ಪಾಕ್ ಆರ್ಥಿಕ ಸ್ಥಿತಿ ಹೀನಾಯ, ಸೌದಿಯಿಂದ ನೆರವು ಕೇಳಲು ಹೊರಟ ಇಮ್ರಾನ್
ಇಸ್ಲಾಮಾಬಾದ್, ಅಕ್ಟೋಬರ್ 22: ಪಾಕಿಸ್ತಾನದ ಪ್ರಧಾನಮಂತ್ರಿ ಇಮ್ರಾನ್ ಖಾನ್ ಸೌದಿ ಅರೇಬಿಯಾದಲ್ಲಿ ಹೂಡಿಕೆದಾರರ ಸಮಾವೇಶಕ್ಕೆ ತೆರಳಿದ್ದಾರೆ. ಟರ್ಕಿಯ ಇಸ್ತಾಂಬುಲ್ ನ ಸೌದಿ ರಾಯಭಾರ ಕಚೇರಿಯಲ್ಲಿ ಪತ್ರಕರ್ತ ಜಮಾಲ್ ಖಷೋಗಿ ಸಾವಿನ ಹಿನ್ನೆಲೆಯಲ್ಲಿ ಇತರ ದೇಶಗಳ ನಾಯಕರು ಸೌದಿ ಹೂಡಿಕೆ ಸಮಾವೇಶವನ್ನು ಬಹಿಷ್ಕರಿಸಿದ್ದಾರೆ.
ಸೌದಿಗೆ ತೆರಳುವ ಮುನ್ನ ಸಂದರ್ಶನವೊಂದರಲ್ಲಿ ಮಾತನಾಡಿ, ಪತ್ರಕರ್ತ ಖಷೋಗಿ ಸಾವಿನ ಬಗ್ಗೆ ನಮಗೂ ಕಾಳಜಿ ಇದೆ. ಆದರೆ ಆ ಕಾರಣಕ್ಕೆ ಸಮಾವೇಶಕ್ಕೆ ಹೋಗದಿರಲು ಸಾಧ್ಯವಿಲ್ಲ. ಏಕೆಂದರೆ ನಾವು ಬಹಳ 'ಹತಾಶ ಸ್ಥಿತಿ'ಯಲ್ಲಿದ್ದೇವೆ. ಪಾಕಿಸ್ತಾನದ ಆರ್ಥಿಕ ಸ್ಥಿತಿ ಸುಧಾರಿಸಲು ಸೌದಿಯಿಂದ ಸಾಲದ ಅಗತ್ಯವಿದೆ ಎಂದು ಹೇಳಿದ್ದಾರೆ.
ಒಂದೇ ತಿಂಗಳಲ್ಲಿ ಇದು ಎರಡನೇ ಬಾರಿಗೆ ಇಮ್ರಾನ್ ಖಾನ್ ಸೌದಿ ಅರೇಬಿಯಾಗೆ ಭೇಟಿ ನೀಡುತ್ತಿದ್ದಾರೆ. ಪಾಕಿಸ್ತಾನದ ವಿತ್ತೀಯ ಕೊರತೆ ನಿವಾರಿಸಿಕೊಳ್ಳಲು ಮಹತ್ವದ ಆರ್ಥಿಕ ನೆರವು ಪಡೆಯಲು ಇಮ್ರಾನ್ ಖಾನ್ ಗೆ ಸಾಧ್ಯವಾಗಿಲ್ಲ.

ಈ ಭೇಟಿಯ ಅವಕಾಶವನ್ನು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ. ಇಪ್ಪತ್ತೊಂದು ಕೋಟಿ ಜನಸಂಖ್ಯೆಯ ಪಾಕಿಸ್ತಾನದ ಇತಿಹಾಸದಲ್ಲೇ ಅತ್ಯಂತ ಕೆಟ್ಟ ಆರ್ಥಿಕ ಸ್ಥಿತಿಯಲ್ಲಿದ್ದೇವೆ. ದೇಶವು ಸಾಲದ ಸುಳಿಯಲ್ಲಿ ಸಿಲುಕಿಕೊಂಡಿದೆ ಎಂದು ಅವರು ಹೇಳಿದ್ದಾರೆ.
ಮಿತ್ರ ದೇಶಗಳು ಅಥವಾ ಐಎಂಎಫ್ ನಿಂದ ಸಾಲ ದೊರೆಯದಿದ್ದಲ್ಲಿ ನಮ್ಮ ಆಮದು ಹಾಗೂ ಸಾಲಗಳಿಗೆ ಪಾವತಿಸಲು ಇನ್ನು ಎರಡು-ಮೂರು ತಿಂಗಳಲ್ಲಿ ವಿದೇಶಿ ಕರೆನ್ಸಿಯೇ ನಮ್ಮ ಬಳಿ ಇರುವುದಿಲ್ಲ. ನಾವೀಗ ಬಹಳ ಹತಾಶ ಸ್ಥಿತಿಯಲ್ಲಿದ್ದೇವೆ ಎಂದು ಇಮ್ರಾನ್ ಖಾನ್ ತಿಳಿಸಿದ್ದಾರೆ.
ಇಮ್ರಾನ್ ಖಾನ್ ಜತೆಗೆ ಹಣಕಾಸು ಸಚಿವ ಅಸಾದ್ ಉಮರ್ ಮತ್ತು ವಾಣಿಜ್ಯ ಸಚಿವ ಅಬ್ದುಲ್ ರಜಾಕ್ ದಾವೂದ್ ಕೂಡ ತೆರಳಿದ್ದಾರೆ. ಪಾಕಿಸ್ತಾನದಲ್ಲಿ ಹೂಡಿಕೆ ಮಾಡಲು ಬಯಸುವವರಿಗೆ ನಮ್ಮ ಸರಕಾರ ಮುಕ್ತವಾದ ಅವಕಾಶ ನೀಡುತ್ತದೆ ಎಂದು ಪಾಕ್ ಪ್ರಧಾನಿ ಕಚೇರಿ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಸದ್ಯಕ್ಕೆ ಪಾಕಿಸ್ತಾನದಲ್ಲಿ ಈ ಪ್ರಮಾಣದ ವಿತೀಯ ಕೊರತೆ ಆಗಿರುವುದಕ್ಕೆ ಇಮ್ರಾನ್ ಖಾನ್ ಹಿಂದಿನ ಸರಕಾರವನ್ನು ದೂಷಿಸಿದ್ದಾರೆ.












Click it and Unblock the Notifications