ಗುಂಡಿನ ಚಕಮಕಿಯನ್ನೇ ಸರ್ಜಿಕಲ್ ಸ್ಟ್ರೈಕ್ ಅಂತಿದೆ ಭಾರತ!
ಇಸ್ಲಾಮಾಬಾದ್, ಸೆಪ್ಟೆಂಬರ್ 29: ಪಾಕಿಸ್ತಾನದ ಇಬ್ಬರು ಸೈನಿಕರು ಭಾರತದಿಂದ ನಡೆದ ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದಾರೆ. ಆದರೆ ಭಾರತದಿಂದ ಯಾವುದೇ 'ಸರ್ಜಿಕಲ್ ಅಟ್ಯಾಕ್' ನಡೆದಿಲ್ಲ ಎಂದು ಪಾಕಿಸ್ತಾನ ಸೇನೆ ಹೇಳಿದೆ. ಆಗಾಗ ನಡೆಸುವಂತೆ ಗುಂಡಿನ ದಾಳಿಯನ್ನು ನಡೆಸಲಾಗಿದೆ ಅಷ್ಟೇ ಎಂದಿದೆ.
ಭಾರತದ ಸೇನಾ ಕಾರ್ಯಾಚರಣೆಯ ಮಹಾ ನಿರ್ದೇಶಕರು ಪತ್ರಿಕಾಗೋಷ್ಠಿ ನಡೆಸಿ ಹೇಳಿದ ಹಾಗೆ ಯಾವುದೇ ದಾಳಿ ನಡೆದಿಲ್ಲ. ರಾತ್ರಿ 2.30ರ ಸುಮಾರಿಗೆ ಆರಂಭವಾದ ದಾಳಿ ಬೆಳಗ್ಗೆ 8 ರವರೆಗೆ ನಡೆದಿದೆ. ಭಾರತದ ಅಪ್ರಚೋದಿತ ಗುಂಡಿನ ದಾಳಿಗೆ ಪಾಕಿಸ್ತಾನ ಸೇನೆಯು ತಕ್ಕ ಉತ್ತರ ನೀಡಿದೆ ಎಂದು ಹೇಳಿಕೆಯೊಂದರಲ್ಲಿ ತಿಳಿಸಲಾಗಿದೆ.[ಉಗ್ರರ ಮೇಲೆ ಸೇನೆ ದಾಳಿ, ಸರ್ವ ಪಕ್ಷ ಸಭೆ ಕರೆದ ಮೋದಿ]

ಗಡಿ ನಿಯಂತ್ರಣ ರೇಖೆ ಬಳಿ ಪರಸ್ಪರ ಗುಂಡಿನ ಚಕಮಕಿ ನಡೆದ ನಂತರ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹಾಗೂ ರಕ್ಷಣಾ ಸಚಿವಾಲಯ ಗುರುವಾರ ಪತ್ರಿಕಾಗೋಷ್ಠಿ ನಡೆಸಿದೆ. ಲೆ.ಜನರಲ್ ರಣಬೀರ್ ಸಿಂಗ್ ಮಾತನಾಡಿ, ಗಡಿನಿಯಂತ್ರಣ ರೇಖೆ ಬಳಿಯಿರುವ ಪಾಕಿಸ್ತಾನ ಉಗ್ರರ ನೆಲೆಗಳನ್ನು ನಾಶ ಮಾಡಿರುವುದಾಗಿ ಹೇಳಿದ್ದಾರೆ. ಆ ನಂತರ ದಾಳಿ ಮುಂದುವರಿಸುವುದಿಲ್ಲ ಎಂದು ಸೇರಿಸಿದ್ದಾರೆ.
ಕೆಲ ಉಗ್ರಗಾಮಿಗಳ ಗುಂಪು ಎಲ್ ಒಸಿ ಬಳಿ ನೆಲೆ ಮಾಡಿಕೊಂಡಿವೆ. ಅವುಗಳನ್ನು ನಾಶಪಡಿಸುವ ಕಾರಣಕ್ಕೆ ಕಾರ್ಯಾಚರಣೆ ಕೈಗೊಳ್ಳಲಾಯಿತು. ಅನೇಕ ಉಗ್ರರು ಹಾಗೂ ಅವರನ್ನು ಬೆಂಬಲಿಸಿದವರಿಗೆ ಗಾಯಗಳಾಗಿವೆ. ದೇಶದ ವಿವಿಧ ನಗರಗಳಲ್ಲಿ ದಾಳಿ ನಡೆಸುವುದಕ್ಕೆ, ಜಮ್ಮು-ಕಾಶ್ಮೀರದಲ್ಲಿ ಆಕ್ರಮಣ ಮಾಡುವುದಕ್ಕೆ, ದೇಶದ ಒಳ ನುಸುಳುವುದಕ್ಕೆ ಯೋಜಿಸಿದ್ದರು. ಅದಕ್ಕೆ ದಾಳಿ ನಡೆಸಿದ್ದೇವೆ ಎಂದಿದ್ದಾರೆ.[ಗಡಿ ನಿಯಂತ್ರಣಾ ರೇಖೆ ದಾಟಿ ಉಗ್ರರ ಸದ್ದಡಗಿಸಿದ ಭಾರತೀಯ ಸೇನೆ]
ಭೂ ಸೇನೆ ಮಾಡಿದ ದಾಳಿಯೋ ಅಥವಾ ವಾಯು ಪಡೆಯ ಕಾರ್ಯಾಚರಣೆಯೋ ಎಂಬುದನ್ನು ರಣಬೀರ್ ಸಿಂಗ್ ಅವರು ತಿಳಿಸಿಲ್ಲ. 'ಉಗ್ರರ ನೆಲೆಗಳ ಮೇಲೆ ದಾಳಿ ಮಾಡಲಾಗಿದೆ ಎಂಬುದು ಭ್ರಮೆ. ತಪ್ಪಾದ ಪರಿಣಾಮ ಬೀರಲು ಭಾರತ ಸೃಷ್ಟಿಸಿರುವ ಸುದ್ದಿ ಇದು' ಎಂದು ಪಾಕಿಸ್ತಾನ ಸೇನೆ ಹೇಳಿದೆ.
ಗಡಿಯಲ್ಲಿನ ಗುಂಡಿನ ಚಕಮಕಿಯನ್ನೇ ಉತ್ಪೇಕ್ಷೆ ಮಾಡಿ, ಸರ್ಜಿಕಲ್ ಸ್ಟ್ರೈಕ್ ಎಂಬಂತೆ ಮಾಧ್ಯಮಗಳಲ್ಲಿ ತೋರಿಸಲಾಗುತ್ತಿದೆ. ಇದು ಸತ್ಯಕ್ಕೆ ದೂರವಾದದ್ದು. ಒಂದು ವೇಳೆ ಪಾಕಿಸ್ತಾನದ ಮಣ್ಣಲ್ಲಿ ಅಂಥ ದಾಳಿಗಳಾದರೆ ತಕ್ಕ ಪ್ರತ್ಯುತ್ತರ ನೀಡುತ್ತೇವೆ ಎಂದು ಪಾಕಿಸ್ತಾನ ಸೇನೆ ಹೇಳಿದೆ.
ಪಾಕಿಸ್ತಾನ ರೇಡಿಯೋ ಮಾಹಿತಿ ಪ್ರಕಾರ: ಪ್ರಧಾನಿ ನವಾಜ್ ಷರೀಫ್ ಘಟನೆಯನ್ನು ಖಂಡಿಸಿದ್ದು, ಶಾಂತಿ ಪಾಲನೆ ನಮ್ಮ ಉದ್ದೇಶವಾಗಿದ್ದು, ಅದು ನಮ್ಮ ಬಲಹೀನತೆ ಎಂದು ಭಾವಿಸಬಾರದು ಎಂದಿದ್ದಾರೆ.












Click it and Unblock the Notifications