ಜೀವ ಉಳಿದು, ಜೈಲಿಂದ ಬಿಡುಗಡೆಯಾದ ಅಸಿಯಾ ಬೀಬಿ ಪಾಕ್ ಬಿಟ್ಟು ಹೊರಟರು!
ಅಂತೂ ಪಾಕಿಸ್ತಾನದ ಕ್ರಿಶ್ಚಿಯನ್ ಮಹಿಳೆ ಅಸಿಯಾ ಬೀಬಿ ಜೈಲಿನಿಂದ ಬಿಡುಗಡೆ ಆಗಿದ್ದಾರೆ. ಧರ್ಮನಿಂದನೆ ಆರೋಪ ಹೊತ್ತಿದ್ದ ಆಕೆಗೆ ಮರಣ ದಂಡನೆ ವಿಧಿಸಿ, ಎಂಟು ವರ್ಷಗಳಿಂದ ಜೈಲಿನಲ್ಲಿ ಇರಿಸಲಾಗಿತ್ತು. ಈಚೆಗಷ್ಟೇ ಆಕೆಯನ್ನು ಖುಲಾಸೆಗೊಳಿಸಿ ಪಾಕಿಸ್ತಾನದ ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಈ ತೀರ್ಪಿನ ವಿರುದ್ಧ ದೇಶದಾದ್ಯಂತ ಭಾರೀ ಪ್ರತಿಭಟನೆಗಳಾಗಿದ್ದವು.
ಇದೀಗ ಅಸಿಯಾ ಬೀಬಿ ಜೈಲಿನಿಂದ ಬಿಡುಗಡೆ ಆಗಿರುವ ಬಗ್ಗೆ ಆಕೆಯ ವಕೀಲರು ತಿಳಿಸಿದ್ದಾರೆ. ಅಸಿಯಾ ಬೀಬಿ ವಿಮಾನ ಏರಿ ಪಾಕಿಸ್ತಾನ ಬಿಟ್ಟು ಹೊರಟರು ಎಂದು ಕೆಲವು ವರದಿಗಳು ತಿಳಿಸಿವೆ. ಆದರೆ ಎಲ್ಲಿಗೆ ತೆರಳಿದರು ಎಂಬ ಮಾಹಿತಿ ಇಲ್ಲ. ಆಕೆಯು ದೇಶ ಬಿಟ್ಟು ಹೊರಹೋಗದಂತೆ ನೋಡಿಕೊಳ್ಳುತ್ತೇವೆ ಎಂದು ಇದಕ್ಕೂ ಮುನ್ನ ಪಾಕ್ ಸರಕಾರವು ತಿಳಿಸಿತ್ತು.
ತಮಗೆ ಜೀವ ಬೆದರಿಕೆ ಇದೆ. ಆದ್ದರಿಂದ ಯಾವುದಾದರೂ ದೇಶದಲ್ಲಿ ಆಶ್ರಯ ನೀಡಬೇಕು ಎಂದು ಅಸಿಯಾ ಬೀಬಿ ಪತಿ ಮನವಿ ಮಾಡಿದ್ದಾರೆ. ಐದು ಮಕ್ಕಳ ತಾಯಿಯಾದ ಅಸಿಯಾ ಬೀಬಿಯನ್ನು ಮುಲ್ತಾನ್ ನಲ್ಲಿರುವ ಜೈಲಿನಿಂದ ಬಿಡುಗಡೆಗೊಳಿಸಲಾಗಿದೆ ಎಂದು ಆಕೆಯ ಪರ ವಕೀಲರು ಮಾಹಿತಿ ನೀಡಿದ್ದಾರೆ.

ಪ್ರವಾದಿ ಮಹಮ್ಮದ್ ಗೆ ಅವಮಾನ ಮಾಡುವಂಥ ಮಾತಾಡಿದ ಆರೋಪ
2010ರಲ್ಲಿ ನೆರೆಹೊರೆಯವರ ಜತೆಗಿನ ಜಗಳದ ವೇಳೆ ಪ್ರವಾದಿ ಮಹಮ್ಮದ್ ಗೆ ಅವಮಾನ ಮಾಡುವ ಮಾತನಾಡಿದರು ಎಂಬುದು ಅಸಿಯಾ ಬೀಬಿ ಮೇಲಿನ ಆರೋಪ ಆಗಿತ್ತು. ಅದನ್ನು ಧರ್ಮ ನಿಂದನೆ ಎಂದು ಪರಿಗಣಿಸಿ, ಗಲ್ಲು ಶಿಕ್ಷೆ ಕೂಡ ವಿಧಿಸಲಾಗಿತ್ತು. ಈ ತೀರ್ಪಿಗೆ ನಾನಾ ದೇಶಗಳು ವಿರೋಧ ವ್ಯಕ್ತಪಡಿಸಿದ್ದವು. ಹಾಗೂ ಅಸಿಯಾ ಬೀಬಿ ಬಿಡುಗಡೆ ಆದ ಮೇಲೆ ಆಶ್ರಯ ನೀಡಲು ಹಲವು ದೇಶಗಳು ಸಿದ್ಧವಾಗಿವೆ.

ತೀರ್ಪಿನ ವಿರುದ್ಧ ಪಾಕಿಸ್ತಾನದ ಮೂಲಭೂತವಾದಿಗಳ ಸಿಟ್ಟು
ಅಸಿಯಾ ಬೀಬಿ ಅವರನ್ನು ಖುಲಾಸೆ ಮಾಡಿದ ಸುಪ್ರೀಂ ಕೋರ್ಟ್ ತೀರ್ಪಿನ ವಿರುದ್ಧ ಪಾಕಿಸ್ತಾನದ ಮೂಲಭೂತವಾದಿಗಳು ಸಿಟ್ಟಾಗಿದ್ದಾರೆ. ಆಕೆಯನ್ನು ನೇಣಿಗೆ ಏರಿಸಲೇಬೇಕು ಎಂದು ಒತ್ತಾಯಿಸುತ್ತಿದ್ದಾರೆ. ಇನ್ನು ಇಸ್ಲಾಂ ಧಾರ್ಮಿಕ ಮುಖಂಡನೊಬ್ಬ ಮತ್ತು ಮುಂದುವರಿದು, ಆಕೆಯನ್ನು ಖುಲಾಸೆಗೊಳಿಸಿದ ಸುಪ್ರೀಂ ಕೋರ್ಟ್ ನ ಮೂವರು ನ್ಯಾಯಮೂರ್ತಿಗಳನ್ನೂ ಕೊಲ್ಲಬೇಕು ಎಂದಿದ್ದಾರೆ.

ಒಪ್ಪಂದ ಮುರಿದಿದೆ ಪಾಕ್ ಸರಕಾರ: ಆರೋಪ
ತೆಹ್ರೀಕ್-ಇ-ಲಬಾಯಕ್ ಪಕ್ಷದ ವಕ್ತಾರ ಮಾತನಾಡಿ, ಅಸಿಯಾ ಬೀಬಿ ಬಿಡುಗಡೆ ಮಾಡುವ ಮೂಲಕ ಸರಕಾರವು ನಮ್ಮ ಜತೆಗಿನ ಒಪ್ಪಂದವನ್ನು ಮುರಿದಿದೆ. ಆಡಳಿತ ನಡೆಸುವವರು ಅವರ ಅಪ್ರಾಮಾಣಿಕತೆ ತೋರಿಸಿದ್ದಾರೆ. ಈ ಪ್ರಕರಣದ ತನಿಖೆಯನ್ನು ಶರಿಯಾ ಕಾನೂನು ಪ್ರಕಾರವೇ ಮಾಡಬೇಕು ಎಂದು ಮನವಿ ಮಾಡಲಾಗಿತ್ತು. ಆದರೆ ಹಾಗೆ ಮಾಡಿಲ್ಲ ಎಂದಿದ್ದಾರೆ.

ಸಾಕ್ಷ್ಯಾಧಾರ ಇಲ್ಲ ಎಂದು ಸುಪ್ರೀಂನಿಂದ ಕೇಸು ಖುಲಾಸೆ
ಇನ್ನು ಎಂಟು ವರ್ಷದ ಹಿಂದೆ ಅಸಿಯಾ ಬೀಬಿ ನೀಡಿದ್ದ ತಪ್ಪೊಪ್ಪಿಗೆಯನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಮಾನ್ಯ ಮಾಡಿಲ್ಲ. ಆಕೆಯನ್ನು ಕೊಲ್ಲುವುದಾಗಿ ಬೆದರಿಸಿ, ಸಾರ್ವಜನಿಕವಾಗಿ ಆ ಹೇಳಿಕೆ ಕೊಡಿಸಲಾಗಿದೆ. ಧರ್ಮನಿಂದನೆ ಆರೋಪಕ್ಕೆ ಯಾವುದೇ ಸಾಕ್ಷ್ಯಾಧಾರವಿಲ್ಲ ಎಂದು ಸುಪ್ರೀಂ ಕೋರ್ಟ್ ತನ್ನ ತೀರ್ಪಿನಲ್ಲಿ ಹೇಳಿದೆ.












Click it and Unblock the Notifications