ಸುದ್ದಿ ಸಂಸ್ಥೆ ANI ಗೆ ತಿಳಿಸಿದ್ದಾರೆ.
ಇಂದು ಪ್ರತಿಭಟನೆ ತೀವ್ರಗೊಂಡಿದ್ದು ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತರಲು ಪೊಲೀಸರು ಅಶ್ರುವಾಯು ಬಳಸಿದ್ದಾರೆ. ಎಎನ್ಐ ಹಂಚಿಕೊಂಡ ದೃಶ್ಯಗಳು ಪ್ರಧಾನಿ ವಿಕ್ರಮಸಿಂಘೆ ಅವರ ಕಚೇರಿಯ ಹೊರಗೆ ನೂರಾರು ಪ್ರತಿಭಟನಾಕಾರರು ಸಮೂಹವನ್ನು ಸೇರಿರುವುದು ಕಂಡು ಬಂದಿದೆ. ಶನಿವಾರದಂದು ಕೊಲಂಬೊದಲ್ಲಿ ಅಧ್ಯಕ್ಷ ರಾಜಪಕ್ಸೆ ಅವರ ನಿವಾಸದ ಮೇಲೆ ದಾಳಿ ಮಾಡಿದ ದೃಶ್ಯಗಳು ಸೆರೆಯಾಗಿವೆ. ಪ್ರತಿಭಟನಾಕಾರರ ಕೂಗು, ಬೊಬ್ಬೆಗಳು ಕೇಳಿ ಬರುತ್ತಿವೆ.
ಮತ್ತೊಂದು ವಿಡಿಯೋದಲ್ಲಿ ಪ್ರತಿಭಟನಾಕಾರರು ಪ್ರಧಾನ ಮಂತ್ರಿಯವರ ಮನೆಯ ಹೊರಗೆ ನಿಂತಿದ್ದ ಶಸ್ತ್ರಸಜ್ಜಿತ ಸೇನಾ ಸಿಬ್ಬಂದಿಯೊಂದಿಗೆ ಮುಖಾಮುಖಿಯಾಗುತ್ತಿರುವುದನ್ನು ತೋರಿಸುತ್ತದೆ. ಕೆಲವು ಪ್ರತಿಭಟನಾಕಾರರು 'ಹೋಗಿ, ಹೋಗಿ' ಎಂದು ಘೋಷಣೆ ಕೂಗುವುದನ್ನು ಕೇಳಬಹುದು, ಇತರರು ಪ್ರಧಾನಿ ಮತ್ತು ಅಧ್ಯಕ್ಷರ ಹೆಸರನ್ನು ಕೂಗುವುದು ವಿಡಿಯೋದಲ್ಲಿ ಕೇಳಿಸಿದೆ.