ಫೊಟೊ ಹುಚ್ಚಿಗೆ ಭೂತಾನ್ನಲ್ಲಿ ಜೈಲು ಸೇರಿದ ಭಾರತೀಯ ಪ್ರವಾಸಿ
ತಿಂಫು (ಭೂತಾನ್), ಅಕ್ಟೋಬರ್ 19: ಫೊಟೊ ಹುಚ್ಚಿಗೆ ಭೂತಾನ್ನಲ್ಲಿ ಭಾರತೀಯ ಪ್ರವಾಸಿಯೊಬ್ಬ ಜೈಲು ಸೇರುವಂತಾಗಿದೆ.
ಭಾರತದಿಂದ ಭೂತಾನ್ಗೆ ಬೈಕ್ನಲ್ಲಿ ಪ್ರವಾಸ ಹೋಗಿದ್ದ ಸಾಹಸಿಗರ ಗುಂಪೊಂದು ಬೌದ್ಧ ದೇವಾಲಯದ ಬಳಿ ಫೊಟೊ ತೆಗೆಸಿಕೊಂಡಿದ್ದು ಭೂತಾನ್ ಪೊಲೀಸರ ಕಣ್ಣು ಕೆಂಪಗೆ ಮಾಡಿದ್ದು, ಅವರನ್ನು ನೇರವಾಗಿ ಜೈಲಿಗೆ ಅಟ್ಟಿದ್ದಾರೆ.
ಅಭಿಜಿತ್ ರತನ್ ಹಜಾರೆ ಎಂಬಾತ ಹಾಗೂ ಇನ್ನೂ ಕೆಲವು ಗೆಳೆಯರು ಭೂತಾನ್ಗೆ ಬೈಕ್ನಲ್ಲಿ ಸಾಹಸಮಯ ಪ್ರವಾಸ ಹೋಗಿದ್ದಾರೆ. ಈ ಸಮಯದಲ್ಲಿ ಮಹಾರಾಷ್ಟ್ರದ ಅಭಿಜಿತ್ ರತನ್ ಹಜಾರೆ ಫೋಟೊ ತೆಗೆಸಿಕೊಳ್ಳಲೆಂದು ಭೂತಾನ್ನ ಪ್ರಮುಖ ಬುದ್ಧ ದೇವಾಲಯದ ಮೇಲೆ ಏರಿದ್ದಾನೆ.

ಭೂತಾನ್ ರಾಜಧಾನಿ ತಿಂಫು ಇಂದ ಇಪ್ಪತ್ತು ಕಿ.ಮೀ ದೂರದಲ್ಲಿರುವ ಬೌದ್ಧನ ಇರುವಿಕೆಯನ್ನು ಸಾರುವ ಚೋರ್ಟನ್ ರಾಷ್ಟ್ರೀಯ ಸ್ಮಾರಕದ ಮೇಲೆ ಅಭಿಜಿತ್ ರತನ್ ಹತ್ತಿದ್ದಾನೆ. ಸ್ಮಾರಕದ ಶಿಖರದ ಮೇಲೆ ಬೂಟು ಗಾಲಲ್ಲಿ ಹತ್ತಿ ಚಿತ್ರಗಳನ್ನು ತೆಗೆಸಿಕೊಂಡಿದ್ದಾನೆ.
ಅಭಿಜಿತ್ ಬೌದ್ಧ ಸ್ಮಾರಕದ ಮೇಲೆ ಹತ್ತಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಕೂಡಲೇ ಅಭಿಜಿತ್ ಅನ್ನು ಬಂಧಿಸಲಾಗಿದೆ. ಆ ನಂತರ ಅಭಿಜಿತ್ ತನಗೆ ಸ್ಥಳದ ಮಹತ್ವದ ಬಗ್ಗೆ ಗೊತ್ತಿರಲಿಲ್ಲವೆಂದು ಕ್ಷಮಾಪಣೆ ಪತ್ರ ಬರೆದುಕೊಟ್ಟ ನಂತರ ಆತನನ್ನು ಬಿಟ್ಟು ಕಳುಹಿಸಲಾಗಿದೆ.

ಪ್ರವಾಸದ ಗುಂಪಿನ ನಾಯಕ ಬೈಕ್ಗಳನ್ನು ಪಾರ್ಕ್ ಮಾಡುವ ಸಮಯದಲ್ಲಿ ಅಭಿಜಿತ್ ಮತ್ತು ಗೆಳೆಯರು ಸ್ಥಳೀಯನೊಬ್ಬನ ಸಹಾಯದಿಂದ ಬೌದ್ಧ ಸ್ಮಾರಕವನ್ನು ಏರಿದ್ದರು. ಅಭಿಜಿತ್ ಸ್ಮಾರಕದ ಮೇಲೆ ಏರಲು ಸ್ಥಳೀಯ ಬಡಗಿಯೊಬ್ಬ ಏಣಿ ನೀಡಿ ಸಹಕರಿಸಿದ್ದ, ಈತ ತಲೆ ಮರೆಸಿಕೊಂಡಿದ್ದು ಆತನಿಗಾಗಿ ಹುಡುಕಾಟ ನಡೆದಿದೆ.












Click it and Unblock the Notifications