ಯುದ್ಧ ಮುಗಿದ ನಂತರ ನಿಲ್ಲಲು ಸೂರು ಇಲ್ಲ, ತಿನ್ನಲು ಅನ್ನವಿಲ್ಲ
ತಮ್ಮ ಮನೆಗೆ ಬೆಂಕಿ ಹಚ್ಚಿ ಊರು ಬಿಟ್ಟು ಹೊರಟವರಿಗೆ ಊಟವಿಲ್ಲ, ಸೂರಿನ ನೆರಳು ಕೂಡ ಕಾಣುತ್ತಿಲ್ಲ. ಅರೆ ಇದು ಯಾವುದೋ ಸಿನಿಮಾ ಡೈಲಾಗ್ ಅಲ್ಲ, ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಯುದ್ಧದ ಪರಿಣಾಮ. ನಗೊರ್ನೊ-ಕರಬಾಖ್ ಪ್ರದೇಶಕ್ಕಾಗಿ ಎರಡೂ ರಾಷ್ಟ್ರಗಳ ನಡುವೆ ಹೊತ್ತಿದ್ದ ಯುದ್ಧದ ಕಿಚ್ಚು, ಮಧ್ಯಸ್ಥಿಕೆಯ ಪರಿಣಾಮ ಆರಿದೆ. ಆದರೆ ಯುದ್ಧದ ಗಾಯ ಮಾತ್ರ ಇನ್ನೂ ವಾಸಿಯಾಗಿಲ್ಲ. ಹೀಗೆ ಸೂರು ಕಳೆದುಕೊಂಡು ಬೀದಿಗೆ ಬಿದ್ದ ಜನರ ರಕ್ಷಣೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಧಾವಿಸಿದ್ದಾರೆ. ರಷ್ಯಾ ಸರ್ಕಾರ ಸಂತ್ರಸ್ತರ ರಕ್ಷಣೆಗೆ ಹೊಸ ಯೋಜನೆ ರೂಪಿಸಿದ್ದು, ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಮುಂದಾಗಿದೆ. ರಷ್ಯಾ ಸಚಿವರು ಈಬಗ್ಗೆ ಮಾಹಿತಿ ನೀಡಿದ್ದಾರೆ.
ಅಂದಹಾಗೆ ಅರ್ಮೇನಿಯ, ಅಜೆರ್ಬೈಜಾನ್ ಯುದ್ಧಕ್ಕೆ ಬ್ರೇಕ್ ಹಾಕಲು ರಷ್ಯಾ ಮಧ್ಯಪ್ರವೇಶ ಮಾಡಬೇಕಾಯಿತು. ರಷ್ಯಾ ಎಂಟ್ರಿಯಾಗಿ ಎರಡೂ ರಾಷ್ಟ್ರಗಳ ಮಧ್ಯೆ ಮಾತುಕತೆ ನಡೆಸಿದಾಗ ಕೂಡ ಯುದ್ಧ ನಿಲ್ಲಲಿಲ್ಲ. ರಷ್ಯಾ ಮಾತನ್ನು ಮೊಂಡರು ಸುಲಭವಾಗಿ ಒಪ್ಪಲಿಲ್ಲ. ಸುಮಾರು 2 ತಿಂಗಳು ನಡೆದ ಯುದ್ಧದಲ್ಲಿ ಸಾವಿರಾರು ಜನ ಮೃತಪಟ್ಟಿದ್ದಾರೆ.
ಈ ಸಂದರ್ಭದಲ್ಲೇ ನಗೊರ್ನೊ-ಕರಬಾಖ್ ಖಾಲಿ ಮಾಡಿದ ಅರ್ಮೇನಿಯ ಜನ ಅಕ್ಷರಶಃ ಬೀದಿಗೆ ಬಿದ್ದಿದ್ದಾರೆ. ಕದನ ವಿರಾಮ ಒಪ್ಪಂದದಂತೆ ನಗೊರ್ನೊ-ಕರಬಾಖ್ ಪ್ರದೇಶದಲ್ಲಿ ವಾಸ ಇರುವ ಅರ್ಮೇನಿಯನ್ನರು ಜಾಗ ಖಾಲಿ ಮಾಡಬೇಕಿತ್ತು. ಹೀಗಾಗಿ ಅಲ್ಲಿದ್ದ ಲಕ್ಷಾಂತರ ಅರ್ಮೇನಿಯನ್ನರ ನಗೊರ್ನೊ-ಕರಬಾಖ್ನಿಂದ ರಾತ್ರೋ ರಾತ್ರಿ ಹೊರಗೆ ದಬ್ಬಲಾಗಿದೆ. ಹೀಗೆ ಹೊರಬಂದ ಲಕ್ಷಾಂತರ ಜನರು ಸೂರು ಇಲ್ಲದೆ ಪರದಾಡುತ್ತಿದ್ದಾರೆ. ಇವರ ನೆರವಿಗೆ ಪುಟಿನ್ ಸರ್ಕಾರ ಧಾವಿಸಿ ಬಂದಿದೆ.

ಊರು ತೊರೆಯುವ ಮುನ್ನ ಕಂಬನಿ
ಹುಟ್ಟಿದ ಊರು ತೊರೆಯುವ ಪ್ರತಿಯೊಬ್ಬರಿಗೂ ಕಾಡುವಂತೆ ಅಸಮಾನ್ಯ ನೋವು ಅರ್ಮೇನಿಯ ಜನರನ್ನು ಕಾಡುತ್ತಿದೆ. ಕರಬಾಖ್ ಪ್ರದೇಶದಲ್ಲಿ ನೂರಾರು ವರ್ಷಗಳಿಂದ ಇವರು ವಾಸ ಇದ್ದರು. ಆದರೆ ಅದ್ಯಾವುದೋ ರಾಜಕೀಯ ಒತ್ತಡಕ್ಕೆ, ಒಪ್ಪಂದಕ್ಕೆ ತಮ್ಮ ತಮ್ಮ ಊರನ್ನು ತೊರೆಯಬೇಕಾದ ಅನಿವಾರ್ಯತೆಗೆ ಸಿಲುಕಿದ್ದಾರೆ. ಮನೆಯಲ್ಲಿರುವ ಪ್ರತಿಯೊಂದು ವಸ್ತುಗಳನ್ನೂ ಟ್ರಕ್ಗೆ ಹೇರಿಕೊಂಡು, ಜಾಗ ಖಾಲಿ ಮಾಡುತ್ತಿದ್ದಾರೆ. ಹೀಗೆ ಊರು ತೊರೆಯುವ ಮುನ್ನ ಕಣ್ಣೀರು ಹಾಕುತ್ತಿರುವ ಜನ, ತಮ್ಮ ಸೋರಿನತ್ತ ಕಂಬನಿ ತುಂಬಿದ ಕಂಗಳಿಂದ ಕೊನೇ ನೋಟ ಬೀರಿ ಗುಳೆ ಹೋಗುತ್ತಿದ್ದಾರೆ. ಇಂತಹ ದೃಶ್ಯಗಳು ಕರಬಾಖ್ ಪ್ರದೇಶದಲ್ಲಿ ಸಾಮಾನ್ಯವಾಗಿದೆ.

ನಗೊರ್ನೊ-ಕರಬಾಖ್ ಅಜೆರ್ಬೈಜಾನ್ ವಶಕ್ಕೆ
ರಷ್ಯಾ ಜೊತೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ನಗೊರ್ನೊ-ಕರಬಾಖ್ ಪ್ರದೇಶವನ್ನು ಅರ್ಮೇನಿಯ ಪಡೆಗಳು ಅಜೆರ್ಬೈಜಾನ್ ವಶಕ್ಕೆ ನೀಡಿವೆ. ನಗೊರ್ನೊ-ಕರಬಾಖ್ ಪ್ರದೇಶದಲ್ಲಿ ಶತಮಾನಗಳಿಂದ ವಾಸವಿದ್ದ ಅರ್ಮೇನಿಯನ್ನರು ಈಗಾಗಲೇ ಜಾಗ ಖಾಲಿ ಮಾಡಿದ್ದಾರೆ. ಇನ್ನು ಈ ಪ್ರದೇಶದಲ್ಲಿ ಅಜೆರ್ಬೈಜಾನ್ ಪಡೆಗಳು ಸಂಪೂರ್ಣ ಹಿಡಿತ ಸಾಧಿಸಿದ್ದು, ರಷ್ಯಾ ಸೇನೆ ಕೂಡ ಇದಕ್ಕಾಗಿ ಸಾಥ್ ನೀಡಿತ್ತು. ನಗೊರ್ನೊ-ಕರಬಾಖ್ ಪ್ರದೇಶದಿಂದ ಮನೆ ತೊರೆಯುವ ಮುನ್ನ ಅರ್ಮೇನಿಯನ್ನರು, ಬೆಂಕಿ ಹಚ್ಚಿದ್ದರು. ನಾವು ವಾಸವಿದ್ದ ಮನೆ ಬೇರೆಯವರ ಪಾಲಾಗುವುದು ಬೇಡ ಎಂಬ ಕಾರಣಕ್ಕೆ ಈ ರೀತಿ ಅವರು ತಮ್ಮ ಕನಸಿನ ಮನೆಗಳಿಗೆ ಬೆಂಕಿ ಹಚ್ಚಿ ಊರುಬಿಟ್ಟಿದ್ದರು. ಇಂತಹ ಕರುಣಾಜನಕ ದೃಶ್ಯಗಳ ಬೆನ್ನಲ್ಲೇ ಇಡೀ ನಗೊರ್ನೊ-ಕರಬಾಖ್ ಪ್ರದೇಶ ಅಜೆರ್ಬೈಜಾನ್ ಪಡೆಗಳ ವಶವಾಗಿದೆ.

ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳು..!
ಅರ್ಮೇನಿಯ-ಅಜೆರ್ಬೈಜಾನ್ ಗಡಿಯಲ್ಲಿ ಕಳೆದ 2 ತಿಂಗಳುಗಳ ಕಾಲ ಪರಿಸ್ಥಿತಿ ಹೇಗಿತ್ತು ಎಂದರೆ, ದಿನವೂ ದೀಪಾವಳಿ ನಡೆದಿತ್ತು. ಒಮ್ಮೆ ಅರ್ಮೇನಿಯ ಸೈನಿಕರು ಬಾಂಬ್ ಎಸೆದರೆ, ಮರುಕ್ಷಣವೇ ಅಜೆರ್ಬೈಜಾನ್ ಪಡೆಗಳು ಪ್ರತಿದಾಳಿ ಮಾಡುತ್ತಿದ್ದವು. ಅಕಸ್ಮಾತ್ ಅಜೆರ್ಬೈಜಾನ್ ಮೊದಲು ದಾಳಿ ಮಾಡಿದರೆ ತಕ್ಷಣವೇ ಅರ್ಮೇನಿಯ ದಾಳಿ ನಡೆಸುತ್ತಿತ್ತು. ಹೀಗೆ ಪಟಾಕಿಯಂತೆ ಬೀಳುತ್ತಿದ್ದ ಬಾಂಬ್ಗಳಿಗೆ ಸಾವಿರಾರು ಮನೆಗಳು ನಾಶವಾಗಿ ಹೋಗಿವೆ. ಲಕ್ಷ ಲಕ್ಷ ಜನರು ಬೀದಿಪಾಲಾಗಿದ್ದಾರೆ. ಹಾಗೇ ಸಾವಿರಾರು ಜನರ ಪ್ರಾಣಪಕ್ಷಿಯೂ ಹಾರಿಹೋಗಿದೆ. ಇಷ್ಟೆಲ್ಲಾ ನಡೆದರೂ ಯುದ್ಧ ನಿಲ್ಲಿಸಲು 2 ತಿಂಗಳು ಬೇಕಾಯಿತು.

ಯುದ್ಧಕ್ಕೆ ಕಾರಣ ಏನು..?
ನಗೊರ್ನೊ-ಕರಬಾಖ್ ಸಾಕಷ್ಟು ಆದಾಯ ತಂದುಕೊಡಬಲ್ಲ ಪ್ರದೇಶಗಳು. 4,400 ಚ.ಕಿ.ಮೀ ವಿಸ್ತೀರ್ಣದ ಭೂಮಿಗೆ ಭಾರಿ ಬೇಡಿಕೆ ಇದೆ. ಹೀಗಾಗಿ ಈ ಪ್ರದೇಶಗಳ ಮೇಲೆ ನಿಯಂತ್ರಣ ಸಾಧಿಸಲು ಎರಡೂ ದೇಶಗಳು ಕಚ್ಚಾಡುತ್ತಿವೆ. ಈ ಹಿಂದೆ ಅಂದರೆ 1994ರಲ್ಲೂ ಇದೇ ವಿಚಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಬಡಿದಾಡಿಕೊಂಡಿದ್ದವು. ನಂತರ ನಡೆದ ಸಂಧಾನದಲ್ಲಿ ತಕ್ಷಣಕ್ಕೆ ಯುದ್ಧ ನಿಂತಿದ್ದರೂ ದಶಕಗಳ ಕಾಲ ಬೂದಿ ಮುಚ್ಚಿದ ಕೆಂಡದಂತೆ ಇತ್ತು ಪರಿಸ್ಥಿತಿ. 2020ರಲ್ಲಿ ಆ ಕೆಂಡ ಮತ್ತೆ ಬೆಂಕಿಯಾಗಿ, ಜ್ವಾಲೆಯ ರೂಪ ಪಡೆದಿತ್ತು. ಎರಡೂ ದೇಶಗಳ ನಾಯಕರ ದುರಾಸೆಗೆ ಹತ್ತಾರು ಸಾವಿರ ಜೀವಗಳು ಬಲಿಯಾಗಿವೆ.
Recommended Video

1994ರಲ್ಲಿ 30 ಸಾವಿರ ಜನರ ಸಾವು
ಸದ್ಯದಮಟ್ಟಿಗೆ ಹೇಳುವುದಾದರೆ ಈಗಿನ ಸಾವು-ನೋವುಗಳು 1990ರ ದಶಕಕ್ಕೆ ಹೋಲಿಕೆ ಮಾಡಿದರೆ ತೀರಾ ಕಡಿಮೆ. ಏಕೆಂದರೆ 1994ರ ಆಸುಪಾಸಿನಲ್ಲಿ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ನಡುವೆ ಹೀಗೆ ಮೆಲ್ಲಗೆ ಯುದ್ಧ ಆರಂಭವಾಗಿ ಸುಮಾರು 30 ಸಾವಿರ ಜನರನ್ನು ಬಲಿಪಡೆದಿತ್ತು. 2020ರಲ್ಲೂ ಆ ಹಿಂಸಾಚಾರ ಮತ್ತೆ ಮರುಕಳಿಸಬಹುದು ಎಂಬ ಆತಂಕಕ್ಕೆ ರಷ್ಯಾ ಬ್ರೇಕ್ ಹಾಕಿದೆ. ಅದೆಷ್ಟು ಹೇಳಿದರೂ ಮಾತು ಕೇಳದ ಎರಡೂ ದೇಶಗಳಿಗೆ ರಷ್ಯಾ ಅಧ್ಯಕ್ಷ ಪುಟಿನ್ ಕಠಿಣ ಸಂದೇಶ ರವಾನಿಸಿದ್ದರು. ಪುಟಿನ್ ಆದೇಶಕ್ಕೆ ಬೆಚ್ಚಿಬಿದ್ದು ಯುದ್ಧ ನಿಲ್ಲಿಸುವ ನಿರ್ಧಾರಕ್ಕೆ ಅರ್ಮೇನಿಯ ಹಾಗೂ ಅಜೆರ್ಬೈಜಾನ್ ಒಪ್ಪಿದ್ದವು.












Click it and Unblock the Notifications