ಪಾಕ್ ಮಾಜಿ ಪ್ರಧಾನಿ ತಲೆಗೆ ಬುಲೆಟ್ ಪ್ರೂಫ್ ಬಕೆಟ್ ರಕ್ಷಣೆ!
ಲಾಹೋರ್: ಉಗ್ರರ ಕೂಪವಾಗಿರುವ ಪಾಕಿಸ್ತಾನದಲ್ಲಿ ಯಾರಿಗೂ ರಕ್ಷಣೆಯೇ ಇಲ್ಲ. ಅದು ಸಾಮಾನ್ಯ ಜನರಿಗೆ ಮಾತ್ರವಲ್ಲ, ಮಾಜಿ ಪ್ರಧಾನಿ ಜೀವಕ್ಕೂ ಅಲ್ಲಿ ಬೆಲೆ ಇಲ್ಲ. ಇಮ್ರಾನ್ ಖಾನ್ ವಿಚಾರದಲ್ಲೂ ಇದೇ ಆಗಿದೆ. ಇತ್ತೀಚೆಗೆ ಕಾಲಿಗೆ ಗುಂಡೇಟು ತಿಂದು ಚೇತರಿಸಿಕೊಂಡಿರುವ ಇಮ್ರಾನ್, ಲಾಹೋರ್ ನಗರದಲ್ಲಿರುವ ಭಯೋತ್ಪಾದನಾ ನಿಗ್ರಹ ನ್ಯಾಯಾಲಯಕ್ಕೆ ವಿಚಾರಣೆಗೆ ಆಗಮಿಸಿದ್ದರು. ಈ ವೇಳೆ ಹೈಡ್ರಾಮವೇ ನಡೆದು ಹೋಗಿದೆ.
ಮೊದಲೇ ಉಗ್ರರು ಅಥವಾ ಶತ್ರುಗಳ ಕೈಯಲ್ಲಿ ಹತ್ಯೆಯಾಗುವ ಭಯದಲ್ಲಿರುವ ಇಮ್ರಾನ್ ಖಾನ್, ಜೀವ ಉಳಿಸಿಕೊಳ್ಳಲು ಏನು ಬೇಕಾದರೂ ಮಾಡುವ ತವಕದಲ್ಲಿದ್ದಾರೆ. ಈಗಾಗಲೇ ಇಮ್ರಾನ್ ಖಾನ್ಗೆ ನೀಡಿದ್ದ ಭದ್ರತೆ ಹೆಚ್ಚಿಸಲಾಗಿದ್ದು, ಕೋರ್ಟ್ಗೆ ವಿಚಾರಣೆಗಾಗಿ ಹಾಜರಾಗುವ ವೇಳೆ ಬುಲೆಟ್ ಪ್ರೂಫ್ ಜಾಕೆಟ್ ಹಾಗೂ ತಲೆ ಮೇಲೆ ಬುಲೆಟ್ ಪ್ರೂಫ್ ಬಕೆಟ್ ಹಾಕಿಕೊಂಡು ಎಂಟ್ರಿ ಕೊಟ್ಟಿದ್ದಾರೆ ಇಮ್ರಾನ್.

ಇಮ್ರಾನ್ ಪರದಾಟ: ಪಾಕಿಸ್ತಾನದಲ್ಲಿ ಏನೋ ದೊಡ್ಡ ಬದಲಾವಣೆ ತಂದು ಬಿಡ್ತೀನಿ ಎಂಬ ಹುಮ್ಮಸ್ಸಿನಲ್ಲಿ ಮಾತನಾಡುತ್ತಿದ್ದ ಇಮ್ರಾನ್ ಖಾನ್ ಸ್ವತಃ ತಮ್ಮ ಜೀವ ಉಳಿಸಿಕೊಳ್ಳಲು ಹೋರಾಡಬೇಕಾದ ಪರಿಸ್ಥಿತಿ ಎದುರಾಗಿದೆ. ಕಳೆದ ತಿಂಗಳು ಇಮ್ರಾನ್ ಖಾನ್ ಮನೆ ಎದುರು ಪೊಲೀಸರು ಹಾಗೂ ಖಾನ್ ಬೆಂಬಲಿಗರ ನಡುವೆ ಗಲಾಟೆ ನಡೆದಿತ್ತು. ಈ ಸಂಬಂಧ ಒಟ್ಟು 3 ಪ್ರಕರಣಗಳು ಇಮ್ರಾನ್ ಖಾನ್ ವಿರುದ್ಧ ದಾಖಲಾಗಿವೆ. ಈ ಪ್ರಕರಣಗಳಲ್ಲಿ ಮಧ್ಯಂತರ ಜಾಮೀನು ವಿಸ್ತರಣೆ ಮಾಡುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಮಧ್ಯಂತರ ಜಾಮೀನು ವಿಚಾರಣೆಗಾಗಿ ಕೋರ್ಟ್ಗೆ ಈ ವೇಷದಲ್ಲಿ ಎಂಟ್ರಿ ಕೊಟ್ಟಿದ್ದರು ಇಮ್ರಾನ್.
ಕಾಲಿಗೆ ಬಿತ್ತು ಗುಂಡು: ಕಳೆದ ವರ್ಷ ನವೆಂಬರ್ನಲ್ಲಿ ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ವಜೀರಾಬಾದ್ನಲ್ಲಿ ಬೆಂಬಲಿಗರನ್ನು ಉದ್ದೇಶಿಸಿ ಭಾಷಣ ಮಾಡುವಾಗ ಇಮ್ರಾನ್ ಖಾನ್ ಕಾಲಿಗೆ ಗುಂಡು ಹೊಡೆಯಲಾಗಿತ್ತು. ಹೇಗೋ ಅಲ್ಲಿಂದ ಬಚಾವ್ ಆಗಿ ಜೀವ ಉಳಿಸಿಕೊಂಡಿದ್ದರು ಪಾಕ್ ಮಾಜಿ ಪ್ರಧಾನಿ. ಆದರೆ ಈಗಲೂ ಅಂತಹದ್ದೇ ಬೆದರಿಕೆ ಕರೆಗಳು ಹಾಗೂ ಇಮ್ರಾನ್ ಕೊಲೆಗೆ ಪ್ರಯತ್ನಗಳು ಸಾಗಿವೆ. ಹೀಗಾಗಿ ಅಲರ್ಟ್ ಆಗಿದ್ದಾರೆ ಪಾಕ್ ಕ್ರಿಕೆಟ್ ತಂಡದ ಮಾಜಿ ಆಟಗಾರ ಕಂ ಪಾಕ್ ಮಾಜಿ ಪ್ರಧಾನಿ.
ಆರ್ಥಿಕ ದಿವಾಳಿತನ: ಪಾಕಿಸ್ತಾನದಲ್ಲಿ ತುತ್ತು ಅನ್ನಕ್ಕೂ ಪರದಾಡುವ ಪರಿಸ್ಥಿತಿ ಎದುರಾಗಿದೆ. ಜನ ಒಂದು ಮುಷ್ಟಿ ಗೋಧಿ ಹಿಟ್ಟು ಪಡೆಯಲು ಹೊಡೆದಾಡುವ ಪರಿಸ್ಥಿತಿ ಬಂದಿದೆ. ಇನ್ನು ಪೆಟ್ರೋಲ್, ಡೀಸೆಲ್ ಬೆಲೆಗಳು ಕ್ಷಣಮಾತ್ರದಲ್ಲಿ ಗಗನಕ್ಕೆ ಏರುತ್ತಿದೆ. ಜನ ಸಾಮಾನ್ಯರು ಬದುಕಲು ಪರದಾಡುವ ವಾತಾವರಣ ನಿರ್ಮಾಣವಾಗಿದೆ. ಇಷ್ಟಾದರೂ ಬುದ್ಧಿ ಕಲಿಯದ ಪಾಪಿ ಪಾಕ್ ರಾಜಕಾರಣಿಗಳು ಹಿಂಸೆ ಮತ್ತು ಗಲಭೆಯಲ್ಲೇ ಅಲ್ಲಿನ ಜನರನ್ನು ದಿನದೂಡುವಂತೆ ಮಾಡುತ್ತಿದ್ದಾರೆ.
ಉಗ್ರರ ಕೈಯಲ್ಲಿ ದೇಶ: ಪರೋಕ್ಷವಾಗಿ ಪಾಕಿಸ್ತಾನ ಉಗ್ರರಿಂದಲೇ ಆಡಳಿತ ನಡೆಸುವಂತಾಗಿದೆ. ಉಗ್ರರ ಮಾತು ಕೇಳುವ ನಾಯಕರು ಮಾತ್ರ ಆ ದೇಶದಲ್ಲಿ ಜೀವ ಉಳಿಸಿಕೊಳ್ಳಲು ಸಾಧ್ಯ. ಇಲ್ಲವಾದರೆ ಹೆಣ ಬೀಳೋದು ಗ್ಯಾರಂಟಿ. ಈಗಾಗಲೇ ಅದೆಷ್ಟೋ ನಾಯಕರ ಜೀವ ತೆಗೆದಿರುವ ಉಗ್ರರು, ತಮ್ಮ ಮಾತು ಕೇಳದ ರಾಜಕಾರಣಿಗಳನ್ನು ಹತ್ಯೆ ಮಾಡಲು ಯೋಚಿಸುವುದಿಲ್ಲ. ಈಗ ಇಮ್ರಾನ್ ಖಾನ್ ಕೂಡ ಅಂತಹದ್ದೇ ಸಂಕಷ್ಟವನ್ನು ಎದುರಿಸುತ್ತಿದ್ದಾರೆ.
ಇದಿಷ್ಟೂ ಒಂದು ಕಡೆಯಾದರೆ ಮತ್ತೊಂದು ಕಡೆ ಅಂತಾರಾಷ್ಟ್ರೀಯ ಸಮುದಾಯ ಕೂಡ ಪಾಕಿಸ್ತಾನದ ಈ ಪರಿಸ್ಥಿತಿ ಬಗ್ಗೆ ಆಕ್ರೋಶ ಹೊರ ಹಾಕುತ್ತಿದೆ. ಉಗ್ರರನ್ನು ಸದೆಬಡಿದು ಶಾಂತಿ ಸುವ್ಯವಸ್ಥೆ ಕಾಪಾಡುವಂತೆ ಅಲ್ಲಿನ ರಾಜಕಾರಣಿಗಳಿಗೆ ತಿಳಿ ಹೇಳುತ್ತಿವೆ ಬಲಿಷ್ಠ ರಾಷ್ಟ್ರಗಳು. ಆದರೆ ಭಾರತಕ್ಕೆ ಮಗ್ಗಲ ಮುಳ್ಳಾಗಿರುವ ಪಾಪಿ ಪಾಕ್ ನಾಯಕರು ಈ ಜನ್ಮಕ್ಕೆ ಬುದ್ಧಿ ಕಲಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ.












Click it and Unblock the Notifications