Breaking: ಪಾಕಿಸ್ತಾನ; ಭೀಕರ ಪ್ರವಾಹಕ್ಕೆ 1,300 ಮಂದಿ ಬಲಿ
ಇಸ್ಲಾಮಾಬಾದ್, ಸೆ.04: ಪಾಕಿಸ್ತಾನದ ಭೀಕರ ಪ್ರವಾಹದ ಪರಿಣಾಮವಾಗಿ ದೇಶದಲ್ಲಿ ಸುಮಾರು 1,300 ಜನರು ಸಾವನ್ನಪ್ಪಿದ್ದಾರೆ. ಪರಿಹಾರ ಕಾರ್ಯಾಚರಣೆ ಮುಂದುವರೆದಿದೆ.
ಜೂನ್ನಿಂದ ಸಾವನ್ನಪ್ಪಿದವರ ಸಂಖ್ಯೆ 1,290 ಕ್ಕೆ ತಲುಪಿದ್ದು, ಕಳೆದ 24 ಗಂಟೆಗಳಲ್ಲಿ 29 ಜನರು ಸಾವನ್ನಪ್ಪಿದ್ದಾರೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್ಡಿಎಂಎ) ಶನಿವಾರ ತಿಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಪಾಕಿಸ್ತಾನದ ದೊಡ್ಡ ದೊಡ್ಡ ಭಾಗಗಳು ಮುಳುಗಡೆಯಾಗಿವೆ. ವಿಶೇಷವಾಗಿ ದಕ್ಷಿಣದಲ್ಲಿ ಬಲೂಚಿಸ್ತಾನ್, ಖೈಬರ್ ಪಖ್ತುನ್ಖ್ವಾ ಮತ್ತು ಸಿಂಧ್ ಪ್ರಾಂತ್ಯಗಳು ಮುಳುಗಡೆಯಾಗಿವೆ. ಸಿಂಧ್ನಲ್ಲಿ ಕನಿಷ್ಠ 180 ಜನರು ಸಾವನ್ನಪ್ಪಿದ್ದಾರೆ, ನಂತರ ಖೈಬರ್ ಪಖ್ತುಂಕ್ವಾದಲ್ಲಿ 138 ಮತ್ತು ಬಲೂಚಿಸ್ತಾನ್ 125 ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.

ಕನಿಷ್ಠ, 14,68,019 ಮನೆಗಳು ಭಾಗಶಃ ಅಥವಾ ಸಂಪೂರ್ಣವಾಗಿ ಹಾನಿಗೊಳಗಾಗಿದ್ದರೆ, 7,36,459 ಜಾನುವಾರುಗಳು ಪ್ರವಾಹದಿಂದಾಗಿ ಸಾವನ್ನಪ್ಪಿವೆ.
ಇಸ್ಲಾಮಾಬಾದ್ನಲ್ಲಿ ಶನಿವಾರ ಬೆಳಗ್ಗೆ ಫ್ರಾನ್ಸ್ನಿಂದ ಮೊದಲ ನೆರವು ವಿಮಾನ ಬರುವುದರೊಂದಿಗೆ ಹಲವಾರು ದೇಶಗಳಿಂದ ಪ್ರವಾಹ ಪೀಡಿತ ಪಾಕಿಸ್ತಾನಕ್ಕೆ ನೆರವು ಹರಿದು ಬಂದಿದೆ ಎಂದ ತಿಳಿದು ಬಂದಿದೆ.
ಹಠಾತ್ ಪ್ರವಾಹದಿಂದಾಗಿರುವ ಹಾನಿಯ ಆರಂಭಿಕ ಅಂದಾಜನ್ನು USD 10 ಶತಕೋಟಿ ಎನ್ನಲಾಗಿದೆ. ಆದರೆ ಇನ್ನೂ ಅಂತರರಾಷ್ಟ್ರೀಯ ಸಂಸ್ಥೆಗಳೊಂದಿಗೆ ಹಾನಿಯ ಪರಿಣಾಮವನ್ನು ಸಮೀಕ್ಷೆ ಮಾಡಲಾಗುತ್ತಿದೆ.

ಕೇಂದ್ರ ಬಡತನ ನಿರ್ಮೂಲನೆ ಮತ್ತು ಸಾಮಾಜಿಕ ಸುರಕ್ಷತೆ ಸಚಿವ ಶಾಜಿಯಾ ಮಾರಿ ಮಾತನಾಡಿ, ಇದುವರೆಗೆ 7,23,919 ಕುಟುಂಬಗಳು 25,000 ರೂಪಾಯಿ ನಗದು ಪರಿಹಾರವನ್ನು (ಪ್ರತಿ ಕುಟುಂಬಕ್ಕೆ) ಪಡೆದಿವೆ. ಇದಕ್ಕಾಗಿ 18.25 ಬಿಲಿಯನ್ ಮೊತ್ತವನ್ನು ವಿತರಿಸಲಾಗಿದೆ ಎಂದಿದ್ದಾರೆ.
ಭಾನುವಾರ ಮುಂಜಾನೆ, ರಾಷ್ಟ್ರೀಯ ಪ್ರವಾಹ ಪ್ರತಿಕ್ರಿಯೆ ಮತ್ತು ಸಮನ್ವಯ ಕೇಂದ್ರದಲ್ಲಿ ಮಿಲಿಟರಿ ಅಧಿಕಾರಿಗಳೊಂದಿಗೆ ಸುದ್ದಿಗೋಷ್ಠಿಯಲ್ಲಿ, ಯೋಜನಾ ಸಚಿವ ಅಹ್ಸಾನ್ ಇಕ್ಬಾಲ್ ಅವರು ಪಾಕಿಸ್ತಾನಕ್ಕೆ ಸಹಾಯ ನೀಡುವಂತೆ ಅಂತರರಾಷ್ಟ್ರೀಯ ಸಮುದಾಯಕ್ಕೆ ಕರೆ ನೀಡಿದ್ದಾರೆ.
ಆಂತರಿಕ ಸ್ಥಳಾಂತರದಿಂದಾಗಿ, ಬಲೂಚಿಸ್ತಾನ್, ಖೈಬರ್ ಪಖ್ತುಂಕ್ವಾ, ಸಿಂಧ್ ಮತ್ತು ಪಂಜಾಬ್ನಾದ್ಯಂತ 5,00,000 ಕ್ಕೂ ಹೆಚ್ಚು ಜನರು ಪ್ರಸ್ತುತ ಪರಿಹಾರ ಶಿಬಿರಗಳಲ್ಲಿ ವಾಸಿಸುತ್ತಿದ್ದಾರೆ.
ದೇಶದ ಮೂರನೇ ಒಂದು ಭಾಗವನ್ನು ಮುಳುಗಿಸಿದ ಪ್ರವಾಹಗಳು 33 ಮಿಲಿಯನ್ಗಿಂತಲೂ ಹೆಚ್ಚು ಜನರನ್ನು ಬಾಧಿಸುತ್ತಿದೆ.
ಇನ್ನು, ತೀವ್ರ ಪ್ರವಾಹದಿಂದಾಗಿ ಇನ್ನೂ ಅನೇಕ ಸಮಸ್ಯೆಗಳು ಉದ್ಭವಿಸುತ್ತಿವೆ. ಲಕ್ಷಾಂತರ ಎಕರೆ ಪ್ರದೇಶದಲ್ಲಿ ನೀರು ನುಗ್ಗಿ ಬೆಳೆ ಹಾನಿಯಾಗಿ ಆಹಾರದ ಕೊರತೆ ಎದುರಾಗಿದೆ. ಸಾವಿರಾರು ಜಾನುವಾರುಗಳು ನೀರಿನಲ್ಲಿ ಕೊಚ್ಚಿ ಹೋಗಿವೆ. ಪ್ರವಾಹದಿಂದಾಗಿ ಜನರು ವಿವಿಧ ರೋಗಗಳಿಗೆ ತುತ್ತಾಗುವ ಸಾಧ್ಯತೆ ಹೆಚ್ಚುತ್ತಿದೆ. ಒಟ್ಟಿನಲ್ಲಿ ಪಾಕಿಸ್ತಾನ ಸದ್ಯಕ್ಕೆ ಭೀಕರ ಪ್ರಕೃತಿ ವಿಕೋಪವನ್ನು ಎದುರಿಸುತ್ತಿದೆ. ಮುಂದಿನ ದಿನಗಳಲ್ಲಿ ಇಲ್ಲಿ ದೊಡ್ಡ ಪ್ರಮಾಣದ ಆಹಾರ ಬಿಕ್ಕಟ್ಟು ಎದುರಾಗುವ ಭೀತಿ ಎದುರಾಗಿದೆ.












Click it and Unblock the Notifications