ಭಾರತದ ನಡೆಯಿಂದ ಆಘಾತ: ಪಾಕ್ ಸೇನಾ ಮುಖ್ಯಸ್ಥರಿಂದ ತುರ್ತು ಸಭೆ
ಇಸ್ಲಾಮಾಬಾದ್, ಆಗಸ್ಟ್ 05: ಸಂವಿಧಾನದ 370 ನೇ ವಿಧಿಯನ್ನು ರದ್ದು ಮಾಡುವ ಭಾರತದ ನಿರ್ಧಾರ ಪಾಕಿಸ್ತಾನಕ್ಕೆ ನಡುಕ ಹುಟ್ಟಿಸಿದ್ದು, ಮಂಗಳವಾರದಂದು ಪಾಕಿಸ್ತಾನದ ಸೇನಾ ಮುಖ್ಯಸ್ಥರ ತುರ್ತು ಸಭೆ ನಡೆಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಈಗಾಗಲೇ ಪಾಕ್ ಸೇನಾ ಮುಖಂಡ ಜನರಲ್ ಖಾಮರ್ ಜಾವೇಸ್ ಬಾಜ್ವಾ ಸೇನಾ ಕಮಾಂಡರ್ ಗಳಿಗೆ ಸೂಚನೆ ನೀಡಿದ್ದು, ಜಮ್ಮು-ಕಾಶ್ಮೀರ ವಿಷಯದ ಬಗ್ಗೆ ಚರ್ಚಿಸಲು ಮಂಗಳವಾರ ಎಲ್ಲರೂ ಸಭೆಗೆ ಹಾಜರಾಗುವಂತೆ ಸೂಚಿಸಿದ್ದಾರೆ.
370 ನೇ ವಿಧಿ ರದ್ದು: ತಕ್ಕ ಉತ್ತರ ನೀಡಲು ಸಿದ್ಧ ಎಂದ ಪಾಕಿಸ್ತಾನ
ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಭಾರತ ಏಕಪಕ್ಷೀಯ ನಿರ್ಧಾರ ಕೈಗೊಳ್ಳುವುದಕ್ಕೆ ಸಾಧ್ಯವಿಲ್ಲ. ವಿಶ್ವಸಂಸ್ಥೆಯ ಭದ್ರತಾ ಸಭೆಯ ನಿರ್ಣಯಗಳನ್ನು ಧಿಕ್ಕರಿಸಿದಂತಾಗುತ್ತದೆ. ಆದ್ದರಿಂದ ಪಾಕಿಸ್ತಾನ ಯಾವೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೋ ಅದನ್ನು ಕೈಗೊಳ್ಳುತ್ತದೆ ಎಂದು ಪಾಕ್ ಸರ್ಕಾರದ ಪ್ರಕಟಣೆಯೊಂದರಲ್ಲಿ ಹೇಳಲಾಗಿದೆ.
ಅಚ್ಚರಿ ಎಂದರೆ ಇದುವರೆಗೂ ಪಾಕ್ ಪ್ರಧಾನಿ ಇಮ್ರಾನ್ ಖಾನ್ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದರೆ ಪಾಕಿಸ್ತಾನದಾದ್ಯಂತ ಈಗಾಗಲೇ ಭಾರತದ ನಡೆಯ ಕುರಿತು ವಿರೋಧ ವ್ಯಕ್ತವಾಗಿದ್ದು, ಪಾಕ್ ಮಾಧ್ಯಮಗಳು ಬಹಿರಂಗವಾಗಿಯೇ ಭಾರತದ ನಡೆಯನ್ನು ಖಂಡಿಸಿವೆ.
"ಕಾಶ್ಮೀರಿಗಳ ಹಕ್ಕನ್ನು ಭಾರತ ಕಸಿಯುತ್ತಿದೆ" ಎಂದು ದೂರಿರುವ ಪಾಕಿಸ್ತಾನ, ಅಗತ್ಯ ಬಂದರೆ ತಾನು ತಕ್ಕ ಉತ್ತರ ನೀಡುತ್ತೇನೆ ಎಂದಿದೆ.