ಶಾಂತಿಯುತ ಮಾತುಕತೆ ಪುನಾರಂಭ: ಮೋದಿಗೆ ಇಮ್ರಾನ್ ಖಾನ್ ಪತ್ರ
ನವದೆಹಲಿ, ಸೆಪ್ಟೆಂಬರ್ 20: ನ್ಯೂಯಾರ್ಕ್ ನಲ್ಲಿ ಸೆಪ್ಟೆಂಬರ್ ಅಂತ್ಯದ ವೇಳೆಗೆ ನಡೆಯಲಿರುವ ಯುಎನ್ ಜಿಎ ಸಮಾವೇಶದ ವೇಳೆ ಪಾಕಿಸ್ತಾನ ಹಾಗೂ ಭಾರತದ ನಡುವೆ ಉಭಯ ರಾಷ್ಟ್ರಗಳ ಮಾತುಕತೆ ನಡೆಸುವಂತೆ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್, ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ನ್ಯೂಯಾರ್ಕ್ ನಲ್ಲಿ ಮಾಸಾಂತ್ಯಕ್ಕೆ ನಡೆಯುವ ಯುಎನ್ ಜಿಎ ಸಮಾವೇಶದ ವೇಳೆ ಭಾರತ ಹಾಗೂ ಪಾಕಿಸ್ತಾನದ ನಡುವೆ ನಿಂತು ಹೋಗಿರುವ ಮಾತುಕತೆಯನ್ನು ಪುನಾರಂಭಿಸಲು ಇಮ್ರಾನ್ ಖಾನ್ ಆಸಕ್ತಿ ತೋರಿದ್ದು ಮೋದಿಗೆ ಪತ್ರ ಬರೆದು ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ಹಾಗೂ ಮಹತ್ವದ ಕುರಿತು ಮನವರಿಕೆ ಮಾಡಲು ಪ್ರಯತ್ನಿಸಿದ್ದಾರೆ.
ಎರಡೂ ರಾಷ್ಟ್ರಗಳ ನಡುವೆ ಮಾತುಕತೆ ಪುನಾರಂಭಿಸುವ ಮೂಲಕ ರಾಷ್ಟ್ರಗಳಲ್ಲಿ ಹೊಸ ಅಧ್ಯಾಯಕ್ಕೆ ನಾಂದಿ ಹಾಡುವುದು ನಮ್ಮ ಉದ್ದೇಶ ಎಂದು ಇಮ್ರಾನ್ ಖಾನ್ ಹೇಳಿಕೊಂಡಿದ್ದಾರೆ.

ಇತ್ತೀಚೆಗೆ ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಅಧಿಕಾರವಹಿಸಿಕೊಂಡ ಸಂದರ್ಭದಲ್ಲಿ ಅವರಿಗೆ ಶುಭ ಕೋರಲು ಪ್ರಧಾನಿ ನರೇಂದ್ರ ಮೋದಿ ಕರೆ ಮಾಡಿ ಅರ್ಥಪೂರ್ಣ ಹಾಗೂ ಕ್ರೀಯಾಶೀಲ ಅಭಿವೃದ್ಧಿಗೆ ಉಭಯ ರಾಷ್ಟ್ರಗಳ ನಡುವೆ ಉತ್ತಮ ಸಹಕಾರವನ್ನು ಎದುರು ನೋಡುವುದಾಗಿ ಮೋದಿ ಹೇಳಿದ್ದರು.
ಈ ಹೇಳಿಕೆಯಿಂದ ಪ್ರಭಾವಿತಗೊಂಡಿರುವ ಇಮ್ರಾನ್ ಖಾನ್ ಸುದೀರ್ಘ ಪತ್ರ ಬರೆದಿದ್ದು, ಮಾತುಕತೆ ಆರಂಭಿಸುವಂತೆ ಮನವಿಮಾಡಿದ್ದಾರೆ.
ಅಲ್ಲದೆ ಭಾರತದ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪಾಕಿಸ್ತಾನದ ವಿದೇಶಾಂಗ ಸಚಿವ ಮೆಹಮೂದ್ ಖುರೇಶಿ ನಡುವೆ ಯುಎನ್ ಜಿಎ ಸಮಾವೇಶದ ವೇಳೆ ಪ್ರತ್ಯೇಕ ಮಾತುಕತೆ ನಡೆಸಿ ಉಭಯ ರಾಷ್ಟ್ರಗಳ ನಡುವೆ ಉತ್ತಮ ಬಾಂಧವ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ನಾಂದಿ ಹಾಡಬೇಕು ಎಂದು ಇಮ್ರಾನ್ ಖಾನ್ ಕೋರಿದ್ದಾರೆ.
2015ರ ಡಿಸೆಂಬರ್ ನಲ್ಲಿ ಪಠಾಣ್ ಕೋಟ್ ವಾಯುನೆಲೆ ಮೇಲೆ ನಡೆದ ದಾಳಿ ಬಳಿಕ ಉಭಯ ರಾಷ್ಟ್ರಗಳ ನಡುವೆ ಇಂತು ಹೋಗಿರುವ ಸೌಹಾರ್ದತೆ ಯನ್ನು ಮತ್ತೆ ಪುನಾರಂಭಗೊಳಿಸಲು ಪಾಕಿಸ್ತಾ ಆಸಕ್ತಿ ತೋರಿದೆ.
ಇದೇ ವೇಳೆ ಭಯೋತ್ಪಾದನೆ ಹಾಗೂ ಕಾಶ್ಮೀರದಲ್ಲಿ ಉಂಟಾಗಿರುವ ಅಶಾಂತಿ ಕುರಿತಂತೆಯೂ ಮಾತುಕತೆ ನಡೆಸಲು ಆಸಕ್ತಿ ತೋರಿದ್ದಾರೆ ಎಂದು ತಿಳಿದುಬಂದಿದೆ.
2015ರಲ್ಲಿ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಇಸ್ಲಾಮಾಬಾದ್ ಗೆ ತೆರಳಿ ಎರಡೂ ರಾಷ್ಟ್ರಗಳ ನಡುವೆ ಉತ್ತಮ ಸಂಬಂಧವನ್ನು ಎದುರು ನೋಡುವುದಾಗಿ ಪ್ರಕಟಿಸಿದ್ದರು.
ಪಠಾಣ್ ಕೋಟ್ ವಾಯುನೆಲೆ ದಾಳಿ, ಇತ್ತೀಚೆಗೆ ಉಂಟಾದ ಗಲಭೆಗಳು, ಸಿಯಾಚಿನ್ ಪ್ರದೇಶದಲ್ಲಿ ಉಂಟಾದ ಸೇನಾಪಡೆಗಳ ಚಕಮಕಿ ಹಾಗೂ ಆರ್ಥಿಕ ಹಾಗೂ ವಾಣಿಜ್ಯ ಸಂಬಂಧಗಳು ಹದಗೆಟ್ಟಿರುವ ಹಿನ್ನೆಲೆಯಲ್ಲಿ ಎರಡೂ ರಾಷ್ಟ್ರಗಳ ನಡುವೆ ಮತ್ತೆ ಮಾತುಕತೆ ಆರಂಭಿಸಿರುವುದು ಮಹತ್ವ ಪಡೆದುಕೊಂಡಿದೆ.












Click it and Unblock the Notifications