ಮೋದಿಯವರನ್ನು ತಬ್ಬಿದ್ದೇಕೆ? ಜರ್ಮನಿಯಲ್ಲಿ ಕಾರಣ ಹೇಳಿದ ರಾಹುಲ್
ಹಂಬರ್ಗ್, ಆಗಸ್ಟ್ 23: "ನಾನು ಮೋದಿಯವರನ್ನು ಅಂದು ತಬ್ಬಿಕೊಂಡಿದ್ದಕ್ಕೆ ಸಕಾರಣವಿತ್ತು. ಆದರೆ ಅದನ್ನು ಅರ್ಥಮಾಡಿಕೊಳ್ಳದೆ ಅವರು ತಬ್ಬಿಬ್ಬಾದರು ಅಷ್ಟೆ" ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಜರ್ಮನಿ ಮತ್ತು ಇಂಗ್ಲೆಂಡ್ ಪ್ರವಾಸದಲ್ಲಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ಜರ್ಮಿನಿಯ ಹಂಬರ್ಗ್ ನಲ್ಲಿ ಮಾತನಾಡುವ ಸಮಯದಲ್ಲಿ 'ಅಪ್ಪುಗೆ ಪ್ರಹಸನ'ವನ್ನು ನೆನಪಿಸಿಕೊಂಡರು.
ಈ ಬಾರಿ ಮುಂಗಾರು ಅಧಿವೇಶನದ ಅವಿಶ್ವಾಸ ನಿರ್ಣಯದ ಸಮಯದಲ್ಲಿ ಭಾಷಣ ಮುಗಿಸಿದ ರಾಹುಲ್ ಗಾಂಧಿ ಇದ್ದಕ್ಕಿದ್ದಂತೆ ಬಂದು ನರೇಂದ್ರ ಮೋದಿ ಅವರನ್ನು ತಬ್ಬಿಕೊಂಡಿದ್ದರು ಇದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು!
"ನಾನು ಅಂದು ಮೋದಿಯವರನ್ನು ತಬ್ಬಿಕೊಳ್ಳುವುದಕ್ಕೆ ಕಾರಣವಿತ್ತು. ಆದರೆ ಅವರು ಅದರಿಂದ ಬೇಸರಗೊಂಡರು. ತಬ್ಬಿಬ್ಬಾದರು." ಎಂದು ರಾಹುಲ್ ಗಾಂಧಿ ಹೇಳಿದ್ದಾರೆ.
ಅಷ್ಟಕ್ಕೂ ರಾಹುಲ್ ಗಾಂಧಿ ಜರ್ಮನಿಯಲ್ಲಿ ಹೇಳಿದ್ದೇನು, ನೋಡಿ.

ಮೋದಿಯವರನ್ನು ತಬ್ಬಿಕೊಂಡಿದ್ದೇಕೆ?
"ದ್ವೇಷಕ್ಕೆ ದ್ವೇಷದಿಂದಲೇ ಪ್ರತಿಕ್ರಿಯೆ ನೀಡುವುದು ಮೂರ್ಖತನ. ಇದು ಯಾವ ಸಮಸ್ಯೆಯನ್ನೂ ಪರಿಹರಿಸುವುದಿಲ್ಲ. ಆದರೆ ನಮ್ಮಿಂದ ನಿಯಂತ್ರಿಸಲು ಸಾಧ್ಯವಿರುವ ಸಂಗತಿಯೆಂದರೆ, ದ್ವೇಷಕ್ಕೆ ನಾವು ಹೇಗೆ ಪ್ರತಿಕ್ರಿಯೆ ನೀಡುತ್ತೇನೆ ಎಂಬುದು. ಈ ಜಗತ್ತಿನಲ್ಲಿ ಪ್ರೀತಿಸುವವರು ಸಾಕಷ್ಟು ಜನರಿದ್ದಾರೆ. ಪ್ರಧಾನಿ ಮೋದಿ ನನ್ನ ವಿರುದ್ಧ ದ್ವೇಷದ ಮಾತುಗಳನ್ನಾಡಿರಬಹುದು. ಆದರೆ ನಾನು ಅವರಿಗೆ ಪ್ರೀತಿಯನ್ನು ತೋರಿಸಿದೆ ಅಷ್ಟೆ. ಅದು ಅವರಿಗೆ ಇಷ್ಟವಾಗಲಿಲ್ಲ. ಅದು ಅವರಿಗೆ ಬೇಸರವನ್ನುಂಟುಮಾಡಿತು ಅಷ್ಟೆ" - ರಾಹುಲ್ ಗಾಂಧಿ

ರಾಹುಲ್ ಗಾಂಧಿ ಭಾವುಕ ನುಡಿ
"ನಾನು ಹಿಂಸೆಯನ್ನು ಹತ್ತಿರದಿಂದ ನೋಡಿದ್ದೇನೆ, ಅದರ ಪರಿಣಾಮ ಎದುರಿಸಿದ್ದೇನೆ. ನನ್ನ ಕುಟುಂಬದ ಇಬ್ಬರನ್ನು ಈ ಹಿಂಸೆಯಿಂದಲೇ ಕಳೆದುಕೊಂಡಿದ್ದೇನೆ. ಹಿಂಸೆಗೆ ಹಿಂಸೆಯೇ ಉತ್ತರವಲ್ಲ ಎಂಬುದನ್ನು ಈ ಘಟನೆಯ ನಂತರ ಅರ್ಥಮಾಡಿಕೊಂಡಿದ್ದೇನೆ. ಅಹಿಂಸೆಯಿಂದ ಮಾತ್ರವೇ ಹಿಂಸೆಯನ್ನು ಗೆಲ್ಲಲು ಸಾಧ್ಯ ಎಂದು ನಾನು ನಂಬಿದ್ದೇನೆ. ನನ್ನ ತಂದೆಯನ್ನು 1991 ರಲ್ಲಿ ಒಬ್ಬ ಭಯೋತ್ಪಾದಕ ಕೊಂದ. ಆದರೆ ಆ ಭಯೋತ್ಪಾದಕ ಕೆಲ ವರ್ಷದ ನಂತರ ಸತ್ತಾಗ ನನಗೆ ಖುಷಿಯಾಗಲಿಲ್ಲ. ಏಕೆಂದರೆ ಆ ಭಯೋತ್ಪಾದಕನ ಮಕ್ಕಳಲ್ಲಿ ನಾನು ನನ್ನನ್ನು ಕಾಣುತ್ತೇನೆ. ಕ್ಷಮೆ ಮಾತ್ರವೇ ಇವಕ್ಕೆಲ್ಲ ಪರಿಹಾರ ಎಂದು ನನಗನ್ನಿಸುತ್ತದೆ."- ರಾಹುಲ್ ಗಾಂಧಿ

ಮೋದಿ ಮೇಲೆ ಮಾತಿನ ಪ್ರಹಾರ
"ಸಣ್ಣ ಉದ್ಯಮದಲ್ಲಿದ್ದ ಎಷ್ಟೋ ಜನರನ್ನು ಹಳ್ಳಿಗಳಿಗೆ ಬಲವಂತವಾಗಿ ಕಳಿಸಲಾಗುತ್ತಿದೆ. ಕಲ್ಲು ಹೊಡೆದು ಸಾಯಿಸುವ ಕೃತ್ಯಗಳು ಹೆಚ್ಚುತ್ತಿವೆ. ದಲಿತರು, ಅಲ್ಪಸಂಖ್ಯಾತರು, ಬುಡಕಟ್ಟು ಜನರನ್ನು ಉದ್ಧಾರ ಮಾಡುವ ಯಾವ ಯೋಜನೆಯನ್ನೂ ಜಾರಿಗೆ ತರಲಾಗುತ್ತಿಲ್ಲ. ಬಡವರ ಉದ್ಧಾರದ ಹೆಸರಿನಲ್ಲಿ ದೊಡ್ಡ ಉದ್ಯಮಿಗಳಿಗೆ ಹಣ ನೀಡಲಾಗುತ್ತಿದೆ" - ರಾಹುಲ್ ಗಾಂಧಿ

ಪ್ರಗತಿಯ ಪರಿಕಲ್ಪನೆಯನ್ನೇ ನಾಶಮಾಡುತ್ತಿದೆ!
"ಉದ್ಯೋಗ ಖಾತ್ರಿ ಯೋಜನೆ, ಆಹಾರದ ಹಕ್ಕು, ಮಾಹಿತಿ ಹಕ್ಕು, ಬ್ಯಾಂಕುಗಳ ರಾಷ್ಟ್ರೀಕರಣ ಇವೆಲ್ಲವೂ ಪ್ರತಿ ಸರ್ಕಾರದ ಆದ್ಯ ಗುರಿ. ಆದರೆ ಈ ಎಲ್ಲ ಪರಿಕಲ್ಪನೆಗಳನ್ನು ಪ್ರಸ್ತುತ ಸರ್ಕಾರ ನಾಶಗೊಳಿಸುತ್ತಿದೆ" ಎಂದು ರಾಹುಲ್ ಗಾಂಧಿ ಅವರು ಮೋದಿ ಸರ್ಕಾರದ ಮೇಲೆ ಮಾತಿನ ಪ್ರಹಾರ ನಡೆಸಿದರು.












Click it and Unblock the Notifications