ಪಾಕ್ ವಾಗ್ದಾನಕ್ಕೆ ಬೆಲೆಯೇ ಇಲ್ಲ : ಮೋದಿ ವಿರುದ್ದ ವಾಗ್ದಾಳಿ
ಲಾಹೋರ್, ಆಗಸ್ಟ್ 17 (ಪಿಟಿಐ) : ಮೋಸ್ಟ್ ವಾಂಟೆಡ್ ಉಗ್ರರು ಕಣ್ಣೆದುರೇ ಓಡಾಡುತ್ತಿದ್ದರೂ, ನಮ್ಮ ದೇಶದಲ್ಲಿ ಉಗ್ರರ ಸಂತಾನವೇ ಇಲ್ಲ ಎಂದು ಹಸಿಹಸಿ ಸುಳ್ಳು ಹೇಳುವ ಪಾಕಿಸ್ತಾನ, ಈ ಹಿಂದೆ ತೆಗೆದುಕೊಂಡಿದ್ದ ನಿರ್ಧಾರವೊಂದನ್ನು ವಾಪಸ್ ಪಡೆದಿದೆ.
ಮುಂಬೈ ಉಗ್ರ ದಾಳಿಯ ರೂವಾರಿ, ಜಮಾತ್-ಉಲ್-ದವಾದ ಮುಖ್ಯಸ್ಥ ಹಫೀಜ್ ಸಯೀದ್ ಮೇಲೆ ಹೇರಿದ್ದ ನಿರ್ಬಂಧವನ್ನು ಪಾಕಿಸ್ತಾನ ಸರಕಾರ ಹಿಂದಕ್ಕೆ ಪಡೆದುಕೊಂಡಿದೆ. (ಗೃಹ ಸಚಿವರು ಪಾಕಿಸ್ತಾನಕ್ಕೆ ಕಾಲಿಡದಂತೆ ಎಚ್ಚರಿಕೆ)
ಕಳೆದ ನವೆಂಬರ್ ತಿಂಗಳಲ್ಲಿ ಸರಕಾರೀ ಮತ್ತು ಖಾಸಗಿ ವಾಹಿನಿಗಳು ಹಫೀಜ್ ಸಯೀದ್ ಭಾಷಣ, ತುಣುಕು ಪ್ರದರ್ಶನ, ಸಂದರ್ಶನ ಸೇರಿದಂತೆ ಆತನಿಗೆ ಸಂಬಂಧಪಟ್ಟಂತೆ ಯಾವುದೇ ಕಾರ್ಯಕ್ರಮಗಳನ್ನು ಪ್ರಸಾರ ಮಾಡದಂತೆ ಪಾಕ್ ಸರಕಾರ ಆದೇಶ ನೀಡಿತ್ತು.
ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಬುರ್ಹಾನ್ ವಾನಿ ಹತ್ಯೆಯ ನಂತರ ಕಾಶ್ಮೀರದಲ್ಲಿ ಉಂಟಾಗಿರುವ ಅಶಾಂತಿಯ ಈ ಸಮಯದಲ್ಲಿ ಪಾಕಿಸ್ತಾನ ಸರಕಾರ ಆತನ ಮೇಲಿದ್ದ ನಿರ್ಬಂಧವನ್ನು ವಾಪಸ್ ಪಡೆದುಕೊಂಡಿದೆ. ಆ ಮೂಲಕ ಹಫೀಜ್ ಸಯೀದ್ ಗೆ ಮತ್ತಷ್ಟು ವಿಷ ಕಕ್ಕಲು ಪರೋಕ್ಷವಾಗಿ ಅವಕಾಶ ನೀಡಿದಂತಾಗಿದೆ.
ಗೃಹಬಂಧನದಲ್ಲಿದರೂ ಸ್ವೇಚ್ಛಾಚಾರವಾಗಿ ಸುತ್ತಾಡುತ್ತಿರುವ ಹಫೀಜ್, ಕಾಶ್ಮೀರದಲ್ಲಿ ಅಮಾಯಕರ ಮೇಲೆ ಗುಂಡು ಹಾರಿಸಲಾಗುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಖಾಸಗಿ ವಾಹಿನಿಯೊಂದರಲ್ಲಿ ವಾಗ್ದಾಳಿ ನಡೆಸಿದ್ದಾನೆ. (ಭಾರತದ ಮೇಲೆ ದಾಳಿಗೆ ಹಫೀಜ್ ತಹತಹ)
ನಿಷೇಧದ ನಡುವೆಯೂ ಕಳೆದ ಒಂದು ತಿಂಗಳಿನಿಂದ ಇವನ ಭಾಷಣವನ್ನು ಹಲವು ವಾಹಿನಿಗಳು ಪ್ರಸಾರ ಮಾಡುತ್ತಲೇ ಬರುತ್ತಿದ್ದವು.
ಪಾಕಿಸ್ತಾನಕ್ಕೆ ಹೋಗುವುದೂ ಒಂದೇ, ನರಕಕ್ಕೆ ಹೋಗುವುದೂ ಒಂದೇ..

ಖಾಸಗಿ ವಾಹಿನಿಗಳಲ್ಲಿ ಹಫೀಜ್ ಆರ್ಭಟ
ವಿವಿಧ ಖಾಸಗಿ ವಾಹಿನಿಗಳಿಗೆ ಸಂದರ್ಶನ ನೀಡಿರುವ ಹಫೀಜ್ ಸಯೀದ್, ಭಾರತ ಮತ್ತು ಮೋದಿ ವಿರುದ್ದ ವಾಕ್ ಪ್ರಹಾರ ನಡೆಸಿದ್ದಾನೆ. ಕಾಶ್ಮೀರದಲ್ಲಿ ಭಾರತದ ಸೈನಿಕರ ಗುಂಡಿಗೆ ಬಲಿಯಾದ ಕಾಶ್ಮೀರಿಗಳ ಜೀವದ ಬೆಲೆ ವ್ಯರ್ಥವಾಗುವುದಿಲ್ಲ ಎಂದು ಅಬ್ಬರಿಸಿದ್ದಾನೆ.

ಕಾಶ್ಮೀರಕ್ಕೆ ಪಾಕ್ ಸೈನ್ಯ ಕಳುಹಿಸಿ
ಮೋದಿ ಸರಕಾರ ಕಾಶ್ಮೀರದಲ್ಲಿ ನಡೆಯುತ್ತಿರುವ ಹೋರಾಟವನ್ನು ಹತ್ತಿಕ್ಕಲು ಬಂದೂಕಿನ ಮೊರೆ ಹೋಗಿದೆ. ಇದುವರೆಗೆ 63 ಕಾಶ್ಮೀರಿ ಹೋರಾಟಗಾರರು ವೀರಮರಣವನ್ನಪ್ಪಿದ್ದಾರೆ. ಭಾರತಕ್ಕೆ ಪಾಠ ಕಲಿಸಲು ಕಾಶ್ಮೀರಕ್ಕೆ ಪಾಕ್ ಸೇನೆ ಕಳುಹಿಸಲಿ ಎಂದು ಹಫೀಜ್ ಮನವಿ ಮಾಡಿದ್ದಾನೆ. (ಚಿತ್ರಕೃಪೆ: ಎಪಿ)

ಹಫೀಜ್ ಸಯೀದ್ ಗೆ ನಿರ್ಭಂದ
ಜಮಾತ್-ಉಲ್-ದವಾ (ಜೆಯುಡಿ) ಒಂದು ಉಗ್ರ ಸಂಘಟನೆ, ಹಫೀಜ್ ಸಯೀದ್ ತಲೆ ಮೇಲೆ ಹತ್ತು ಮಿಲಿಯನ್ ಡಾಲರ್ ಇನಾಮು ಅಮೆರಿಕ ಘೋಷಿಸಿದ ನಂತರ, ಜೆಯುಡಿ ಸೇರಿದಂತೆ ಅರವತ್ತು ಸಂಘಟನೆಗಳ ನಾಯಕರ ಯಾವುದೇ ಸುದ್ದಿ ಕವರೇಜ್ ಮಾಡದಂತೆ ಪಾಕ್ ಸರಕಾರ ಆದೇಶ ಹೊರಡಿಸಿತ್ತು. ಈಗ ಸದ್ದಿಲ್ಲದೇ ಪಾಕ್ ಸರಕಾರ ಅದನ್ನು ಹಿಂದಕ್ಕೆ ಪಡೆದಿದೆ.

ಮನೋಹರ್ ಪರಿಕ್ಕರ್ ಹೇಳಿಕೆ
ಒಂದು ದಿನದ ಹಿಂದೆಯಷ್ಟೇ ನಮ್ಮ ಸೈನಿಕರು ಐವರು ಉಗ್ರರನ್ನು ಸಾಯಿಸಿದರು. ಪಾಕಿಸ್ತಾನಕ್ಕೆ ಹೋಗುವುದೂ ಒಂದೇ, ನರಕಕ್ಕೂ ಹೋಗುವುದೂ ಒಂದೇ ಎಂದು ರಕ್ಷಣಾ ಸಚಿವ ಮನೋಹರ್ ಪರಿಕ್ಕರ್ ವ್ಯಂಗ್ಯ ವಾಡಿದ್ದಾರೆ.

ಅರುಣ್ ಜೇಟ್ಲಿ
ಇತೀಚೆಗೆ ನಡೆದ ಪಾಕಿಸ್ತಾನದಲ್ಲಿ ನಡೆದ ಸಾರ್ಕ್ ಗೃಹ ಸಚಿವರ ಸಭೆಯಲ್ಲಿ ರಾಜನಾಥ್ ಸಿಂಗ್ ಅವರಿಗೆ ಸರಿಯಾದ ಮರ್ಯಾದೆ ಸಿಗದ ಹಿನ್ನಲೆಯಲಿ, ಹಣಕಾಸು ಸಚಿವರ ಸಾರ್ಕ್ ಶೃಂಗ ಸಭೆಯಲ್ಲಿ ವಿತ್ತ ಸಚಿವ ಅರುಣ್ ಜೇಟ್ಲಿ ಭಾಗವಹಿಸದೇ ಇರಲು ನಿರ್ಧರಿಸಿದ್ದಾರೆ.












Click it and Unblock the Notifications