3 ಲಕ್ಷ ಮಂದಿ ನಿರಾಶ್ರಿತರು, ನರಕವಾದ ಲೆಬನಾನ್ ರಾಜಧಾನಿ ಬೈರುತ್
ಬೈರುತ್, ಆ.4: ಛಿದ್ರ ಛಿದ್ರವಾಗಿ ಬಿದ್ದಿರುವ ಕಟ್ಟಡಗಳು. ನೆಲಕ್ಕುರುಳಿದ ಕಟ್ಟಡಗಳ ಕೆಳಗೆ ರಾಶಿ ರಾಶಿ ಶವಗಳು. ಇದು ಯಾವುದೋ ಯುದ್ಧದ ಸನ್ನಿವೇಶವಲ್ಲ. ಲೆಬನಾನ್ನ ರಾಜಧಾನಿ ಬೈರುತ್ ನಗರದ ಸದ್ಯದ ಪರಿಸ್ಥಿತಿ ಹೀಗಾಗಿದೆ. ನಿನ್ನೆ ಸಂಭವಿಸಿದ ಅವಳಿ ಸ್ಫೋಟಗಳು ಇಡೀ ಬೈರುತ್ ನಗರವನ್ನು ಪೀಸ್ ಪೀಸ್ ಮಾಡಿವೆ.
Recommended Video
100ಕ್ಕೂ ಹೆಚ್ಚು ಜನರ ಪ್ರಾಣಪಕ್ಷಿ ಹಾರಿ ಹೋಗಿದ್ದರೆ, 4 ಸಾವಿರಕ್ಕೂ ಹೆಚ್ಚು ಜನರು ದುರ್ಘಟನೆಯಲ್ಲಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ಇವರಲ್ಲಿ ಅನೇಕರ ಸ್ಥಿತಿ ಗಂಭೀರವಾಗಿದ್ದು, ಸಾವಿನ ಸಂಖ್ಯೆ ದುಪ್ಪಟ್ಟಾದರೂ ಅಚ್ಚರಿ ಇಲ್ಲ. ಹಾಗೇ ಕಟ್ಟಡದ ಅವಶೇಷಗಳ ಕೆಳಗೆ ಸಿಲುಕಿದವರ ಲೆಕ್ಕ ಲೆಬನಾನ್ ಸರ್ಕಾರಕ್ಕೆ ಇನ್ನೂ ಸ್ಪಷ್ಟವಾಗಿಲ್ಲ.
ಪಟಾಕಿ ತುಂಬಿದ ಹಡಗು ಲೆಬನಾನ್ ಸ್ಫೋಟಕ್ಕೆ ಕಾರಣವೇ?
ಎಲ್ಲೇ ಕಟ್ಟಡದ ಅವಶೇಷಗಳನ್ನು ಅಗೆದರೂ, ಹೆಣಗಳ ರಾಶಿ ಸಿಗುತ್ತಿದೆ. ನಿನ್ನೆವರೆಗೂ ತಣ್ಣಗಿದ್ದ ಲೆಬನಾನ್ ಕ್ಯಾಪಿಟಲ್ ಸಿಟಿ ಈಗ ನರಕವಾಗಿ ಬದಲಾಗಿ ಹೋಗಿದೆ. ಸ್ಫೋಟದ ತೀವ್ರತೆಗೆ ಎದ್ದ ಅಲೆಗಳು ಸಿಕ್ಕ ಸಿಕ್ಕ ವಸ್ತುಗಳನ್ನು ಪುಡಿಗಟ್ಟಿದ್ದು, 3 ಲಕ್ಷಕ್ಕೂ ಹೆಚ್ಚು ಜನರ ಬದುಕು ಬೀದಿಗೆ ಬಿದ್ದಿದೆ. ಇನ್ನು ಬೈರುತ್ ಸ್ಫೋಟದಿಂದ ಸಂಭವಿಸಿದ ನಷ್ಟದ ಅಂದಾಜು $5 ಬಿಲಿಯನ್ ಡಾಲರ್ ಅಂತಾ ಹೇಳಲಾಗುತ್ತಿದೆ.
ಕೊರೊನಾ ಕಷ್ಟಕಾಲದಲ್ಲೂ ನೆರವಿನ ಮಹಾಪೂರ
ಎಂತಹದ್ದೇ ಕಷ್ಟ ಇರಲಿ ಅಥವಾ ಬರಲಿ, ಮನುಷ್ಯತ್ವ ಭೂಮಿಯಿಂದ ಮರೆಯಾಗಲು ಸಾಧ್ಯವಿಲ್ಲ ಎಂಬುದಕ್ಕೆ ಲೆಬನಾನ್ಗೆ ಸಿಗುತ್ತಿರುವ ಬೆಂಬಲವೇ ಸಾಕ್ಷಿಯಾಗಿದೆ. ಭೀಕರ ಸ್ಫೋಟದ ತರುವಾಯ ನರಕದಲ್ಲಿ ನರಳುತ್ತಿರುವ ಬಂದರು ನಗರಿ ಬೈರುತ್ ಜನರಿಗೆ ನೆರವಿನ ಮಹಾಪೂರವೇ ಹರಿದುಬರುತ್ತಿದೆ. ಈಗಾಗಲೇ ಆಸ್ಟ್ರೇಲಿಯಾದಿಂದ $1.4 ಮಿಲಿಯನ್ ಡಾಲರ್ ನೆರವು ಘೋಷಣೆಯಾಗಿದೆ. ಉಳಿದಂತೆ ಫ್ರೆಂಚರು ಹಾಗೂ ಟರ್ಕಿ ನಾಯಕರು ಲೆಬನಾನ್ಗೆ ರಕ್ಷಣಾ ಪಡೆ ರವಾನಿಸಿದ್ದಾರೆ. ಇನ್ನೂ ಹಲವಾರು ದೇಶಗಳು ಸಂಕಷ್ಟದಲ್ಲಿರುವ ಬೈರುತ್ ಜನರ ಬೆನ್ನಿಗೆ ನಿಲ್ಲಲು ಮುಂದಾಗಿವೆ. ಹೀಗೆ ಕೊರೊನಾ ಕಷ್ಟಕಾಲದಲ್ಲೂ ಲೆಬನಾನ್ಗೆ ಸಹಾಯ ಮಾಡಲು ಯಾವುದೇ ಅಡ್ಡಿ ಉಂಟಾಗಿಲ್ಲ.
ವಿಪತ್ತು ಸೃಷ್ಟಿಸಿದ್ದು ಅಮೋನಿಯಂ ನೈಟ್ರೇಟ್
ಪ್ರಾಥಮಿಕ ವರದಿಗಳ ಪ್ರಕಾರ ಸ್ಫೋಟಕ್ಕೆ ಅಮೋನಿಯಂ ನೈಟ್ರೇಟ್ ಕಾರಣ ಅಂತಾ ಲೆಬನಾನ್ ಸರ್ಕಾರ ತಿಳಿಸಿದೆ. ಬೈರೂತ್ ಬಂದರು ಗೋದಾಮಿನಲ್ಲಿ ಸಂಗ್ರಹವಾಗಿದ್ದ 2,750 ಟನ್ ಅಮೋನಿಯಂ ನೈಟ್ರೇಟ್ ಸ್ಫೋಟವಾಗಿದ್ದರಿಂದ, ಭಾಗಶಃ ಬೈರೂತ್ ನಗರ ಛಿದ್ರ ಛಿದ್ರವಾಗಿದೆ. 6 ವರ್ಷಗಳಿಂದ ಇಲ್ಲಿ ಅಮೋನಿಯಂ ನೈಟ್ರೇಟ್ ಸಂಗ್ರಹ ಮಾಡಲಾಗಿತ್ತು. ಸಾಮಾನ್ಯವಾಗಿ ಗೊಬ್ಬರ ತಯಾರಿಕೆ ಹಾಗೂ ಕಾರ್ಖಾನೆಗಳಲ್ಲಿ ಈ ಅಮೋನಿಯಂ ನೈಟ್ರೇಟ್ ಬಳಕೆಯಾಗುತ್ತದೆ. ಹೀಗೆ ಲೆಬನಾನ್ನ ಕಾರ್ಖಾನೆಗಳಿಗೆ ಅಂತಾ ಸಂಗ್ರಹಿಸಿ ಇಟ್ಟಿದ್ದ ಅಮೋನಿಯಂ ನೈಟ್ರೇಟ್ ಇದ್ದಕ್ಕಿದ್ದಂತೆ ಬ್ಲಾಸ್ಟ್ ಆಗಿದೆ.
ಬೀರತ್ ನಲ್ಲಿ ಭಾರೀ ಸ್ಫೋಟದಿಂದ 100ಕ್ಕೂ ಹೆಚ್ಚು ಮಂದಿಗೆ ಗಾಯ
2 ವಾರಗಳ ತುರ್ತು ಪರಿಸ್ಥಿತಿ ಘೋಷಣೆ
ಲೆಬನಾನ್ ಅಧ್ಯಕ್ಷ 2 ವಾರಗಳ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಿಸಿ, ಘಟನೆಯ ಕುರಿತು ಪಾರದರ್ಶಕ ತನಿಖೆ ನಡೆಸುವ ಭರವಸೆ ನೀಡಿದ್ದಾರೆ. ಆದರೆ ಸ್ಫೋಟದ ಬಗ್ಗೆ ಹಲವು ಅನುಮಾನಗಳು ಮೂಡುತ್ತಿವೆ. 2005ರಲ್ಲಿ ಹತ್ಯೆಯಾಗಿದ್ದ ಲೆಬನಾನ್ ಮಾಜಿ ಪ್ರಧಾನಿ ರಫಿಕ್ ಹರಿರಿ ಪ್ರಕರಣದ ಕುರಿತಾದ ತೀರ್ಪು ಇನ್ನೇನು ಕೆಲವೇ ದಿನಗಳಲ್ಲಿ ಹೊರಬೀಳಬೇಕಿದೆ. ಈ ಹೊತ್ತಲ್ಲೇ ಭಯಾನಕ ಸ್ಫೋಟ ಸಂಭವಿಸಿದೆ. ಈಗಾಗಲೇ ರಾಷ್ಟ್ರೀಯ ತುರ್ತುಪರಿಸ್ಥಿತಿ ಘೋಷಣೆ ಆಗಿರುವ ಹಿನ್ನೆಲೆಯಲ್ಲಿ ಹರಿರಿ ಹತ್ಯೆ ಕೇಸ್ನ ತೀರ್ಪು ಹೊರಬೀಳುತ್ತೋ..? ಅಥವಾ ಮುಂದಕ್ಕೆ ಹೋಗುವ ಸಾಧ್ಯತೆ ಇದೆಯೋ ಎಂಬ ಅನುಮಾನ ದಟ್ಟವಾಗಿದೆ. ಅದೇನೆ ಇರಲಿ ರಾಜಕೀಯ ಅಸ್ತಿರತೆ ಹಾಗೂ ಆಂತರಿಕ ಕಲಹಕ್ಕೆ ಅಮಾಯಕರು ಬಲಿಯಾಗಿರೋದು ಮಾತ್ರ ವಿಪರ್ಯಾಸವೇ ಸರಿ.
|
ಯುದ್ಧಭೂಮಿಯಂತಾಗಿರುವ ಲೆಬನಾನ್
ಕಳೆದ ಹಲವು ವರ್ಷಗಳಿಂದಲೂ ಯುದ್ಧಭೂಮಿಯಂತಾಗಿರುವ ಲೆಬನಾನ್ನಲ್ಲಿ ಕೆಲ ದಿನಗಳಿಂದ ಗುಂಡುಗಳು ಹೂಂಕರಿಸುತ್ತಿದ್ದವು. ಆದರೆ ಇದೀಗ ಬೈರುತ್ ನಗರದ ಬಂದರಿನಲ್ಲಿ ಸಂಭವಿಸಿರುವ ಭಾರಿ ಸ್ಪೋಟ ಲೆಬನಾನ್ ನಾಗರಿಕರನ್ನು ಬೆಚ್ಚಿಬೀಳಿಸಿದೆ. ಜೀವ ಉಳಿಸಿಕೊಂಡರೆ ಸಾಕಪ್ಪ ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ.