'ಭಾರತೀಯ ಸೇನೆ ಮುಖ್ಯಸ್ಥ ಗೂರ್ಖಾ ಭಾವನೆಗಳನ್ನು ನೋಯಿಸಿದ್ದಾರೆ': ನೇಪಾಳ ರಕ್ಷಣಾ ಸಚಿವ
ದೆಹಲಿ, ಮೇ 25: ಭಾರತಕ್ಕಾಗಿ ದೀರ್ಘ ಸಮಯದಿಂದ ತ್ಯಾಗ ಮಾಡುತ್ತಿರುವ ಗೂರ್ಖಾ ಸಮುದಾಯದ ಭಾವನೆಗಳಿಗೆ ಭಾರತೀಯ ಸೇನೆ ಮುಖ್ಯಸ್ಥರು ನೋವು ಉಂಟು ಮಾಡಿದ್ದಾರೆ ಎಂದು ನೇಪಾಳ ರಕ್ಷಣಾ ಸಚಿವ ಈಶ್ವರ್ ಪೋಖ್ರೆಲ್ ಆರೋಪ ಮಾಡಿದ್ದಾರೆ.
'ದಿ ರೈಸಿಂಗ್ ನೇಪಾಳ' ಆನ್ಲೈನ್ ಸುದ್ದಿ ಸಂಸ್ಥೆಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಈಶ್ವರ್ ಪೋಖ್ರೆಲ್ 'ಕಾಲಾಪಾನಿ ವಿಷಯದಲ್ಲಿ ನೇಪಾಳದ ಪರವಾಗಿ ಚೀನಾದ ಕೈವಾಡ ಇದೆ ಎಂದು ಮನೋಜ್ ಮುಕುಂದ್ ನಾರವಾನೆ ಪರೋಕ್ಷವಾಗಿ ಉಲ್ಲೇಖ ಮಾಡಿರುವುದು ಖಂಡನೀಯ, ಅಗತ್ಯ ಬಿದ್ದರೆ ನೇಪಾಳ ಸೈನ್ಯ ಹೋರಾಡುತ್ತದೆ'' ಎಂದಿದ್ದಾರೆ.
ಭಾರತಕ್ಕೆ ಸೆಡ್ಡು, ಚೀನಾ ಸಂಪರ್ಕಕ್ಕೆ ನೇಪಾಳದಿಂದ ರಸ್ತೆ ನಿರ್ಮಾಣ
ಜನರಲ್ ನಾರವಾನೆ ಅವರ ಹೇಳಿಕೆಗಳನ್ನು "ರಾಜಕೀಯ ಸಾಹಸ" ಎಂದು ಪೋಖ್ರೆಲ್ ಕರೆದಿದ್ದಾರೆ. ಅಂತಹ ಅಭಿಪ್ರಾಯಗಳನ್ನು ಸೇನೆಯ ಮುಖ್ಯಸ್ಥರಿಂದ ನಿರೀಕ್ಷಿಸಿರಲಿಲ್ಲ ಎಂದು ಹೇಳಿದ್ದಾರೆ.
ನೇಪಾಳದ ಗೂರ್ಖಾಗಳು ಸ್ವಾತಂತ್ರ್ಯ ಪೂರ್ವದ ಕಾಲದಲ್ಲಿ ಭಾರತೀಯ ಸಶಸ್ತ್ರ ಪಡೆಗಳಲ್ಲಿ ಶೌರ್ಯದ ಪ್ರತೀಕವಾಗಿದ್ದರು. ಸಾಮಾನ್ಯವಾಗಿ ಭಾರತ-ನೇಪಾಳ ವಿವಾದಗಳಿಂದ ಅವರು ದೂರವಿರುತ್ತಾರೆ ಎಂದು ತಿಳಿಸಿದರು.
ಕಾಲಾಪಾನಿ ಘಟನೆ
ಭಾರತದ ಉತ್ತರಾಖಂಡ್ ರಾಜ್ಯದ ದಾರ್ಚುಲಾದಿಂದ ಲಿಪುಲೇಖ್ ಪಾಸ್ ಗೆ ಸಂಪರ್ಕ ಕಲ್ಪಿಸುವ 80 ಕಿ.ಮೀ ದೂರದ ರಸ್ತೆಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಮೇ 8, 2020ರಂದು ಉದ್ಘಾಟಿಸಿದ್ದರು. ಇದಾದ ಬಳಿಕ ನೇಪಾಳವೂ ಭಾರತದ ವಿರುದ್ಧ ತಿರುಗಿಬಿದ್ದಿದೆ.
ನೇಪಾಳಕ್ಕೆ ಸೇರಿದ ಪ್ರದೇಶದಲ್ಲಿ ಕಾಮಗಾರಿ ಮಾಡಲಾಗುತ್ತಿದೆ ಎಂದು ದೂರಿದೆ. ಅದಕ್ಕೆ ಸಾಕ್ಷಿ ಎಂಬಂತೆ ಗಡಿಭಾಗದ ಲಿಪುಲೇಖ್, ಕಾಲಾಪಾನಿ ಲಿಂಪಿಯಾಧುರ ಭೂಪ್ರದೇಶಗಳನ್ನೂ ಒಳಗೊಂಡಿರುವ ನಕ್ಷೆ ಬಿಡುಗಡೆ ಮಾಡಿತ್ತು. ಇದಕ್ಕೆ ಭಾರತವೂ ವಿರೋಧ ವ್ಯಕ್ತಪಡಿಸಿತ್ತು. ಕಾಮಗಾರಿ ನಡೆಯುತ್ತಿರುವ ಭಾರತದಲ್ಲಿರುವ ಸ್ಥಳದಲ್ಲಿ. ಇನ್ನೊಬ್ಬರ ಮಾತು ಕೇಳಿ ನೇಪಾಳ ಹೀಗೆ ಮಾಡುತ್ತಿದೆ ಎಂದು ಆರೋಪಿಸಿದ್ದರು.