ಭಿಕ್ಷೆ ಬೇಡುತ್ತಿದೆ ಪಾಕಿಸ್ತಾನ ಸರ್ಕಾರ, ಸಾಲಮನ್ನಾ ಮಾಡಬೇಕಂತೆ..!
ನೆಮ್ಮದಿಯಾಗಿದ್ದ ದೇಶವನ್ನು ಭಯೋತ್ಪಾದಕರು, ಕಿರಾತಕರ ಕೈಯಲ್ಲಿ ಕೊಟ್ಟು ಬೀದಿಗೆ ಬಿದ್ದಿರುವ ಪಾಕಿಸ್ತಾನ ಸಾಲ ವಾಪಸ್ ಕೊಡುವ ಯೋಗ್ಯತೆಯನ್ನೂ ಕಳೆದುಕೊಂಡಿದೆ. ಕೈಯಲ್ಲಿ ಕಾಸು ಇಲ್ಲದೆ, ಊರೆಲ್ಲಾ ಸಾಲ ಮಾಡಿರುವ ಪಾಕಿಸ್ತಾನ ಸರ್ಕಾರ ಜಗತ್ತಿನ ಮುಂದೆ ಮತ್ತೊಮ್ಮೆ ಭಿಕ್ಷೆ ಬೇಡುತ್ತಿದೆ. ಕೊರೊನಾ ಪರಿಸ್ಥಿತಿಯನ್ನೇ ನೆಪಮಾಡಿಕೊಂಡಿರುವ ಪಾಕಿಸ್ತಾನದ ಇಮ್ರಾನ್ ಖಾನ್ ಸರ್ಕಾರ, ಕಡಿಮೆ ಆದಾಯ ಇರುವ ಬಡರಾಷ್ಟ್ರಗಳ ಸಾಲ ಮನ್ನಾ ಮಾಡಿ ಎಂದಿದೆ.
ಕಡಿಮೆ ಆದಾಯ ಇರುವ ರಾಷ್ಟ್ರಗಳು ಪಡೆದುಕೊಂಡ ಸಾಲವನ್ನ ಕೊರೊನಾ ಪಿಡುಗು ಅಂತ್ಯಗೊಳ್ಳುವವರೆಗೂ ಅಮಾನತು ಮಾಡಿ. ಅಲ್ಲದೆ ತೀರಾ ಹಿಂದುಳಿದಿರುವ ರಾಷ್ಟ್ರಗಳು ಪಡೆದಿರುವ ಸಾಲವನ್ನು ಮನ್ನಾ ಮಾಡಿ ಎಂದು ಜಾಗತಿಕ ಸಮುದಾಯದ ಬಳಿ ಪಾಕ್ ಪಿಎಂ ಇಮ್ರಾನ್ ಖಾನ್ ಮನವಿ ಮಾಡಿದ್ದಾರೆ. ತೀರಾ ಹಿಂದುಳಿದಿರುವ ರಾಷ್ಟ್ರಗಳು ಎನ್ನುವ ಮೂಲಕ ಪರೋಕ್ಷವಾಗಿ ತನ್ನಬಳಿ ಸಾಲ ವಾಪಸ್ ಕೊಡಲು ತಾಕತ್ತು ಇಲ್ಲ ಎಂದು ಪಾಕಿಸ್ತಾನ ಹೇಳಿಕೊಂಡಿದೆ.
ಗಾಂಜಾಗೆ ಮಾನ್ಯತೆ, ಸೊಪ್ಪು ಮಾರಾಟಕ್ಕೆ ಮುಂದಾದ ಪಾಕಿಸ್ತಾನ..!
ಅದರಲ್ಲೂ ಅಧಿಕಾರಕ್ಕೆ ಬಂದಾಗಿನಿಂದಲೂ ಇಮ್ರಾನ್ ಖಾನ್ ಒಂದಲ್ಲ ಒಂದು ರೀತಿಯಲ್ಲಿ ಸಾಲದ ವಿಚಾರವನ್ನೇ ಮಾತನಾಡುತ್ತಿದ್ದಾರೆ. ಅತ್ತ ಸೌದಿ ದೊರೆಗಳ ಕಾಲು ಹಿಡಿದು ಹಣ ತರುತ್ತಿದ್ದ ಪಾಕಿಸ್ತಾನ ಸರ್ಕಾರಕ್ಕೆ, ಸೌದಿ ಅರಮನೆಯ ಬಾಗಿಲು ಬಂದ್ ಆಗಿದೆ. ಹೀಗಾಗಿ ಈಗ ಸಾಲ ಕಟ್ಟುವುದಕ್ಕೂ ಕೈಯಲ್ಲಿ ಕಾಸು ಇಲ್ಲದೆ ಪರದಾಟ ಶುರುವಾಗಿದೆ.
ಕಡಿಮೆ ಬಡ್ಡಿಗೆ ಸಾಲ ಕೊಡಿ ಪ್ಲೀಸ್..!
ಕೊರೊನಾ ವಕ್ಕರಿಸಿದ ನಂತರ ಪಾಕಿಸ್ತಾನದ ಆರ್ಥಿಕ ಸ್ಥಿತಿ ಪಾತಾಳ ಸೇರಿದೆ. ಈ ಪರಿಸ್ಥಿತಿ ನಿಭಾಯಿಸಲು ‘ಅಂತಾರಾಷ್ಟ್ರೀಯ ಹಣಕಾಸು ನಿಧಿ' (IMF) ಸೇರಿದಂತೆ ಹಲವು ಸಂಸ್ಥೆಗಳಿಂದ ವಿನಾಯಿತಿಯನ್ನು ಪಾಕ್ ಬಯಸಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಕೊರೊನಾ ಕುರಿತಾದ ವಿಶೇಷ ಚರ್ಚೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದ ಇಮ್ರಾನ್ ಖಾನ್, ಕೊರೊನಾ ಪರಿಸ್ಥಿತಿಯಲ್ಲಿ ಅಭಿವೃದ್ಧಿ ಹೊಂದದ ರಾಷ್ಟ್ರಗಳು ತಾವು ಪಡೆದ ಸಾಲ ಹಿಂದಿರುಗಿಸಲು ಸಾಧ್ಯವಾಗದೆ ಪರದಾಡುತ್ತಿವೆ ಎಂದರು. ಹೀಗಾಗಿ ಈ ರಾಷ್ಟ್ರಗಳ ಸಾಲವನ್ನು ಮನ್ನಾ ಮಾಡಬೇಕು ಎಂದು ಇಮ್ರಾನ್ ಖಾನ್ ವಿಶ್ವ ಸಮುದಾಯದ ಮುಂದೆ ಬೇಡಿಕೊಂಡರು. ಅಲ್ಲದೆ 2ನೇ ಮಹಾಯುದ್ಧದ ಬಳಿಕ ಜಗತ್ತಿಗೆ ಕೊರೊನಾ ದೊಡ್ಡ ಪೆಟ್ಟು ಕೊಟ್ಟಿದೆ. ಇಂತಹ ಸ್ಥಿತಿಯಲ್ಲಿ ಬಡರಾಷ್ಟ್ರಗಳ ಆರ್ಥಿಕತೆ ಸುಧಾರಿಸಲು ಕಡಿಮೆ ಬಡ್ಡಿಗೆ ಸಾಲ ನೀಡಿ ಎಂದು ಗೋಗರೆದರು.
ಸಾಲ ವಾಪಸ್ ಕೊಡಲು ಮತ್ತೆ ಸಾಲ..!
ಒಂದು ರಾಷ್ಟ್ರ ಹಾಳಾಗುವುದಕ್ಕೆ ಏನೆಲ್ಲಾ ಮಾಡಬೇಕು ಎಂಬುದನ್ನ ಪಾಕಿಸ್ತಾನದ ನಾಯಕರನ್ನು ನೋಡಿಯೇ ಕಲಿಯಬೇಕು. ನೆಮ್ಮದಿಯಾಗಿದ್ದ ಪಾಕಿಸ್ತಾನವನ್ನ ಅಲ್ಲಿನ ನಾಯಕರು ಹಾಳು ಮಾಡಿದ್ದಾರೆ. ಆದರ್ಥಿಕತೆಯನ್ನ ಬೀದಿಗೆ ತಂದು ನಿಲ್ಲಿಸಿದ್ದಾರೆ. ಸದ್ಯಕ್ಕೆ ಪಾಕಿಸ್ತಾನದ ಸ್ಥಿತಿ ಹೇಗಿದೆ ಎಂದರೆ, ಈಗ ಇರುವ ಸಾಲಕ್ಕೆ ಬಡ್ಡಿ ಕಟ್ಟಲು ಮತ್ತೆ ಸಾಲ ಮಾಡಬೇಕಾದ ಪರಿಸ್ಥಿತಿ ಇದೆ. ಇನ್ನು ಆ ಸಾಲ ವಾಪಸ್ ಕೊಡಲು ಮತ್ತೆ ಸಾಲ ಮಾಡಬೇಕಿದೆ. ಹೀಗಾಗಿ ಸಾಲದ ಮೇಲೆ ಸಾಲ ಮಾಡುತ್ತಾ ಬೀದಿಗೆ ಬಿದ್ದಿರುವ ಪಾಕಿಸ್ತಾನಕ್ಕೆ ಈ ಸಂಕೋಲೆಯಿಂದ ಹೊರಗೆ ಬರಲು ಯಾವುದೇ ದಾರಿ ಕಾಣದಾಗಿದೆ. ಈ ಕಾರಣಕ್ಕೆ ಭಿಕ್ಷೆ ಪಾತ್ರೆ ಹಿಡಿದು, ಜಗತ್ತಿನ ಮುಂದೆ ಕೈಮುಗಿದು ಕೇಳಿಕೊಳ್ಳುತ್ತಿದೆ. ಆದರೆ ಜಾಗತಿಕ ನಾಯಕರು ಮಾತ್ರ ಪಾಕ್ ಮಾತಿಗೆ ಕೇರ್ ಮಾಡುತ್ತಿಲ್ಲ.
ಪಾಕ್ ಪ್ರಜೆಗಳ ಪರದಾಟ
ಪಾಕಿಸ್ತಾನದಲ್ಲಿ ಪರಿಸ್ಥಿತಿ ಮೊದಲೇ ಹದಗೆಟ್ಟು ಹೋಗಿತ್ತು. ಇನ್ನು ಕೊರೊನಾ ವಕ್ಕರಿಸಿದ ನಂತರವಂತೂ ಅಲ್ಲಿ ಜನರು ನೆಮ್ಮದಿಯಾಗಿ ಉಸಿರಾಡುವುದು ಕೂಡ ಕಷ್ಟಕರವಾಗಿದೆ. ಪಾಕಿಸ್ತಾನಿ ನಾಯಕರು ಮಾಡಿಕೊಂಡಿರುವ ತಪ್ಪಿಗೆ ಅಲ್ಲಿನ ಪ್ರಜೆಗಳು ನಿತ್ಯ ನರಕ ಕಾಣುತ್ತಿದ್ದಾರೆ. ಒಂದು ಕಡೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಉಗ್ರರ ಉಪಟಳ ಹಾಗೂ ಸರ್ಕಾರದ ಕೆಲಸದಲ್ಲಿ ಅಡ್ಡ ಬರುತ್ತಿರುವ ‘ಐಎಸ್ಐ' ಏಜೆಂಟರುಗಳಿಂದ ಇಡೀ ಪಾಕ್ ದಿವಾಳಿಯಾಗಿದೆ. ಕೋಟಿ ಕೋಟಿ ಜನರು ತುತ್ತು ಅನ್ನಕ್ಕೂ ನರಳಾಡುವ ಸ್ಥಿತಿ ಇದೆ. ಆದರೆ ಇದನ್ನು ಪಾಕ್ ಸರ್ಕಾರ ಗಂಭೀರವಾಗಿ ಪರಿಗಣಿಸಿಲ್ಲ. ಮತ್ತೊಂದಿಷ್ಟು ಸಾಲ ಮಾಡಿ, ಅದರಲ್ಲೇ ವೆಪನ್ ಖರೀದಿಸಿ ಶೋಕಿ ಮಾಡುತ್ತಿದೆ. ಇನ್ನಷ್ಟು ಉಗ್ರರನ್ನು ಬೆಳೆಸುವ ಮೂಲಕ ಜಗತ್ತಿಗೆ ಕಂಟಕವಾಗುತ್ತಿದೆ.
Recommended Video
ಗಾಂಜಾ ಬೆಳೆಯಲು ಮುಂದಾದ ಪಾಕಿಸ್ತಾನ
ಮೆಡಿಕಲ್ ಮರಿಜುನಾ ಅಥವಾ ಹೈಡ್ರೋ ಗಾಂಜಾ ಬೆಳೆಯಲು ಪಾಕ್ ತಯಾರಾಗುತ್ತಿದೆ. ಇದಕ್ಕಾಗಿ 3 ಜಿಲ್ಲೆಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಮುಖ್ಯವಾಗಿ ಉಗ್ರರ ಉಪಟಳದಿಂದ ದೂರ ಉಳಿದಿರುವ ಪ್ರದೇಶದಲ್ಲಿ ಗಾಂಜಾ ಬೆಳೆಯಲು ನೀಲಿನಕ್ಷೆ ಸಿದ್ಧವಾಗಿದೆ. ಪಾಕಿಸ್ತಾನದ ಸಿಂಧ್, ಪಂಜಾಬ್ ಸೇರಿದಂತೆ ಕೈಬರ್ನಲ್ಲಿ ಸರ್ಕಾರದ ಉಸ್ತುವಾರಿಯಲ್ಲೇ ಗಾಂಜಾ ಪ್ಲಾಂಟೇಷನ್ ನಡೆಯಲಿದೆ. ಈ ಕುರಿತು ಪಾಕ್ನ ವಿಜ್ಞಾನ ಹಾಗೂ ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಮಾಹಿತಿ ನೀಡಿದ್ದಾರೆ.