ಸುಡುವ ಸೂರ್ಯನ ಅಂಗಳಕ್ಕೆ ನಾಸಾದ ಪಾರ್ಕರ್
ಬೆಂಗಳೂರು, ಆಗಸ್ಟ್ 8: ಸೂರ್ಯನ ಅತಿ ಸಮೀಪಕ್ಕೆ ತಲುಪುವ ಐತಿಹಾಸಿಕ ಪಾರ್ಕರ್ ಸೋಲಾರ್ ಪ್ರೋಬ್ ಯೋಜನೆಗೆ ನಾಸಾ ಚಾಲನೆ ನೀಡಿದೆ.
ಸದಾ ಸುಡುವ ಸೂರ್ಯನನ್ನು ಮುಟ್ಟುವುದು ಸಾಧ್ಯವೇ? ಮುಟ್ಟುವುದಿರಲಿ, ದೂರದಿಂದಲೂ ಆತನನ್ನು ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಬಾಹ್ಯಾಕಾಶ ಸಂಸ್ಥೆ ನಾಸಾ ಮಾತ್ರ ತನ್ನ ಪ್ರಯತ್ನ ನಿಲ್ಲಿಸಿಲ್ಲ. ಈ ನಿಟ್ಟಿನಲ್ಲಿ ಪಾರ್ಕರ್ ಸೋಲಾರ್ ಪ್ರೋಬ್ ಅತಿ ಮಹತ್ವ ಪಡೆದುಕೊಂಡಿದೆ.
ಇದೇ ಮೊದಲ ಬಾರಿಗೆ ಹಿಂದೆಂದಿಗಿಂತಲೂ ಸೂರ್ಯನ ಅತಿ ಸಮೀಪಕ್ಕೆ ರೋಬೋಟಿಕ್ ನೌಕೆ ಹಾರಲಿದೆ. ಈ ಶನಿವಾರ (ಆಗಸ್ಟ್ 11) ಅದು ತನ್ನ ಗುರಿ ತಲುಪುವ ನಿರೀಕ್ಷೆಯಿದೆ.
ಯಾವಾಗಲೂ ಹೊತ್ತಿ ಉರಿಯುವ ಸೂರ್ಯನ ಒಡಲಿನಲ್ಲಿ ಏನಿದೆ ಎಂಬ ಕುತೂಹಲ ಎಲ್ಲರಿಗೂ ಇದೆ. ಹಾಗೆಂದು ಅದನ್ನು ಪತ್ತೆಹಚ್ಚುವುದು ಸುಲಭವಲ್ಲ. ಆದರೆ, ಬಾಹ್ಯಾಕಾಶದ ಕೌತುಕಗಳನ್ನು ಹೊರಗೆಡವಿ ಅಚ್ಚರಿ ನೀಡುವುದರಲ್ಲಿ ಮುಂಚೂಣಿಯಲ್ಲಿರುವ ನಾಸಾ, ಸೂರ್ಯನ ಅಂಗಳದ ಸಮೀಪ ಹೋಗುವ ಸಾಹಸ ಮಾಡುತ್ತಿದೆ.

ಸೂರ್ಯನಿಗೆ ಅತಿ ಸಮೀಪ
ಸೂರ್ಯನಿಂದ 3.9 ಮಿಲಿಯನ್ ಮೈಲು ದೂರದಲ್ಲಿ ಈ ನೌಕೆ ಹಾರಾಟ ನಡೆಸಲಿದೆ. ಲೆಕ್ಕಾಚಾರದಲ್ಲಿ ಇದು ಬಹು ದೂರವಾದರೂ, ಇಡೀ ಜಗತ್ತಿಗೆ ಬೆಳಕು ಚೆಲ್ಲುವ ಸೂರ್ಯನಿಗೆ ಇಷ್ಟು ಹತ್ತಿರ ಹೋಗುತ್ತಿರುವುದು ಇದೇ ಮೊದಲು.
ಸೂರ್ಯನ ಪ್ರಖರ ಬಿಸಿಲಿಗೆ ಮಧ್ಯಾಹ್ನ ಮೈಯೊಡ್ಡುವಾಗ ಹೇಗೆನ್ನಿಸುತ್ತದೆ? 93 ಮಿಲಿಯನ್ ಮೈಲುಗೂ ದೂರದಲ್ಲಿನ ಸೂರ್ಯನ ಕಿರಣಗಳು ನಮ್ಮ ದೇಹವನ್ನು ದಹಿಸುವಂತೆ ಸುಡುವಾಗ ಈ ಅಂತರ ಕಡಿಮೆಯೇನಲ್ಲ. ಸೂರ್ಯನಿಂದ ನಾಲ್ಕು ಮಿಲಿಯನ್ ಕಿ.ಮೀ. ಗಿಂತಲೂ ಕಡಿಮೆ ಅಂತರದಲ್ಲಿನ ಉಷ್ಣಾಂಶದಲ್ಲಿ ಉಕ್ಕನ್ನು ಇರಿಸಿದರೂ ಕರಗಿ ಹೋಗುತ್ತದೆ.

ಸೂರ್ಯನ ಕುರಿತ ಅಧ್ಯಯನ
ಇಷ್ಟು ದಶಕಗಳಿಂದ ಪ್ರಯತ್ನ ನಡೆಸುತ್ತಿದ್ದರೂ ಸೂರ್ಯನ ಒಡಲಿನಲ್ಲಿ ಏನಿದೆ, ಅದರ ಶಕ್ತಿ ಹೇಗೆಲ್ಲ ಹುಟ್ಟುತ್ತದೆ, ಅದರ ಬೆಳಕಿನ ಮೂಲ ಮುಂತಾದ ಅನೇಕ ಸಂದೇಹಗಳ ಕುರಿತು ಒಂದು ತಾರ್ಕಿಕ ತೀರ್ಮಾನ ತೆಗೆದುಕೊಳ್ಳುವುದು ಇದುವರೆಗೂ ಸಾಧ್ಯವಾಗಿಲ್ಲ.
ಬೇರೆ ಬೇರೆ ಗ್ರಹಗಳು ನಮಗೆ ಹೇಗೆ ಅಚ್ಚರಿ ಮತ್ತು ವಿಸ್ಮಯ ಮೂಡಿಸುತ್ತವೆಯೋ, ಅದಕ್ಕಿಂತಲೂ ಹೆಚ್ಚಿನ ಕುತೂಹಲ ಸೂರ್ಯನ ಕುರಿತಾಗಿದೆ. ಏಕೆಂದರೆ ಈ ಗ್ರಹಗಳು, ಸಣ್ಣಪುಟ್ಟ ನಕ್ಷತ್ರಗಳು ಒಂದು ಮಟ್ಟದ ಅಧ್ಯಯನಕ್ಕಾದರೂ ನಮ್ಮ ನೌಕೆಗಳು, ಉಪಗ್ರಹಗಳ ಕಣ್ಣಿಗೆ ಬಿದ್ದಿವೆ. ಆದರೆ, ಸೂರ್ಯನನ್ನು ಬಾಹ್ಯಾಕಾಶದ ಉಳಿದ ವಿಸ್ಮಯಗಳಷ್ಟು ಸಲೀಸಾಗಿ ಅಧ್ಯಯನ ಮಾಡುವುದು ಸಾಧ್ಯವಿಲ್ಲ.

ಪಾರ್ಕರ್ ಸೋಲಾರ್ ಪ್ರೋಬ್
ಸವಾಲುಗಳು ದೊಡ್ಡದಿದ್ದರೂ ನಾಸಾ ಸೋಲು ಒಪ್ಪಿಕೊಂಡಿಲ್ಲ. ಅದರ ಸತತ ಪ್ರಯತ್ನದ ಫಲವಾಗಿ ಪಾರ್ಕರ್ ಸೋಲಾರ್ ಪ್ರೋಬ್ ನೌಕೆ ಸೂರ್ಯನ ಅತಿ ಸಮೀಪದಲ್ಲಿ ಹಾರಲಿದೆ.
ಹೆಚ್ಚೂ ಕಡಿಮೆ ಸೂರ್ಯನ ಪ್ರಭಾವಲಯದಲ್ಲಿ (ಕರೋನಾ) ಪಾರ್ಕರ್ ಹಾರಾಟ ನಡೆಸಲಿದೆ. ಸೌರ ವಾಯುವಿನ ಹುಟ್ಟು ಮತ್ತು ಬೆಳವಣಿಗೆಯ ಕುರಿತು ಇನ್ನಷ್ಟು ಮಾಹಿತಿ ಒದಗಿಸಲಿದೆ. ಅಲ್ಲದೆ, ಭೂಮಿಯ ವಾಯುಮಂಡಲದ ವಾತಾವರಣದಲ್ಲಿನ ಬದಲಾವಣೆಗಳನ್ನು ಹೆಚ್ಚು ನಿಖರವಾಗಿ ತೆಗೆದುಕೊಳ್ಳಲು ನೆರವು ನೀಡಲಿದೆ.
ತೀವ್ರ ತಾಪಮಾನದ ಹಾಗೂ ಸೌರ ವಿಕಿರಣಗಳ ಸೂರ್ಯನ ಅಪಾಯಕಾರಿ ಭಾಗದ ಕುರಿತ ವೈಜ್ಞಾನಿಕ ಅಧ್ಯಯನ ನಡೆಸಲಿದೆ. ಸಬ್ಸಾನಿಕ್ ನಿಂದ ಸೂಪರ್ಸಾನಿಕ್ ವೇಗ ಪಡೆದುಕೊಳ್ಳುವ ಸೌರ ವಾಯುವನ್ನು ವೀಕ್ಷಿಸುವಷ್ಟು ಸೂರ್ಯನ ಹತ್ತಿರ ಅದು ತೆರಳಲಿದೆ.

ಪಾರ್ಕರ್ ಹೆಸರು ಏಕೆ?
ಅಮೆರಿಕದ ಭೌತಶಾಸ್ತ್ರಜ್ಞ ಯೂಜಿನ್ ಪಾರ್ಕರ್ ಅವರ ಗೌರವಾರ್ಥ ಈ ಯೋಜನೆಗೆ ಅವರ ಹೆಸರು ಇರಿಸಲಾಗಿದೆ. 1958ರಲ್ಲಿ ಸೌರ ವಾಯುವಿನ ಗುಣದ ಬಗ್ಗೆ ಮೊಟ್ಟ ಮೊದಲ ಬಾರಿಗೆ ಊಹೆ ಮಾಡಿದವರು ಪಾರ್ಕರ್. ಇದೇ ಮೊದಲ ಬಾರಿಗೆ ನಾಸಾ ಬದುಕಿರುವ ವ್ಯಕ್ತಿಯ ಹೆಸರನ್ನು ತನ್ನ ಯೋಜನೆಯೊಂದಕ್ಕೆ ಇರಿಸಿದೆ.

ಈ ನೌಕೆ ಕರಗುವುದಿಲ್ಲ
ಸೂರ್ಯನ ಶಾಖಕ್ಕೆ ಕರಗಿ ಹೋಗದಂತೆ 4.5 ಇಂಚು ದಪ್ಪನೆಯ ಕಾರ್ಬಲ್ ಕಾಂಪೋಸಿಟ್ ಶೀಲ್ಡ್ನಿಂದ ಈ ನೌಕೆ ಮತ್ತು ಉಪಕರಣಗಳನ್ನು ತಯಾರಿಸಲಾಗಿದೆ. 2,500 ಫ್ಯಾರನ್ ಹೀಟ್ವರೆಗೂ ಇದು ಶಾಖವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. 60 ವರ್ಷಗಳಿಂದಲೂ ವಿಜ್ಞಾನಿಗಳು ಸೌರ ವಾಯುವಿನ ಆಂತರ್ಯವನ್ನು ಅರಿಯುವ ಪ್ರಯತ್ನಗಳನ್ನು ನಡೆಸಿದ್ದಾರೆ. ಆದರೆ, ಇದುವರೆಗೂ ಅದು ಸಾಧ್ಯವಾಗಿಲ್ಲ.

ಅಧ್ಯಯನ ಮಾಡುವುದು ಏನು?
ನಾವು ಸಮೀಪದಿಂದ ಅಧ್ಯಯನ ಮಾಡಲು ಸಾಧ್ಯವಿರುವ ನಕ್ಷತ್ರವೆಂದರೆ ಸೂರ್ಯ ಮಾತ್ರ. ನಾವು ವಾಸಿಸುವ ನಕ್ಷತ್ರವನ್ನು ಅಧ್ಯಯನ ಮಾಡುವುದರಿಂದ ಬಾಹ್ಯಾಕಾಶದಲ್ಲಿನ ಉಳಿದ ನಕ್ಷತ್ರಗಳ ಕುರಿತು ಸಹ ಹೆಚ್ಚು ಅರಿತುಕೊಳ್ಳಬಹುದು.
ಭೂಮಿಯ ಬೆಳಕು ಮತ್ತು ಶಾಖದ ಮೂಲವೇ ಸೂರ್ಯ. ಅದರ ಬಗ್ಗೆ ನಾವು ಹೆಚ್ಚು ತಿಳಿದಷ್ಟೂ ಭೂಮಿಯಲ್ಲಿ ಜೀವಿಗಳು ಹೇಗೆ ಸೃಷ್ಟಿಯಾದವು ಎಂಬುದನ್ನು ಅರಿತುಕೊಳ್ಳಲು ಸಾಧ್ಯ.

ಸೌರ ವಾಯುವಿನ ಅಧ್ಯಯನ
ನಮಗೆ ಹೆಚ್ಚಾಗಿ ತಿಳಿದಿರದ ರೀತಿಗಳಲ್ಲಿ ಸೂರ್ಯ ಕೂಡ ಭೂಮಿಗೆ ಹಾನಿ ಉಂಟುಮಾಡುತ್ತಿರುತ್ತಾನೆ. ಅದರ ಮೂಲ ಸೌರ ವಾಯು. ಸೂರ್ಯನಿಂದ ಬರುವ ಅಯೋನೈಸ್ಡ್ ಅನಿಲಗಳ ಹರಿವು ಪ್ರತಿ ಸೆಕೆಂಡ್ಗೆ 500 ಕಿ.ಮೀಗೂ ವೇಗವಾಗಿ ಭೂಮಿಗೆ ತಲುಪುತ್ತವೆ.

ಉಪಗ್ರಹಗಳ ರಕ್ಷಣೆ
ಬಾಹ್ಯಾಕಾಶದ ಹವಾಮಾನವು ಉಪಗ್ರಹಗಳ ಕಕ್ಷೆಯನ್ನು ಬದಲಿಸಬಹುದು, ಅವುಗಳ ಆಯಸ್ಸನ್ನು ಕಡಿಮೆ ಮಾಡಬಹುದು ಅಥವಾ ಅದರಲ್ಲಿನ ವಿದ್ಯುತ್ಕಾಂತೀಯ ಶಕ್ತಿಗಳ ಮೇಲೆ ಪ್ರಭಾವ ಬೀರಬಹುದು. ಬಾಹ್ಯಾಕಾಶದ ಹವಾಮಾನಕ್ಕೆ ಕಾರಣವಾಗುವ ಬಗ್ಗೆ ನಾವು ಹೆಚ್ಚು ತಿಳಿದಷ್ಟೂ, ನಾವು ನಮ್ಮ ಉಪಗ್ರಹಗಳನ್ನು ಕಾಪಾಡಿಕೊಳ್ಳಲು ಸಾಧ್ಯ.
-
Horoscope March 10: ಈ ರಾಶಿಯವರಿಗೆ ಹಣಕಾಸಿನಲ್ಲಿ ಲಾಭ, ಯಾರಿಗೆ ಶುಭ-ಅಶುಭ, ದಿನ ಭವಿಷ್ಯ -
ಫೈನಲ್ನಲ್ಲಿ ಶಿವಂ ದುಬೆ ಬ್ಯಾಟ್ ಬಳಸಿದ ಬಗ್ಗೆ ರಹಸ್ಯ ಬಿಚ್ಚಿಟ್ಟ ಅಭಿಷೇಕ್ ಶರ್ಮಾ -
New Rent Rules 2026: ಬಾಡಿಗೆದಾರರಿಗೆ ಗುಡ್ನ್ಯೂಸ್: ಆಸ್ತಿದಾರರಿಗೆ ಸಂಕಷ್ಟ, ಹೊಸ ಕಾನೂನಿನ 5 ಪ್ರಮುಖ ಅಂಶಗಳು -
Suryakumar Yadav: ಟಿ20 ವಿಶ್ವಕಪ್ ಗೆದ್ದರೂ ಸೂರ್ಯಕುಮಾರ್ಗೆ ಐಸಿಸಿ ಆಘಾತ, ನಾಯಕತ್ವ ಬದಲಾವಣೆ ನಿರೀಕ್ಷೆ -
LPG Cylinder Booking: ಎಲ್ಪಿಜಿ ಸಿಲಿಂಡರ್ ಬುಕಿಂಗ್ನಲ್ಲಿ ಮಹತ್ವದ ಬದಲಾವಣೆ: ಕೇಂದ್ರ ಸರ್ಕಾರದಿಂದ ಹೊಸ ನಿಯಮ ಜಾರಿ -
Petrol Price Hike: ಗ್ಯಾಸ್ ಸಿಲಿಂಡರ್ ನಂತರ ಪೆಟ್ರೋಲ್ - ಡೀಸೆಲ್ ಬೆಲೆ 20 - 22 ರೂ. ಹೆಚ್ಚಳ ಸಾಧ್ಯತೆ, ಬೆಂಗಳೂರಲ್ಲಿ ಎಷ್ಟಿದೆ -
Vande Bharat Express: ಬೆಂಗಳೂರು, ಹುಬ್ಬಳ್ಳಿ, ಧಾರವಾಡ, ಪುಣೆ ವಂದೇ ಭಾರತ್ ರೈಲುಗಳ ಸಮಯ ಬದಲಾವಣೆ -
Kannada: ಸರ್ಕಾರದ ಈ ಕ್ರಮ ನಿಮ್ಮ ತಾಯಿಯನ್ನು ಕೈಬಿಟ್ಟು, ಬೇರೆಯ ತಾಯಿಯನ್ನು ತಾಯಿ ಎಂದಂತೆ: ನಾರಾಯಣಗೌಡ -
ಬೆಂಗಳೂರಿಗೆ ಇರಾನ್ ಯುದ್ಧದ ಬಿಸಿ: ಇದು ಹೋಟೆಲ್ ಬಂದ್ ಅಲ್ಲ, ನಮ್ಮ ಅಸಹಾಯಕತೆ ಎಂದ ಮಾಲೀಕರು -
ಉಚಿತ ಸೌಲಭ್ಯ ನೀಡಿದರೂ ಸರ್ಕಾರಿ ಶಾಲೆಗಳತ್ತ ಮುಖ ಮಾಡದ ಮಕ್ಕಳು: 3 ವರ್ಷಗಳಲ್ಲಿ ಶೇ.11.20ರಷ್ಟು ದಾಖಲಾತಿ ಕುಸಿತ -
"ನಿನಗೆ ಒಂದು ತಿಂಗಳು, ನನಗೆ ಎರಡು ವರ್ಷ": ಇಶಾನ್ ಕಿಶನ್-ಅಭಿಷೇಕ್ ಶರ್ಮಾ ನಡುವೆ ಜಟಾಪಟಿ -
ತಿರುಮಲಕ್ಕೆ ಹೋಗುತ್ತಿದ್ದ ತುಪ್ಪದ ಟ್ಯಾಂಕರ್ ಪಲ್ಟಿ: ತುಪ್ಪಕ್ಕಾಗಿ ಬಕೆಟ್ ಹಿಡಿದು ಬಂದ ಜನ, ವಿಡಿಯೋ Viral












Click it and Unblock the Notifications