Russia & Ukraine: ರಷ್ಯಾ & ಉಕ್ರೇನ್ಗೆ ಆಟ.. ಜಗತ್ತಿಗೇ ಪ್ರಾಣ ಸಂಕಟ!
ಮಾಸ್ಕೋ: ಅವರಿಬ್ಬರ ಜಗಳ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಇತ್ತ ಇಡೀ ಜಗತ್ತು ಭಯದ ನೆರಳಲ್ಲಿ ಬದುಕುವ ಪರಿಸ್ಥಿತಿ ಬಂದಿದೆ. ಇದೇ ಕಾರಣಕ್ಕೆ ಇಬ್ಬರ ಮಧ್ಯೆ ಮಾತುಕತೆ ನಡೆಸಿ ಸಂಧಾನ ಮಾಡಲು ಇಡೀ ಪ್ರಪಂಚ ಒಂದಾಗಿದೆ. ಆದರೂ ರಷ್ಯಾ ಮತ್ತು ಉಕ್ರೇನ್ ತಮ್ಮ ಹಠ ಬಿಡುತ್ತಿಲ್ಲ. ಅತ್ತ ರಷ್ಯಾ ದಾಳಿ ಮಾಡಿದೆ ಅಂತಾ ಉಕ್ರೇನ್ ಬಾಂಬ್ ಹಾಕುತ್ತಿದೆ. ಈ ಕಡೆ ಉಕ್ರೇನ್ ದಾಳಿ ಮಾಡಿದೆ ಅಂತಾ ರಷ್ಯಾ ಬಾಂಬ್, ಮಿಸೈಲ್ ಎಸೆಯುತ್ತಿದೆ.
ಹೌದು, ರಷ್ಯಾ ಮೇಲೆ ಮತ್ತೆ ಉಕ್ರೇನ್ ದಾಳಿ ನಡೆಸಿರುವ ಆರೋಪ ಕೇಳಿಬಂದಿದೆ. ರಷ್ಯಾ ರಾಜಧಾನಿ ಮಾಸ್ಕೊ ಗುರಿಯಾಗಿಸಿ ದಾಳಿ ನಡೆಸಲು ಪ್ರಯತ್ನಿಸಿದ ಹಿನ್ನೆಲೆ 2 ಡ್ರೋನ್ಗಳನ್ನು ವಾಯು ಸೇನೆ ಹೊಡೆದುರುಳಿಸಿದೆ ಎಂದು ರಷ್ಯಾ ಹೇಳಿದೆ. ಈ ಮೂಲಕ ಉಕ್ರೇನ್ ಮತ್ತು ರಷ್ಯಾ ನಡುವೆ ಹೊತ್ತಿರುವ ಕಿಚ್ಚಿಗೆ ಮತ್ತೆ ಮತ್ತೆ ತುಪ್ಪ ಸುರಿಯಲಾಗುತ್ತಿದೆ. ಆದರೆ ಹೀಗೆ ನಡೆದ ಡ್ರೋನ್ ದಾಳಿಯಲ್ಲಿ ಸಾವು-ನೋವು ಸಂಭವಿಸಿಲ್ಲ. ಉಕ್ರೇನ್ನ ಪಡೆಗಳು ರಷ್ಯಾ ಮೇಲೆ ಪದೇ ಪದೆ ದಾಳಿ ಮಾಡುತ್ತಿವೆ. ಇದೊಂದು ಭಯೋತ್ಪಾದಕರ ಕೃತ್ಯ ಎಂದು ರಷ್ಯಾ ರಕ್ಷಣಾ ಸಚಿವಾಲಯ ಆಕ್ರೋಶ ಹೊರಹಾಕಿದೆ.

532ನೇ ದಿನಕ್ಕೆ ಕಾಲಿಟ್ಟ ರಣಭೀಕರ ಕಾಳಗ!
ಕೆಲ ದಿನದಲ್ಲಿ ಮುಗಿದು ಹೋಗುತ್ತೆ ಎಂದು ಅಂದುಕೊಂಡಿದ್ದ ರಷ್ಯಾ ಮತ್ತು ಉಕ್ರೇನ್ ಯುದ್ಧ ಸುಮಾರು ಒಂದೂವರೆ ವರ್ಷ ಮುಗಿಸಿದೆ. ಇಂದಿಗೆ 532ನೇ ದಿನಕ್ಕೆ ಕಾಲಿಟ್ಟಿರುವ ರಣಭೀಕರ ಕಾಳಗ ನಿಲ್ಲುವ ಮುನ್ಸೂಚನೆಯೇ ಕಂಡಿಲ್ಲ. ರಷ್ಯಾ ಕೂಡ ಯುದ್ಧವನ್ನು ಇನ್ನೂ ಮುಂದಕ್ಕೆ ಕೊಂಡೊಯ್ಯಲು ಸನ್ನದ್ಧವಾಗಿದೆ. ಉಕ್ರೇನ್ ಪರದಾಡುತ್ತಿರುವಾಗ ಪಾಶ್ಚಿಮಾತ್ಯ ರಾಷ್ಟ್ರಗಳು ನೆರವಿಗೆ ನಿಂತಿವೆ. ಇದು ರಷ್ಯಾ ಅಧ್ಯಕ್ಷ ಪುಟಿನ್ರನ್ನ ಇನ್ನಷ್ಟು ಕೆರಳಿಸುತ್ತಿದೆ. ಹೀಗಾಗಿ ರಷ್ಯಾ ಮತ್ತು ಉಕ್ರೇನ್ ಯುದ್ಧ ಕ್ಷಣಕ್ಷಣಕ್ಕೂ ಭೀಕರ ಸ್ವರೂಪ ಪಡೆಯುತ್ತಿದೆ. ಇದೇ ಹೊತ್ತಲ್ಲಿ ಈಗ ರಷ್ಯಾ ಸೇನೆ ಕೂಡ ಉಕ್ರೇನ್ನ 2 ಡ್ರೋನ್ ಹೊಡೆದುರುಳಿಸಿದ ಬಗ್ಗೆ ಹೇಳಿಕೆ ನೀಡಿದೆ.
ಯುದ್ಧ ನಿಲ್ಲುತ್ತಾ? ಯುದ್ಧ ನಿಲ್ಲೋದಿಲ್ವಾ?
ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಶುರುವಾಗಿ ಸುಮಾರು ಒಂದೂವರೆ ವರ್ಷ ಕಳೆದಿದೆ. ಈಗಾಗಲೇ ಲಕ್ಷಾಂತರ ಜನರು ಈ ಯುದ್ಧಕ್ಕೆ ಬಲಿಯಾಗಿರುವ ಕುರಿತು ಆರೋಪ ಕೇಳಿಬಂದಿದೆ. ಈ ಹೊತ್ತಲ್ಲಿ ಜಗತ್ತು ಒಂದಾಗಿತ್ತು. ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಪ್ರಸ್ತಾಪದ ಹಿನ್ನೆಲೆ ಸೌದಿ ಆರೇಬಿಯಾ ಸಂಧಾನಕ್ಕೆ ಚರ್ಚೆ ಶುರು ಮಾಡಿತ್ತು. ಎರಡು ದಿನ ಈ ಕುರಿತು ಉಕ್ರೇನ್ ಸೇರಿ ಪ್ರಮುಖ ಅಭಿವೃದ್ಧಿಶೀಲ ರಾಷ್ಟ್ರಗಳು ಗಂಭೀರ ಚರ್ಚೆ ನಡೆಸಿವೆ. ಯುದ್ಧ ನಿಲ್ಲಿಸಲು ಸಾಕಷ್ಟು ಪ್ರಯತ್ನ ನಡೆಸಲಾಗಿದೆ.

ಬುದ್ಧಿ ಹೇಳುವವರು ಯಾರು?
ಆದರೆ ರಷ್ಯಾ ಮತ್ತು ಉಕ್ರೇನ್ ಯುದ್ಧ ನಿಲ್ಲಿಸುವ ಚರ್ಚೆ ಅಂದುಕೊಂಡ ಹಂತ ತಲುಪಿಲ್ಲ, ಹೀಗಾಗಿ ಮೊನ್ನೆ ಮೊನ್ನೆ ನಡೆದಿದ್ದ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಮತ್ತೊಮ್ಮೆ ಇದೇ ರೀತಿ ಗಂಭೀರ ಸಭೆ ಆಯೋಜಿಸಲು ಕ್ರಮ ಕೈಗೊಳ್ಳಲಾಗಿತ್ತು. ಆದರೆ ಈ ಬೆಳವಣಿಗೆಗಳ ನಡುವೆ ಮತ್ತೆ ಉಕ್ರೇನ್ ಡ್ರೋನ್ ದಾಳಿಗೆ ಯತ್ನಿಸಿರುವ ಆರೋಪ ಮಾಡಿದೆ ರಷ್ಯಾ. ಹೀಗಾಗಿ ಇಬ್ಬರಿಗೆ ಬುದ್ಧಿ ಹೇಳುವವರು ಯಾರು? ಎಂಬ ಪ್ರಶ್ನೆ ಕಾಡುತ್ತಿದೆ.

ಭಾರತದ ಮಾನವೀಯ ಸಂದೇಶ!
ಜಗತ್ತು ಈಗ ಎರಡು ಭಾಗವಾಗಿ ಹೋಗಿದೆ. ಒಂದು ಭಾಗ ರಷ್ಯಾ ಜೊತೆಗೆ ಸೇರಿದೆ, ಇದೇ ವೇಳೆ ಇನ್ನೊಂದು ಭಾಗ ಅಮೆರಿಕದ ಜೊತೆ ಸೇರಿ ಉಕ್ರೇನ್ ಪರ ನಿಂತಿದೆ. ಆದರೆ ಭಾರತ ಮಾತ್ರ ಹೀಗೆ ಮಾಡಿಲ್ಲ. ಭಾರತ ಯುದ್ಧವನ್ನ ವಿರೋಧಿಸುವ ಜೊತೆಗೆ ಮಾನವೀಯತೆ ಸಂದೇಶ ಸಾರುತ್ತಿದೆ. ಹಾಗೇ ಯುದ್ಧ ಬೇಡವೇ ಬೇಡ ಎನ್ನುತ್ತಿದೆ. ಈ ವಿಚಾರದಲ್ಲಿ ಅತ್ತ ಉಕ್ರೇನ್ಗೂ ಬೆಂಬಲವನ್ನು ನೀಡದೆ ಇತ್ತ ರಷ್ಯಾಗೂ ಸಪೋರ್ಟ್ ನೀಡದೆ ಭಾರತ ಶಾಂತಿ ಸಂದೇಶ ಸಾರುತ್ತಿದೆ. ಇಷ್ಟಾದರೂ ಉಕ್ರೇನ್ ಆಗಲಿ ಅಥವಾ ರಷ್ಯಾ ಆಗಲಿ ಪರಿಸ್ಥಿತಿ ಅರ್ಥ ಮಾಡಿಕೊಳ್ಳುತ್ತಿಲ್ಲ. ಯದ್ಧವನ್ನು ನಿಲ್ಲಿಸಲು ಪ್ರಯತ್ನಿಸುತ್ತಿಲ್ಲ ಎಂಬ ಆರೋಪ ಮತ್ತು ಆಕ್ರೋಶ ಮೊಳಗುತ್ತಿದೆ.












Click it and Unblock the Notifications