ಅಸ್ಥಿರ ನಾಯಕತ್ವದಲ್ಲಿ ಭಾರತ ಅವನತಿಯತ್ತ: ಹಿಜಾಬ್ ಕುರಿತು ಪಾಕಿಸ್ತಾನ ಸಚಿವರ ಮಾತು
ಇಸ್ಲಮಾಬಾದ್, ಫೆಬ್ರವರಿ 10: ಕರ್ನಾಟಕದಲ್ಲಿ ಹುಟ್ಟಿಕೊಂಡಿರುವ ಹಿಜಾಬ್ ವಿವಾದದ ಬೆಂಕಿ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲೂ ಸುದ್ದಿ ಆಗುತ್ತಿದೆ. ಹಿಜಾಬ್ ಕುರಿತು ಈಗ ಪಾಕಿಸ್ತಾನದ ಸಚಿವರೂ ಸಹ ಮಾತನಾಡುತ್ತಿದ್ದಾರೆ.
''ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದಿಂದ ವಂಚಿತರಾಗಿರುವುದು ಮೂಲಭೂತ ಮಾನವ ಹಕ್ಕುಗಳ ಘೋರ ಉಲ್ಲಂಘನೆಯಾಗಿದೆ. ಯಾರಿಗಾದರೂ ಈ ಮೂಲಭೂತ ಹಕ್ಕನ್ನು ನಿರಾಕರಿಸುವುದು ಮತ್ತು ಹಿಜಾಬ್ ಧರಿಸಿದ್ದಕ್ಕಾಗಿ ಅವರಿಗೆ ಬೆದರಿಕೆ ಹಾಕುತ್ತಿರುವುದು ಸಂಪೂರ್ಣ ದಬ್ಬಾಳಿಕೆಯಾಗಿದೆ. ಮುಸ್ಲಿಂಮರ ವಿರುದ್ಧ ಭಾರತದ ಈ ಯೋಜನೆ ಬಗ್ಗೆ ಜಗತ್ತು ತಿಳಿಯಬೇಕಿದೆ," ಪಾಕಿಸ್ತಾನದ ವಿದೇಶಾಂಗ ಸಚಿವ ಮೊಹಮ್ಮದ್ ಖುರೇಷಿ ಹೇಳಿದ್ದಾರೆ.
ಹಿಜಾಬ್ ವಿವಾದ: ವಿಚಾರಣೆಗೆ ಮೂವರು ನ್ಯಾಯಮೂರ್ತಿಗಳ ಪೀಠ ರಚನೆ
"ಅಸ್ಥಿರ ನಾಯಕತ್ವದಲ್ಲಿ ಭಾರತೀಯ ಸಮಾಜವು ಅತಿ ವೇಗದಲ್ಲಿ ಅವನತಿಯತ್ತ ಸಾಗುತ್ತಿದೆ. ದೇಶದಲ್ಲಿ ಇತರೆ ಉಡುಗೆ ತೊಡಲು ನಾಗರಿಕರಿಗೆ ಸ್ವತಂತ್ರವಿದೆ. ಅದೇ ರೀತಿ ಹಿಜಾಬ್ ಧರಿಸುವುದು ಅವರ ವೈಯಕ್ತಿಕ ಆಯ್ಕೆ ಆಗಿರುತ್ತದೆ," ಎಂದು ಪಾಕಿಸ್ತಾನದ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಫವಾದ್ ಹುಸೇನ್ ಹೇಳಿದ್ದಾರೆ.
ರಾಷ್ಟ್ರಮಟ್ಟದಲ್ಲಿಯೂ ಹಿಜಾಬ್ ವಿವಾದ ಚರ್ಚೆ:
ಕರ್ನಾಟಕದಲ್ಲಿ ಹೈಕೋರ್ಟ್ವರೆಗೂ ತಲುಪಿರುವ ಹಿಜಾಬ್ ವಿವಾದವು ರಾಷ್ಟ್ರೀಯ ಮಟ್ಟದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ. ಹಲವಾರು ರಾಷ್ಟ್ರೀಯ ನಾಯಕರು ಹಿಜಾಬ್ ಪರವಾಗಿ ಹಾಗೂ ವಿರೋಧವಾಗಿ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಈ ನಡುವೆ ಕಾಂಗ್ರೆಸ್ ಬೆಂಬಲಿತ ಮಹಾರಾಷ್ಟ್ರ ಸರ್ಕಾರದ ಸಚಿವ ಆದಿತ್ಯ ಠಾಕ್ರೆ, "ಶಾಲೆಗಳಲ್ಲಿ ಶಾಲಾ ಸಮವಸ್ತ್ರವನ್ನು ಹೊರತುಪಡಿಸಿ ಬೇರೆ ಯಾವುದೇ ಉಡುಗೆಗೆ ಸ್ಥಳಾವಕಾಶ ನೀಡಬಾರದು," ಎಂದು ಹೇಳಿದ್ದಾರೆ
"ಶಿಕ್ಷಣ ಸಂಸ್ಥೆಗಳಲ್ಲಿ ಯಾವುದೇ ರಾಜಕೀಯ, ಧಾರ್ಮಿಕ ವಿಷಯಗಳಿಗೆ ಪ್ರಾತಿನಿಧ್ಯ ಇರಬಾರದು," ಎಂದು ಒತ್ತಿ ಹೇಳಿದ ಮಹಾರಾಷ್ಟ್ರ ಸಚಿವ ಆದಿತ್ಯ ಠಾಕ್ರೆ, "ಶಾಲಾ ಮತ್ತು ಕಾಲೇಜುಗಳಲ್ಲಿ ಯಾವುದೇ ರಾಜಕೀಯ, ಧಾರ್ಮಿಕ ಅಥವಾ ಅಂತಹ ಯಾವುದೇ ವಿಷಯವನ್ನು ತರಬಾರದು. ಶಿವಸೇನೆಗೆ ಒಂದೇ ಒಂದು ಪಾತ್ರವಿದೆ. ಅದು ಶಾಲೆಗಳಲ್ಲಿ ಉನ್ನತ ದರ್ಜೆಯ ಶಿಕ್ಷಣ ಸೌಲಭ್ಯಗಳನ್ನು ಒದಗಿಸುವುದು ಆಗಿದೆ," ಎಂದರು.
ಹಿಜಾಬ್ ಕುರಿತು ವಿದ್ಯಾರ್ಥಿಗಳಿಗೆ ಸರ್ಜೇವಾಲ ಪತ್ರ:
ಹಿಜಾಬ್ ವಿವಾದದ ಬಗ್ಗೆ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ವಿದ್ಯಾರ್ಥಿಗಳಿಗೆ ಪತ್ರವನ್ನು ಬರೆದಿದ್ದಾರೆ. "ಭ್ರಷ್ಟಾಚಾರ, ದುರಾಡಳಿತದಲ್ಲಿ ಮುಳುಗಿರುವ ರಾಜ್ಯ ಬಿಜೆಪಿ ಸರ್ಕಾರವು ತನ್ನ ರಾಜಕೀಯ ದುರುದ್ದೇಶಕ್ಕೆ ಕರ್ನಾಟಕ ರಾಜ್ಯದ ಯುವಕರು ಹಾಗೂ ವಿದ್ಯಾರ್ಥಿಗಳಲ್ಲಿ ಬಿರುಕು ಮೂಡಿಸಿ ಅವರ ಏಕತೆಯನ್ನು ಒಡೆಯುವ ಕೆಲಸ ಮಾಡುತ್ತಿದೆ. ಮುಂದಿನ ದಿನಗಳಲ್ಲಿ ಪರೀಕ್ಷೆಗಳು ಎದುರಾಗುತ್ತಿದ್ದು, ಅದರಲ್ಲೂ ಪಿಯುಸಿ ಪರೀಕ್ಷೆ ಬಹಳ ಪ್ರಮುಖವಾಗಿದೆ. ವಿದ್ಯಾರ್ಥಿಗಳು ಈ ಪರೀಕ್ಷೆಗಳಿಗೆ ತಯಾರಿ ನಡೆಸುತ್ತಿರುವಾಗ, ಸಮಾಜಘಾತುಕ ಶಕ್ತಿಗಳು ವಿದ್ಯಾರ್ಥಿಗಳ ನಡುವೆ ವೈಷಮ್ಯ ಸೃಷ್ಟಿಸಿ ಅವರ ಕೈಗೆ ಚಾಕು, ಚೂರಿ, ಕಲ್ಲುಗಳನ್ನು ಕೊಟ್ಟು ರಾಜ್ಯದ ವಿದ್ಯಾರ್ಥಿ ಸಮುದಾಯದ ಭವಿಷ್ಯವನ್ನು ನಾಶ ಮಾಡಲು ಪ್ರಯತ್ನಿಸುತ್ತಿವೆ ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಗುರುವಾರ ಹೈಕೋರ್ಟ್ ವಿಸ್ತೃತ ಪೀಠದಲ್ಲಿ ವಿಚಾರಣೆ:
ಕರ್ನಾಟಕ ಹೈಕೋರ್ಟ್ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕ ಪೀಠವು ಕಾಲೇಜುಗಳಲ್ಲಿ ಹಿಜಾಬ್ ನಿಷೇಧವನ್ನು ಪ್ರಶ್ನಿಸುವ ಅರ್ಜಿಗಳನ್ನು ವಿಸ್ತೃತ ಪೀಠಕ್ಕೆ ವರ್ಗಾಯಿಸಿದೆ. ಹಿಜಾಬ್ ಧರಿಸಲು ಅನುಮತಿ ಕೋರಿದ್ದ ಉಡುಪಿಯ ವಿದ್ಯಾರ್ಥಿಗಳ ಅರ್ಜಿ ಮತ್ತು ಇದೇ ವಿಚಾರದಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳ ವಿಚಾರಣೆ ನಡೆಸಲು ಕರ್ನಾಟಕ ಹೈಕೋರ್ಟ್ನಲ್ಲಿ ವಿಶೇಷ ಪೀಠ ರಚನೆ ಮಾಡಿದೆ. ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಪೂರ್ಣ ಪೀಠ ಗುರುವಾರ ಮಧ್ಯಾಹ್ನ 2.30ರಿಂದ ಅರ್ಜಿ ವಿಚಾರಣೆ ನಡೆಯಲಿದೆ. ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ತಿ ನೇತೃತ್ವದ ವಿಶೇಷ ಪೀಠದಲ್ಲಿ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್, ನ್ಯಾಯಮೂರ್ತಿ ಖಾಜಿ ಜೈಬುನ್ನಿಸಾ ಮೊಹಿದ್ದೀನ್ ಇದ್ದು, ಗುರುವಾರವೇ ವಿಚಾರಣೆ ಆರಂಭವಾಗಲಿದೆ.
Recommended Video