ಪಾಕಿಸ್ತಾನದೊಂದಿಗೆ ಶಾಂತಿ ಕಾಯ್ದುಕೊಂಡರೆ ಭಾರತಕ್ಕೆ ಲಾಭ: ಇಮ್ರಾನ್ ಖಾನ್
ಇಸ್ಲಾಮಾಬಾದ್, ಮಾರ್ಚ್ 17: ಪಾಕಿಸ್ತಾನದೊಂದಿಗೆ ಶಾಂತಿ ಕಾಯ್ದುಕೊಂಡರೆ ಭಾರತಕ್ಕೆ ಲಾಭ ಹೆಚ್ಚಿದೆ ಎಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಹೇಳಿದ್ದಾರೆ.
ಮಧ್ಯ ಏಷ್ಯಾದ ರಾಷ್ಟ್ರಗಳಾದ ಕಜಕಿಸ್ತಾನ, ಕಿರ್ಗಿಸ್ತಾನ, ತಜಕಿಸ್ತಾನ, ತುರ್ಕಮೆನಿಸ್ತಾನ್ ಹಾಗೂ ಉಜ್ಬೇಕಿಸ್ತಾನಗಳಿಗೆ ಭಾರತವು ಪಾಕಿಸ್ತಾನದ ಮೂಲಕ ನೇರ ಸಂಪರ್ಕ ಸಾಧಿಸಿದರೆ ಭಾರತಕ್ಕೆ ಆರ್ಥಿಕ ಲಾಭವಾಗಲಿದೆ. ಯಾಕೆಂದರೆ ಇವೆಲ್ಲವೂ ತೈಲ ಮತ್ತು ಅನಿಲ ಸಂಪನ್ಮೂಲದಲ್ಲಿ ಶ್ರೀಮಂತವಾಗಿರುವ ದೇಶಗಳಾಗಿವೆ ಎಂದಿದ್ದಾರೆ.
2018ರಲ್ಲಿ ಅಧಿಕಾರಕ್ಕೆ ಬಂದ ನಂತರ ತಮ್ಮ ಸರ್ಕಾರವು ಭಾರತದೊಂದಿಗೆ ಉತ್ತಮ ಸಂಬಂಧ ಸ್ಥಾಪಿಸಲು ಎಲ್ಲಾ ಪ್ರಯತ್ನಗಳನ್ನು ಮಾಡಿದೆ. ಭಾರತವೂ ಕೂಡ ಎಲ್ಲಾ ರೀತಿಯಲ್ಲಿ ಸಹಕರಿಸಿದೆ ಎಂದು ಹೇಳಿದರು.

ದ್ವೇಷ, ಭಯೋತ್ಪಾದನೆ, ಹಿಂಸಾಚಾರ ಮುಕ್ತ ವಾತಾವರಣದ ಸಂಬಂಧವನ್ನು ಪಾಕಿಸ್ತಾನದೊಂದಿಗೆ ಬಯಸುತ್ತೇವೆ, ಭಯೋತ್ಪಾದನೆ ಹಾಗೂ ಹಗೆತನವಿಲ್ಲದ ವಾತಾವರಣವನ್ನು ಸೃಷ್ಟಿಸುವುದು ಪಾಕಿಸ್ತಾನದ ಕೈಯಲ್ಲಿದೆ ಎಂದು ಭಾರತ ಹೇಳಿತ್ತು.
ಬಗೆಹರಿಯದ ಕಾಶ್ಮೀರ ವಿಷಯವು ಎರಡು ದೇಶಗಳ ನಡುವಿನ ಶಾಂತಿಗೆ ಅಡ್ಡಿಯಾಗಿದೆ. ವಿಶ್ವಸಂಸ್ಥೆಯ ನಿರ್ಣಯಗಳ ಅಡಿಯಲ್ಲಿ ಭಾರತವು ಕಾಶ್ಮೀರಿಗಳಿಗೆ ತಮ್ಮ ಹಕ್ಕನ್ನು ನೀಡಿದರೆ, ಅದು ಪಾಕಿಸ್ತಾನಕ್ಕೆ ಮಾತ್ರವಲ್ಲದೆ ಭಾರತಕ್ಕೂ ಹೆಚ್ಚು ಪ್ರಯೋಜನಕಾರಿಯಾಗಲಿದೆ. ಗಡಿಯಲ್ಲಿ ಶಾಂತಿ ನೆಲೆಸಿದ ಬಳಿಕ ಭಾರತ ಮಧ್ಯ ಏಷ್ಯಾಗೆ ಕಾಲಿಡಬಹುದಾಗಿದೆ.
ಭಾರತವು ಎಲ್ಲದಕ್ಕೂ ಮೊದಲು ಹೆಜ್ಜೆ ಇಡಬೇಕಾಗುತ್ತದೆ, ಭಾರತ ಹಾಗೆ ಮಾಡದಿದ್ದರೆ, ನಾವು ಹೆಚ್ಚಿನದನ್ನು ಮಾಡಲು ಸಾಧ್ಯವಿಲ್ಲ ಎಂದು ಇಮ್ರಾನ್ ಹೇಳಿದ್ದಾರೆ.












Click it and Unblock the Notifications