Sri Lanka Crisis : ಶ್ರೀಲಂಕಾ ಬಿಕ್ಕಟ್ಟಿನಿಂದ ಕೋವಿಡ್ಗಿಂತ ಅಧಿಕ ಸಾವು: ವೈದ್ಯರ ಎಚ್ಚರಿಕೆ
ಕೊಲೊಂಬೊ, ಏಪ್ರಿಲ್ 11: ಶ್ರೀಲಂಕಾದಲ್ಲಿ ಆರ್ಥಿಕ ಬಿಕ್ಕಟ್ಟು ತೀವ್ರ ಮಟ್ಟಕ್ಕೆ ಏರಿಕೆ. ಅಗತ್ಯ ವಸ್ತುಗಳ ಬೆಲೆಯು ಗಗನ ಮುಟ್ಟಿದೆ. ಈ ನಡುವೆ ಶ್ರೀಲಂಕಾದ ಕೆಟ್ಟ ಆರ್ಥಿಕ ಬಿಕ್ಕಟ್ಟು ಕೋವಿಡ್ ಸಾಂಕ್ರಾಮಿಕ ರೋಗಕ್ಕಿಂತ ಹೆಚ್ಚಿನ ಸಾವುಗಳಿಗೆ ಕಾರಣವಾಗಬಹುದು ಎಂದು ವೈದ್ಯರು ಭಾನುವಾರ ಎಚ್ಚರಿಸಿದ್ದಾರೆ.
ಶ್ರೀಲಂಕಾದಲ್ಲಿ ಜೀವ ಉಳಿಸುವ ಔಷಧಿಗಳೇ ಇಲ್ಲದಾಗಿದೆ. ಅಗತ್ಯ ಔಷಧಿಗಳು ಶ್ರೀಲಂಕಾದಲ್ಲಿ ಲಭ್ಯವಿಲ್ಲ. ಈ ದ್ವೀಪ ರಾಷ್ಟ್ರದಲ್ಲಿ ವಿದ್ಯುತ್ ಸಮಸ್ಯೆಯಿದೆ. ಅಷ್ಟೇ ಅಲ್ಲದೆ ಆಹಾರ, ಇಂಧನ ಮತ್ತು ಔಷಧಗಳ ತೀವ್ರ ಕೊರತೆಯಿಂದ ಶ್ರೀಲಂಕಾ ಹೋರಾಡುತ್ತಿದೆ. ಈ ಹಿನ್ನೆಲೆಯಿಂದಾಗಿ ಶ್ರೀಲಂಕಾದಲ್ಲಿ ಕೋವಿಡ್ ಸಾವಿಗಿಂತ ಅಧಿಕ ಸಾವು ಸಂಭವಿಸಬಹುದು ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.
ಭಾರತದ ಆಶ್ರಯ ಕೋರಿ ತಮಿಳುನಾಡು ತಲುಪಿದ ಶ್ರೀಲಂಕಾ ಪ್ರಜೆಗಳು
ದೇಶದ ಎಲ್ಲಾ ಆಸ್ಪತ್ರೆಗಳು ಇನ್ನು ಮುಂದೆ ಆಮದು ಮಾಡಿಕೊಂಡ ವೈದ್ಯಕೀಯ ಉಪಕರಣಗಳು ಮತ್ತು ಪ್ರಮುಖ ಔಷಧಗಳನ್ನು ಪಡೆಯಲು ಸಾಧ್ಯವಿಲ್ಲ ಎಂದು ಶ್ರೀಲಂಕಾ ವೈದ್ಯಕೀಯ ಸಂಘ (ಎಸ್ಎಲ್ಎಂಎ) ಹೇಳಿದೆ. ಹಲವಾರು ಸೌಲಭ್ಯಗಳು ಈಗಾಗಲೇ ಇಲ್ಲದಾಗಿದೆ.
ಶ್ರೀಲಂಕಾದಲ್ಲಿ ಶಸ್ತ್ರಚಿಕಿತ್ಸೆಯೇ ಸ್ಥಗಿತ!
ಶ್ರೀಲಂಕಾದಲ್ಲಿ ಪ್ರಮುಖವಾಗಿ ಶಸ್ತ್ರಚಿಕಿತ್ಸೆಯೇ ಸ್ಥಗಿತವಾಗಿದೆ. ಶಸ್ತ್ರಚಿಕಿತ್ಸೆ ವೇಳೆ ನೀಡಬೇಕಾದ ಅರಿವಳಿಕೆಗಳ ಕೊರತೆ ಕಾಣಿಸಿಕೊಂಡ ಕಾರಣದಿಂದಾಗಿ ಶಸ್ತ್ರಚಿಕಿತ್ಸೆಯನ್ನೇ ನಿಲ್ಲಿಸಲಾಗಿದೆ ಎಂದು ಮಾಧ್ಯಮಗಳ ವರದಿ ಉಲ್ಲೇಖ ಮಾಡಿದೆ. ಆದರೆ ತುರ್ತು ವಿಧಾನಗಳು ಸಹ ಶೀಘ್ರದಲ್ಲೇ ಸಾಧ್ಯವಾಗದಿರಬಹುದು ಎಂದು ಶ್ರೀಲಂಕಾ ವೈದ್ಯಕೀಯ ಸಂಘ (ಎಸ್ಎಲ್ಎಂಎ) ತಿಳಿಸಿದೆ.
ಚೀನಾದ ಹೂಡಿಕೆಯಿಲ್ಲ, ಭಾರತದಿಂದ ಅಧಿಕ ಸಹಾಯ: ಶ್ರೀಲಂಕಾ ಮಾಜಿ ಪ್ರಧಾನಿ
"ನಾವು ತುಂಬಾ ಕಷ್ಟವಾದ ಆಯ್ಕೆಯನ್ನು ಮಾಡಿಕೊಂಡಿದ್ದೇವೆ. ಬೇರೆ ದಾರಿ ಇಲ್ಲದೆ ಈ ಆಯ್ಕೆ ಮಾಡಲಾಗಿದೆ. ಯಾರು ಚಿಕಿತ್ಸೆ ಪಡೆಯುತ್ತಾರೆ ಮತ್ತು ಯಾರು ಚಿಕಿತ್ಸೆ ಪಡೆಯುವುದಿಲ್ಲ ಎಂಬುದನ್ನು ನಾವು ನಿರ್ಧಾರ ಮಾಡುತ್ತೇವೆ," ಎಂದು ಹೇಳಿರುವ ವೈದ್ಯರ ತಂಡವು ಈ ವಿಚಾರಗಳ ಬಗ್ಗೆ ಎಚ್ಚರಿಕೆ ನೀಡಿ ಅಧ್ಯಕ್ಷ ಗೊಟಬಯ ರಾಜಪಕ್ಸೆಗೆ ಪತ್ರವೊಂದನ್ನು ಬರೆದಿದ್ದಾರೆ.
ಕೋವಿಡ್ಗಿಂತ ಭೀಕರ ಸಾವಿನ ಎಚ್ಚರಿಕೆ
"ದಿನಗಳಲ್ಲಿ ಸರಬರಾಜುಗಳನ್ನು ಪುನಃ ಸ್ಥಾಪಿಸದಿದ್ದರೆ, ಸಾವುನೋವುಗಳು ಸಾಂಕ್ರಾಮಿಕ ರೋಗಕ್ಕಿಂತ ಕೆಟ್ಟದಾಗಿರುತ್ತದೆ," ಎಂದು ಕೂಡಾ ವೈದ್ಯರ ಗುಂಪು ಹೇಳಿದೆ. ಕೊರೊನಾ ವೈರಸ್ ಸಾಂಕ್ರಾಮಿಕ ಕಾರಣದಿಂದಾಗಿ ದೇಶದಲ್ಲಿ ಎಷ್ಟು ಜನರು ಸಾವನ್ನಪ್ಪಿದ್ದರೋ ಅದಕ್ಕಿಂತಲೂ ಅಧಿಕ ಮಂದಿ ಈ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಾವನ್ನಪ್ಪುವ ಸಾಧ್ಯತೆ ಇದೆ ಎಂದು ವೈದ್ಯರು ಹೇಳಿದ್ದಾರೆ.
ಬಿಕ್ಕಟ್ಟಿನ ಹಿನ್ನೆಲೆ ಸಾರ್ವಜನಿಕ ಆಕ್ರೋಶ ತೀವ್ರವಾಗಿದೆ. ರಾಜಪಕ್ಸೆ ಅವರ ರಾಜೀನಾಮೆಗೆ ಒತ್ತಾಯಿಸಿ ಜನರು ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜಧಾನಿ ಕೊಲಂಬೊದಲ್ಲಿರುವ ನಾಯಕನ ಕಚೇರಿಯ ಮುಂಭಾಗದಲ್ಲಿ ಎರಡನೇ ದಿನವೂ ಪ್ರತಿಭಟನೆ ಮುಂದುವರಿದಿದೆ. ಈ ನಡುವೆ ರಾಜಪಕ್ಸೆ ಅವರು 42 ಸ್ವತಂತ್ರ ಸಂಸದರನ್ನು ಒಳಗೊಂಡ 11-ಪಕ್ಷಗಳ ಒಕ್ಕೂಟದ ಮಿತ್ರಪಕ್ಷಗಳನ್ನು ದೇಶದ ಅತ್ಯಂತ ಕೆಟ್ಟ ಆರ್ಥಿಕ ಬಿಕ್ಕಟ್ಟಿನ ಕುರಿತು ಚರ್ಚೆಗೆ ಆಹ್ವಾನಿಸಿದ್ದಾರೆ ಎಂದು ಮಾಧ್ಯಮ ವರದಿ ತಿಳಿಸಿದೆ.
"ನಮ್ಮ ಪ್ರಸ್ತಾವನೆಗೆ ಸಂಬಂಧಿಸಿದಂತೆ 11 ಅಂಶಗಳನ್ನು ಒಳಗೊಂಡಿರುವ ನಮ್ಮ ಪತ್ರವನ್ನು ನಾವು ಚರ್ಚಿಸಿದ್ದೇವೆ, ಮಾತುಕತೆ ಮುಂದುವರಿಯುತ್ತದೆ," ಎಂದು ಸ್ವತಂತ್ರ ಗುಂಪಿನ ಸದಸ್ಯ ವಾಸುದೇವ ನಾಣಯ್ಯ ಸೋಮವಾರ ಸುದ್ದಿಗಾರರಿಗೆ ತಿಳಿಸಿದರು. ಅವರು ಮತ್ತು 41 ಮಂದಿ ಇತರ ನಾಯಕರುಗಳು ಕಳೆದ ವಾರ ಆಡಳಿತ ಸಮ್ಮಿಶ್ರದಿಂದ ಹೊರಗೆ ಬಂದಿದ್ದಾರೆ. ಆದರೆ ವಿರೋಧ ಪಕ್ಷಕ್ಕೆ ಸೇರಲು ನಿರಾಕರಿಸಿದರು. ಈ ನಡುವೆ ಉಳಿದ 26 ಮಂದಿಯನ್ನು ಸಂಪುಟಕ್ಕೆ ನೇಮಿಸುವುದು ಮತ್ತಷ್ಟು ವಿಳಂಬವಾಗಲಿದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.
ಇನ್ನು ಹಲವಾರು ಮಂದಿ ಭಾರತದತ್ತ ಧಾವಿಸುತ್ತಿದ್ದಾರೆ. ಜಾಫ್ನಾ ಮತ್ತು ಮನ್ನಾರ್ನಿಂದ 19 ಶ್ರೀಲಂಕಾ ಪ್ರಜೆಗಳು ದೋಣಿಯಲ್ಲಿ ತಮಿಳುನಾಡಿನ ಧನುಷ್ಕೋಡಿ ತಲುಪಿದ್ದಾರೆ. ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದಲ್ಲಿ ವಾಸಿಸುವುದು ತುಂಬಾ ಕಷ್ಟಕರವಾಗಿದೆ ಎಂದು ಭಾರತದಲ್ಲಿ ಆಶ್ರಯ ಪಡೆದಿರುವ ಈ ಜನರು ಹೇಳಿದರು. ಅಲ್ಲಿ ಅಗತ್ಯ ವಸ್ತುಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದೆ ಎಂದು ಕೂಡಾ ಹೇಳಿರುವ ಅವರು ಭಾರತದ ಆಶ್ರಯ ಕೋರಿದ್ದಾರೆ.