ಉಕ್ರೇನ್ನಲ್ಲಿ ನೆತ್ತರು ಹರಿಸಿದ ರಷ್ಯಾದ ಹೊಸ ಕಮಾಂಡರ್ ಯುದ್ಧನೀತಿ
ಕೀವ್, ಅಕ್ಟೋಬರ್ 12: ಉಕ್ರೇನ್ ನೆಲದಲ್ಲಿ ನೆತ್ತರು ಹರಿಸಿದ ರಷ್ಯಾದ ನೂತನ ಕಮಾಂಡರ್ ಯುದ್ಧ ನೀತಿಯು ಎಷ್ಟು ಕ್ರೂರವಾಗಿತ್ತು ಎಂಬುದನ್ನು ಜಾಗತಿಕ ಮಾಧ್ಯಮಗಳು ವಿವರಿಸಿವೆ.
"ಮಾನವೀಯ ಬದುಕಿನ ಮೇಲೆ ಸ್ವಲ್ಪವೂ ಗಮನ ಹರಿಸದೇ ಸಂಪೂರ್ಣ ನಿರ್ದಯವಾಗಿ ನಡೆಸಿದ ಹಿಂಸಾತ್ಮಕ ದಾಳಿಯಾಗಿದೆ. ಇದು ಸಿರಿಯಾ ಯುದ್ಧ ನೀತಿಯನ್ನು ಹೋಲುವಂತಿದೆ. ಉಕ್ರೇನ್ನಲ್ಲಿ ಹೊಸ ಏಕೀಕೃತ ರಷ್ಯಾದ ಯುದ್ಧಭೂಮಿ ಕಮಾಂಡರ್ ಸೆರ್ಗೆಯ್ ಸುರೋವಿಕಿನ್ ಯುದ್ಧವೈಖರಿಯನ್ನು ಹೀಗೆ ವಿವರಿಸಲಾಗಿದೆ.
ಪುಟಿನ್ ಬೇಡಿಕೆಗೆ ವಿರುದ್ಧವಾಗಿ ಮತ ಚಲಾಯಿಸಿದ ಒಟ್ಟು 107 ರಾಷ್ಟ್ರಗಳು; ರಷ್ಯಾಕ್ಕೆ ಹೊಡೆತ ?
ಕಳೆದ ಸೋಮವಾರ ಉಕ್ರೇನ್ನಲ್ಲಿನ ಯುದ್ಧಕ್ಕೆ ಮೊದಲ ಕಮಾಂಡರ್ ಆಗಿ ನೇಮಕಗೊಂಡ ಕೇವಲ ಎರಡು ದಿನಗಳಲ್ಲಿ ಕಮಾಂಡರ್ ಸೆರ್ಗೆಯ್ ಸುರೋವಿಕಿನ್ ಉಕ್ರೇನ್ನಾದ್ಯಂತ ನಾಗರಿಕರನ್ನು ಗುರಿಯಾಗಿಸಿಕೊಂಡು ಕ್ಷಿಪಣಿಗಳ ಉಡಾವಣೆಗೆ ಆದೇಶಿಸಿದರು. ಹೀಗೆ ಉಡಾಯಿಸಿದ ಕ್ಷಿಪಣಿಗಳು ವಿಶ್ವವಿದ್ಯಾಲಯದ ಪಕ್ಕದಲ್ಲಿರುವ ಪ್ರಮುಖ ರಸ್ತೆ, ಮಕ್ಕಳ ಆಟದ ಮೈದಾನ ಸೇರಿದಂತೆ ಸಾಕಷ್ಟು ಜನನಿಬಿಡ ಪ್ರದೇಶಗಳ ಮೇಲೆ ಬಿದ್ದಿದ್ದು, ಯುದ್ಧಶೈಲಿಗೆ ಹಿಡಿದ ಕೈಗನ್ನಡಿ ಎಂದು ಜಾಗತಿಕ ಮಾಧ್ಯಮಗಳು ವರದಿ ಮಾಡಿವೆ.
ಸಾರ್ವಜನಿಕ ಪ್ರದೇಶಗಳ ಮೇಲೆ ಕ್ಷಿಪಣಿ ದಾಳಿ
2020ರ ಮಾನವ ಹಕ್ಕುಗಳ ವಾಚ್ ವರದಿಯ ಪ್ರಕಾರ, ಸಿರಿಯಾದಲ್ಲಿ ಮಾಸ್ಕೋದ ಹಿತಾಸಕ್ತಿಗಳ ರಕ್ಷಣೆ ಬಗ್ಗೆ ಸುರೋವಿಕಿನ್ ಉಲ್ಲೇಖಿಸಿದ್ದಾರೆ. ಅಂದು ನಾಗರಿಕ ವಸ್ತುಗಳು ಮತ್ತು ಮೂಲಸೌಕರ್ಯಗಳ ಮೇಲೆ ವಾಯು ದಾಳಿ ಹಾಗೂ ಭೂ ದಾಳಿಯನ್ನು ನಡೆಸಲಾಗಿತ್ತು. ಅವರ ನೇತೃತ್ವದಲ್ಲಿ ರಷ್ಯಾದ ಪಡೆಗಳು ಸಿರಿಯನ್ "ಮನೆಗಳು, ಶಾಲೆಗಳು, ಆರೋಗ್ಯ ಕೇಂದ್ರಗಳು ಮತ್ತು ಮಾರುಕಟ್ಟೆಗಳು ಹಾಗೂ ಜನರು ವಾಸಿಸುವ, ಕೆಲಸ ಮಾಡುವ ಮತ್ತು ಅಧ್ಯಯನ ಮಾಡುವ ಸ್ಥಳಗಳ ಮೇಲೆ ಬಿದ್ದಿರುವ ಬಗ್ಗೆ ವರದಿಯಾಗಿದೆ."
ನಿರ್ದಯಿ ಎನಿಸಿಕೊಂಡಿರುವ ಸುರೋವಿಕಿನ್
"ಕೀವ್ನಲ್ಲಿ ಇಂದು ಬೆಳಿಗ್ಗೆ ಏನಾಯಿತು ಎಂಬುದನ್ನು ನೋಡಿ ನನಗೆ ಆಶ್ಚರ್ಯವಿಲ್ಲ. ಏಕೆಂದರೆ ಸುರೋವಿಕಿನ್ ಸಂಪೂರ್ಣವಾಗಿ ನಿರ್ದಯಿ, ಮಾನವ ಜೀವನದ ಬಗ್ಗೆ ಸ್ವಲ್ಪವೂ ಕಾಳಜಿಯಿಲ್ಲದ ವ್ಯಕ್ತಿ. ಅವನ ಕೈಗಳು ಎಲ್ಲಿ ಸಂಪೂರ್ಣವಾಗಿ ಉಕ್ರೇನಿಯನ್ ರಕ್ತದಿಂದ ಕೆಂಪಾಗುತ್ತದೆಯೋ ಎಂಬ ಭಯ ನನ್ನನ್ನು ಕಾಡುತ್ತಿದೆ," ಎಂದು ಕಮಾಂಡರ್ ಸುರೋವಿಕಿನ್ನೊಂದಿಗೆ ಕೆಲಸ ಮಾಡಿದ ಮಾಜಿ ರಕ್ಷಣಾ ಸಚಿವಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಉಕ್ರೇನ್ನಲ್ಲಿ ರಷ್ಯಾದ ಸೇನೆಯು ಉಗ್ರವಾದ ಉಕ್ರೇನಿಯನ್ ಪ್ರತಿದಾಳಿಯನ್ನು ಎದುರಿಸುತ್ತಿರುವ ಕಾರಣ ರಚನಾತ್ಮಕ ಸಮಸ್ಯೆಗಳನ್ನು ಪರಿಹರಿಸುವುದೇ ಸುರೋವಿಕಿನ್ನ ಪ್ರಮುಖ ಸವಾಲು, ಎಂದು ತಜ್ಞರು ಹೇಳುತ್ತಿದ್ದಾರೆ.
ಸುರೋವಿಕಿನ್ ಯುದ್ಧನೀತಿ ಬಗ್ಗೆ ಉಲ್ಲೇಖ
ಕಳೆದ 1991ರಲ್ಲಿ ಸೋವಿಯತ್ ಉಗ್ರವಾದಿಗಳು ಪ್ರಾರಂಭಿಸಿದ ದಂಗೆಯ ಸಮಯದಲ್ಲಿ ಸುರೋವಿಕಿನ್ ಮೊದಲು ಕುಖ್ಯಾತಿಯನ್ನು ಗಳಿಸಿದರು. ರೈಫಲ್ ವಿಭಾಗದ ನೇತೃತ್ವ ವಹಿಸಿದ ಸಂದರ್ಭದಲ್ಲಿ ಪ್ರಜಾಪ್ರಭುತ್ವ ಪರ ಪ್ರತಿಭಟನೆ ನಡೆಸುತ್ತಿದ್ದವರನ್ನು ಬ್ಯಾರಿಕೇಡ್ಗಳ ಮೂಲಕವೇ ಓಡಿಸಿದರು. ಈ ಘರ್ಷಣೆಯಲ್ಲಿ ಮೂವರು ಸಾವನ್ನಪ್ಪಿದ್ದು, ಅದರಲ್ಲಿ ಒಬ್ಬನ ದೇಹವು ಗುರುತು ಸಿಗದ ರೀತಿಯಾಗಿತ್ತು ಎಂದು ವರದಿಯಾಗಿದೆ.
2004ರಲ್ಲಿ ಸುರೋವಿಕಿನ್ನಿಂದ ತೀವ್ರ ವಾಗ್ದಂಡನೆಯ ನಂತರ ಅವನ ಅಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಕರ್ನಲ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವಿಷಯ ಬೆಳಕಿಗೆ ಬರುತ್ತಿದ್ದಂತೆ ಸುರೋವಿಕಿನ್ ಎಷ್ಟರ ಮಟ್ಟಿಗೆ ನಿರ್ದಯಿ ಎಂಬುದು ಜಗತ್ಜಾಹೀರಾಯಿತು. ಅವರ ಸಹೋದ್ಯೋಗಿಗಳು ಯುದ್ಧ ನಡೆಸುವಲ್ಲಿ ಸುರೋವಿಕಿನ್ ಕಠಿಣ ಮತ್ತು ಅಸಾಂಪ್ರದಾಯಿಕ ವಿಧಾನಕ್ಕಾಗಿಯೇ ಆತನನ್ನು "ಜನರಲ್ ಆರ್ಮಗೆಡ್ಡೋನ್" ಎಂಬ ಅಡ್ಡಹೆಸರನ್ನು ನೀಡಿದ್ದಾರೆ.
ಒಟ್ಟಾರೆ ಕಮಾಂಡರ್ ಆಗಿರುವ ಸುರೋವಿಕಿನ್
ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಶನಿವಾರ ಆರ್ಮಿ ಜನರಲ್ ಸೆರ್ಗೆಯ್ ಸುರೋವಿಕಿನ್ ಅನ್ನು ರಷ್ಯಾದ ಪಡೆಗಳ ಒಟ್ಟಾರೆ ಕಮಾಂಡರ್ ಆಗಿ ನೇಮಿಸಿದರು. ಇದಕ್ಕೂ ಮೊದಲು ಆರ್ಮಿ ಜನರಲ್ ಸೆರ್ಗೆಯ್ ಸುರೋವಿಕಿನ್ ಉಕ್ರೇನ್ ಮತ್ತು ಡೊನ್ಬಾಸ್ನಲ್ಲಿ ಸೇನೆಯ 'ದಕ್ಷಿಣ' ಗುಂಪಿನ ಮುಖ್ಯಸ್ಥರಾಗಿದ್ದರು. ದೇಶದ ವಿವಿಧ ಸೇನಾ ಶಾಖೆಗಳನ್ನು ಹೇಗೆ ನಿರ್ವಹಿಸಬೇಕು ಎಂಬುದನ್ನು ಅರಿತುಕೊಂಡಿರುವ ಕೆಲವೇ ಸೇನಾ ಮುಖ್ಯಸ್ಥರಲ್ಲಿ ಸುರೋವಿಕಿನ್ ಕೂಡ ಒಬ್ಬರಾಗಿದ್ದಾರೆ ಎಂದು 2020 ರವರೆಗೆ ಸುರೋವಿಕಿನ್ನೊಂದಿಗೆ ಕೆಲಸ ಮಾಡಿದ ಮಾಜಿ ವಾಯುಪಡೆಯ ಲೆಫ್ಟಿನೆಂಟ್ ಗ್ಲೆಬ್ ಐರಿಸೊವ್ ಹೇಳಿದ್ದಾರೆ.