ವಾರಾಂತ್ಯದಲ್ಲಿ ವಿಮಾನ ಪತ್ತೆಯಾಗಲಿದೆ: ಜ್ಯೋತಿಷಿ
ಕೌಲಾಲಂಪುರ, ಮಾ.14: ಇಡೀ ವಿಶ್ವದ ತಂತ್ರಜ್ಞಾನಕ್ಕೆ ಸವಾಲೊಡ್ಡಿರುವ ಮಲೇಷಿಯಾ ವಿಮಾನ ನಾಪತ್ತೆ ಪ್ರಕರಣದ ಬಗ್ಗೆ ಹಲವು ದೇಶಗಳು ತಲೆಕೆಡಿಸಿಕೊಂಡಿರುವ ಸಂದರ್ಭದಲ್ಲಿ ಜ್ಯೋತಿಷಿಗಳು ತಮ್ಮದೇ ಆದ ಭವಿಷ್ಯವಾಣಿಯನ್ನು ನೀಡುತ್ತ್ತಿದ್ದಾರೆ. ಚೆನ್ನೈ ಮೂಲದ ಸ್ಥಳೀಯ ವಾಸ್ತು ಶಾಸ್ತಜ್ಞರೊಬ್ಬರು ಈ ವಾರಾಂತ್ಯದಲ್ಲಿ ವಿಮಾನದ ಸುಳಿವು ಪತ್ತೆಯಾಗಲಿದೆ ಎಂದಿದ್ದಾರೆ.
ಕಳೆದ ವಾರಾಂತ್ಯ ನಾಪತ್ತೆಯಾದ ಮಲೇಷಿಯಾದ ಬೋಯಿಂಗ್ ವಿಮಾನವಾಗಲಿ, ಅದರಲ್ಲಿ ಪ್ರಯಾಣಿಸುತ್ತಿದ್ದವರ ಸ್ಥಿತಿಗತಿಗಳ ಬಗ್ಗೆಯಾಗಲಿ ಇನ್ನೂ ಯಾವುದೇ ಖಚಿತ ಮಾಹಿತಿ ಬಂದಿಲ್ಲ. ಈ ಮಧ್ಯೆ, ಅಲ್ಲೆಲ್ಲೋ ಸಮದ್ರದಾಳದಲ್ಲಿ ವಿಮಾನದ ಅವಶೇಷಗಳು ದೊರೆತಿವೆ ಎಂದು ಹೇಳಲಾಗುತ್ತಿತ್ತು. ಇದಕ್ಕೆ ಚೀನಾ ಕೂಡಾ ಪುರಾವೆ ಒದಗಿಸಿ ಉಪಗ್ರಹದ ಚಿತ್ರ ಒದಗಿಸಿತ್ತು. ಆದರೆ ವಿಮಾನ ಸಮುದ್ರದಲ್ಲಿ ಪತನಗೊಂಡಿರುವ ಸಾಧ್ಯತೆ ಹಾಗೂ ಚೀನಾದ ಚಿತ್ರದ ಸತ್ಯಾಸತ್ಯತೆ ಪರಿಶೀಲನೆ ನಡೆದರೂ ಏನು ಸಿಕ್ಕಿರಲಿಲ್ಲ.
ಈ ನಡುವೆ ಚೆನ್ನೈ ಮೂಲದ ಜ್ಯೋತಿಷಿ, ವಾಸ್ತು ಶಾಸ್ತಜ್ಞ ಯುವರಾಜ್ ಸೌಮಾ ಅವರು ಮಲೇಷಿಯನ್ ಸ್ಟಾರ್ ಗೆ ಹೇಳಿಕೆ ನೀಡಿ ಸದ್ಯದ ಗ್ರಹಗತಿ, ಸೂರ್ಯ ಹಾಗೂ ನಕ್ಷತ್ರಗಳ ಲೆಕ್ಕಾಚಾರ ಹಾಕಿ ಹೇಳುವುದಾದರೆ ಈ ವಾರಾಂತ್ಯದಲ್ಲಿ ವಿಮಾನ ಪತ್ತೆಯಾಗಲಿದೆ. [ಮೌನಿ ಕೇಂದ್ರದ ವಿರುದ್ಧ ಕುಟುಂಬ ಕಿಡಿ]

ವಿಮಾನ ಶನಿವಾರದಂದು ನಾಪತ್ತೆಯಾಗಿದ್ದು ದಿನಶುದ್ಧಿ ಪ್ರಕಾರ ಕೆಟ್ಟದಿನವೆಂದು ಪರಿಗಣಿಸಲಾಗುತ್ತದೆ. ಹಿಂದೂ ಪಂಚಾಗದ ಪ್ರಕಾರ ಅಷ್ಟಮಿ ದಿನದಂದು ಅವೇಳೆಯಲ್ಲಿ ವಿಮಾನ ನಾಪತ್ತೆಯಾಗಿದೆ. ಚಂದ್ರನ ಗತಿಗೆ ತುಲನೆ ಮಾಡಿದರೆ ಎಂಟನೇ ದಿನ ಅಶುಭವಾಗಿದೆ. ವಿಮಾನ ಪ್ರಯಾಣ ಈ ವೇಳೆಯಲ್ಲಿ ಆಗಿದ್ದರೂ ನಂತರ ಸುಳಿವು ಸಿಗುವ ಸಾಧ್ಯತೆಯಿದೆ. ಗುರುವಾರದ ದಿನದ ನಂತರ ಬೃಹಸ್ಪತಿಯ ಅನುಗ್ರಹದಿಂದ ವಿಮಾನ ಹುಡುಕಾಟದಲ್ಲಿ ಸ್ವಲ್ಪ ಸಫಲತೆ ಕಾಣಬಹುದು ಎಂದಿದ್ದಾರೆ.
ವಿಮಾನದಲ್ಲಿರುವ ಎಲ್ಲರ ಸುರಕ್ಷತೆಗಾಗಿ ಜಾಗತಿಕವಾಗಿ ಪ್ರಾರ್ಥನೆಗಳು ಜರುಗಬೇಕಿದೆ. ಭೂಮಿಯನ್ನು ಬಿಟ್ಟು ಮೇಲಕ್ಕೆ ಹಾರಿದ ಮೇಲೆ ವೈಯಕ್ತಿಕ ಜಾತಕಗಳು ಗ್ರಹಗತಿಗಳ ಲೆಕ್ಕಾಚಾರ ಗೌಣವಾಗುತ್ತದೆ. ಭೂ ಸ್ಪರ್ಶದಿಂದ ಮನುಷ್ಯ ವಂಚಿತನಾದ ಮೇಲೆ ಸಮಸ್ತರ ಗ್ರಹಗತಿ ಲೆಕ್ಕ ಹಾಕಬೇಕಾಗುತ್ತದೆ ಎಂದು ಸೌಮಾ ಹೇಳಿದ್ದಾರೆ. (ಐಎಎನ್ಎಸ್)












Click it and Unblock the Notifications