ನಾಜಿ ಸಿದ್ಧಾಂತದ ಜತೆಗೆ ಆರೆಸ್ಸೆಸ್ ನ ಹೋಲಿಕೆ ಮಾಡಿದ ಇಮ್ರಾನ್ ಖಾನ್
ಇಸ್ಲಾಮಾಬಾದ್, ಆಗಸ್ಟ್ 11: ಜಮ್ಮು- ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡಿದ ಭಾರತ ಸರಕಾರದ ಕ್ರಮವನ್ನು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಭಾನುವಾರ ಮತ್ತೆ ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕಾಶ್ಮೀರದಲ್ಲಿನ ಕರ್ಫ್ಯೂ, ಸೇನಾ ಕಾರ್ಯಾಚರಣೆ ಇವೆಲ್ಲ ಆಗುತ್ತಿರುವುದು ನಾಜಿ ಸಿದ್ಧಾಂತದಿಂದ ಸ್ಫೂರ್ತಿಗೊಂಡಿರುವ ಆರೆಸ್ಸೆಸ್ ಸಿದ್ಧಾಂತದಿಂದ ಎಂದು ಆರೋಪಿಸಿದ್ದಾರೆ.
ಜನಾಂಗವೊಂದನ್ನು ಇಲ್ಲವಾಗಿಸುವ ಮೂಲಕ ಕಾಶ್ಮೀರದ ಭೂಗೋಳವನ್ನೇ ಬದಲಿಸುವ ಪ್ರಯತ್ನ ನಡೆಯುತ್ತಿದೆ. ಇಡೀ ಜಗತ್ತು ಇದನ್ನು ಗಮನಿಸುತ್ತಿದೆ ಹಾಗೂ ಹಿಟ್ಲರ್ ಮ್ಯೂನಿಚ್ ನಲ್ಲಿ ಮಾಡಿದಂತೆ ಇವರು ಮಾಡುತ್ತಿದ್ದಾರಾ? ಎಂದು ಇಮ್ರಾನ್ ಖಾನ್ ಪ್ರಶ್ನೆ ಮಾಡಿದ್ದಾರೆ.
"ಪುಲ್ವಾಮಾ ದಾಳಿಯಲ್ಲಿ ಪಾಕಿಸ್ತಾನದ ಕೈವಾಡ ಸಾಬೀತುಪಡಿಸಿದ ಇಮ್ರಾನ್ ಖಾನ್!"
ಹಿಂದೂಗಳೇ ಶ್ರೇಷ್ಠರು ಎಂಬ ಆರೆಸ್ಸೆಸ್ ಸಿದ್ಧಾಂತವು ಜರ್ಮನಿಯಲ್ಲಿ ನಾಜಿಗಳಿಗಿದ್ದ ಭಾವನೆಯಂಥದ್ದು. ಇದು ಕಾಶ್ಮೀರದಲ್ಲಿ ನಿಲ್ಲುವುದಿಲ್ಲ. ಇದರಿಂದ ಭಾರತದಲ್ಲಿ ಮುಸ್ಲಿಮರ ದಮನ ಮಾಡಲಾಗುತ್ತದೆ. ಅದು ಕೂಡ ಪಾಕಿಸ್ತಾನವನ್ನು ಗುರಿ ಮಾಡಿಕೊಂಡು ಹೀಗೆ ಮಾಡಲಾಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ಆರ್ಟಿಕಲ್ 370 ರದ್ದು: ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ 'ಏಕಾಂಗಿ'
ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಉದ್ವಿಗ್ನ ಪರಿಸ್ಥಿತಿ ಉಲ್ಬಣವಾಗಿದ್ದು, ಭಾರತದ ಜತೆಗೆ ದ್ವಿಪಕ್ಷೀಯ ಸಂಬಂಧವನ್ನು ಪಾಕಿಸ್ತಾನ ಕಡಿತಗೊಳಿಸಿದೆ. ದ್ವಿಪಕ್ಷೀಯ ವ್ಯಾಪಾರ- ವ್ಯವಹಾರಗಳನ್ನು ಅಮಾನತು ಮಾಡಿದೆ. ಸಂಝೌತ ಹಾಗೂ ಥಾರ್ ಎಕ್ಸ್ ಪ್ರೆಸ್ ರೈಲುಗಳನ್ನು ಪಾಕಿಸ್ತಾನ ಕಡೆಯಿಂದ ನಿಲ್ಲಿಸಲಾಗಿದೆ ಹಾಗೂ ಭಾರತೀಯ ಸಿನಿಮಾಗಳನ್ನು ಪಾಕ್ ನಲ್ಲಿ ನಿಷೇಧಿಸಲಾಗಿದೆ.