ಸಂಧಾನ ಸಫಲ: ಗೋಗ್ರಾ ಎತ್ತರದ ಶಿಖರದಿಂದ ಕಾಲ್ಕಿತ್ತ ಚೀನಾ ಸೇನೆ!
ನವದೆಹಲಿ, ಆಗಸ್ಟ್ 12: ಭಾರತ ಚೀನಾದ ಪೂರ್ವ ಲಡಾಖ್ ಗಡಿ ಪ್ರದೇಶದಲ್ಲಿರುವ ಎತ್ತರದ ಗೋಗ್ರಾ ಹೈಟ್ಸ್ ಪ್ರದೇಶದಿಂದ ಉಭಯ ಸೇನಾ ಪಡೆಗಳು ವಾಪಸ್ಸಾಗಿದ್ದು, ತಮ್ಮ ಶಾಶ್ವತ ನೆಲೆಗಳಿಗೆ ಹಿಂತಿರುಗಿವೆ ಎಂದು ಗುರುವಾರ ಸರ್ಕಾರ ಮೂಲಗಳಿಂದ ತಿಳಿದು ಬಂದಿದೆ.
"ಪಶ್ಚಿಮ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ ಸಮಸ್ಯೆಗಳನ್ನು ನಿವಾರಿಸುವ ಹಾಗೂ ಗಡಿಯಲ್ಲಿ ಶಾಂತಿ ಸ್ಥಾಪನೆಯ ನಿಟ್ಟಿನಲ್ಲಿ ಭಾರತ ಮತ್ತು ಚೀನಾ ರಾಷ್ಟ್ರಗಳು ಬದ್ಧತೆಯನ್ನು ತೋರಿಸಿವೆ. ಭಾರತವು ಎರಡು ರಾಷ್ಟ್ರಗಳ ನಡುವಿನ ದ್ವಿಪಕ್ಷೀಯ ಸಂಬಂಧವನ್ನು ಸುಧಾರಿಸುವ ನಿಟ್ಟಿನಲ್ಲಿ ಸೇನೆಯ ನಿಷ್ಕ್ರಿಯತೆ ಮತ್ತು ಹಿಂತೆಗೆದುಕೊಳ್ಳುವಿಕೆಯಲ್ಲಿ ಸದಾ ಮುಂದಿರುತ್ತದೆ," ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರರು ಹೇಳಿದ್ದಾರೆ.
ಕಳೆದ ಜುಲೈ ತಿಂಗಳಿನಲ್ಲಿ ಗಲ್ವಾನ್ ಗಡಿ ಪ್ರದೇಶದ ಪೆಟ್ರೋಲಿಂಗ್ ಪಾಯಿಂಟ್ 14ರಿಂದ ಸೇನೆಗಳನ್ನು ಹಿಂಪಡೆಯಲಾಗಿತ್ತು. ತದನಂತರ ಪೆಟ್ರೋಲಿಂಗ್ ಪಾಯಿಂಟ್ 14 ಮತ್ತು 17ರ ಗೋಗ್ರಾ ಹೈಟ್ಸ್ ಮತ್ತು ಹಾಟ್ ಸ್ಪ್ರಿಂಗ್ಸ್ ಪ್ರದೇಶದಲ್ಲಿ ಸೇನೆ ನಿಷ್ಕ್ರಿಯಗೊಳಿಸುವ ಬಗ್ಗೆ ಚರ್ಚಿಸಲಾಗಿತ್ತು. ಲಡಾಖ್ನ ಗೋಗ್ರಾ ಪ್ರದೇಶದಿಂದ ಸೇನೆಯನ್ನು ಹಿಂಪಡೆದುಕೊಳ್ಳಲು ಒಪ್ಪಿಕೊಳ್ಳಲಾಗಿದ್ದು, ಈ ಪ್ರದೇಶದಲ್ಲಿ ಹೊಸ ಗಡಿ ನಿಯಂತ್ರಣ ರೇಖೆಯನ್ನು ಮರುಸ್ಥಾಪಿಸಲಾಗಿದೆ ಎಂದು ಸರ್ಕಾರವು ಆಗಸ್ಟ್ 6ರಂದು ಹೇಳಿತ್ತು.

ಉಭಯ ರಾಷ್ಟ್ರಗಳ ನಡುವೆ 12 ಕಾರ್ಪ್ ಕಮಾಂಡರ್ ಸಭೆ
ಭಾರತ ಮತ್ತು ಚೀನಾ ನಡುವೆ ಶನಿವಾರ ನಡೆದ 12ನೇ ಕಾರ್ಪ್ ಕಮಾಂಡರ್ ಸಭೆಯ ನಂತರದಲ್ಲಿ ಪ್ರಮುಖ ಬೆಳವಣಿಗೆಯೊಂದು ನಡೆದಿತ್ತು. ಕಳೆದ ಸೋಮವಾರ ಜಂಟಿ ಸುದ್ದಿಗೋಷ್ಠಿಯಲ್ಲಿ "ಭಾರತ-ಚೀನಾ ಗಡಿ ಪ್ರದೇಶಗಳಲ್ಲಿ ಪಶ್ಚಿಮ ವಲಯದ ಗಡಿ ನಿಯಂತ್ರಣ ರೇಖೆಯಲ್ಲಿ (ಎಲ್ಎಸಿ) ಸೇನೆ ನಿಷ್ಕ್ರಿಯಗೊಳಿಸುವ ನಿಟ್ಟಿನಲ್ಲಿ ಉಭಯ ಸೇನಾ ಪಡೆಗಳು ಪರಸ್ಪರ ವಿಷಯ ವಿನಿಮಯ ಮಾಡಿಕೊಂಡಿವೆ," ಎಂದು ಹೇಳಲಾಗಿದೆ. ಈ ಸುತ್ತಿನ ಮಾತುಕತೆಯಲ್ಲಿ ಉಭಯ ಸೇನಾಪಡೆಗಳು ಪರಸ್ಪರ ಹೊಂದಾಣಿಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ರಚನಾತ್ಮಕ ಅಂಶಗಳ ಬಗ್ಗೆ ಚರ್ಚಿಸಲಾಗಿದೆ ಎಂದು ತಿಳಿಸಿದ್ದರು.
ಚೀನಾದ ಗಡಿರೇಖೆಗೆ ಹೊಂದಿಕೊಂಡಂತೆ ಮಾಲ್ಡೋ ಪ್ರದೇಶದಲ್ಲಿ ಶನಿವಾರ ಬೆಳಗ್ಗೆ 10.30ಕ್ಕೆ ಭಾರತ ಮತ್ತು ಚೀನಾದ ಹಿರಿಯ ಕಮಾಂಡರ್ ಹಂತದ ಸಭೆ ಶುರುವಾಗಿದ್ದು, ಸುಮಾರು 9 ಗಂಟೆಗಳವರೆಗೂ ಚರ್ಚೆ ನಡೆಸಲಾಯಿತು. ಹಿರಿಯ ಅಧಿಕಾರಿಗಳು ಪೂರ್ವ ಲಡಾಖ್ ಭಾಗದ ವಿವಾದಿತ ಹಾಟ್ ಸ್ಪ್ರಿಂಗ್ಸ್ ಮತ್ತು ಗೋಗ್ರಾ ಹೈಟ್ಸ್ ಪ್ರದೇಶಗಳಲ್ಲಿ ಸೇನ ನಿಷ್ಕ್ರಿಯಗೊಳಿಸುವ ಬಗ್ಗೆ ಚರ್ಚೆ ನಡೆಸಿದರು. ಉಭಯ ರಾಷ್ಟ್ರಗಳು ಪರಸ್ಪರ ಭದ್ರತಾ ಕಾಳಜಿಯಿಂದಾಗಿ ಎರಡೂ ಕಡೆಗಳ ಸೇನೆಗಳು ಸರಿಸಮನಾಗಿ ವಾಪಸ್ ತೆಗೆದುಕೊಳ್ಳುವ ಬಗ್ಗೆ ಭಾರತೀಯ ಸೇನೆ ಉಲ್ಲೇಖಿಸಿದೆ. ಗಡಿ ಪ್ರದೇಶದ ಎತ್ತರದ ಸ್ಥಳಗಳಿಂದ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಕ್ಕೆ ಭಾರತ ಸಿದ್ಧವಿದೆ, ಆದರೆ ಚೀನಾ ಕೂಡ ಅಷ್ಟೇ ಸಂಖ್ಯೆಯ ಸೇನೆಯನ್ನು ಅಲ್ಲಿಂದ ವಾಪಸ್ ತೆಗೆದುಕೊಳ್ಳಬೇಕು ಎಂದು ಭಾರತೀಯ ಸೇನೆಯು ಷರತ್ತು ವಿಧಿಸಿತ್ತು.
Recommended Video

ಭಾರತ ಚೀನಾ ಕಾರ್ಪ್ ಕಮಾಂಡರ್ ಸಭೆ ನಿರ್ಧಾರ
* ಚೀನಾದ ಗಡಿರೇಖೆಗೆ ಹೊಂದಿಕೊಂಡಂತೆ ಮಾಲ್ಡೋ ಪ್ರದೇಶದಲ್ಲಿ ಜುಲೈ 31ರ 2021ರಂದು ಬೆಳಗ್ಗೆ 10.30ಕ್ಕೆ ಭಾರತ ಮತ್ತು ಚೀನಾದ ಹಿರಿಯ ಕಮಾಂಡರ್ ಹಂತದ ಸಭೆ ನಡೆಸಿದ್ದು, ಸುಮಾರು 9 ಗಂಟೆಗಳವರೆಗೂ ಚರ್ಚೆ ನಡೆಸಲಾಯಿತು.
* ಭಾರತ ಚೀನಾದ ಪಶ್ಚಿಮ ಗಡಿಗೆ ಹೊಂದಿಕೊಂಡಿರುವ ಗಡಿ ನಿಯಂತ್ರಣ ರೇಖೆಯಲ್ಲಿ ಸೇನೆ ನಿಷ್ಕ್ರಿಯಗೊಳಿಸುವ ಬಗ್ಗೆ ಉಭಯ ಸೇನಾ ಮುಖಂಡರು ವಿಚಾರ ವಿನಿಮಯ ಮಾಡಿಕೊಂಡಿದ್ದರು. ಈ ಸಭೆಯ ನಂತರದಲ್ಲಿ ಗೋಗ್ರಾ ಪ್ರದೇಶದ ಎರಡೂ ಕಡೆಗಳಲ್ಲಿ ಸೇನೆಯನ್ನು ವಾಪಸ್ ಕರೆಸಿಕೊಳ್ಳುವ ಬಗ್ಗೆ ಒಮ್ಮತ ಅಭಿಪ್ರಾಯ ವ್ಯಕ್ತವಾಗಿದೆ. ಕಳೆದ ವರ್ಷ ಮೇ ತಿಂಗಳಿನಲ್ಲಿ ಇದೇ ಪ್ರದೇಶದಲ್ಲಿ ಭಾರತ ಮತ್ತು ಚೀನಾ ಸೇನೆಯ ಯೋಧರು ಮುಖಾಮುಖಿಯಾಗಿದ್ದರು.
* ಒಪ್ಪಂದದ ಪ್ರಕಾರ, ಎರಡೂ ಕಡೆಯವರು ಈ ಪ್ರದೇಶದಲ್ಲಿ ಹಂತ ಹಂತವಾಗಿ, ಸಮನ್ವಯ ಮತ್ತು ಪರಿಶೀಲಿಸಿದ ರೀತಿಯಲ್ಲಿ ಸೇನಾಪಡೆಯನ್ನು ಮುಂದೆ ನಿಯೋಜಿಸುವುದನ್ನು ಬಿಟ್ಟಿದ್ದಾರೆ. ಆಗಸ್ಟ್ 4 ಮತ್ತು ಆಗಸ್ಟ್ 5ರಂದು ಉಭಯ ರಾಷ್ಟ್ರಗಳು ತಮ್ಮ ಸೇನಾ ಪಡೆಗಳನ್ನು ವಾಪಸ್ ಪಡೆದುಕೊಂಡಿದ್ದು, ಎರಡೂ ಕಡೆಯ ಯೋಧರು ಇದೀಗ ತಮ್ಮ ಶಾಶ್ವತ ನೆಲೆಗಳಲ್ಲಿವೆ.
* ಈ ಪ್ರದೇಶದಲ್ಲಿ ರಚಿಸಲಾದ ಎಲ್ಲಾ ತಾತ್ಕಾಲಿಕ ಶಿಬಿರಗಳನ್ನು ಮತ್ತು ಇತರ ಸಂಬಂಧಿತ ಮೂಲಸೌಕರ್ಯಗಳನ್ನು ಪರಸ್ಪರ ಪರಿಶೀಲಿಸಲಾಗಿ ನಂತರ ತೆಗೆದು ಹಾಕಲಾಗಿದೆ. ಎರಡೂ ಕಡೆಯ ಭೂ ಸ್ವರೂಪವನ್ನು ಮೊದಲಿನ ಪ್ರದೇಶಗಳಲ್ಲಿ ಮರುಸ್ಥಾಪಿಸಲಾಗಿದೆ.
* ಈ ಒಪ್ಪಂದದ ಪ್ರಕಾರ, ಈ ಪ್ರದೇಶದಲ್ಲಿ ಗಡಿ ನಿಯಂತ್ರಣ ರೇಖೆಯನ್ನು ಎರಡೂ ಕಡೆಯಿಂದ ಕಟ್ಟುನಿಟ್ಟಾಗಿ ಗಮನಿಸಲಾಗುವುದು. ಉಭಯ ರಾಷ್ಟ್ರಗಳು ಗಡಿಯನ್ನು ಪರಸ್ಪರ ಗೌರವಿಸುತ್ತದೆ ಮತ್ತು ಯಥಾಸ್ಥಿತಿಯಲ್ಲಿ ಏಕಪಕ್ಷೀಯ ಬದಲಾವಣೆ ಇರುವುದಿಲ್ಲ ಎಂದು ಖಚಿತಪಡಿಸಲಾಗಿದೆ.
* ಈ ಒಪ್ಪಂದದ ಮೂಲಕ ಮುಖಾಮುಖಿಯ ಸೂಕ್ಷ್ಮ ಪ್ರದೇಶದ ಸಮಸ್ಯೆಯೊಂದನ್ನು ಇತ್ಯರ್ಥಪಡಿಸಲಾಗಿದೆ. ಪಶ್ಚಿಮ ವಲಯದ ಎಲ್ಎಸಿಯಲ್ಲಿ ಉಳಿದಿರುವ ಸಮಸ್ಯೆಗಳನ್ನು ಪರಿಹರಿಸುವ ನಿಟ್ಟಿನಲ್ಲಿ ಎರಡೂ ಕಡೆಯಿಂದ ಮಾತುಕತೆ ಮುಂದುವರಿಸಲು ಬದ್ಧತೆ ತೋರಿದ್ದಾರೆ.
* ಐಟಿಬಿಪಿಯೊಂದಿಗೆ ಭಾರತೀಯ ಸೇನೆಯು ರಾಷ್ಟ್ರದ ಸಾರ್ವಭೌಮತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಪಶ್ಚಿಮ ವಲಯದಲ್ಲಿ ಗಡಿ ನಿಯಂತ್ರಣ ರೇಖೆಯಲ್ಲಿ ಶಾಂತಿ ಮತ್ತು ಸಮಾನತೆಯನ್ನು ಕಾಪಾಡಿಕೊಳ್ಳಲು ಸಂಪೂರ್ಣವಾಗಿ ಬದ್ಧವಾಗಿದೆ ಎಂದು ಉಲ್ಲೇಖಿಸಲಾಗಿದೆ.

2020ರಲ್ಲಿ ಉಭಯ ರಾಷ್ಟ್ರಗಳ ಸೇನಾ ಸಂಘರ್ಷ
2020ರ ಜೂನ್.06ರಂದು ಲಡಾಖ್ ಗಡಿಗೆ ಸಂಬಂಧಿಸಿದಂತೆ ಉಭಯ ರಾಷ್ಟ್ರಗಳ ನಡುವೆ ಶಾಂತಿಸಭೆ ನಡೆಸಲಾಗಿತ್ತು. ಈ ಸಭೆಯು ವಿಫಲವಾದ ಬೆನ್ನಲ್ಲೇ 2020ರ ಜೂನ್ 15 ಮತ್ತು 16ರ ರಾತ್ರಿ ಲಡಾಖ್ ಪೂರ್ವ ಗಡಿ ಪ್ರದೇಶದ ಗಾಲ್ವಾನ್ ಕಣಿವೆಯ ಬಳಿ ಭಾರತ-ಚೀನಾ ಯೋಧರ ನಡುವೆ ಸಂಘರ್ಷ ನಡೆಯಿತು. ರೌಡಿಗಳಂತೆ ವರ್ತಿಸಿದ ಚೀನಾ ಯೋಧರು ಮಾರಕಾಸ್ತ್ರಗಳಿಂದ ಭಾರತೀಯ ಯೋಧರ ಮೇಲೆ ಹಲ್ಲೆ ನಡೆಸಿದ್ದರು. ಈ ವೇಳೆ ಭಾರತದ 20 ಯೋಧರು ಹುತಾತ್ಮರಾಗಿದ್ದು, 70 ಯೋಧರು ಗಾಯಗೊಂಡಿದ್ದರು.
ಗಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದಲ್ಲಿ 20 ಭಾರತೀಯ ಯೋಧರ ಸಾವಿಗೆ ಕಾರಣವಾದ ಚೀನಾದ ವಿರುದ್ಧ ಭಾರತೀಯ ಯೋಧರು ಪ್ರತೀಕಾರ ತೀರಿಸಿಕೊಂಡರು. ಭಾರತ ನಡೆಸಿದ ಪ್ರತಿದಾಳಿಯಲ್ಲಿ ಚೀನಾದ 40ಕ್ಕೂ ಹೆಚ್ಚು ಯೋಧರು ಹತರಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ಚೀನಾ ಮಾತ್ರ ಸೈನಿಕರ ಸಾವು-ನೋವಿನ ಬಗ್ಗೆ ಯಾವುದೇ ವರದಿಯಾಗಿಲ್ಲ ಎಂದು ವಾದಿಸಿತು.

ಲಡಾಖ್ ಗಡಿ ವಿವಾದದ ಹಿಂದಿನ ಇತಿಹಾಸ ಹೇಳುವುದೇನು?
ಭಾರತ ಮತ್ತು ಚೀನಾ ಗಡಿಯ ಪ್ಯಾಂಗಾಂಗ್ ತ್ಸೋ, ಗಲ್ವಾನ್ ವ್ಯಾಲಿ ಪ್ರದೇಶದಲ್ಲಿ ಈ ಹಿಂದೆ 2,500 ಯೋಧರು ಶಸ್ತ್ರಸಜ್ಜಿತರಾಗಿ ನಿಂತಿದ್ದರು. ಪ್ಯಾಂಗಾಂಗ್ ತ್ಸೋ ಸುತ್ತಮುತ್ತಲು 180 ಕಿ.ಮೀ ವ್ಯಾಪ್ತಿಯಲ್ಲಿ ರಕ್ಷಣಾ ಮೂಲಸೌಕರ್ಯಗಳ ಕಾಮಗಾರಿ ಚಟುವಟಿಕೆ ನಡೆಸುತ್ತಿರುವುದು ಉಪಗ್ರಹ ಸೆರೆ ಹಿಡಿದ ಫೋಟೋಗಳಲ್ಲಿ ಸಾಬೀತಾಗಿತ್ತು. ಇದಕ್ಕೂ ಮೊದಲು ದರ್ಬಕ್-ಶಯೊಕ್ ನಿಂದ ದೌಲತ್ ಬೆಗ್ ಒಲ್ಡಿಯೆಗೆ ಗಾಲ್ವಾನ್ ವ್ಯಾಲಿಯಲ್ಲಿ ರಸ್ತೆ ನಿರ್ಮಿಸುವುದಕ್ಕೆ ಭಾರತವು ಮುಂದಾಗಿತ್ತು. ಪ್ಯಾಂಗಾಂಗ್ ತ್ಸೋ ತುದಿಯಲ್ಲಿರುವ ಪ್ರದೇಶದಲ್ಲಿ ರಸ್ತೆ ಕಾಮಗಾರಿಗೆ ಚೀನಾ ವಿರೋಧಿಸಿತ್ತು. ಪ್ಯಾಂಗಾಂಗ್ ತ್ಸೋ ಪ್ರದೇಶ ತೀರಾ ಮಹತ್ವವಾಗಿದೆ ಎಂದು ಭಾರತ ಕೂಡಾ ಪರಿಗಣಿಸಿತ್ತು. ಆದರೆ ಚೀನಾ ವಿರೋಧದ ಹಿನ್ನೆಲೆ ಗಡಿಯಲ್ಲಿ ಯಾವುದೇ ರೀತಿ ಸೇನೆ ನಿಯೋಜಿಸದಿರಲು ಭಾರತವು ತೀರ್ಮಾನಿಸಿತು.
-
Gold Price: ಚಿನ್ನ-ಬೆಳ್ಳಿ ಬೆಲೆಯಲ್ಲಿ ಭರ್ಜರಿ ಏರಿಕೆ: ಮೂರೇ ದಿನದಲ್ಲಿ ಬೆಳ್ಳಿ 20,000 ರೂ. ಜಂಪ್ -
ಬೆಂಗಳೂರಿನ ಎಂ.ಚಿನ್ನಸ್ವಾಮಿಯಲ್ಲಿ ಐಪಿಎಲ್ ಉದ್ಘಾಟನಾ ಸಮಾರಂಭಕ್ಕೆ ಬ್ರೇಕ್: ಬಿಸಿಸಿಐ ಈ ನಿರ್ಧಾರದ ಹಿಂದಿದೆ ಮಹತ್ವದ ಉದ್ದೇಶ -
Gold Rate: ಇಂದು ನಿಮ್ಮ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ ಎಷ್ಟಿದೆ? ಇಲ್ಲಿದೆ ಸಂಪೂರ್ಣ ಮಾಹಿತಿ -
RCB ಮಾರಾಟದ ಬಗ್ಗೆ ವಿಜಯ್ ಮಲ್ಯ ಭಾವುಕ ಪೋಸ್ಟ್ ; ವಿರಾಟ್ ಕೊಹ್ಲಿ ಬಗ್ಗೆ ಅವರು ಹೇಳಿದ್ದೇನು? ಇಲ್ಲಿದೆ ಮಾಹಿತಿ -
Jacob Bethell: ವಾಂಖೆಡೆಯಲ್ಲಿ ಕಿವಿಗೆ ಬಿದ್ದಿದ್ದು ಮಾತ್ರ ಆರ್ಸಿಬಿ.. ಆರ್ಸಿಬಿ ಘೋಷಣೆ: ಜೇಕಬ್ ಬೆಥೆಲ್ ವಿಡಿಯೋ ವೈರಲ್ -
Karnataka Weather: ಇಂದು ಕರಾವಳಿ, ಉತ್ತರ ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ -
March 27 Horoscope: ಉದ್ಯೋಗ ಮತ್ತು ಹಣಕಾಸಿನಲ್ಲಿ ದೊಡ್ಡ ಬದಲಾವಣೆ -
March 26 Horoscope: ಇಂದು ಈ 3 ರಾಶಿಗಳ ಜೀವನದಲ್ಲಿ ದೊಡ್ಡ ಬದಲಾವಣೆ -
Gold Rate: ಆಭರಣ ಪ್ರಿಯರಿಗೆ ಗುಡ್ ನ್ಯೂಸ್: ಮಾರುಕಟ್ಟೆಯಲ್ಲಿಂದು ಕೊಂಚ ಇಳಿಕೆ ಕಂಡ ಚಿನ್ನ, ಬೆಳ್ಳಿ ದರ -
Bengaluru Startup: ಬೆಂಗಳೂರು ಸ್ಟಾರ್ಟ್ಅಪ್ ರಾಜಧಾನಿ ಅಲ್ಲ ಎಂದ ಮಹಾರಾಷ್ಟ್ರ ಸಿಎಂ ದೇವೇಂದ್ರ ಫಡ್ನವೀಸ್ -
Viral Video: ತರಗತಿಯಲ್ಲೇ ವಿದ್ಯಾರ್ಥಿನಿಗೆ ಚಾಕೊಲೇಟ್ ಕೊಟ್ಟು ಪ್ರಪೋಸ್; ಚಪ್ಪಲಿ ಏಟು ತಿಂದ ಪ್ರೊಫೆಸರ್ -
Karnataka Weather: ಬಿಸಿಲಿನ ಬೇಗೆಯ ನಡುವೆ ಕರುನಾಡಿಗೆ ವರುಣನ ತಂಪು: ಎಲ್ಲೆಲ್ಲಿ ಮಳೆ, ಎಲ್ಲೆಲ್ಲಿ ಬಿಸಿಲು? ಇಲ್ಲಿದೆ ವರದಿ












Click it and Unblock the Notifications