ಇಂಡೋನೇಷ್ಯಾಕ್ಕೆ ಅಪ್ಪಳಿಸಿದ ಸುನಾಮಿ, 5 ಮಂದಿ ಸಾವು, ಕುಟುಂಬಗಳು ಕಣ್ಮರೆ
ಜಕಾರ್ತ, ಸೆಪ್ಟೆಂಬರ್ 28: ಇಂಡೋನೇಷ್ಯಾದಲ್ಲಿ ಶುಕ್ರವಾರ 7.5 ತೀವ್ರತೆಯ ಭೂಕಂಪ ಸಂಭವಿಸಿದ ಮೇಲೆ ಪಲುವಿನ ಪ್ರಾಂತ್ಯ ರಾಜಧಾನಿ ಹಾಗೂ ಮತ್ತೊಂದು ನಗರ ದೊಂಗ್ಗಲ ಮೇಲೆ ಸುನಾಮಿ ಅಪ್ಪಳಿಸಿದೆ ಎಂದು ಪ್ರಾಕೃತಿಕ ವಿಕೋಪ ನಿರ್ವಹಣಾ ಸಂಸ್ಥೆಯ ವಕ್ತಾರರು ಮಾಹಿತಿ ನೀಡಿದ್ದಾರೆ.
ಸುನಾಮಿ ಹೊಡೆತಕ್ಕೆ 5 ಮಂದಿ ಪ್ರಾಣ ಕಳೆದುಕೊಂಡಿದ್ದು, ಮನೆಗಳು ಧ್ವಂಸವಾಗಿವೆ, ಕುಟುಂಬಗಳು ಕಣ್ಮರೆಯಾಗಿವೆ ಎಂಬ ವರದಿಗಳು ಬರುತ್ತಿವೆ. ಕೇಂದ್ರ ಸುಲವೇಸಿ ಜತೆಗಿನ ಸಂವಹನ ಕಡಿತವಾಗಿದ್ದು, ವಿದ್ಯುತ್ ಸಂಪರ್ಕ ಇಲ್ಲದಿರುವುದರಿಂದ ಪರಿಹಾರ ಕಾರ್ಯಾಚರಣೆಗೆ ಅಡೆತಡೆಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಕೇಂದ್ರ ಸುಲವೇಸಿಯ ಪಲುವಿನಲ್ಲಿರುವ ಸಿಸ್ ಅಲ್ ಜುಫ್ರಿ ವಿಮಾನ ನಿಲ್ದಾಣವನ್ನು ಮುಚ್ಚಲಾಗಿದೆ. ಶನಿವಾರದ ತನಕ ವಿಮಾನ ನಿಲ್ದಾಣ ತೆರೆಯುವುದಿಲ್ಲ ಎಂದು ಮಾಹಿತಿ ನೀಡಲಾಗಿದೆ. ಹಾನಿಯ ಪ್ರಮಾಣದ ಬಗ್ಗೆ ಈ ವರೆಗೆ ಖಚಿತವಾಗಿಲ್ಲ. ಪಲು ಗ್ರ್ಯಾಂಡ್ ಮಾಲ್ ನ ಬಳಿಯಿರುವ ಬೈತುರ್ ರಹಮಾನ್ ಮಸೀದಿಯನ್ನು ಎತ್ತರದ ಅಲೆಗಳು ಅಪ್ಪಳಿಸಿವೆ ಎಂಬುದು ತಿಳಿದುಬಂದಿದೆ.
ವಿಡಿಯೋ : ಇಂಡೋನೇಷ್ಯಾದಲ್ಲಿ ಭೂಕಂಪದ ನಂತರ ಸುನಾಮಿಯ ಅಟ್ಟಹಾಸ
ಒಂದೂವರೆಯಿಂದ ಎರಡು ಮೀಟರ್ ಎತ್ತರಕ್ಕೆ ಅಲೆಗಳು ಅಪ್ಪಳಿಸಿವೆ. ಆ ನಂತರ ಎಲ್ಲವೂ ಅಸ್ತವ್ಯಸ್ತವಾಗಿದೆ. ಗಾಬರಿಯಿಂದ ಜನರು ರಸ್ತೆ ಕಡೆಗೆ ಓಡಿ ಬಂದಿದ್ದಾರೆ. ಕಟ್ಟಡಗಳು ಕುಸಿದಿವೆ. ಕಡಲ ಕಿನಾರೆಯಲ್ಲಿದ್ದ ಹಡಗೊಂದು ಸುನಾಮಿಗೆ ಹೊಡೆದುಕೊಂಡು ಹೋಗಿದೆ. ಪರಿಹಾರ ಕಾರ್ಯಾಚರಣೆಗಾಗಿ ದೊಡ್ಡ ಹಡಗು ಹಾಗೂ ಹೆಲಿಕಾಪ್ಟರ್ ಗಳನ್ನು ನಿಯೋಜಿಸಲಾಗಿದೆ. ಸದ್ಯಕ್ಕೆ ಪಲುವಿನಲ್ಲಿ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ತಂಡದ ಜತೆಗೆ ಸಂಪರ್ಕ ಸಾಧ್ಯವಾಗುತ್ತಿಲ್ಲ ಎಂದು ತಿಳಿದುಬಂದಿದೆ.
ಅಧಿಕಾರಿಗಳು ನೀಡುತ್ತಿರುವ ಮಾಹಿತಿ ಪ್ರಕಾರ ಐವರು ಸಾವನ್ನಪ್ಪಿದ್ದಾರೆ. ಆದರೆ ಇದು ಸುನಾಮಿ ಅಪ್ಪಳಿಸಿದರಿಂದ ಆದ ಅನಾಹುತವೋ ಅಥವಾ ಬೇರೆ ಕಾರಣದಿಂದಲೋ ಎಂಬುದನ್ನು ಖಚಿತ ಪಡಿಸಿಲ್ಲ. ಕಳೆದ ತಿಂಗಳು ಆಗಸ್ಟ್ ಐದನೇ ತಾರೀಕು ಲಂಬೋಕ್ ದ್ವೀಪದಲ್ಲಿ ಸಂಭವಿಸಿದ ಭೂಕಂಪದಲ್ಲಿ ನಾನೂರಾ ಅರವತ್ತಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.
ನಮಗೆ ಹತ್ತಿರದವರು, ಸ್ನೇಹಿತರು, ಸಂಬಂಧಿಗಳ ಸ್ಥಿತಿಯನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತಿಲ್ಲ. ಅವರ ಸಂಪರ್ಕಕ್ಕೆ ಪ್ರಯತ್ನ ಮಾಡುತ್ತಿದ್ದೇವೆ. ಆದರೆ ಯಾವುದೇ ಮಾಹಿತಿ ತಿಳಿಯುತ್ತಿಲ್ಲ ಎಂದು ಟ್ವೀಟ್ ಮಾಡುತ್ತಿದ್ದಾರೆ. "ಪಲುವಿನಲ್ಲಿರುವ ನನ್ನ ಕುಟುಂಬದವರನ್ನು ಸಂಪರ್ಕಿಸಲು ಆಗುತ್ತಿಲ್ಲ" ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ. ಹಾನಿಗೀಡಾದ ಕಟ್ಟಡಗಳಿಂದ ಸುರಕ್ಷಿತವಾಗಿ ಇರುವಂತೆ ಅಧಿಕಾರಿಗಳು ಸಂದೇಶ ನೀಡುತ್ತಿದ್ದಾರೆ.
ಎಎಫ್ ಪಿ ಸುದ್ದಿ ಸಂಸ್ಥೆಯ ವರದಿ ಪ್ರಕಾರ, ಫೆಸ್ ಬುಕ್ ಲೈವ್ ವಿಡಿಯೋಗಳಲ್ಲಿ ಉದ್ದೋಉದ್ದದ ಸಂಚಾರ ದಟ್ಟಣೆ ಕಂಡುಬರುತ್ತಿದೆ. ಭಯಗೊಂಡಿರುವ ಸ್ಥಳೀಯರು ಕಾರು, ಟ್ರಕ್ ಮತ್ತು ಮೋಟಾರ್ ಬೈಕ್ ಗಳಲ್ಲಿ ಅಲ್ಲಿಂದ ಬೇರೆಡೆಗೆ ತೆರಳುತ್ತಿದ್ದು, ಏಕಕಾಲಕ್ಕೆ ರಸ್ತೆಯಲ್ಲಿ ಸಂಚಾರ ದಟ್ಟಣೆ ಏರ್ಪಟ್ಟಿದೆ.
ಭೂಕಂಪನವು ಕೇಂದ್ರೀಕೃತವಾಗಿರುವ ಸ್ಥಳವು ಮೀನುಗಾರಿಕೆಗೆ ಬಹಳ ಹೆಸರು ವಾಸಿಯಾದ ದೊಂಗ್ಗಾಲ ಹಾಗೂ ಪಲುವಿನಿಂದ ಎಂಬತ್ತು ಕಿಲೋಮೀಟರ್ ಸಮೀಪದಲ್ಲಿದೆ. ಎರಡೂ ನಗರದಲ್ಲಿ ಸಂಪರ್ಕ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ.
This footage shows the catastrophic moment when #tsunami hit the city of Palu after 7.7 magnitude #earthquake shook the city this evening. #prayforpalu #prayforindonesia pic.twitter.com/I8JBi4dZjz
— Ramadhani Eko P (@ramadhaniep) September 28, 2018