ಫಿನ್ಲೆಂಡ್, ಸ್ವೀಡನ್ಗೆ ಎಚ್ಚರಿಕೆ ನೀಡಿದ ರಷ್ಯಾ
ಮಾಸ್ಕೋ, ಫೆಬ್ರವರಿ 26:ಒಂದೊಮ್ಮೆ ನ್ಯಾಟೋ ಸೇರಬಯಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ರಷ್ಯಾವು ಫಿನ್ಲೆಂಡ್ ಹಾಗೂ ಸ್ವೀಡನ್ಗೆ ಎಚ್ಚರಿಕೆ ನೀಡಿದೆ.
ಫಿನ್ಲೆಂಡ್ ಮತ್ತು ಸ್ವೀಡನ್ ರಾಷ್ಟ್ರಗಳು ತಮ್ಮ ಭದ್ರತೆಗಾಗಿ ಇತರ ದೇಶಗಳ ಭದ್ರತೆಗೆ ಹಾನಿ ತರಬಾರದು ಎಂದು ಮಾರಿಯಾ ಜಖರೋವಾ ಹೇಳಿದ್ದು, ಅವರು ಮಾತನಾಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ಸ್ವೀಡನ್ ಮತ್ತು ಫಿನ್ಲೆಂಡ್ನಿಂದ ಬೆಂಬಲವನ್ನು ಪಡೆಯುತ್ತಿದ್ದಾರೆ ಎಂಬ ಮಾಹಿತಿ ಹೊರಬಂದ ನಂತರ ಮಾರಿಯಾ ಜಖರೋವಾ ಈ ರೀತಿಯಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಉಕ್ರೇನ್ ಮತ್ತು ರಷ್ಯಾ ನಡುವಿನ ಯುದ್ಧದ ಕುರಿತಂತೆ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಮಾರಿಯಾ ಜಖರೋವಾ ಸ್ವೀಡನ್ ಮತ್ತು ಫಿನ್ಲ್ಯಾಂಡ್ ನ್ಯಾಟೋ ಸೇರಲು ಬಯಸಿದರೆ, ಗಂಭೀರವಾದ ಮಿಲಿಟರಿ ಮತ್ತು ರಾಜಕೀಯ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ರಷ್ಯಾದ ಆಕ್ರಮಣಕಾರಿ ನೀತಿಯ ವಿರುದ್ಧ ಈಗಾಗಲೇ ಯುರೋಪಿಯನ್ ಯೂನಿಯನ್ ಮತ್ತು ಬ್ರಿಟನ್ ಹಲವಾರು ರೀತಿಯ ನಿರ್ಬಂಧಗಳನ್ನು ಹೇರಿವೆ. ಈ ಬೆನ್ನಲ್ಲೇ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಮತ್ತು ವಿದೇಶಾಂಗ ಸಚಿವ ಸೆರ್ಗೆ ಲಾವ್ರೊವ್ ಅವರ ಆಸ್ತಿಗಳನ್ನು ಫ್ರೀಜ್ (ತಟಸ್ಥ) ಮಾಡುವುದಾಗಿ ಅಮೆರಿಕ ಅಧ್ಯಕ್ಷ ಬೈಡನ್ ಘೋಷಿಸಿದ್ದಾರೆ.
ರಷ್ಯಾದ ವಿರುದ್ಧದ ನಿರ್ಬಂಧ ವಿಧಿಸಿರುವ ಭಾಗವಾಗಿ ಪುಟಿನ್ ಮತ್ತು ಲಾವ್ರೊವ್ ವಿರುದ್ಧ ಆಸ್ತಿಗಳನ್ನು ಫ್ರೀಜ್ ಮಾಡಿರುವುದಾಗಿ ಯೂರೋಪಿಯನ್ ಯೂನಿಯನ್ ಹೇಳಿದ ಬಳಿಕ ಅಮೆರಿಕ ಈ ಮಹತ್ವದ ನಿರ್ಣಯವನ್ನು ತೆಗೆದುಕೊಂಡಿದೆ.
ಇದಕ್ಕೂ ಮುನ್ನ ಬ್ರಿಟನ್ ಪ್ರಧಾನಿ ಬೋರಿಸ್ ಜಾನ್ಸನ್ ಅವರು ಶುಕ್ರವಾರ ಸಭೆಯೊಂದರಲ್ಲಿ ಮಾತನಾಡಿ, ಪುಟಿನ್ ಮತ್ತು ಲಾವ್ರೊವ್ ಆಸ್ತಿಗಳ ಮೇಲೆ ನಿರ್ಬಂಧ ಹೇರುವುದಾಗಿ ತಿಳಿಸಿದ್ದರು. ಈಗ ಸದ್ಯಕ್ಕೆ ಯೂರೋಪಿಯನ್, ಇಂಗ್ಲೆಂಡ್, ಅಮೆರಿಕವು ಪುಟಿನ್ ಮತ್ತು ಸೆರ್ಗೆ ಲಾವ್ರೊವ್ ಆಸ್ತಿಗಳನ್ನು ಫ್ರೀಜ್ ಮಾಡಿವೆ.
ಪುಟಿನ್ ಅಥವಾ ಲಾವ್ರೊವ್ ಅವರ ಆಸ್ತಿಗಳನ್ನು ಫ್ರೀಜ್ ಮಾಡುವ ಮೂಲಕ ನೇರ ಕ್ರಮಕ್ಕೆ ಅಮೆರಿಕ, ಬ್ರಿಟನ್ ಮತ್ತು ಯೂರೋಪಿಯನ್ ಯೂನಿಯನ್ಗಳು ಮುಂದಾಗಿವೆ. ಈ ರಾಷ್ಟ್ರಗಳು ಅಥವಾ ಒಕ್ಕೂಟದಲ್ಲಿರುವ ಆಸ್ತಿಗಳನ್ನು ಬಳಸಿಕೊಳ್ಳಲು ಪುಟಿನ್ ಮತ್ತು ಲಾವ್ರೋವ್ಗೆ ಸಾಧ್ಯವಾಗುವುದಿಲ್ಲ.
ಉಕ್ರೇನ್ ವಿರುದ್ಧ ರಷ್ಯಾ ನಡೆಸುತ್ತಿರುವ ಆಕ್ರಮಣವನ್ನು ಖಂಡಿಸುವ ವಿಚಾರಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಮಂಡಿಸಿದ್ದ ನಿರ್ಣಯದಲ್ಲಿ ಮತದಾನಕ್ಕೆ ಭಾರತ ಶನಿವಾರ ಗೈರು ಹಾಜರಾಗಿದೆ. ನಿರೀಕ್ಷೆಯಂತೆ ಚೀನಾ ಕೂಡಾ ರಷ್ಯಾದ ವಿರುದ್ಧ ಮತದಾನದಿಂದ ದೂರ ಉಳಿದಿದೆ.
ಯುಎನ್ಎಸ್ಸಿ ಸಭೆಯಲ್ಲಿ ಭಾಗವಹಿಸಿದ್ದ ಭಾರತ ಹಿಂಸಾಚಾರ ಮತ್ತು ದ್ವೇಷವನ್ನು ತಕ್ಷಣವೇ ನಿಲ್ಲಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಬೇಕೆಂದು ಭಾರತವು ಒತ್ತಾಯಿಸಿದ್ದು, ವಿವಾದಗಳನ್ನು ಇತ್ಯರ್ಥ ಮಾಡಲು ಮಾತುಕತೆಯೊಂದೇ ದಾರಿ ಎಂದಿದೆ.
ವಿಶ್ವಸಂಸ್ಥೆಯಲ್ಲಿ ಭಾರತ ಕಾಯಂ ಪ್ರತಿನಿಧಿಯಾದ ಟಿ ಎಸ್ ತಿರುಮೂರ್ತಿ ಮಾತನಾಡಿ, ಉಕ್ರೇನ್ನಲ್ಲಿನ ಇತ್ತೀಚಿನ ಬೆಳವಣಿಗೆಗಳಿಂದ ಭಾರತವು ವಿಚಲಿತವಾಗಿದೆ. ವಿಶ್ವಸಂಸ್ಥೆಯ ಎಲ್ಲಾ ಸದಸ್ಯ ರಾಷ್ಟ್ರಗಳು ಉತ್ತಮ ಮಾರ್ಗವನ್ನು ಕಂಡುಕೊಳ್ಳಬೇಕಾಗಿದೆ. ಭಿನ್ನಾಭಿಪ್ರಾಯಗಳು ಮತ್ತು ವಿವಾದಗಳನ್ನು ಇತ್ಯರ್ಥಗೊಳಿಸಲು ಮಾತುಕತೆಯೊಂದೇ ಉತ್ತರವಾಗಿದೆ ಎಂದು ಹೇಳಿದ್ದಾರೆ.
ರಷ್ಯಾ ಮತ್ತು ಉಕ್ರೇನ್ ವಿಚಾರದಲ್ಲಿ ರಾಜತಾಂತ್ರಿಕ ಮಾತುಕತೆಯ ಮಾರ್ಗವನ್ನು ಕೈಬಿಟ್ಟಿರುವುದು ವಿಷಾದದ ಸಂಗತಿಯಾಗಿದೆ. ನಾವು ರಾಜತಾಂತ್ರಿಕ ಮಾರ್ಗವನ್ನು ಆಯ್ದುಕೊಳ್ಳಬೇಕು. ಈ ಎಲ್ಲಾ ಕಾರಣಗಳಿಗಾಗಿ, ಭಾರತವು ಈ ನಿರ್ಣಯದಿಂದ ದೂರವಿರಲು ನಿರ್ಧರಿಸಿದೆ ಎಂದು ತಿಳಿಸಿದ್ದಾರೆ.












Click it and Unblock the Notifications