ಮೋದಿ ಸರಕಾರದಲ್ಲಿ ನಿರುದ್ಯೋಗ ಸಮಸ್ಯೆ ತಾಂಡವ : ರಾಹುಲ್
ನ್ಯೂ ಜೆರ್ಸಿ, ಸೆಪ್ಟೆಂಬರ್ 20: ರಾಜಕೀಯ ಧ್ರುವೀಕರಣ ಮತ್ತು ನಿರುದ್ಯೋಗ ಭಾರತದ ಬಹುದೊಡ್ಡ ಸಮಸ್ಯೆಗಳು ಎಂದು ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ವಿಶ್ಲೇಷಿಸಿದ್ದಾರೆ. ಈ ಮೂಲಕ ಮೋದಿ ಸರಕಾರದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ ಎಂದು ರಾಹುಲ್ ಟೀಕಿಸಿದ್ದಾರೆ.
ಗೌರಿ ಹತ್ಯೆ, ಆರೆಸ್ಸೆಸ್ ಕೈವಾಡ ಎಂದ ರಾಹುಲ್ , ಯೆಚೂರಿ ವಿರುದ್ಧ ದಾವೆ
ಅಮೆರಿಕಾದ ನ್ಯೂ ಜೆರ್ಸಿಯಲ್ಲಿರುವ ಪ್ರಿನ್ಸ್ ಟನ್ ಯುನಿವರ್ಸಿಟಿಯಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, "ಪ್ರಧಾನಿ ನರೇಂದ್ರ ಮೋದಿ ಮೇಕ್ ಇನ್ ಇಂಡಿಯಾ ಕಾರ್ಯಕ್ರಮದಲ್ಲಿ ದೊಡ್ಡ ಉದ್ಯಮಗಳಿಗೆ ಪ್ರೋತ್ಸಾಹ ನೀಡುವ ಬದಲು ಸಣ್ಣ ಉದ್ಯಮಗಳಿಗೆ ಉತ್ತೇಜನ ನೀಡಬೇಕಾಗಿತ್ತು," ಎಂದು ಅಭಿಪ್ರಾಯಪಟ್ಟಿದ್ದಾರೆ.
"ನಾವು ಚೀನಾದ ಜತೆ ಸ್ಪರ್ಧಿಸಲೇ ಬೇಕಾಗಿದೆ. ಚೀನಾಕ್ಕೆ ತನ್ನ ಗುರಿ ಸ್ಪಷ್ಟವಿದೆ. ಭಾರತಕ್ಕೆ ಅಂತಹದ್ದೊಂದು ಗುರಿ ಇದೆಯಾ?" ಎಂದು ಪ್ರಶ್ನಿಸಿರುವ ರಾಹುಲ್ ಗಾಂಧಿ, "ನಮ್ಮ ಗುರಿ ಏನಾಗಿರಬೇಕು? ನಮ್ಮ ಎರಡು ದೇಶಗಳ ನಡುವಿನ ಕೊಡುಕೊಳ್ಳುವಿಕೆ ಯಾವ ರೀತಿಯಲ್ಲಿರಬೇಕು? ಎಂದುದು ನಾವು ಈ ಹೊತ್ತಲ್ಲಿ ಕೇಳಿಕೊಳ್ಳಬೇಕಾದ ಪ್ರಶ್ನೆಗಳು," ಎಂದು ಹೇಳಿದ್ದಾರೆ.
ಚೀನಾ ಭಾರೀ ಶಕ್ತಿಯುತವಾಗಿ ಮುನ್ನಡೆಯುತ್ತಿದೆ. ನಾವೂ ಅದೇ ರೀತಿಯಲ್ಲಿ ಕೆಲಸ ಮಾಡಬೇಕು," ಎಂದು ಹೇಳಿದ ರಾಹುಲ್, ನಿರುದ್ಯೋಗ ಭಾರತದ ಅಭಿವೃದ್ಧಿಗೆ ತೊಡಕಾಗಿದೆ. ಬಾರತ ಹೇಗೆ ಜನರಿಗೆ ಉದ್ಯೋಗ ನೀಡುತ್ತದೆ ಎಂಬುದನ್ನು ಕೇಳಿಕೊಳ್ಳಬೇಕಾಗಿದೆ. ಮುಂದುವರಿದ ರಾಷ್ಟ್ರವಾಗಿ ಜನರಿಗೆ ಕೆಲಸ ನೀಡದೆ ಗುರಿ ನೀಡಲು ಸಾಧ್ಯವಿಲ್ಲ," ಎಂದು ರಾಹುಲ್ ತಿಳಿಸಿದ್ದಾರೆ.
ಉದ್ಯೋಗದ ಮಾರುಕಟ್ಟೆಗೆ ಪ್ರತಿದಿನ 30,000 ಜನರು ಬರುತ್ತಾರೆ. ಇವರಲ್ಲಿ ಕೇವಲ 450 ಜನರಿಗಷ್ಟೇ ಉದ್ಯೋಗ ಸಿಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಕೊನೆಯದಾಗಿ ರಾಜಕೀಯದ ಬಗ್ಗೆ ಮಾತನಾಡಿದ ರಾಹುಲ್ ಗಾಂಧಿ, ರಾಜಕೀಯ ಕ್ಷೇತ್ರದಲ್ಲಿ ನಾವು ಹಲವಾರು ಸುಧಾರಣಾ ಕ್ರಮಗಳನ್ನು ಕೈಗೊಂಡಿದ್ದೇವೆ. ಆದರೆ ಇನ್ನೂ ಸುಧಾರಣೆ ಮಾಡಲು ಬೇಕಾದಷ್ಟಿದೆ ಎಂದಿದ್ದಾರೆ.