ಪಾಕಿಸ್ತಾನದಲ್ಲಿ ಹಿಂದೂ ದೇವಾಲಯ ಧ್ವಂಸ
ಇಸ್ಲಾಮಾಬಾದ್, ಜೂ. 9: ಪಾಕಿಸ್ತಾನದ ಕರಾಚಿಯಲ್ಲಿ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿದೆ. ಅಲ್ಪಸಂಖ್ಯಾತ ಸಮುದಾಯದ ಪೂಜಾ ಸ್ಥಳಗಳ ಧ್ವಂಸಗೊಳಿಸುವಿಕೆಯ ಇತ್ತೀಚಿನ ಘಟನೆ ಇದಾಗಿದೆ.
ಕರಾಚಿ ನಗರದಲ್ಲಿನ ಕೋರಂಗಿ ಪ್ರದೇಶದಲ್ಲಿ ಹಿಂದೂ ದೇವಾಲಯದಲ್ಲಿನ ದೇವತೆಗಳ ವಿಗ್ರಹಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಈ ಘಟನೆಯಿಂದ ಹಿಂದೂ ಸಮುದಾಯದಲ್ಲಿ ಆತಂಕ ಉಂಟಾಗಿದೆ.
ವಿಶೇಷವಾಗಿ ದೇವಾಲಯ ಧ್ವಂಸಗೊಂಡಿರುವ ಪ್ರದೇಶದಲ್ಲಿ ಅಹಿತಕರ ಘಟನೆಯನ್ನು ತಪ್ಪಿಸಲು ಪೊಲೀಸರನ್ನು ನಿಯೋಜಿಸಲಾಗಿದೆ ಎಂದು ಎಕ್ಸ್ಪ್ರೆಸ್ ಟ್ರಿಬ್ಯೂನ್ ಪತ್ರಿಕೆ ವರದಿ ಮಾಡಿದೆ.
ಮಧ್ಯರಾತ್ರಿಯಲ್ಲಿ ಅಪರಿಚಿತ ವ್ಯಕ್ತಿಗಳು ದೇವಾಲಯದ ಆವರಣಕ್ಕೆ ನುಗ್ಗಿ ದೇವರ ವಿಗ್ರಹಗಳನ್ನು ಧ್ವಂಸಗೊಳಿಸಿದ್ದಾರೆ ಎಂದು ಸ್ಥಳೀಯರು ತಿಳಿಸಿದ್ದಾರೆ. 6 ರಿಂದ 8 ಮಂದಿ ದ್ವಿಚಕ್ರ ವಾಹನದಲ್ಲಿ ದೇವಸ್ಥಾನಕ್ಕೆ ಬಂದು ದಾಳಿ ಮಾಡಿದರು. ಯಾರು ಮತ್ತು ಏಕೆ ದಾಳಿ ಮಾಡಿದ್ದಾರೆ? ಎಂಬುದು ನಮಗೆ ತಿಳಿದಿಲ್ಲ. ಈ ಬಗ್ಗೆ ಪ್ರಕರಣ ದಾಖಲಿಸಲು ಪೊಲೀಸರನ್ನು ಸಂಪರ್ಕಿಸಿದ್ದೇವೆ ಎಂದು ಸ್ಥಳೀಯ ನಿವಾಸಿ ಸಂಜೀವ್ ತಿಳಿಸಿದ್ದಾರೆ.
ಕೋರಂಗಿ ಎಸ್ಎಚ್ಒ ಫಾರೂಕ್ ಸಂಜರಾಣಿ ಎಂಬುವವರು, 5 ರಿಂದ 6 ಅಪರಿಚಿತ ಶಂಕಿತರು ದೇವಾಲಯಕ್ಕೆ ನುಗ್ಗಿ ಅದನ್ನು ಧ್ವಂಸಗೊಳಿಸಿ ಪರಾರಿಯಾಗಿದ್ದಾರೆ. ಹಿಂದೂ ದೇವಾಲಯದ ಮೇಲೆ ದಾಳಿ ಮಾಡಿದ ಶಂಕಿತರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಹೇಳಿದರು.

ಸಾಮಾಜಿಕ ಜಾಲತಾಣಾದಲ್ಲಿ ವೈರಲ್
ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತ ಹಿಂದೂಗಳಿಗೆ ಸೇರಿದ ದೇವಾಲಯಗಳು ಸಾಮಾನ್ಯವಾಗಿ ಗುಂಪು ಹಿಂಸಾಚಾರಕ್ಕೆ ಬಲಿಯಾಗುತ್ತವೆ. ಅಕ್ಟೋಬರ್ನಲ್ಲಿ ಕೊಟ್ರಿಯ ಸಿಂಧೂ ನದಿಯ ದಡದಲ್ಲಿರುವ ಐತಿಹಾಸಿಕ ದೇವಾಲಯವನ್ನು ಅಪರಿಚಿತರು ಅಪವಿತ್ರಗೊಳಿಸಿದ್ದರು. ದೇವಾಲಯ ಧ್ವಂಸಗೊಂಡಿರುವ ಘಟನೆಯ ಸುದ್ದಿ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಕೂಡಲೇ ಪೊಲೀಸರು ಸ್ಥಳಕ್ಕೆ ಬಂದರು. ಸದ್ಯ ಘಟನೆಯ ಕುರಿತು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಕೊಟ್ರಿ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.

90 ಲಕ್ಷಕ್ಕೂ ಹೆಚ್ಚು ಹಿಂದೂಗಳು ವಾಸ
ಆಗಸ್ಟ್ನಲ್ಲಿ ಹತ್ತಾರು ಮಂದಿ ಜನರು ಭೋಂಗ್ ಪಟ್ಟಣದಲ್ಲಿ ಸ್ಥಳೀಯ ಗಣೇಶ ದೇವಾಲಯವನ್ನು ಧ್ವಂಸಗೊಳಿಸಿದ್ದರು ಮತ್ತು ಸುಕ್ಕೂರ್-ಮುಲ್ತಾನ್ ಮಾರ್ಗಗಳನ್ನು ತಡೆದಿದ್ದರು ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ದಾಖಲೆಯ ಪ್ರಕಾರ ಪಾಕಿಸ್ತಾನದಲ್ಲಿ ಸುಮಾರು 75 ಲಕ್ಷ ಹಿಂದೂಗಳು ಸದ್ಯ ವಾಸಿಸುತ್ತಿದ್ದಾರೆ. ಆದರೆ, ಸಮುದಾಯದ ಪ್ರಕಾರ 90 ಲಕ್ಷಕ್ಕೂ ಹೆಚ್ಚು ಹಿಂದೂಗಳು ವಾಸಿಸುತ್ತಿದ್ದಾರೆ. ಪಾಕಿಸ್ತಾನದಲ್ಲಿ ಬಹುಪಾಲು ಹಿಂದೂ ಜನಸಂಖ್ಯೆಯು ಸಿಂಧ್ ಪ್ರಾಂತ್ಯದಲ್ಲಿ ನೆಲೆಸಿದೆ. ಅಲ್ಲಿ ಅವರು ಮುಸ್ಲಿಂ ನಿವಾಸಿಗಳೊಂದಿಗೆ ಸಂಸ್ಕೃತಿ, ಸಂಪ್ರದಾಯಗಳು ಮತ್ತು ಭಾಷೆಯ ವಿಚಾರದಲ್ಲಿ ಸಹಬಾಳ್ವೆ ನಡೆಸುತ್ತಾರೆ. ಆಗಾಗ್ಗೆ ಉಗ್ರರಿಂದ ಕಿರುಕುಳವನ್ನು ಅನುಭವಿಸುತ್ತಾರೆ ಎನ್ನುವ ವರದಿ ಇದೆ.

ದೇವತೆಗಳ ಪ್ರತಿಮೆಗಳಿಗೆ ಹಾನಿ
ಹಿಂದೆ 2021 ಡಿಸೆಂಬರ್ನಲ್ಲಿ ಇದೇ ಕರಾಚಿಯ ನಾರಾಯಣಪುರದ ನಾರಾಯಣ ಮಂದಿರವನ್ನು ಧ್ವಂಸಗೊಳಿಸಲಾಗಿತ್ತು. ಘಟನೆಯಲ್ಲಿ ದೇವತೆಗಳ ಪ್ರತಿಮೆಗಳನ್ನು ಹಾನಿಗೊಳಿಸಿದ ಆರೋಪದ ಮೇಲೆ ಮಹಮ್ಮದ್ ವಾಲೀದ್ ಶಬ್ಬೀರ್ ಎಂಬ ವ್ಯಕ್ತಿಯನ್ನು ಬಂಧಿಸಲಾಗಿತ್ತು.

ಖೈಬರ್ ಪಖ್ತುನ್ವಾ ಪ್ರಾಂತ್ಯ ಹಿಂದೂ ದೇವಾಲಯ ಧ್ವಂಸ
ಸ್ಥಳೀಯರಾದ ಮುಕೇಶ್ ಕುಮಾರ್ ಎಂಬುವವರು ನೀಡಿದ ದೂರಿನ ಮೇರೆಗೆ ಆರೋಪಿಯನ್ನು ಬಂಧಿಸಲಾಗಿತ್ತು. ಮುಕೇಶ್ ಕುಮಾರ್ ತಮ್ಮ ಹೆಂಡತಿಯೊಂದಿಗೆ ದೇವಾಲಯಕ್ಕೆ ಬಂದಿದ್ದರು. ಆ ವೇಳೆ ಸದರಿ ವ್ಯಕ್ತಿ ದೇವಾಲಯವನ್ನು ಸುತ್ತಿಗೆಯಿಂದ ಹೊಡೆಯುತ್ತಿರುವುದು ಕಂಡು ಬಂದಿತ್ತು ಎಂದು ಹೇಳಿದ್ದರು. ಮತ್ತೊಂದು ಪ್ರಕರಣದಲ್ಲಿ ಖೈಬರ್ ಪಖ್ತುನ್ವಾ ಪ್ರಾಂತ್ಯ ಹಿಂದೂ ದೇವಾಲಯವನ್ನು ಧ್ವಂಸಗೊಳಿಸಲಾಗಿತ್ತು. ಈ ಸಂಬಂಧ ಸುಮಾರು 55 ಮಂದಿಯನ್ನು ಬಂಧಿಸಲಾಗಿತ್ತು.












Click it and Unblock the Notifications