ಉಕ್ರೇನ್ ಅಧ್ಯಕ್ಷರಿಗೆ ಪ್ರಧಾನಿ ಮೋದಿ ಅಭಯ!
ನವದೆಹಲಿ: ಪ್ರಧಾನಿ ಮೋದಿ ಮತ್ತು ಉಕ್ರೇನ್ ಅಧ್ಯಕ್ಷ ಝಲೆನ್ಸ್ಕಿ ಮಹತ್ವದ ಮಾತುಕತೆ ನಡೆಸಿದ್ದಾರೆ. ಜಪಾನ್ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಉಕ್ರೇನ್ ಅಧ್ಯಕ್ಷ ವೊಲೊಡಿಯರ್ ಝೆಲೆನ್ಸ್ಕಿ ಭೇಟಿಯಾಗಿ ಚರ್ಚೆ ನಡೆಸಿದ್ರು. ಜಪಾನ್ನ ಹಿರೋಶಿಮಾದಲ್ಲಿ ನಡೆಯುತ್ತಿರುವ ಜಿ7 ಶೃಂಗ ಸಭೆ ವೇಳೆ ಈ ಮಾತುಕತೆ ನಡೆದಿದೆ. ಹಾಗಾದ್ರೆ ಈ ವೇಳೆ ಪ್ರಧಾನಿ ಮೋದಿ ಹೇಳಿದ್ದೇನು? ಮುಂದೆ ತಿಳಿಯಿರಿ.
ಅತ್ತ ರಷ್ಯಾ ಜೊತೆ ಭಾರತ ಉತ್ತಮ ಸಂಬಂಧ ಹೊಂದಿದ್ದು, ಇನ್ನೊಂದ್ಕಡೆ ಉಕ್ರೇನ್ ಕೂಡ ಯುದ್ಧ ನಿಲ್ಲಿಸಿ ಎಂದು ಭಾರತದ ಬಳಿ ಅಂಗಲಾಚಿದೆ. ಇದೇ ಹೊತ್ತಲ್ಲಿ ಪ್ರಧಾನಿ ಮೋದಿ ಮತ್ತು ಉಕ್ರೇನ್ ಅಧ್ಯಕ್ಷರ ಚರ್ಚೆಗೆ ಜಪಾನ್ ವೇದಿಕೆ ಒದಗಿಸಿತ್ತು. ಈ ವೇಳೆ ಪ್ರಧಾನಿ ಮೋದಿ ಯುದ್ಧದ ಬದಲು ಮಾನವೀಯತೆಯ ಪಾಠವನ್ನು ಪ್ರಸ್ತಾಪಿಸಿದ್ದಾರೆ. ಅಲ್ಲದೆ ಪರೋಕ್ಷವಾಗಿ ಯುದ್ಧ ನಿಲ್ಲಿಸಿ ಎಂದು ಮತ್ತೆ ರಷ್ಯಾಗೆ ಪ್ರಧಾನಿ ಮೋದಿ ಮನವಿ ಮಾಡಿದ್ದಾರೆ.

ಉಕ್ರೇನ್ ಪರಿಸ್ಥಿತಿಗೆ ಪಿಎಂ ಮೋದಿ ಕಂಬನಿ
ಉಕ್ರೇನ್ ಯುದ್ಧ ಜಗತ್ತಿಗೆ ದೊಡ್ಡ ಸಮಸ್ಯೆಯಾಗಿದೆ. ಇದು ಪ್ರಪಂಚದ ಮೇಲೆ ಹಲವಾರು ರೀತಿಯಲ್ಲಿ ಪರಿಣಾಮ ಬೀರಿದೆ, ಆದರೆ ನಾನು ಇದನ್ನು ರಾಜಕೀಯ ಅಥವಾ ಆರ್ಥಿಕ ಸಮಸ್ಯೆ ಎಂದು ಪರಿಗಣಿಸುವುದಿಲ್ಲ. ಆದರೆ ಇದು ಮಾನವೀಯತೆ ಹಾಗೂ ಮಾನವೀಯ ಮೌಲ್ಯಗಳ ಸಮಸ್ಯೆಯಾಗಿದೆ. ಯುದ್ಧದ ಸಂಕಟ ನಮಗೆಲ್ಲರಿಗೂ ಚೆನ್ನಾಗಿ ಗೊತ್ತಿದ್ದು, ಕಳೆದ ವರ್ಷ ನಮ್ಮ ದೇಶದ ಪ್ರಜೆಗಳು ಉಕ್ರೇನ್ನಿಂದ ಹಿಂತಿರುಗಿ ಅಲ್ಲಿನ ಪರಿಸ್ಥಿತಿ ಹೇಳಿದಾಗ ನಿಮ್ಮ ಪ್ರಜೆಗಳ ವೇದನೆ ಚೆನ್ನಾಗಿ ಅರ್ಥಮಾಡಿಕೊಂಡೆ ಎಂದಿದ್ದಾರೆ ಪ್ರಧಾನಿ ಮೋದಿ.
ಕೊನೆಗೂ ಬೇಡಿದ ಉಕ್ರೇನ್!
ಪರಿಸ್ಥಿತಿ ಬದಲಾಗಿದೆ, ಒಂದು ಕಾಲದಲ್ಲಿ ಭಾರತದ ವಿರುದ್ಧವೇ ಮಾತನಾಡುತ್ತಿದ್ದ ಉಕ್ರೇನ್ ಈ ಸಂದರ್ಭದಲ್ಲಿ ಭಾರತದ ಬಳಿ ಬೇಡುವ ಸ್ಥಿತಿ ಬಂದಿದೆ. ಇದೀಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಪಿಎಂ ನರೇಂದ್ರ ಮೋದಿ ಜೊತೆ ಉಕ್ರೇನ್ ಅಧ್ಯಕ್ಷ ಝೆಲೆನ್ಸ್ಕಿ ಜಪಾನ್ನಲ್ಲಿ ಚರ್ಚೆ ಕೂಡ ನಡೆಸಿದ್ದಾರೆ. ಶೃಂಗಸಭೆ ಜತೆ ಜಪಾನ್ ಪ್ರಧಾನಿ ಫುಮಿಯೊ ಕಿಶಿದಾ ಸೇರಿದಂತೆ ಜಾಗತಿಕ ನಾಯಕರ ಜೊತೆ ಅವರು ಸರಣಿ ದ್ವಿಪಕ್ಷೀಯ ಸಭೆ ನಡುವೆಯೂ ಪ್ರಧಾನಿ ಮೋದಿ ಅವರು ಉಕ್ರೇನ್ ಅಧ್ಯಕ್ಷರ ಜೊತೆಗೆ ಚರ್ಚೆ ನಡೆಸಿರುವುದು ವಿಶೇಷ.
ಭಾರತದ ಅಗತ್ಯತೆ ಉಕ್ರೇನ್ಗೆ ಮುಖ್ಯ!
ಉಕ್ರೇನ್ ಈಗ ಸಂಕಷ್ಟದಲ್ಲಿ ಇದೆ, ಹೀಗಾಗಿ ಭಾರತದ ಸಹಾಯ ಉಕ್ರೇನ್ಗೆ ಅತ್ಯಗತ್ಯ. ಇದೇ ಕಾರಣಕ್ಕೆ ಈಗ ಭಾರತದ ಬಳಿ ಬೇಡುತ್ತಿದೆ ಉಕ್ರೇನ್ ಎನ್ನುವ ಮಾತುಗಳು ಕೇಳಿಬರುತ್ತಿವೆ. ಮತ್ತೊಂದ್ಕಡೆ ಉಕ್ರೇನ್ ಮೇಲಿನ ದಾಳಿ ನಿಲ್ಲಿಸುವಂತೆ ರಷ್ಯಾಗೆ ಮನವಿ ಮಾಡಿ ಎಂದು ಭಾರತದ ಬಳಿ ಈ ಹಿಂದೆ ಉಕ್ರೇನ್ ಕೇಳಿಕೊಂಡಿತ್ತು. ಇಷ್ಟೆಲ್ಲದರ ನಡುವೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಉಕ್ರೇನ್ ಅಧ್ಯಕ್ಷರು ಭಾರತದ ಪ್ರಧಾನಿ ಜೊತೆ ಮಾತುಕತೆಗೆ ನಡೆಸಿ ಜಗತ್ತಿನ ಗಮನ ಸೆಳೆದಿದ್ದಾರೆ.

ಭೀಕರ ಸ್ವರೂಪದ ಯುದ್ಧ ನಿಂತಿಲ್ಲ
ರಷ್ಯಾ & ಉಕ್ರೇನ್ ವಾರ್ ಶುರುವಾಗಿ 452 ದಿನಗಳೇ ಉರುಳಿದೆ, ಆದ್ರೂ ಯುದ್ಧ ನಿಲ್ಲುತ್ತಿಲ್ಲ. ಬದಲಾಗಿ ಎರಡೂ ದೇಶಗಳ ನಡುವೆ ದ್ವೇಷ ಹೆಚ್ಚಾಗುತ್ತಲೇ ಬಂದಿದೆ. ಹೀಗಾಗಿ ರಷ್ಯಾ & ಉಕ್ರೇನ್ ಯುದ್ಧ (Russia Ukraine War) ಮತ್ತಷ್ಟು ವಿನಾಶಕಾರಿ ಆಗುತ್ತಿದೆ. ಇಷ್ಟುದಿನ ಉಕ್ರೇನ್ ಮೇಲೆ ಬಹುತೇಕ ಹಿಡಿತ ಸಾಧಿಸಿತ್ತು ರಷ್ಯಾ ಸೇನೆ, ಆದರೆ ಅಮೆರಿಕ ತನ್ನ ಬಳಿ ಇರುವ ಅತ್ಯಂತ ವಿನಾಶಕಾರಿ ಅಸ್ತ್ರ ಉಕ್ರೇನ್ಗೆ ಉಡುಗೊರೆ ರೂಪದಲ್ಲಿ ಕೊಟ್ಟಿತ್ತು. ನಂತರ ರಷ್ಯಾಗೆ ಭಾರಿ ತೊಂದರೆ ಆಗುತ್ತಿದೆ. ಈ ಮಧ್ಯೆ ಭಾರತದ ಜೊತೆ ಉಕ್ರೇನ್ ಚರ್ಚೆ ನಡೆಸಿರುವುದು ವಿಶೇಷ.
ಒಟ್ನಲ್ಲಿ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ಇಷ್ಟು ಭೀಕರವಾಗುತ್ತಿರುವ ಸಂದರ್ಭದಲ್ಲೇ ಭಾರತ ಮತ್ತು ಉಕ್ರೇನ್ ನಡುವೆ ವಿಶೇಷ ಚರ್ಚೆ ನಡೆದಿರುವುದು ಸಂಥಿಂಗ್ ಸ್ಪೆಷಲ್. ಹಾಗೇ ಯುದ್ಧ ನಿಲ್ಲಬೇಕು, ಶಾಂತಿಯ ಬಾವುಟ ಹಾರಬೇಕು ಎಂಬ ನಿಲುವನ್ನ ಭಾರತ ಮತ್ತೆ ಮತ್ತೆ ಅಂತಾರಾಷ್ಟ್ರೀಯ ವೇದಿಕೆಗಳಲ್ಲಿ ಪ್ರಸ್ತಾಪಿಸುತ್ತಾ ಬಂದಿರುವುದು ಇನ್ನೊಂದು ವಿಶೇಷ.












Click it and Unblock the Notifications