ಭೀಕರ ಆರ್ಥಿಕ ಬಿಕ್ಕಟ್ಟು: ಲಂಕಾ ಅಧ್ಯಕ್ಷರ ಮನೆ ಮುಂದೆ ಪ್ರತಿಭಟನೆ
ಕೊಲಂಬೋ ಮಾರ್ಚ್ 31: ಭೀಕರ ಆರ್ಥಿಕ ಬಿಕ್ಕಟ್ಟಿನಿಂದ ವಾರಗಟ್ಟಲೆ ನರಳುತ್ತಿರುವ ಶ್ರೀಲಂಕಾದ ರಾಜಧಾನಿ ಕೊಲಂಬೊದಲ್ಲಿನ ಜನರು ಇಂದು ಸಂಜೆ ತಡವಾಗಿ ಪ್ರತಿಭಟನೆ ನಡೆಸಿದರು. ಮಧ್ಯಪ್ರವೇಶಿಸಿ ಪರಿಸ್ಥಿತಿಯನ್ನು ನಿಭಾಯಿಸುವಂತೆ ಒತ್ತಾಯಿಸಿ ಅಧ್ಯಕ್ಷ ಗೋತಬಯ ರಾಜಪಕ್ಸೆ ಅವರ ಮನೆ ಮುಂದೆ ಜನ ಪ್ರತಿಭಟನೆ ಮೂಲಕ ಪಟ್ಟು ಹಿಡಿದಿದ್ದರು. ಶ್ರೀಲಂಕಾ ರಾಜಧಾನಿಯಲ್ಲಿ 2,000 ಕ್ಕೂ ಹೆಚ್ಚು ಜನರು ಪ್ರತಿಭಟನಾ ಮೆರವಣಿಗೆ ಮಾಡುವ ಮೂಲಕ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದಾರೆ.
ಆರ್ಥಿಕ ಮುಗ್ಗಟ್ಟು, ವಿದೇಶಿ ವಿನಿಮಯ ಕೊರತೆ ಕಾರಣ ವಿದೇಶಗಳಿಂದ ಅಗತ್ಯ ವಸ್ತುಗಳನ್ನು ತರಿಸಿಕೊಳ್ಳಲಾಗದ ಸ್ಥಿತಿಗೆ ಶ್ರೀಲಂಕಾ ಬಂದು ತಲುಪಿದೆ. ಮಾತ್ರವಲ್ಲದೇ ಆಸ್ಪತ್ರೆಗಳು ಶಸ್ತ್ರಚಿಕಿತ್ಸೆಯನ್ನೇ ಸ್ಥಗಿತಗೊಳಿಸುವ ಹಂತಕ್ಕೆ ತಲುಪಿವೆ. ಅರಿವಳಿಕೆ ನೀಡಲು ಬಳಸುವ ಕೆಲ ಔಷಧ, ಶಸ್ತ್ರಚಿಕಿತ್ಸೆಗೆ ಬೇಕಾದ ಉಪಕರಣ ಮತ್ತು ಕೆಲ ಔಷಧಗಳು ಅಲಭ್ಯವಾಗಿರುವ ಕಾರಣ, ದಾಖಲಾಗಿರುವ ರೋಗಿಗಳಿಗೆ ಶಸ್ತ್ರಚಿಕಿತ್ಸೆ ಕೈಗೊಳ್ಳದೇ ಇರುವ ನಿರ್ಧಾರ ಮಾಡಲಾಗಿದೆ.
ತನ್ನ ಬಹುತೇಕ ಅಗತ್ಯಕ್ಕೆ ವಿದೇಶಗಳನ್ನೇ ನಂಬಿರುವ ಶ್ರೀಲಂಕಾ ಇದೀಗ ಸಾಲದ ಸುಳಿಯಲ್ಲಿ ಮುಳುಗಿದೆ. ಆದಾಯದ ಮೂಲವಾದ ಪ್ರವಾಸೋದ್ಯಮ ಮಲಗಿದೆ. ಪರಿಣಾಮ ವಿದೇಶಿ ವಿನಿಮಯ ಪೂರ್ತಿ ಕರಗಿ ಹೋಗಿದೆ. ವಿದೇಶಗಳಿಂದ ವಸ್ತುಗಳ ಖರೀದಿಗೂ ಹಣವಿಲ್ಲದಾಗಿದೆ. ಪರಿಣಾಮ ದೇಶದಲ್ಲಿ ಪ್ರತಿಯೊಂದು ವಸ್ತುವಿನ ಬೆಲೆಯೂ ಗಗನಕ್ಕೇರಿದ್ದು, ಜನಸಾಮಾನ್ಯರ ಬದುಕು ಹೈರಾಣಾಗಿದೆ. ಇದರಿಂದಾಗಿ ಸರ್ಕಾರ ಪರಿಸ್ಥಿತಿಯನ್ನು ನಿಭಾಯಿಸುವಂತೆ ಒತ್ತಾಯಿಸಿ ಇಂದು ಪ್ರತಿಭಟನೆಯನ್ನು ಮಾಡಲಾಗಿದೆ.
ಪ್ರತಿಭಟನೆಕಾರರನ್ನು ಹತ್ತಿಕ್ಕಲು ಅರೆಸೇನಾ ಪೊಲೀಸ್ ಘಟಕ, ವಿಶೇಷ ಕಾರ್ಯಪಡೆಯನ್ನು ಕರೆಸಬೇಕಾಯಿತು. ದೇಶದಲ್ಲಿ ಸ್ವಾತಂತ್ರ್ಯದ ನಂತರ ಕೊಲಂಬೊ ಅತ್ಯಂತ ಕೆಟ್ಟ ಆರ್ಥಿಕ ಹಿಂಜರಿತವನ್ನು ಎದುರಿಸುತ್ತಿದೆ. ವಾರಗಳಿಂದ ಆಹಾರ ಮತ್ತು ಅಗತ್ಯ ವಸ್ತುಗಳು, ಇಂಧನ ಮತ್ತು ಅನಿಲದ ಕೊರತೆಯನ್ನು ಅನುಭವಿಸುತ್ತಿದೆ.
ಇನ್ನು ಮುಂದೆ ಇಲ್ಲಿ ಡೀಸೆಲ್ ಲಭ್ಯವಿಲ್ಲ. ದೇಶದ 22 ಮಿಲಿಯನ್ ಜನರನ್ನು ಹೊಂದಿರುವ ಈ ಕೊಲಂಬೋದಲ್ಲಿ ವಿದ್ಯುತ್ ಕೊರತೆ ಇದೆ. ಡಿಸೇಲ್ ಇಲ್ಲದೆ ಸಾರಿಗೆ ಬಸ್ಸುಗಳು ರಸ್ತೆಗಳಲ್ಲಿ ಇಳಿಯುತ್ತಿಲ್ಲ. ಔಷಧಿಗಳ ಕೊರತೆಯಿಂದಾಗಿ ಈಗಾಗಲೇ ಶಸ್ತ್ರಚಿಕಿತ್ಸೆಗಳನ್ನು ನಿಲ್ಲಿಸಿದೆ. ಇದರಿಂದ ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಿಗಳು ಪರದಾಡುವಂತಾಗಿದೆ.
ವಿದ್ಯುತ್ ಸಮಸ್ಯೆಯಿಂದಾಗಿ ಮೊಬೈಲ್ ಫೋನ್ ಬೇಸ್ ಸ್ಟೇಷನ್ಗಳ ಮೇಲೆ ಪರಿಣಾಮ ಬೀರಿದೆ. ಜೊತೆಗೆ ಇದು ಕರೆಗಳ ಗುಣಮಟ್ಟದ ಮೇಲೆ ಪರಿಣಾಮ ಬೀರಿದೆ. ಕೊಲಂಬೊ ಸ್ಟಾಕ್ ಎಕ್ಸ್ಚೇಂಜ್ ವ್ಯಾಪಾರವನ್ನು ಎರಡು ಗಂಟೆಗಳವರೆಗೆ ಮಿತಿಗೊಳಿಸಬೇಕಾಗಿದೆ. ಹೀಗಾಗಿ ಕಚೇರಿಗಳು ಅನಿವಾರ್ಯವಲ್ಲದ ಸಿಬ್ಬಂದಿಯನ್ನು ಮನೆಯಲ್ಲೇ ಇರುವಂತೆ ಕೇಳಿಕೊಂಡಿವೆ. ಹೀಗಾಗಿ ಪರಿಸ್ಥಿತಿಯನ್ನು ನಿಭಾಯಿಸಲು ಮಧ್ಯಪ್ರವೇಶಿಸಬೇಕೆಂದು ಒತ್ತಾಯಿಸಿ ಅಧ್ಯಕ್ಷ ಗೋಟಾಬಯ ರಾಜಪಕ್ಸೆ ಅವರ ಮನೆ ಬಳಿಯ ರಸ್ತೆಯಲ್ಲಿ ಜಮಾಯಿಸಿ ಪ್ರತಿಭಟನೆ ಪ್ರಾರಂಭಿಸಿದ್ದಾರೆ.
ರಾಜಪಕ್ಸೆ ಪೋಸ್ಟರ್ಗಳನ್ನು ಬೀಸುತ್ತಾ ಘೋಷಣೆಗಳನ್ನು ಕೂಗುತ್ತಿದ್ದಾರೆ. ಪ್ರತಿಭಟನಾಕಾರರನ್ನು ಪೊಲೀಸರು ಚದುರಿಸಲು ಮುಂದಾದಾಗ ಪೊಲೀಸರು ಹಾಗೂ ಪ್ರತಿಭಟನಾಕಾರರ ನಡುವೆ ಮಾತಿನ ಚಕಮಕಿ ನಡೆದಿದೆ. ಪ್ರತಿಭಟನಾಕಾರರ ಗುಂಪೊಂದು ಪೊಲೀಸರ ಮೇಲೆ ಬಾಟಲಿಗಳು ಮತ್ತು ಕಲ್ಲುಗಳನ್ನು ಎಸೆದಿದೆ. ಹೀಗಾಗಿ ಪ್ರತಿಭಟನಾಕಾರರನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ನೀರಿನ ಫಿರಂಗಿಗಳನ್ನು ಸಿಡಿಸಿದ್ದಾರೆ. ಬಳಿಕ ಪರಿಸ್ಥಿತಿ ನಿಯಂತ್ರಣಕ್ಕೆ ಬಂದಿದೆ. ಹಲವು ಪಟ್ಟಣಗಳಲ್ಲಿ ವಾಹನ ಸವಾರರು ಮುಖ್ಯರಸ್ತೆಗಳನ್ನು ಬಂದ್ ಮಾಡಿದರು.
ಭಾರತ ಹಾಗೂ ಶ್ರೀಲಂಕಾ ವಿದೇಶಾಂಗ ಸಚಿವರು ಮಹತ್ವದ ಮಾತುಕತೆ ನಡೆಸಿದ್ದಾರೆ. ಆದರೆ ಈ ಮಾಹಿತಿಗಳನ್ನು ಬಹಿರಂಗಪಡಿಸಲು ಉಭಯ ದೇಶದ ನಾಯಕರು ನಿರಾಕರಿಸಿದ್ದಾರೆ. ಮೂಲಗಳ ಪ್ರಕಾರ ಶ್ರೀಲಂಕಾಗೆ ಮತ್ತೆ ನೆರವು ನೀಡಲು ಭಾರತದ ಮುಂದಾಗಿದೆ ಅನ್ನೋ ಮಾತುಗಳು ಕೇಳಿಬಂದಿದೆ
ಆಹಾರ ಧಾನ್ಯಗಳು ಸೇರಿದಂತೆ ವಿದೇಶಗಳಿಂದ ಯಾವ ವಸ್ತುಗಳನ್ನು ಖರೀದಿಸಲು ಶ್ರೀಲಂಕಾ ಬಳಿ ನಯಾ ಪೈಸೆ ಇಲ್ಲದಾಗಿದೆ. ಹಣದುಬ್ಬರದಿಂದ ಜನರು ಕಂಗಾಲಾಗಿದ್ದಾರೆ.ಶ್ರೀಲಂಕಾದ ಪ್ರಮುಖ ಆದಾಯ ಮೂಲ ಪ್ರವಾಸೋದ್ಯಮ. ಆದರೆ ಕೋವಿಡ್ನಿಂದಾಗಿ ಕಳೆದ 3 ವರ್ಷಗಳಿಂದ ಈ ಉದ್ಯಮ ಪೂರ್ಣ ನೆಲಕಚ್ಚಿದೆ. ಮತ್ತೊಂದೆಡೆ ಶ್ರೀಲಂಕಾ ತನ್ನ ಬಹುತೇಕ ವಸ್ತುಗಳಿಗಾಗಿ ವಿದೇಶಗಳನ್ನೇ ಅವಲಂಬಿಸಿದೆ. ಪ್ರತಿಯೊಂದಕ್ಕೂ ಡಾಲರ್ ಮೂಲಕವೇ ಹಣ ಪಾವತಿ ಮಾಡಬೇಕು. ಆದರೆ ಆದಾಯ ಮೂಲ ಬತ್ತಿಹೋದ ಕಾರಣ, ದೇಶ ಆರ್ಥಿಕ ಸಂಕಷ್ಟಕ್ಕೆ ಸಿಕ್ಕಿಹಾಕಿಕೊಂಡಿದೆ. ವಿದೇಶಿ ವಿನಿಮಯ ಪೂರ್ಣ ಕರಗಿಹೋಗಿದೆ. ವಿದೇಶಗಳಿಂದ ಅಗತ್ಯ ವಸ್ತುಗಳ ಖರೀದಿಗೂ ಹಣ ಇಲ್ಲದಾಗಿದೆ. ಹೀಗೆ ಅಗತ್ಯ ವಸ್ತು ಪೂರೈಕೆ ಕಡಿತಗೊಂಡ ಕಾರಣ ಅವುಗಳ ಬೆಲೆ ಗಗನಕ್ಕೇರಿದೆ.
Recommended Video